Andondittu Kaala Review ; ಸಿನಿಮಾದಲ್ಲೊಂದು ಸಿನಿಮಾ, ಹೇಗಿದೆ ಆ ಕಾಲದ ಕುಮಾರನ ಕಥೆ-ವ್ಯಥೆ ? ಇಲ್ಲಿದೆ ವಿಮರ್ಶೆ
ಮೊದಲಿಂದ ತಾವೊಬ್ಬ ಕ್ಲಾಸ್ ಆಕ್ಟರ್ ಎನ್ನುವುದನ್ನು ರುಜುವಾತು ಮಾಡುತ್ತಾ ಬಂದವರು ವಿನಯ್ ರಾಜ್ ಕುಮಾರ್. ನಿಜಾ, ವಿನಯ್ ಅಭಿನಯದ ಮೊದಲ ಸಿನಿಮಾ ''ಸಿದ್ಧಾರ್ಥ'' ಆ ನಂತರ ಬಂದ ''ರನ್ ಆಂಟನಿ''..''ಟೆನ್''.. ವಿನಯ್ಗೆ ಬೇಕಿದ್ದ ಗೆಲುವುನ್ನು ತಂದು ಕೊಡಲಿಲ್ಲ. ಆದರೆ, ಈ ಚಿತ್ರಗಳ ಮೂಲಕ ವಿನಯ್ ರಾಜ್ ಕುಮಾರ್ ಅವರಲ್ಲೊಬ್ಬ ಕಲಾವಿದ ಇದ್ಧಾನೆ ಎನ್ನುವುದು ಬೆಳಕಿಗೆ ಬಂದಿತ್ತು.
ಎಲ್ಲರಂತೆ ವಿನಯ್ ರಾಜ್ ಕುಮಾರ್ ಕಮರ್ಷಿಯಲ್ ಸಿದ್ಧ ಸೂತ್ರಕ್ಕೆ ಜೋತು ಬೀಳುವವರಲ್ಲ ಎಂಬ ವಿಚಾರ ಕೂಡ ಗೊತ್ತಾಗಿತ್ತು. ಮುಂದುವರೆದು ಅನಂತು ವರ್ಸಸ್ ನುಸ್ರತ್, ಒಂದು ಸರಳ ಪ್ರೇಮ ಕಥೆ ಅಂತಹ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳಿಯುವುದಲ್ಲದೇ ತಮ್ಮ ಅಭಿನಯದಿಂದ ಅನೇಕರ ಹೃದಯವನ್ನು ಗೆದ್ದ ವಿನಯ್ ರಾಜ್ ಕುಮಾರ್ ಸದ್ಯ ಅಂದೊಂದಿತ್ತು ಕಾಲ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಈ ವಾರ ಬಂದಿದ್ಧಾರೆ. ಹಾಗಿದ್ದರೆ ಹೇಗಿದೆ ಅಂದೊಂದಿತ್ತು ಕಾಲ..? ಚಿತ್ರದ ಕಥಾ ಹಂದರವೇನು..? ನಿರೀಕ್ಷೆಗೆ ತಕ್ಕಂತೆ ಈ ಚಿತ್ರ ಮೂಡಿ ಬಂದಿದೆಯಾ ? ಎಂದು ತಿಳಿಯಲು ಮುಂದೆ ಓದಿ

ಕಥಾಹಂದರ
ಅಂದೊಂದಿತ್ತು ಕಾಲ ಹೆಸರೇ ಹೇಳುವಂತೆ ಈ ಕಾಲದಲ್ಲಿ ಹೇಳಲಾದ ಆ ಕಾಲದ ಕಥೆ ಇದು. ಟೆಂಟ್ಗಳಲ್ಲಿ ಪ್ರದರ್ಶನವಾಗುತ್ತಿದ್ದ ಚಿತ್ರಗಳನ್ನು ನೋಡುತ್ತಾ ಬೆಳೆಯುವ ಕುಮಾರ (ವಿನಯ್ ರಾಜ್ಕುಮಾರ್)ನ ಮೇಲೆ ಚಿತ್ರಬ್ರಹ್ಮ ಪುಟ್ಟಣ್ಣ ಕಣ್ಗಾಲ್ ನಿರ್ದೇಶನದ ನಾಗರಹಾವು ಪ್ರಭಾವ ಬೀರುತ್ತೆ. ಇಲ್ಲಿಂದ ಸಿನಿಮಾ ಧ್ಯಾನವನ್ನು ಮಾಡಲು ಶುರು ಮಾಡುವ ಕುಮಾರ ಕನಸೆಂಬ ಕುದರೆಯ ಬೆನ್ನೇರಿ ಬೆಂಗಳೂರಿಗೆ ಬರುತ್ತಾನೆ. ಇಲ್ಲಿ ಕುಮಾರನಿಗೆ ಸತ್ಯ ದರ್ಶನವಾಗುತ್ತೆ. ಅಡಿಗಡಿಗೂ ಅವಮಾನ.. ನಿಂದನೆಗಳನ್ನು ಎದುರಿಸುವ ಕುಮಾರ ಮುಂದೇ ನಿರ್ದೇಶಕನಾಗುತ್ತಾನಾ ? ಎನ್ನುವುದೇ ಚಿತ್ರದ ಕಥೆ.
ಹೀಗೆ ಸಾಗುವ ಈ ಕಥೆಯಲ್ಲಿ ಆಗಾಗ ಕುಮಾರನ ಬಾಲ್ಯದ ಕಥೆಗಳು ಇಣುಕುತ್ತವೆ. ನೆನಪುಗಳು ಅನಾವರಣಗೊಳ್ಳುತ್ತವೆ. ಇನ್ನೂ ಇಲ್ಲಿ ಹೊಡೆದಾಡುವುದಕ್ಕೆ.. ರಕ್ತಪಾತಕ್ಕೆ.. ಅವಕಾಶ ಇಲ್ಲ. ಬದಲಿಗೆ ಮದರ್ ಸೆಂಟಿಮೆಂಟ್ಗೆ ಇಲ್ಲಿ ಜಾಗವನ್ನು ನೀಡಲಾಗಿದೆ. ನಿರ್ದೇಶಕನ ಬದುಕು ಬವಣೆಯ ಕಥೆಯನ್ನು ಹೇಳುತ್ತಲೇ ನೋಡುಗರ ಭಾವನೆಗಳನ್ನು ಕದಡುವ ಪ್ರಯತ್ನ ಮಾಡಲಾಗಿದೆ.
ಅಭಿನಯ ಹೇಗಿದೆ.. ?
ಕನ್ನಡ ಮೀಡಿಯಂ ಕುಮಾರನ ಪಾತ್ರವನ್ನು ವಿನಯ್ ರಾಜ್ ಕುಮಾರ್ ಜೀವಿಸಿದ್ದಾರೆ. ಈ ಮೂಲಕ ತಮ್ಮ ಅಭಿನಯ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ತುಂಬಾನೇ ಸಹಜವಾದ ಅಭಿನಯದ ಇವರದ್ದು. ವಿನಯ್ ರಾಜ್ ಕುಮಾರ್ ಅವರನ್ನು ಹೊರತು ಪಡಿಸಿದರೆ ಬೇರೆ ಪಾತ್ರಗಳಿಗೆ ಇಲ್ಲಿ ಹೆಚ್ಚಿನ ಸ್ಕೋಪ್ ಇಲ್ಲ. ಯಾರು ಪ್ರಭಾವ ಕೂಡ ಬೀರುವುದಿಲ್ಲ. ಅರುಣಾ ಬಾಲರಾಜ್ ನಿರ್ವಹಿಸಿರುವ ತಾಯಿಯ ಪಾತ್ರ ಗಮನ ಸೆಳೆಯುತ್ತೆ.
ನಿರ್ದೇಶನ ಹೇಗಿದೆ ?
ತಮ್ಮ ಮೊದಲ ಪ್ರಯತ್ನದಲ್ಲಿಯೇ ಒಂದೊಳ್ಳೆಯ ಸಧಬಿರುಚಿಯ ಚಿತ್ರವನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಿರ್ದೇಶಕ ಕೀರ್ತಿ ಮಾಡಿದ್ದಾರೆ. ತಮ್ಮ ವ್ಯೆಯಕ್ತಿಕ ಜೀವನದ ಅನುಭವಗಳನ್ನು ಕೂಡ ಇಲ್ಲಿ ಕೀರ್ತಿ ಹೇಳುವ ಪ್ರಯತ್ನವನ್ನು ಮಾಡಿರಬಹುದಾದರೂ ಬಾಲ್ಯದ ದಿನಗಳನ್ನು.. ಊರಿನ ನೆನಪುಗಳನ್ನು..ಶಾಲಾ ದಿನಗಳನ್ನು ನೆನಪಿಸುವ ಕೀರ್ತಿ ಕನ್ನಡ ಪ್ರೇಮವನ್ನು ಕೂಡ ಕಟ್ಟಿಕೊಡುವ ಪ್ರಯತ್ನ ಮಾಡಿದ್ಧಾರೆ.
ಪ್ಲಸ್ ಮತ್ತು ಮೈನಸ್ ಪಾಯಿಂಟ್ ಏನು ?
ವಿನಯ್ ರಾಜ್ ಕುಮಾರ್ ಅವರ ಅಭಿನಯ, ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣ ಮತ್ತು ರಾಘವೇಂದ್ರ ವಿ ಅವರ ಸಂಗೀತ ಈ ಚಿತ್ರದ ಬಹುದೊಡ್ಡ ಶಕ್ತಿ. ಇನ್ನೂ ಅಂದೊಂದಿತ್ತು ಕಾಲ ಆ ಕಾಲಘಟ್ಟದಲ್ಲಿ ನಡೆಯುವ ಕಥೆ. ಆದರೆ.. ಸೆಟ್ ಹಾಕದೇ ನಿರ್ದೇಶಕರು ಚಿತ್ರೀಕರಣ ಮಾಡಿದ್ಧಾರೆ.
ತಮ್ಮ ಈ ಪ್ರಯತ್ನದಲ್ಲಿ ಅಲ್ಲಲ್ಲಿ ಯಶಸ್ವಿಯಾಗಿರುವ ನಿರ್ದೇಶಕರು ಅಭಿಷೇಕ್ ಕಾಸರಗೋಡು ಅವರ ಸಹಾಯದಿಂದ ತಪ್ಪುಗಳನ್ನು ಮರೆಮಾಚುವ ಪ್ರಯತ್ನ ಮಾಡಿದ್ದಾರಾದರೂ ಕೆಲ ಕಡೆ ಎಡವಿದ್ದಾರೆ. ಚಿತ್ರದಲ್ಲಿ ಕೆಲ ಸ್ಥಳಗಳನ್ನು ನೋಡಿದಾಗ ಇಂದು ಇಂದಿನ ಕಾಲಮಾನದ್ದು ಎಂಬ ಭಾವನೆ ಬರುತ್ತೆ. ಇನ್ನು ಚಿತ್ರಕಥೆ ವಿಚಾರಕ್ಕೆ ಬಂದರೆ ನಿರ್ದೇಶಕ ಕೀರ್ತಿ ಇಲ್ಲಿ ಇನ್ನೂ ಚೂರು ಬಿಗಿ ಹಿಡಿತ ಸಾಧಿಸಬೇಕಿತ್ತು. ಚಿತ್ರದ ಮೊದಲಾರ್ಧ ಉದ್ದವಾಯ್ತು ಎಂದು ಎನ್ನಿಸುತ್ತದೆ.
ಕೊನೆ ಮಾತು
'ಅಂದೊಂದಿತ್ತು ಕಾಲ' ಒಂದು 'ಫೀಲ್ ಗುಡ್' ಸಿನಿಮಾ. ವಿನಯ್ ರಾಜ್ಕುಮಾರ್ ಅವರ ಅಭಿಮಾನಿಗಳು, ಸರಳವಾದ ಕಥೆಯನ್ನು ಇಷ್ಟಪಡುವ ಚಿತ್ರಪ್ರೇಮಿಗಳು ಈ ಚಿತ್ರವನ್ನು ಒಮ್ಮೆ ನೋಡಬಹುದು. ಆಕ್ಷನ್ ಪ್ರಿಯರಿಗೆ ಈ ಚಿತ್ರ ಇಷ್ಟವಾಗದಿರಬಹುದು.


Click it and Unblock the Notifications











