ಚಿತ್ರ ವಿಮರ್ಶೆ: ದುಷ್ಟಕೂಟದ ನಡುವೆ ನಾರಾಯಣನ ವಿನೋದ ಲೀಲೆ
ಒಂದು ಅನೂಹ್ಯ ವಾತಾವರಣದ ಒಳಗಡೆ ನಂಬಿಕೆಗಳನ್ನು ಮರೆತು ಪರಸ್ಪರ ಎದೆ ಬಗೆದು ಕೊಲ್ಲಲು ಕಾದ ರಕ್ಕಸರು ಹಾಗು ಎಲ್ಲ ನೋವುಗಳ ನಡುವೆ ಜೀವನಪ್ರೀತಿಯನ್ನು ಕಾಪಾಡಿಕೊಂಡು ಬಂದಿರುವ ಕೂಟದ ನಡುವಣ ನಾರಾಯಣನ ವಿನೋದ ಲೀಲೆಯೇ ಅವನೇ ಶ್ರೀಮನ್ನಾರಾಯಣ ಸಿನೆಮಾದ ಮೂಲ ತಿರುಳು. ಇಲ್ಲಿ ಪ್ರಚೋದನೆ ಹಾಗು ಭಾವೋದ್ವೇಗಕ್ಕೆ ಜಾಗವೇ ಇಲ್ಲ, ಮನರಂಜನೆಯೇ ಎಲ್ಲ.
ಇಂಗ್ಲೀಷ್ ಸಿನೆಮಾಗಳಲ್ಲಿ ಸ್ಪಾಗೆಟ್ಟಿ ವೆಸ್ಟರ್ನ್ ಸಿನೆಮಾಗಳು ಎನ್ನುವ ಒಂದು ವರ್ಗೀಕರಣವಿದೆ. ಇಟಲಿ ಮೂಲದ ನಿರ್ದೇಶಕರು ಹಾಗು ನಿರ್ಮಾಪಕರು ಈ ಶೈಲಿಯ ಸಿನೆಮಾಗ ಹಿಂದೆ ಇರುತ್ತಿದ್ದ ಕಾರಣದಿಂದ ಈ ಹೆಸರು ಚಲಾವಣೆಗೆ ಬಂದಿದೆ.
ದಿ ಗುಡ್ ದಿ ಬ್ಯಾಡ್ ದಿ ಅಗ್ಲಿ, ಜಾಂಗೋ, ಎ ಫಿಸ್ಟ್ ಫುಲ್ ಆಫ್ ಡಾಲರ್ಸ್, ದಿ ಬಿಗ್ ಗನ್ ಡೌನ್ ಮುಂತಾದ ಸಿನೆಮಾಗಳು ಹಾಲಿವುಡ್ ನ ಯೋಚನೆಯನ್ನು ಬದಲಾಯಿಸಿದ ಸಿನೆಮಾಗಳು. ಈ ಹಾದಿಯಲ್ಲಿ ತನ್ನದೇ ವಿಶೇಷಣದೊಂದಿಗೆ ಅವನೇ ಶ್ರೀಮನ್ನಾರಾಯಣ ಸಿನೆಮಾ ಕನ್ನಡಲ್ಲಿ ಮತ್ತೊಂದು ವಿನೂತನ ಶೈಲಿಯ ಸಿನೆಮಾ ಮಾದರಿಗೆ ಬಾಗಿಲು ತೆರೆದಿದೆ. ಈ ಜನಪ್ರಿಯ ಸಿನೆಮಾ ಶೈಲಿಯಲ್ಲಿ ಮತ್ತಷ್ಟು ಸಿನೆಮಾಗಳು ಬರಬೇಕು.
ಈ ಕೌಬಾಯ್ ಸಿನೆಮಾಕ್ಕೆ ಸ್ಥಳೀಯ ಸೊಗಡು
ಅಮರಾವತಿ ಎನ್ನುವ ಊರು, ಅಲ್ಲೊಂದು ದರೋಡೆ, ಅಲ್ಲಿರುವ ಅಭೀರರು, ಗಾದಿಗಾಗಿ ದಶಕಗಳ ಕಾಳಗ, ನಾಟಕ ತಂಡ ಹಾಗು ಕಳ್ಳ ಪೋಲಿಸ್ ಆಟ! ಉಳಿದದ್ದನ್ನೆಲ್ಲ ನೀವು ಬೆಳ್ಳಿ ಪರದೆಯ ಮೇಲೆ ನೋಡಿಯೇ ಆನಂದಿಸಬೇಕು. ಈ ಕೌಬಾಯ್ ಸಿನೆಮಾ ಸ್ಥಳೀಯ ಸೊಗಡನ್ನು ಮೆತ್ತಿಕೊಂಡೆ ತೆರೆಯ ಮೇಲೆ ಮೂಡಿ ಬಂದಿದೆ. ರಕ್ಷಿತ್ ಶೆಟ್ಟಿ ಪ್ರವೇಶ ನೀಡುವ ದೃಶ್ಯ ಸಿನೆಮಾದ ಮುಖ್ಯ ಹೈಲೈಟ್.
ಬಹುಕಾಲದ ನಂತರ ರಕ್ಷಿತ್ ಶೆಟ್ಟಿ ತೆರೆ ಮೇಲೆ
ಕಿರಿಕ್ ಪಾರ್ಟಿಯ ದೊಡ್ಡ ಗೆಲುವಿನ ಬಹುಕಾಲದ ನಂತರ ರಕ್ಷಿತ್ ಶೆಟ್ಟಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅವರದೇ ರುಜು ಇರುವ ಹಾವಭಾವ ಹೊರತು ಪಡಿಸಿದರೆ ಈ ಸಿನೆಮಾದ ಪಾತ್ರದ ಬಣ್ಣ ಹಿಂದಿನೆಲ್ಲ ಪಾತ್ರಗಳಿಗಿಂತ ಭಿನ್ನವಾಗಿದೆ. ರಕ್ಷಿತ್ ತೆರೆಯ ಮೇಲೆ ಇದ್ದಷ್ಟು ಕಾಲವೂ ಒಂದು ಕ್ಷಣವೂ ಅವರ ಪಾತ್ರ ಕನ್ನಡದ ಮಟ್ಟಿಗೆ ಈ ಪ್ರಕಾರದ ಸಿನೆಮಾ ಹೊಸದು.
ನಿರ್ದೇಶಕ ಸಚಿನ್ ರವಿ ತನ್ನ ಮೊದಲ ನಿರ್ದೇಶನದ ಸಿನೆಮಾದಲ್ಲೇ ಭರವಸೆ ಮೂಡಿಸುತ್ತಾರೆ. ರಕ್ಷಿತ್ ಶೆಟ್ಟಿ ಹಾಗು ತಂಡ ಬರೆದ ಕಥೆ ಹಾಗು ಚಿತ್ರಕಥೆಯನ್ನು ನಿರ್ದೇಶಕರು ತೆರೆಯ ಮೇಲೆ ತೋರಿಸಿರುವ ರೀತಿ ವಿಶೇಷ ಎನಿಸುತ್ತದೆ.
ಸಿನೆಮಾದ ತುಂಬ ಖಳ ಪಾತ್ರಗಳ ಅಬ್ಬರ
ಸಿನೆಮಾದ ತುಂಬೆಲ್ಲ ಖಳ ಪಾತ್ರಗಳೇ ಅಬ್ಬರಿಸುತ್ತಿದ್ದರು ಸಿನೆಮಾ ಎಲ್ಲಿಯೂ ಗಂಭೀರತೆಯನ್ನು ಕಾಪಾಡಿಕೊಳ್ಳುವುದಿಲ್ಲ ಅಥವಾ ಕಥೆಯ ಮುಖ್ಯ ಪಾತ್ರ ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ. ಚಿನಕುರಳಿ ಮಾತು ಹಾಗು ಚೇಷ್ಟೆಗಳ ಮೂಲಕ ಮೂರು ಗಂಟೆ ಅವಧಿಯ ಸಿನೆಮಾವನ್ನು ರಕ್ಷಿತ್ ಏಕಾಂಗಿಯಾಗಿ ಹೊತ್ತು ಸಾಗಿಸುವ ಪ್ರಯತ್ನ ಮಾಡುತ್ತಾರೆ. ಅವರಿಗೆ ಅಲ್ಲಲ್ಲಿ ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ ಹಾಗು ಅಚ್ಯುತ್ ಕುಮಾರ್ ಜೊತೆ ನೀಡುತ್ತಾರೆ.
ಮಸುಕಾದ ಶಾನ್ವಿ ಶ್ರೀವಾತ್ಸವ್ ಪಾತ್ರ
ಶಾನ್ವಿ ಶ್ರೀವಾತ್ಸವ್ ಪಾತ್ರ ಸಿನೆಮಾದುದ್ದಕ್ಕೂ ಕಾಣಿಸಿಕೊಂಡರು ಬೇರೆ ಪಾತ್ರಗಳ ಅಬ್ಬರದದ ನಡುವೆ ಮುಸುಕಾಗುತ್ತಾರೆ. ರಿಶಬ್ ಶೆಟ್ಟಿ ಪಾತ್ರ ಪೋಷಣೆ ಇನ್ನಷ್ಟು ಬೇಕಿತ್ತು, ಅವರು ಮತ್ತಷ್ಟು ಹೊತ್ತು ತೆರೆಯ ಮೇಲೆ ಇದ್ದು ಸಂಭಾಷಣೆಯ ಬೆಂಬಲ ಬೇಕಿತ್ತು ಅನಿಸುತ್ತದೆ. ಅದ್ಭುತ ಮೇಕಿಂಗ್ ಹೊರತಾಗಿಯೂ ಸಿನೆಮಾದ ಅವಧಿ ತುಸು ಹೆಚ್ಚಾಯಿತು. ಕೆಲವೊಂದು ಕಡೆ ಗ್ರಾಫಿಕ್ಸ್ ಜಾಗದಲ್ಲಿ ಸಹಜತೆ ಇದ್ದಿದ್ದರೆ ಇನ್ನಷ್ಟು ಅಪ್ತವಾಗಿರುತ್ತಿತ್ತು.
ಪ್ರೇಕ್ಷಕರು ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ
ಹೊಸ ಶೈಲಿಯ ನಿರೂಪಣೆಗೆ ಸಾಮಾನ್ಯ ಪ್ರೇಕ್ಷಕರು ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಇರುವಾಗ ಮೂರು ತಾಸು ಪ್ರಯೋಗಕ್ಕೆ ಒಳಪಡುವುದು ಕಷ್ಟದ ಕಾರ್ಯ. ಸಂಕಲನದ ಜವಾಬ್ದಾರಿಯನ್ನು ಸ್ವತಃ ನಿರ್ದೇಶಕರೇ ನಿಭಾಯಿಸಿರುವುದರಿಂದ ಚಿತ್ರಕಥೆಯ ವೇಗಕ್ಕೆ ಇನ್ನೊಂದಿಷ್ಟು ಚುರುಕುತನ ನೀಡಬಹುದಿತ್ತು.
ತಾಂತ್ರಿಕ ಅದ್ಧೂರಿತನವನ್ನು ಕಣ್ತುಂಬಿಕೊಳ್ಳಿ
ಸಿನೆಮಾದ ದೃಶ್ಯ ಪ್ರಸ್ತುತಿ ಆಡಂಬರ ಹಾಗು ಅಚ್ಚರಿಗಳ ಸಮೇತ ನಮಗೆ ವಿಶೇಷ ಅನುಭೂತಿಯನ್ನು ಒದಗಿಸುತ್ತದೆ. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಅದ್ಭುತ. ಕುಟುಂಬ ಸಮೇತರಾಗಿ ನೋಡುವ ಕಂಟೆಂಟ್ ಇರುವುದು ಸಿನೆಮಾದ ಮತ್ತೊಂದು ಹೆಚ್ಚುಗಾರಿಕೆ. ಇಂತಹ ದೊಡ್ಡ ಬಜೆಟ್ಟಿನ ಸಿನೆಮಾಗಳು ದೊಡ್ಡ ಮಟ್ಟದಲ್ಲೇ ಗೆಲ್ಲಬೇಕು, ತಾಂತ್ರಿಕ ಅದ್ಧೂರಿತನವನ್ನು ಕಣ್ತುಂಬಿಕೊಳ್ಳಲು ಚಿತ್ರಮಂದಿರದಲ್ಲೇ ನಾರಾಯಣನ್ನು ನೋಡಿ.
"ರಾಮ ರಾಮ ತುಸು ದಕ್ಷ ವೃತ ಜಾರಿಪಾ!" ಸಿನೆಮಾ ನೋಡಿ ಇದರ ಅರ್ಥ ಕಂಡುಕೊಳ್ಳಿ.


Click it and Unblock the Notifications











