Pushpa Twitter Review: 'ಪುಷ್ಪ' ಸಿನಿಮಾ ನೋಡಿದವರು ಹೀಗೆ ಹೇಳುತ್ತಿದ್ದಾರೆ
ಬಹುನಿರೀಕ್ಷಿತ 'ಪುಷ್ಪ' ಸಿನಿಮಾ ಬಿಡುಗಡೆ ಆಗಿದ್ದು, ಬೆಂಗಳೂರು ಸೇರಿದಂತೆ ಹಲವು ಕಡೆ ಬೆಳ್ಳಂಬೆಳಗ್ಗೆ 5 ಗಂಟೆಗೆ ಶೋ ಪ್ರದರ್ಶನ ಮಾಡಲಾಗಿದೆ.
ಈಗಾಗಲೇ ಸಾವಿರಾರು ಮಂದಿ 'ಪುಷ್ಪ' ಸಿನಿಮಾದ ಮೊದಲ ಶೋ ನೋಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಂಗಳಲ್ಲಿ 'ಪುಷ್ಪ' ಸಿನಿಮಾದ ಚುಟುಕು ವಿಮರ್ಶೆಗಳು ಈಗಾಗಲೇ ಹರಿದಾಡುತ್ತಿದ್ದು, ಸಿನಿಮಾದ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ.

ಗುಂಡರಾಘವ ಎಂಬುವರು ಟ್ವೀಟ್ ಮಾಡಿದ್ದು, ''ಅಲ್ಲು ಅರ್ಜುನ್ ಅಪ್ಪಟ ಅಭಿಮಾನಿಯಾಗಿ ಹೇಳುತ್ತಿದ್ದೇನೆ. ಸಿನಿಮಾದ ಮೊದಲಾರ್ಧ ತುಸು ಎಳೆದಂತೆ ಭಾಸವಾಗುತ್ತದೆ. ಅದರ ಬಳಿಕ ಸಿನಿಮಾ ವೇಗ ಪಡೆದುಕೊಳ್ಳುತ್ತದೆ. ಅಲ್ಲು ಅರ್ಜುನ್ ಅದ್ಭುತವಾಗಿ ನಟಿಸಿದ್ದಾರೆ'' ಎಂದಿದ್ದಾರೆ.
'ಸಿಂಪಲ್ ಔಟ್ಲುಕ್' ಹೆಸರಿನ ಪ್ಯಾರಡಿ ಟ್ವಿಟ್ಟರ್ ಅಕೌಂಟ್ ಸಹ ಚುಟುಕು ವಿಮರ್ಶೆ ಪ್ರಕಟಿಸಿದ್ದು, ''ಸಿನಿಮಾದ ವಿಮರ್ಶೆಗಳು ಕೇವಲ ಎರಡು ವಿಧವಾಗಿ ಹೊರಗೆ ಬರುತ್ತಿವೆ. ಸಾಧಾರಾಣ, ಸಾಧಾರಣಕ್ಕಿಂತಲೂ ಕಡಿಮೆ. ಅಲ್ಲಿಗೆ 'ಪುಷ್ಪ' ಸಿನಿಮಾ ಫ್ಲಾಪ್ ಅಲ್ಲ ಆದರೆ ಹಿಟ್ ಅಂತೂ ಖಂಡಿತ ಅಲ್ಲ'' ಎಂದಿದೆ.
ವೆಂಕಿ ರಿವ್ಯೂಸ್ ಟ್ವಿಟ್ಟರ್ ಖಾತೆಯ ಪ್ರಕಾರ, ''ಒಟ್ಟಾರೆಯಾಗಿ ಸಿನಿಮಾ ಸಾಧಾರಣವಾಗಿದೆಯಷ್ಟೆ. ಅಲ್ಲು ಅರ್ಜುನ್ ಒಬ್ಬರೇ ಶ್ರಮಪಟ್ಟು ಸಿನಿಮಾವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಹಿನ್ನೆಲೆ ಸಂಗೀತ ಚೆನ್ನಾಗಿಲ್ಲ. ಸಿನಿಮಾದ ಕ್ಲೈಮ್ಯಾಕ್ಸ್ ಸಹ ಒಪ್ಪುವಂತಿಲ್ಲ. ಒಮ್ಮೆ ನೋಡಬಹುದಷ್ಟೆ'' ಎಂದಿದ್ದಾರೆ.
ಮುಂದುವರೆದು, ''ಸಿನಿಮಾದ ಡಬ್ಬಿಂಗ್ ಸರಿಯಿಲ್ಲ. ಎಷ್ಟೋ ಕಡೆ ದೃಶ್ಯಕ್ಕೂ ಡೈಲಾಗ್ಗೂ ಸಿಂಕ್ ಆಗಿಲ್ಲ. ಹಿನ್ನೆಲೆ ಸಂಗೀತ ಬಹಳ ಸುಧಾರಿಸಬಹುದಿತ್ತು. ಅಲ್ಲು ಅರ್ಜುನ್ ತಮ್ಮ ನಟನೆಯಿಂದ ಸಿನಿಮಾವನ್ನು ಮೇಲಕ್ಕೆತ್ತಿದ್ದಾರೆ. ಅಲ್ಲು ಅರ್ಜುನ್ ಅದ್ಭುತವಾಗಿ ನಟಿಸಿದ್ದಾರೆ'' ಎಂದಿದ್ದಾರೆ.
''ಸಿನಿಮಾದ ಮೊದಲಾರ್ಧ ಪರವಾಗಿಲ್ಲ. ಎರಡನೇ ಅರ್ಧ ಬಹಳ ಉದ್ದವಿದೆ. ಕೆಲವು ದೃಶ್ಯಗಳನ್ನು ಸುಖಾ ಸುಮ್ಮನೆ ಎಳೆದಾಡಲಾಗಿದೆ, ಇದರ ಪರಿಣಾಮ ಕ್ಲೈಮ್ಯಾಕ್ಸ್ ಮೇಲೆ ಬಿದ್ದಿದೆ. ಆದರೂ ಸಿನಿಮಾದಲ್ಲಿ ಅಲ್ಲು ಅರ್ಜುನ್ ಬಹಳ ಗಮನ ಸೆಳೆಯುತ್ತಾರೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ಸ್ಟ್ರೈಟ್ ಟಾಕ್ ಟ್ವಿಟ್ಟರ್ ಖಾತೆ.
ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಸಿನಿಮಾ ಬಹಳವಾಗಿಯೇ ಇಷ್ಟವಾಗಿದೆ. ಕೆಲವರಂತೂ ಸಿನಿಮಾ ಅತ್ಯದ್ಭುತವಾಗಿದೆ ಎಂದಿದ್ದಾರೆ. ಸಮಂತಾ ಡ್ಯಾನ್ಸ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಬಹುತೇಕರು ಸಿನಿಮಾ ಸಾಧಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಬಹುತೇಕರು ಅಲ್ಲು ಅರ್ಜುನ್ ನಟನೆಯನ್ನು ಬಹುವಾಗಿ ಹೊಗಳಿದ್ದಾರೆ ಮತ್ತು ಸಿನಿಮಾದ ಡೈಲಾಗ್ಗಳು ಚೆನ್ನಾಗಿವೆ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ ಸಿನಿಮಾದ ಹಿನ್ನೆಲೆ ಸಂಗೀತ ಬಹಳ ಪೇಲವವಾಗಿದೆ ಎಂದೂ ಹೇಳಿದ್ದಾರೆ. ಸಿನಿಮಾದ ದ್ವಿತೀಯಾರ್ಧ ಬಹಳ ಉದ್ದವಾಯಿತೆಂದು, ಕೆಲವು ದೃಶ್ಯಗಳನ್ನು ಅನಗತ್ಯವಾಗಿ ಎಳೆಯಲಾಗಿದೆಯೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
'ಪುಷ್ಪ' ಸಿನಿಮಾವು ಇಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಸಿನಿಮಾವು ರಕ್ತ ಚಂದನ ಕಳ್ಳ ಸಾಗಣೆದಾರನ ಕುರಿತಾದ ಕತೆ ಹೊಂದಿದೆ. ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳ ಸಾಗಣೆದಾರನ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಸಿನಿಮಾದ ನಾಯಕಿ ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಿಗ ಹಾಸ್ಯನಟ ಸುನಿಲ್, ಡಾಲಿ ಧನಂಜಯ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಮುಖ್ಯ ವಿಲನ್ ಆಗಿ ಮಲಯಾಳಂ ಸೂಪರ್ ಸ್ಟಾರ್ ಫಹಾದ್ ಫಾಸಿಲ್ ಇದ್ದಾರೆ. ಸಿನಿಮಾದ ಮೊದಲ ಭಾಗವಷ್ಟೆ ಈಗ ಬಿಡುಗಡೆ ಆಗಿದ್ದು, ಸಿನಿಮಾದ ಎರಡನೇ ಭಾಗ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











