ಕುರಿ, ಕೋತಿಗಳಂತೆ ಕತ್ತೆಗೂ ಒಂದು ಕಾಲ ಬಂದಿದೆ. ಕಾಲು ಬಂದಿದೆಯಾ ಅನ್ನುವುದನ್ನು ಕಾಲವೇ ಹೇಳಬೇಕು !!
ಜೀವ ಇಲ್ಲದ ಘಟನೆಗಳಿಗೆ ಎಂ.ಎಸ್.ನರಸಿಂಹಮೂರ್ತಿ ಬರೆದ ಮಾತುಗಳು ಉಸಿರು ನೀಡುತ್ತವೆ. ಇವರಿಲ್ಲದಿದ್ದರೆ ಬಹುಶಃ ಕತ್ತೆ ಇನ್ನಷ್ಟು ಸೊರಗುವ ಅಪಾಯವಿತ್ತು . ಕೆಲವೊಂದು ದೃಶ್ಯಗಳನ್ನು ಕಮಲ್ ಮತ್ತು ಗೋವಿಂದ ನಟಿಸಿದ ಚಿತ್ರಗಳಿಂದ ಮುಜುಗರವಿಲ್ಲದೆ ಎತ್ತಿದ್ದು ಶೇಮ್ ಶೇಮ್. ಎರಡನೇ ಭಾಗದಲ್ಲಿ ಹೊಸತನವಿಲ್ಲ , ಕುತೂಹಲವಂತೂ ಉಳಿಯುವುದೇ ಇಲ್ಲ .
ಎಸ್.ನಾರಾಯಣ್ಗಿಂತ ರಮೇಶ್, ರಮೇಶ್ಗಿಂತ ಕೋಮಲ್ ಒಂದೊಂದು ಹೆಜ್ಜೆ ಮುಂದಿದ್ದಾರೆಂದರೆ ರಮ್ಮಿ-ನಾಣಿ ಸೆಟಗೊಳ್ಳಬಾರದು. ಸಿಕ್ಕ ಅವಕಾಶವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋಮಲ್ನನ್ನು ನೋಡಿ ಕಲಿಯಬೇಕು. ಹಾಗೆಯೇ ದುರುಪಯೋಗಕ್ಕೆ ನಿರ್ದಾಕ್ಷಿಣ್ಯವಾಗಿ ನಾರಾಯಣ್ ಕಡೆ ನೋಡಬಹುದು.
‘ಕೋತಿ’ ಮೋಹನ್ನನ್ನು ಕೈಬಿಟ್ಟು ಕೋಮಲ್ನನ್ನು ಹಾಕಿಕೊಂಡಿದ್ದು ಚಿತ್ರದ ಪ್ಲಸ್ ಪಾಯಿಂಟು. ಕೈಗೆ ಸಿಕ್ಕ ಡ್ರೆಸ್ಗಳಿಗೆ ತಮ್ಮ ದೇಹ ನೀಡಿರುವ ನಾಯಕರು ಹೆಂಗಸಿನ ವೇಷದಲ್ಲಿ ಸಹಜವಾಗಿ ಕಾಣಿಸಿರುವುದು ನಾಯಕಿಯರ ಬರಗಾಲಕ್ಕೆ ಧಾರವಾಡದ ಮಳೆಯಾದೀತು.
ರೌಡಿ ರಾಣಿಯಾಗಿ ಉಮಾಶ್ರೀ ಸುಭ್ಹಾನಲ್ಲಾ . ಖಾಕಿ ಟೋಪಿಯ ಸುಂದರರಾಜ್ ವಾರೆವ್ಹಾ . ಋತಿಕಾ, ಮೇಘನಾ ಮತ್ತು ಸೋನಿರಾಜ್ ಎಂಬ ಶರೀರಗಳು ಹಾಡಿಗೆ ದೇಹ ಒದಗಿಸಿದ್ದೇ ಅಭಿನಯವೆಂದು ತಿಳಿಯಬೇಕು. ಅತ್ತರೆ ಕಷ್ಟ , ನಕ್ಕರೆ ನಷ್ಟ ಹೀಗಿದೆ ಊರ್ವಶಿ ಪಾತ್ರದ ವೈಶಿಷ್ಟ್ಯ.
ಪಿ.ಕೆ.ಎಚ್.ದಾಸ್ ಛಾಯಾಗ್ರಹಣ ಚಿತ್ರದ ಓರೆಕೋರೆಗಳನ್ನು ಮುಚ್ಚಿಹಾಕುವಷ್ಟು ಸಶಕ್ತವಾಗಿದೆ. ಪ್ರತಿ ಶಾಟ್ನಲ್ಲೂ ದಾಸ್ ಕೆಮೆರಾ ಶ್ರದ್ಧೆ ನೋಡಬಹುದು. ಹಂಸಲೇಖಾ ಸಂಗೀತದಲ್ಲಿ ಎಣಿಸಿ ಎರಡು ಹಾಡುಗಳು ಕೇಳುವಂತಿವೆ. ಅಂತೂ ಹಾಸ್ಯ-ಲಾಸ್ಯ, ಹೊಡೆದಾಟ-ಕುಣಿದಾಟ, ಅಲ್ಲಲ್ಲಿ ಮಂಗಾಟಗಳ ನಡುವೆ ಕುರಿ, ಕೋತಿಯಂತೆ ಕತ್ತೆಗೂ ಒಂದು ಕಾಲ ಬಂದಿದೆ. ಕಾಲು ಬಂದಿದೆಯಾ? ಕಾಲವೇ ಹೇಳಬೇಕು.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











