"ಆನೆಬಲ " ಸಿನಿಮಾ ವಿಮರ್ಶೆ : ಹಳ್ಳಿ ಹೈದರ ಆಟ, ರಾಗಿಮುದ್ದೆ ಊಟ
ಸಿನಿಮಾ: ಆನೆಬಲ
ನಿರ್ದೇಶಕ: ಸೂನಗಹಳ್ಳಿ ರಾಜು
ಕಲಾವಿದರು: ಸಾಗರ್, ರಕ್ಷಿತಾ
ಬಿಡುಗಡೆ ದಿನಾಂಕ: 28 ಫೆಬ್ರವರಿ, 2020
'ಆನೆಬಲ' ಹಳ್ಳಿಯಲ್ಲಿ ನಡೆಯುವ ಕಥೆ. ಗದ್ದೆಯ ಕೆಸರು, ತೋಟದ ಹಸಿರು, ಹುಡುಗರ ತಮಾಷೆ, ಹಳ್ಳಿ ಜನರ ಭಾಷೆ, ರಾಗಿ ಮುದ್ದೆ ಊಟ, ಹಳ್ಳಿ ಹೈದರ ಆಟ ಈ ಎಲ್ಲ ಅಂಶಗಳು 'ಆನೆಬಲ'ಕ್ಕೆ ಬಲ ನೀಡಿವೆ.
ಮುಂಜಾನೆಯ ಸೂರ್ಯನ ಮೂಲಕ ಸಿನಿಮಾ ಶುರು ಆಗುತ್ತದೆ. ಹಳ್ಳಿ ಸೌಂದರ್ಯ ಮೊದಲ ದೃಶ್ಯದಿಂದಲೇ ಕಾಣುತ್ತದೆ. ಹಳ್ಳಿ ಹೈದ ಶಿವು ಆತನ ಗೆಳೆಯರು ಜಾತ್ರೆಯಲ್ಲಿ ಕುಣಿಯುತ್ತಾರೆ. ಅವರ ತಮಾಷೆ, ಹಳ್ಳಿ ಜೀವನ ಹೀಗೆ ಸಿನಿಮಾ ಆರಂಭ ಆಗುತ್ತದೆ.

ರಾಗಿ ಮುದ್ದೆ ಊಟದ ಸ್ಪರ್ಧೆಯೇ ಸಿನಿಮಾದ ಪ್ರಮುಖ ಅಂಶವಾಗಿದೆ. ಒಂದು ಬಾರಿ ಇದರಿಂದ ಆಗುವ ಎಡವಟ್ಟನ್ನು ನಾಯಕ ಹೇಗೆ ಬಗೆ ಹರಿಸುತ್ತಾನೆ ಎನ್ನುವುದೇ ಸಿನಿಮಾದ ಕಥೆಯಾಗಿದೆ. ಇಡೀ ಸಿನಿಮಾದ ಕಥೆ ರಾಗಿ ಮುದ್ದೆಯ ಸುತ್ತಲೇ ಸುತ್ತುತ್ತದೆ.
ರಾಗಿ ಮುದ್ದೆ ಒಂದು ಕಡೆಯಾದರೆ, ಗೌಡರ ಮಗಳ ಜೊತೆಗೆ ಶಿವು ಲವ್ ಸ್ಟೋರಿ ಕೂಡ ಚಿತ್ರದಲ್ಲಿದೆ. ಸಿನಿಮಾ ನೈಜತೆಗೆ ಹತ್ತಿರವಾಗಿದೆ. ಹಳ್ಳಿಯ ಎಷ್ಟೋ ಕಲಾವಿದರನ್ನು ಬಳಸಿಕೊಂಡಿದ್ದು, ಸಹಜವಾಗಿ ಸಿನಿಮಾ ಕಾಣುತ್ತದೆ. ಸಿನಿಮಾದ ಹಾಸ್ಯ ನಗಿಸುವಲ್ಲಿ ಯಶಸ್ವಿಯಾಗಿದೆ. ಕೆಲವೊಂದು ದೃಶ್ಯಗಳು ನೋಡುಗರಿಗೆ ಉದ್ದ ಆಯ್ತು ಅನಿಸುತ್ತದೆ.
ಪ್ರಮುಖವಾಗಿ ಸಿನಿಮಾದಲ್ಲಿ ಬಳಸಿರುವ ಭಾಷೆ ಇಷ್ಟ ಆಗುತ್ತದೆ. ಹಳ್ಳಿಯ ಗಾದೆ ಮಾತುಗಳನ್ನು ಒಳಗೊಂಡಂತೆ ಸಂಭಾಷಣೆಗಳು ತುಂಬ ಚೆನ್ನಾಗಿದೆ. ರೈತ ಬಗ್ಗೆ, ಹಳ್ಳಿ ಜೀವನದ ಬಗ್ಗೆ ನಿರ್ದೇಶಕರು ಹೇಳಿರುವ ಒಳ್ಳೆಯ ಮಾತು ಬಹಳ ಇಷ್ಟ ಆಗುತ್ತದೆ. ಹಾಡಿನ ಸಾಹಿತ್ಯ, ಸಂಗೀತ ಹಿತವಾಗಿದೆ.

ಹಳ್ಳಿ ಹುಡುಗನಾಗಿ ಶಿವು ಪಾತ್ರದಲ್ಲಿ ನಾಯಕ ಸಾಗರ್ ಕಾಣಿಸಿಕೊಂಡಿದ್ದಾರೆ. ಊರಿನ ಗೌಡ ಬೂತಯ್ಯ ಪಾತ್ರ ಗಮನ ಸೆಳೆಯುತ್ತದೆ. ಹಳ್ಳಿಯ ಅನೇಕ ಪಾತ್ರಗಳು ಸಹಜತೆ ಹೊಂದಿವೆ.
ಕ್ಯಾಮರಾ ವರ್ಕ್ ಚೆನ್ನಾಗಿದೆ. ಹಳ್ಳಿಯ ಅಂದವನ್ನು ಸುಂದರವಾಗಿ ತೋರಿಸಿದ್ದಾರೆ. ಆದರೆ, ಕೆಲವು ಕಡೆ ಅದರ ಲೋಪವೂ ಪರದೆ ಮೇಲೆ ತಿಳಿಯುತ್ತದೆ. ರಾಗಿ ಮುದ್ದೆ ಸ್ಪರ್ಧೆಯ ಜೊತೆಗೆ ಇನ್ನಷ್ಟು ಮನರಂಜನೆ ನೀಡುವ ಅಂಶಗಳನ್ನು ಇಲ್ಲಿ ಸೇರಿಸಬಹುದಿತ್ತು.
ಅಂದಹಾಗೆ, ಹಳ್ಳಿ ಜೀವನದ ಜೊತೆಗೆ, ಒಳ್ಳೆಯತನವೇ ನಿಜವಾದ 'ಆನೆಬಲ' ಎಂಬ ಸಂದೇಶ ಕೂಡ ಸಿನಿಮಾದಲ್ಲಿದೆ.


Click it and Unblock the Notifications











