Don't Miss!
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಯ್ಕೆ ಸಮಿತಿಗೆ ಮುಖಭಂಗ: ಅಪ್ಪು, ಅಂಬಿ ಪ್ರಶಸ್ತಿಗೆ ಕೋರ್ಟ್ ತಡೆ?
2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ವಿವಾದಕ್ಕೆ ಇಂದು (ಜು 19) ತೆರೆ ಬೀಳುವ ಸಾಧ್ಯತೆಯಿದೆ. ರಾಜ್ಯ ವಾರ್ತಾ ಇಲಾಖೆ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯುವುದಾಗಿ ಹೈಕೋರ್ಟಿಗೆ ತಿಳಿಸಿದೆ.
ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿ ಪ್ರಶಸ್ತಿ ಪ್ರಕಟಿಸಿ ಅದನ್ನು ಹಿಂದಕ್ಕೆ ಪಡೆಯುತ್ತಿರುವುದು ಸ್ಯಾಂಡಲ್ ವುಡ್ ಇತಿಹಾದದಲ್ಲಿ ಇದೇ ಮೊದಲು. ಕೋರ್ಟ್ ಆದೇಶದನ್ವಯ ಪ್ರಶಸ್ತಿಯನ್ನು ವಾಪಾಸ್ ಪಡೆಯುವುದಾಗಿ ವಾರ್ತಾ ಇಲಾಖೆಯ ನಿರ್ದೇಶಕ ವಿಶುಕುಮಾರ್ ಕೋರ್ಟಿಗೆ ತಿಳಿಸಿದ್ದರಿಂದ, ಇದರ ವಿಚಾರಣೆ ಇಂದು ಕೋರ್ಟ್ ಮುಂದೆ ಬರಲಿದ್ದು ಇಂದೇ ಆದೇಶ ಹೊರಬೀಳುವ ಸಾಧ್ಯತೆಯಿದೆ.
ಏನಿದು ವಿವಾದ: ಡಾ.ಭಾರತಿ ವಿಷ್ಣುವರ್ಧನ್ ನೇತೃತ್ವದಲ್ಲಿ ಆಯ್ಕೆ ಸಮಿತಿಯು 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಪಟ್ಟಿ ಅಂತಿಮಗೊಳಿಸಿತ್ತು. ಆಯ್ಕೆ ಸಮಿತಿಯಲ್ಲಿ ಹೇಮಾ ಚೌಧುರಿ, ಈಶ್ವರ ದೈತೋಟ ಮತ್ತು ಅಶೋಕ್ ಕಶ್ಯಪ್ ಕೂಡಾ ಸದಸ್ಯರಾಗಿದ್ದರು.
ಪ್ರಶಸ್ತಿಗೆ ಆಯ್ಕೆ ಮಾಡಲು ಇದ್ದ ಗಡುವನ್ನು ಜುಲೈ ಮೂರರಿಂದ ಡಿಸೆಂಬರ್ 28,2011ರ ವರೆಗೆ ಮುಂದೂಡಲಾಗಿತ್ತು. ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳಲ್ಲಿ ಹೇಮಾ ಚೌಧುರಿ ಮತ್ತು ಅಶೋಕ್ ಕಶ್ಯಪ್ ಭಾಗಿಯಾಗಿದ್ದರು. ಇದನ್ನು ಪ್ರಶ್ನಿಸಿ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಮತ್ತು ಪ್ರಿಯಾ ಹಾಸನ್ ಕೋರ್ಟ್ ಮೆಟ್ಟಲೇರಿದ್ದರು.
ಯಾರಿಗೆ ಪ್ರಶಸ್ತಿ ಕೈತಪ್ಪಲಿದೆ..ಮುಂದೆ ಓದಿ..
ಕೋರ್ಟ್ ಮೆಟ್ಟಲೇರಿದ ಪ್ರಶಸ್ತಿ ವಿವಾದ
ಆಯ್ಕೆ ಸಮಿತಿಯಲ್ಲಿದ್ದ ಸದಸ್ಯರು ಭಾಗವಹಿಸಿದ್ದ ಚಿತ್ರಗಳನ್ನು ಹೇಗೆ ಪ್ರಶಸ್ತಿಗೆ ಆಯ್ಕೆ ಮಾಡುತ್ತೀರಾ ಎಂದು ಪಾಟೀಲ್ ಮತ್ತು ಪ್ರಿಯಾ ಕೋರ್ಟ್ ಮೊರೆ ಹೋಗಿದ್ದರು. ಇವರ ವಾದಕ್ಕೆ ಮಾನ್ಯತೆ ನೀಡಿದ ನ್ಯಾಯಮೂರ್ತಿಗಳು ವಾರ್ತಾ ಇಲಾಖೆಗೆ ಪಟ್ಟಿ ಹಿಂದಕ್ಕೆ ಪಡೆಯುವಂತೆ ಸೂಚಿಸಿತ್ತು.
ಲಾಡ್ ಮನೆಗೆ ದೌಡು
ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ವಾರ್ತಾ ಸಚಿವ ಸಂತೋಶ್ ಲಾಡ್ ಕಚೇರಿಗೆ ದೌಡಾಯಿಸಿದ ವಾರ್ತಾ ಇಲಾಖೆಯ ಅಧಿಕಾರಿಗಳು, ಪ್ರಶಸ್ತಿ ಪಟ್ಟಿಯನ್ನು ಸರಕಾರವೇ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದ್ದರು. ಸರಕಾರ ಇಂದು ಅಧಿಕೃತವಾಗಿ ಪಟ್ಟಿ ಹಿಂದಕ್ಕೆ ಪಡೆಯುವ ಸಾಧ್ಯತೆಯಿದೆ. ಒಂದು ವೇಳೆ ಸರಕಾರ ಹಿಂದಕ್ಕೆ ಪಡೆಯದಿದ್ದರೂ ಕೋರ್ಟ್ ಆಯ್ಕೆ ಪಟ್ಟಿಗೆ ತಡೆಯಾಜ್ಞೆ ನೀಡಲಿದೆ ಎನ್ನಲಾಗುತ್ತಿದೆ.
ಆಯ್ಕೆ ಸಮಿತಿಯಲ್ಲಿದ್ದವರ ಚಿತ್ರಗಳಾವುವು?
ಅಶೋಕ್ ಕಶ್ಯಪ್ ಅವರು ರಾಕ್ಲೈನ್ ಬ್ಯಾನರಿನಲ್ಲಿ ಬಂದ ಉಪೇಂದ್ರ, ನಯನತಾರ ಅಭಿನಯದ ಸೂಪರ್ ಹಿಟ್ ಚಿತ್ರ ಸೂಪರ್ ಚಿತ್ರದ ಛಾಯಾಗ್ರಾಹಕರು. ಹೇಮಾ ಚೌಧುರಿ ಸೊಗಸುಗಾರ ಚಿತ್ರದಲ್ಲಿ ನಟಿಸಿದ್ದರು. ತುಳು ಚಿತ್ರ ಕಂಚಿಲ್ದ ಬಾಲೆ ಚಿತ್ರಕ್ಕಾಗಿ ಈಶ್ವರ್ ದೈತೋಟ ಅವರಿಗೆ ಸ್ಪೆಷಲ್ ಥಾಂಕ್ಸ್ ನೀಡಲಾಗಿತ್ತು. ಇದರಲ್ಲಿ ಸೂಪರ್ ಮತ್ತು ಕಂಚಿಲ್ದ ಬಾಲೆ ಅತ್ಯುತ್ತಮ ಚಿತ್ರಗಳ ಕ್ಯಾಟಗರಿಯಲ್ಲಿ ಆಯ್ಕೆಯಾಗಿತ್ತು.
ಪ್ರಶಸ್ತಿ ವಂಚಿತರಾಗಲಿರುವವರು - 1
ಹಿರಿಯ ನಟ ಶಿವರಾಂ - ಡಾ. ರಾಜ್ ಪ್ರಶಸ್ತಿ, ಭಾರ್ಗವ - ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಅಂಬರೀಶ್ - ಡಾ. ವಿಷ್ಣು ಪ್ರಶಸ್ತಿ, ಅತ್ಯುತ್ತಮ ಚಿತ್ರ - ಸೂಪರ್, ಅತ್ಯುತ್ತಮ ಪ್ರಾದೇಶಿಕ ಚಿತ್ರ - ಕಂಚಿಲ್ದ ಬಾಲೆ (ತುಳು), ಅತ್ಯುತ್ತಮ ಪೋಷಕ ನಟ, ನಟಿ - ರಮೇಶ್ ಭಟ್ (ಉಯ್ಯಾಲೆ), ವಿಜಯಲಕ್ಷ್ಮಿ ಸಿಂಗ್ (ವೀರ ಪರಂಪರೆ)
ಪ್ರಶಸ್ತಿ ವಂಚಿತರಾಗಲಿರುವವರು - 2
ಅತ್ಯುತ್ತಮ ನಟ - ಪುನೀತ್ ರಾಜಕುಮಾರ್ (ಪೃಥ್ವಿ ), ಅತ್ಯುತ್ತಮ ನಟಿ - ಕಲ್ಯಾಣಿ (ಸುಸೈಡ್), ಅತ್ಯುತ್ತಮ ಕಥೆಗಾರ - ಅಗ್ನಿ ಶ್ರೀಧರ್, ಅತ್ಯುತ್ತಮ ಸಂಭಾಷಣೆ - ಬರಗೂರು ರಾಮಚಂದ್ರಪ್ಪ, ಅತ್ಯುತ್ತಮ ಛಾಯಾಗ್ರಾಹಕ - ಸತ್ಯ ಹೆಗಡೆ (ಸಂಜು ವೆಡ್ಸ್ ಗೀತಾ), ಅತ್ಯುತ್ತಮ ಸಂಗೀತ ನಿರ್ದೇಶಕ - ಗುರುಕಿರಣ್ (ಮೈಲಾರಿ).