Don't Miss!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Sports PBKS vs MI IPL 2024: ಪಂಜಾಬ್ ರಾಜರಿಗೆ ಮುಂಬೈ ಇಂಡಿಯನ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'3ಜಿ' ವಿಮರ್ಶೆ: ಫೋನಿನಿಂದ ಹಾರಿಬಂದ ಭೂತವೇ
ಬಹುಶಃ 3ಜಿ ಟೆಕ್ನಾಲಜಿ ಹೊರಬರುವ ಮುನ್ನ 2ಜಿಯಲ್ಲೇ ಸಕತ್ ಆಟವಾಡಿ ಲೆಕ್ಕ ಹಾಕಲಿಕ್ಕೆ ಆಗದಷ್ಟು ದೋಚಿದ ಮಾಜಿ ಕೇಂದ್ರ ಸಚಿವ ಎ ರಾಜಾ ಈ ಚಿತ್ರಕ್ಕೆ ಸ್ಪೂರ್ತಿ ಇರಲೂ ಬಹುದು. ಆದರೆ, ಇದು ಹೇಳಿ ಕೇಳಿ ಹಾರರ್ ಚಿತ್ರ. ಗಳಿಕೆ ಲೆಕ್ಕಾಚಾರದಲ್ಲಿ 3ಜಿ ವೇಗದಲ್ಲಿ ದುಡ್ಡು ಸುರಿಯುವುದೋ ಅಥವಾ ಚಿತ್ರದ ಅಸಡಾ ಬಸಡಾ ಕಥೆಯಂತೆ ಉಲ್ಟಾ ಹೊಡೆಯುವುದೋ ಕಾದು ನೋಡಬೇಕಿದೆ.
ಚಿತ್ರದ ನಾಯಕ ನೀಲ್ ನಿತಿನ್ ಮುಖೇಶ್ ಹಾಗೂ ನಾಯಕಿ ಸೋನಾಲ್ ಚೌಹಾಣ್ ಅಲ್ಲದೆ ಮೃಣಾಲಿನಿ ಶರ್ಮ ಅವರ ನಟನೆಯಿಂದ ಚಿತ್ರ ನೋಡಬಲ್ ಎನಿಸಿದೆ. ಪ್ರತಿ ಬಾರಿ 3ಜಿ ಇರುವ ಹ್ಯಾಂಡ್ ಸೆಟ್ ಕರೆಗಂಟೆ ಬಾರಿಸಿದಾಗ ಆತ್ಮ ಪ್ರವೇಶ ಪಡೆಯುತ್ತದೆ. ಟೆಲಿಕಾಂ ಇಲಾಖೆ, ಟ್ರಾಯ್ ಅಧಿಕಾರಿಗಳು ನೋಡಿದರೆ ಭಯಪಟ್ಟು ಚಿತ್ರ ಬ್ಯಾನ್ ಮಾಡಿ ಮೊದಲು ಎಂದು ಪ್ರತಿಭಟನೆ ಮಾಡಿದರೂ ಮಾಡಬಹುದು.
ಭೂತ ಪ್ರೇತ, ಆತ್ಮಗಳ ಕಾಟ ಕಥೆ ಹೇಳುವಾಗ ಎಲ್ಲರೂ ಯಾಕೆ ಫಿಜಿ ದ್ವೀಪಕ್ಕೆ ಹೋಗುತ್ತಾರೋ ಬಾಲಿವುಡ್ ಪಂಡಿತರೇ ಹೇಳಬೇಕು. ಇತ್ತೀಚಿನ ಟೇಬಲ್ ನಂ.21 ಚಿತ್ರ ಕೂಡಾ ಫಿಜಿಯಲ್ಲೇ ಶೂಟಿಂಗ್ ಆಗಿದ್ದು, 3ಜಿ ಚಿತ್ರದ ಭೂತಗಳ ನೆಟ್ವರ್ಕ್ ಕೂಡಾ ಫಿಜಿಯಲ್ಲೇ ಸ್ಟ್ರಾಂಗ್ ಆಗಿರುವುದು ಕಾಕತಾಳೀಯ. ಚಿತ್ರದ ಹಣೆಬರಹ ಮುಂದೆ ಓದಿ...
ಫಿಜಿಯಲ್ಲಿ ಆತ್ಮ
ಸ್ಯಾಮ್(ನೀಲ್) ಹಾಗೂ ಶೀನಾ(ಸೋನಾಲ್) ಹಾಲಿಡೇ ಆಚರಣೆಗೆ ಫಿಜಿಗೆ ಬರುತ್ತಾರೆ. ಸ್ಯಾಮ್ 3ಜಿ ಹ್ಯಾಂಡ್ ಸೆಟ್ ಖರೀದಿಸುತ್ತಾನೆ. ಮುಂದೆ ಕೈಲಿರುವ ಮೊಬೈಲ್ ಭಯಾನಕ ಪ್ರಸಂಗಗಳಿಗೆ ನಾಂದಿ ಹಾಡುತ್ತದೆ. ಒಳ್ಳೆ ಕ್ಯಾರಿಕೇಚರ್ ರೀತಿ ಕಾಣೋ ಸತ್ತ ವ್ಯಕ್ತಿಗಳ ಮುಖಗಳು ಒಂದೊಂದಾಗೆ ಸ್ಯಾಮ್ ಕಣ್ಣಿಗೆ ಮೊಬೈಲ್ ಮೂಲಕ ಕಾಣಿಸಲು ಆರಂಭವಾಗುತ್ತದೆ. ಆದರೆ, ಆ ಆತ್ಮಗಳಿಗೆ ಸ್ಯಾಮ್ ಕಾಣಿಸುತ್ತಾನಾ? ಕಾದು ನೋಡಬೇಕು
ಇಲ್ಲಿಂದ ಮುಂದೆ ಹಾರರ್
ಸತ್ತ ವ್ಯಕ್ತಿಗಳ ಆತ್ಮಗಳು ಜೀವಂತ ಆತ್ಮಗಳೊಡನೆ ಸಂಪರ್ಕ ಸಾಧಿಸಲು 3ಜಿ ನೆಟ್ವರ್ಕ್ ಬಳಕೆ ಮಾಡಿಕೊಳ್ಳುತ್ತಿರುತ್ತದೆ. ಇದು ಸ್ಯಾಮ್ ಗೆ ಗೊತ್ತಾಗಿ, ಇದರಿಂದ ಹೇಗೆ ಮುಕ್ತಿ ಪಡೆಯುತ್ತಾನೆ ಎಂಬುದೇ ಕಥೆ ಮುಂದಿನ ಭಾಗ. ಐಡಿಯಾ ಥ್ರಿಲ್ಲಿಂಗ್ ಎನಿಸಿದರೂ ನಟನೆ ಸಿಗೋ ಮಾರ್ಕ್ಸ್ ನಿರ್ದೇಶಕರಿಗೆ ಕೊಡೊಕೆ ಸಾಧ್ಯವಿಲ್ಲ .ಅಲ್ಲಲ್ಲಿ ಜಾಳು ಜಾಳಾದ ಸಂಕಲನ ಚಿತ್ರದ ವೇಗವನ್ನು ಕುಂಠಿತಗೊಳಿಸಿದೆ.
ಥ್ರಿಲ್ಲಿಂಗ್ ಸೀನ್ ಇದೆ
ಚಿತ್ರದ ಮೊದಲಾರ್ಧದಲ್ಲಿ ಸ್ವಲ್ಪ ಥ್ರಿಲ್ಲಿಂಗ್ ಸೀನ್ ಗಳಿದೆ. ಆದರೆ, ಅದೇ ದ್ವಿತೀಯಾರ್ಧದಲ್ಲಿ ಆಕಳಿಕೆ ಹುಟ್ಟಿಸುತ್ತದೆ. ಫೋನ್ ರಿಂಗ್ ಆದಾಗ ಪ್ರೇಕ್ಷಕರ ಎದೆಯಲ್ಲಿ ನಡುಕ ಹುಟ್ಟುವ ಬದಲು ಹೊಟ್ಟೆಯಿಂದ ಹುಟ್ಟಿದ ನಗು ಅಲೆ ಅಲೆಯಾಗಿ ಥೇಟರ್ ತುಂಬುತ್ತದೆ. ಹಿನ್ನೆಲೆ ಸಂಗೀತವೂ ಕೆಲವು ಕಡೆ ಕೈ ಕೊಟ್ಟಿದೆ. ಸ್ಯಾಮ್ ಕಥೆ ಮುಗಿಸಲು ಬಂದ ಆತ್ಮಗಳು ಆತನ ಜೊತೆ ರೋಮ್ಯಾನ್ಸ್, ಡ್ಯಾನ್ಸ್ ಮಾಡುತ್ತಾ ಕೊಲ್ಲಲು ಮುಂದಾಗಿದ್ದು ಹೊಸ ಪ್ರಯತ್ನವೇ? ನಿರ್ದೇಶಕರೇ ಉತ್ತರಿಸಬೇಕು.
ಸೋತ ನಿರ್ದೇಶಕರು
ಪ್ರೇಕ್ಷಕರನ್ನು ಭಯಪಡಿಸಲು 3ಜಿ ಫೋನ್ ರಿಂಗ್ ಆಗಾಗ ಹಲೋ ದನಿ ಅಲ್ಲದೆ, ಗೃಹೋಪಯೋಗಿ ವಸ್ತುಗಳನ್ನು ಬಳಸಿಕೊಳ್ಳಲು ಯತ್ನಿಸಿರುವ ನಿರ್ದೇಶಕರು ಸೋತಿದ್ದಾರೆ. ಹಲವು ಸೀನ್ ಗಳು ಭಯ ಹುಟ್ಟಿಸುವ ಬದಲು ಪೇಲವವಾಗಿ ಕಾಣಿಸಿಕೊಂಡಿದೆ. ಭಯ ಹುಟ್ಟಿಸುವುದು ಹೇಗೆ ಎಂಬ ಪುಸ್ತಕ ಸಿಕ್ಕರೆ ಮೊದಲು ನಿರ್ದೇಶಕರಿಗೆ ಗಿಫ್ಟ್ ಕೊಡಬೇಕು
ಪ್ಲಸ್ ಪಾಯಿಂಟ್
ಆದರೆ, ಪ್ರೇಕ್ಷಕರ ಎದೆ ಬಡಿತ ಹೆಚ್ಚಿಸುವಂಥ ಮಾದಕ ಚುಂಬನಗಳಿದೆ. ಮೂರು ಬಾರಿ ಚುಂಬನ ಮೂವತ್ತು ಬಾರಿಯಾದರೂ ಆಗಬಾರದಿತ್ತೆ ಎನ್ನುವಂತಿದೆ. ಸೋನಲ್ ಹಾಗೂ ನೀಲ್ ಜೋಡಿ ಹಾಟ್ ಹಾಟ್ ಆಗಿ ಚಿತ್ರದ ಬಿಸಿ ಏರಿಸಿದೆ.
ನೀಲ್ ನಟನೆ ಜೀವಾಳ
ಡೇವಿಡ್ ಚಿತ್ರದ ನಂತರ ನೀಲ್ ಮತ್ತೊಮ್ಮೆ ಅಮೋಘ ಅಭಿನಯ ನೀಡಿದ್ದಾರೆ. ಅದ್ಭುತ ಗಾಯಕ ದಿವಂಗತ ಮುಖೇಶ್ ಅವರ ಮೊಮ್ಮಗ ನೀಲ್ ಪ್ರಬುದ್ಧ ನಟನಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಆದರೆ, ಉತ್ತಮ ಅವಕಾಶಗಳು ಸಿಗುತ್ತಿಲ್ಲ.
ಇನ್ನು ಜನ್ನತ್ ಚಿತ್ರ ಬೆಡಗಿ ಸೋನಾಲ್ ಚೌಹಾಣ್ ತನ್ನ ಮೈಮಾಟಗಳ ಮೂಲಕ ಚಿತ್ರವನ್ನು ಹಿಡಿದಿಟ್ಟುಕೊಳ್ಳುತ್ತಾಳೆ, ಬೀಚ್, ಬೆಡ್ ರೂಮ್, ಎಲ್ಲೆಡೆ ಸೋನಾಲ್ ಸುಂದರವಾಗಿ ಕಾಣುತ್ತಾಳೆ. ನಟಿಸಲು ಯತ್ನಿಸಿದ್ದಾಳೆ. ಆದರೆ, ಅದು ಪ್ರೇಕ್ಷಕರಿಗೂ ಬೇಕಿಲ್ಲ.
ಹಾಡು ಬೇಕಿತ್ತಾ?
ಒಟ್ಟಾರೆ ಉತ್ತಮ ಚಿತ್ರವಾಗುವುದರಲ್ಲಿ ಸೋತಿರುವ ಈ ಚಿತ್ರದ ಕೊಲೆಪಾತಕರಾಗಿ ನಿರ್ದೇಶಕದ್ವಯರು ನಿಂತಿದ್ದಾರೆ. ಸಂಗೀತ ನಿರ್ದೇಶಕರು ಚಿತ್ರವನ್ನು ಕೈ ಹಿಡಿದು ಮೇಲಕ್ಕೆತ್ತಿಲ್ಲ. ಹಾಡುಗಳು ಈ ಚಿತ್ರಕ್ಕೆ ಅವಶ್ಯವೂ ಇರಲಿಲ್ಲ. ನೀಲ್ ಹಾಗೂ ಸೋನಾಲ್ ಕೆಮಿಸ್ಟ್ರಿ ನೋಡಿ ಹಾರರ್ ಚಿತ್ರ ಕಾಮಿಡಿ ಮಾದರಿಯಲ್ಲಿ ನೋಡಿ ಆನಂದಿಸುವ ಇಚ್ಛೆ ಇದ್ದರೆ ಚಿತ್ರಮಂದಿರಕ್ಕೆ ಹೋಗಿ.. ಧೈರ್ಯವಾಗಿ 3ಜಿ ಫೋನ್ ನಿಂದ ಮಾತನಾಡಿ
ಭೂತ್ ಎಷ್ಟೋ ವಾಸಿ
ಅಲ್ಲಲ್ಲಿ ಹಾರರ್ ಸನ್ನಿವೇಶಗಳನ್ನು ಬಿಟ್ಟರೆ ಚಿತ್ರ ನಿರ್ದೇಶಕರು ಹಳಿ ತಪ್ಪಿರುವುದು ಪ್ರೇಕ್ಷಕರಿಗೆ ತಕ್ಷಣಕ್ಕೆ ಗೊತ್ತಾಗುತ್ತದೆ. ರಾಮ್ ಗೋಪಾಲ್ ವರ್ಮಾ ಅವರ 'ಭೂತ್' ಅಥವಾ ವಿಕ್ರಮ್ ಭಟ್ ಅವರ 'ರಾಜ್' ಚಿತ್ರದ ಡಿವಿಡಿ ತರಿಸಿಕೊಂಡು ಒಮ್ಮೆ ನೋಡುವುದು ಉತ್ತಮ. ಕ್ಲೈಮ್ಯಾಕ್ ಉತ್ತಮವಾಗಬಹುದಿತ್ತು. ಹಾಳಾಗಿದೆ. ಮುಂದೆ ಬಿಪಾಶಾಳ ಆತ್ಮ ನಿಮಗಾಗಿ ಕಾದು ಕುಂತಿದೆ.