ಪ್ರೇಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೆ ಯುಗೆ
- ಚೇತನ್ ನಾಡಿಗೇರ್
ಡಿಜಿಟಲ್ ಗ್ರೇಡಿಂಗ್ ಸೇರಿದಂತೆ ಹಲವು ತಂತ್ರಜ್ಞಾನಗಳ ನೆರವಿನಿಂದ ‘ಅಹಂ ಪ್ರೇಮಾಸ್ಮಿ’ಶ್ರೀಮಂತವಾಗೇನೋ ಕಾಣುತ್ತದೆ. ಆದರೆ ಕಥೆ?ಅದಿಲ್ಲಿದೆ ನೋಡಿ. ನಾಯಕ ಈಶ್ವರ್(ಈಶ್ವರ್)ಅನಾಥ. ಅದೇ ಕಾರಣದಿಂದಲೋ ಏನೋ ಆತನಿಗೆ ಪ್ರೀತಿ, ಪ್ರೇಮವೆಂದರೆ ಅಲರ್ಜಿ. ಆದರೆ ಅವನ ಹೃದಯ(ರವಿಚಂದ್ರನ್)ಈ ಮಾತು ಕೇಳಬೇಕಲ್ಲ. ಅದು ಪ್ರೀತಿ ವಿಷಯದಲ್ಲಿ ನಾಯಕನಿಗೆ ಮತ್ತು ಅವನ ಹೃದಯಕ್ಕೆ ದೊಡ್ಡ ಸಂಘರ್ಷವಾಗುತ್ತದೆ. ನಿನಗೆ ಪ್ರೀತಿ ಮಾಡಿಸಿಯೇ ಸಿದ್ಧ. ಪ್ರೇಮ ಸಂಸ್ಥಾನಾರ್ಥಾಯ ಸಂಭಾವಾಮಿಯುಗೆ ಎಂದು ಹೃದಯ ಕೂಡಾ ಸವಾಲೆಸೆಯುತ್ತದೆ.
ಇನ್ನೇನು ನಾಯಕ ಗೆದ್ದ ಎನ್ನುವಷ್ಟರಲ್ಲಿ ನಾಯಕಿ ಅಪ್ಸರಾ(ಆರತಿ ಛಾಬ್ರಿಯ)ಅವನ ಗಮನ ಸೆಳೆಯುತ್ತಾಳೆ. ಗಮನ ಸೆಳೆದವಳು ಅವನ ನಿದ್ದೆ ಕೆಡಿಸುತ್ತಾಳೆ. ಕೊನೆಗೆ ನಾಯಕ ಅವನ ಹೃದಯಕ್ಕೆ ಶರಣಾಗುತ್ತಾನೆ. ಸರಿ, ಎಲ್ಲಾ ಸರಿ ಹೋಯ್ತು ಎನ್ನುವಷ್ಟರಲ್ಲಿ ನಾಯಕಿ ತನ್ನ ಐದು ಷರತ್ತುಗಳನ್ನು ಪೂರೈಸುವವನನ್ನು ಮಾತ್ರ ಪ್ರೀತಿಸುವುದಾಗಿ ಹೇಳುತ್ತಾಳೆ. ಈಶ್ವರ್ ಅವಳ ಷರತ್ತುಗಳನ್ನು ಪೂರೈಸಿ ಆಕೆಯ ಪ್ರೀತಿಸುವುದಾಗಿ ಹೇಳುತ್ತಾಳೆ. ಈಶ್ವರ್ ಅವಳ ಷರತ್ತುಗಳನ್ನು ಪೂರೈಸಿ ಆಕೆಯ ಪ್ರೀತಿಯನ್ನು ಗೆಲ್ಲುತ್ತಾನೆಯೇ? ಎಂಬುದೇ ಚಿತ್ರದ ಮುಂದಿನ ಭಾಗ.
‘ಆ ಪ್ರೇಮವೇ ನಾ, ಹೃದಯವೇ ನಾ, ಓಂಕಾರ ನಾ ’ಎಂದು ಆರಂಭದಲ್ಲೇ ಹೆಮ್ಮೆಯಿಂದ ಹಾಡಿ ಕುಣಿಯುತ್ತಾರೆ ರವಿಚಂದ್ರನ್. ‘ಅಹಂ ಪ್ರೇಮಾಸ್ಮಿ’ ಸಂಪೂರ್ಣವಾಗಿ ರವಿಚಂದ್ರನ್ ಚಿತ್ರ.
ಹೀಗೆ ಒಂದು ಕಡೆ ಮಿಂಚುತ್ತಲೇ ಮತ್ತೊಂದು ಕಡೆ ಇದು ತಮ್ಮ ಚಿತ್ರವೇನಾ ಎಂಬ ಸಂಶಯ ಹುಟ್ಟಿಸುತ್ತಾರೆ ರವಿಚಂದ್ರನ್. ಏಕೆಂದರೆ ತಾಂತ್ರಿಕತೆಯಿಂದ ಚಿತ್ರಕ್ಕೊಂದು ಅದ್ಭುತ ಸ್ಪರ್ಶ ನೀಡಿರುವ ರವಿಚಂದ್ರನ್, ಕಥೆ ವಿಷಯದಲ್ಲಿ ಮಾತ್ರ ತಮ್ಮ ಛಾಪನೊತ್ತಲು ವಿಫಲರಾಗಿದ್ದಾರೆಂದೇ ಹೇಳಬಹುದು.‘ ಕಾಲ ಬದಲಾಗುತ್ತೆ, ಆದರೆ ಪ್ರೀತಿ ಬದಲಾಗಲ್ಲ’ ಎಂದು ಅವರೇ ಹೇಳುವ ಹಾಗೆ, ಚಿತ್ರದಲ್ಲಿ ಕಾಲ ಮಾತ್ರ ಬದಲಾಗಿದೆ. ಪ್ರೀತಿ ಬದಲಾಗಿಲ್ಲ. ಹಾಗಾಗಿ ಕಥೆ, ಪ್ರೀತಿಯಷ್ಟೇ ಹಳೆಯದಾಗಿದೆ. ಚಿತ್ರಕಥೆ ಕೂಡಾ ಕಥೆಯನ್ನೇ ಹಿಂಬಾಲಿಸಿದೆ. ಹಾಗಾಗಿಯೇ ಚಿತ್ರ ಎತ್ತೆತ್ತಲೋ ಸಾಗಿದರೆ ಆಶ್ಚರ್ಯ ಪಡಬೇಕಿಲ್ಲ. ಒಮ್ಮೊಮ್ಮೆ ಈ ಚಿತ್ರ‘ಪ್ರೇಮ ಲೋಕ’ದ ರೀಮೇಕಾ?ಎಂಬ ಪ್ರಶ್ನೆ ಬಂದರೂ ಬರಬಹುದು.
ರವಿಚಂದ್ರನ್ ಒಟ್ಟು ಎಂಟು ವಿಭಾಗಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇಲ್ಲಿ ಅವರು ಗೆಲ್ಲುವುದು ಸಂಭಾಷಣೆ ಹಾಗೂ ಸಂಕಲನದಿಂದ. ಕೆಲವು ಸಂಭಾಷಣೆಗಳು ಸಿಳ್ಳೆ ತರಿಸುತ್ತವೆ. ಅವರ ಸಂಗೀತದಲ್ಲಿ ಮೂರು ಹಾಡುಗಳು ಕೇಳುವಂತಿವೆ. ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ ಸೂಪರ್.
ಇನ್ನು ನಟನೆ ವಿಷಯಕ್ಕೆ ಬಂದರೆ ಹೃದಯವಾಗಿ ಕಾಣಿಸಿಕೊಂಡಿರುವ ರವಿಚಂದ್ರನ್ ಚಿತ್ರದುದ್ದಕ್ಕೂ ಕಾಣಿಸಿಕೊಂಡರೂ, ಕೇವಲ ಹಾಡಿ, ಕುಣಿಯುವುದಕ್ಕೆ ಮಾತ್ರ ತಮ್ಮ ನಟನೆಯನ್ನು ಸೀಮಿತಗೊಳಿಸಿ ಕೊಂಡಿದ್ದಾರೆ. ಈಶ್ವರ್‘ಪ್ರೇಮ ಲೋಕ’ದ ರವಿಚಂದ್ರನ್ ಅವರನ್ನು ನೆನಪಿಸುತ್ತಾರೆ. ನಾಯಕಿ ಆರತಿ ಛಾಬ್ರಿಯಾ, ಮಲ್ಲಿ ಪ್ರಿಯಾಂಕಾರ ಮುಂದುವರಿದ ಭಾಗದಂತಿದ್ದಾರೆ. ಕಾಮಿಡಿ ಟೈಮ್ ಗಣೇಶ್ ಹಾಗೂ ಶರಣ್ರ ಹಾಸ್ಯ ಕೆಲವೊಮ್ಮೆ ಅಪಹಾಸ್ಯಕ್ಕೀಡಾಗುತ್ತದೆ. ಬುಲೆಟ್ ಪ್ರಕಾಶ್ ಮಾತ್ರ ಬಹಳ ಕಾಲ ನೆನಪಿನಲ್ಲುಳಿಯುವಂತೆ ನಟಿಸಿದ್ದಾರೆ.
(ಸ್ನೇಹ ಸೇತು : ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











