ವಿಮರ್ಶೆ: ಒಮ್ಮೆ ಕುತೂಹಲ, ಇನ್ನೊಮ್ಮೆ ತಳಮಳ ಇದುವೇ 'ವೆನಿಲ್ಲಾ'
Recommended Video

ಒಂದು ಕಿಡ್ನ್ಯಾಪ್, ಮೂರು ಕೊಲೆ, ಕ್ಯಾಪ್ನೊಫೋಬಿಯಾ ಎಂಬ ಕಾಯಿಲೆ... ಇವುಗಳ ಸುತ್ತ ಹೆಣೆದಿರುವ ರೋಚಕ ಕಥೆಯೇ 'ವೆನಿಲ್ಲಾ'.
'ವೆನಿಲ್ಲಾ' ಎಂದ ಕೂಡಲೆ 'ಐಸ್ ಕ್ರೀಮ್' ನೆನಪಿಸಿಕೊಂಡು ಥಿಯೇಟರ್ ಒಳಗೆ ಹೋಗುವ ಪ್ರೇಕ್ಷಕರಿಗೆ ಕ್ಷಣ ಕ್ಷಣಕ್ಕೂ ಸಸ್ಪೆನ್ಸ್, ಥ್ರಿಲ್ ಕೊಡುವಲ್ಲಿ ನಿರ್ದೇಶಕ ಜಯತೀರ್ಥ ಯಶಸ್ವಿ ಆಗಿದ್ದಾರೆ.
ಚಿತ್ರ: ವೆನಿಲ್ಲಾ
ನಿರ್ಮಾಣ: ಜಯರಾಮು
ನಿರ್ದೇಶನ: ಜಯತೀರ್ಥ
ಸಂಗೀತ ನಿರ್ದೇಶಕ: ಬಿ.ಜೆ.ಭರತ್
ತಾರಾಗಣ: ಅವಿನಾಶ್, ಸ್ವಾತಿ, ರವಿಶಂಕರ್ ಗೌಡ ಮತ್ತು ಇತರರು
ಬಿಡುಗಡೆ ದಿನಾಂಕ: ಜೂನ್ 1, 2018
'ವೆನಿಲ್ಲಾ' ಸುತ್ತಮುತ್ತ
ಇದ್ದಕ್ಕಿದ್ದ ಹಾಗೆ ತಲೆ ಸುತ್ತು, ಸುಸ್ತಾಗಿ ಬಿದ್ದು ಪ್ರಾಣ ಕಳೆದುಕೊಂಡವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಯಾಕೆ ಹೀಗೆ ಆಗುತ್ತಿದೆ ಎಂದುಕೊಳ್ಳುವಾಗಲೇ, ಎರಡು ಕೊಲೆ.! ಈ ಮಧ್ಯೆ ಕ್ಯಾಪ್ನೊಫೋಬಿಯಾ ಕಾಯಿಲೆಯಿಂದ ಬಳಲುತ್ತಿರುವ ಅನಘ (ಸ್ವಾತಿ) ನಾಪತ್ತೆ. ಇವೆಲ್ಲದಕ್ಕೂ ಒಂದು ಲಿಂಕ್ ಇದೆ. ಅದೇ 'ವೆನಿಲ್ಲಾ'.!
ಏನಿದು 'ವೆನಿಲ್ಲಾ'
ಬಾಲ್ಯದ ಗೆಳತಿ ಅನಘ (ಸ್ವಾತಿ)ಗೆ ಸಹಾಯ ಮಾಡಲು ಸಂಕಷ್ಟಕ್ಕೆ ಸಿಲುಕುವ ನಾಯಕ ಅವಿ (ಅವಿನಾಶ್). ಅದರಿಂದ ಅವಿ ಪಾರಾಗುವುದು ಹೇಗೆ.? ನಾಪತ್ತೆ ಆಗಿದ್ದ ಸ್ವಾತಿ ಪತ್ತೆ ಆಗುವುದು ಎಲ್ಲಿ.? ಅಷ್ಟಕ್ಕೂ ಏನೀ 'ವೆನಿಲ್ಲಾ'.? ಇವೆಲ್ಲದಕ್ಕೂ ಉತ್ತರ ಬೇಕು ಅಂದ್ರೆ, ನೀವು ಚಿತ್ರಮಂದಿರದಲ್ಲಿ ಸಿನಿಮಾ ನೋಡಲೇಬೇಕು.
ಭರವಸೆ ಮೂಡಿಸುವ ಅವಿ, ಸ್ವಾತಿ
'ವೆನಿಲ್ಲಾ' ಚಿತ್ರದಲ್ಲಿ ಕೊಲೆ ಜಾಡನ್ನು ಹಿಡಿದು, ಪಾತಕಿಗಳನ್ನು ಪತ್ತೆ ಹಚ್ಚುವ ನಾಯಕನಾಗಿ ಅವಿನಾಶ್ ಅಭಿನಯ ಚೆನ್ನಾಗಿದೆ. ರಂಗಭೂಮಿ ಹಿನ್ನಲೆ ಹೊಂದಿರುವ ಅವಿನಾಶ್ ಸ್ಕ್ರೀನ್ ಪ್ರೆಸೆನ್ಸ್ ಕೂಡ ಉತ್ತಮವಾಗಿದೆ. ಇನ್ನೂ ನಟಿ ಸ್ವಾತಿ ನಟನೆ ಅಚ್ಚುಕಟ್ಟಾಗಿದೆ.
ಖಾಕಿ ತೊಟ್ಟ ರವಿಶಂಕರ್ ಗೌಡ
ಕೊಲೆ ಕೇಸ್ ತನಿಖೆ ಮಾಡುವ ಪೊಲೀಸ್ ಆಫೀಸರ್ ಪಾತ್ರದಲ್ಲಿ ರವಿಶಂಕರ್ ಗೌಡ ಪರ್ಫಾಮೆನ್ಸ್ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ಅವರ ಕಾಮಿಡಿ ಟೈಮಿಂಗ್ ಕೂಡ ಮೆಚ್ಚುವಂಥದ್ದು. ಉಳಿದಂತೆ 'ವೆನಿಲ್ಲಾ' ಚಿತ್ರದಲ್ಲಿ ರಂಗಭೂಮಿ ಕಲಾವಿದರ ದಂಡೇ ಇದೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನ ಚೆನ್ನಾಗಿ ನಿಭಾಯಿಸಿದ್ದಾರೆ.
ಎಲ್ಲೂ ಬೋರ್ ಆಗಲ್ಲ.!
ಮೊದಲ ಸೀನ್ ನಿಂದ ಹಿಡಿದು ಕೊನೆಯವರೆಗೂ 'ವೆನಿಲ್ಲಾ' ಚಿತ್ರದಲ್ಲಿ ಎಲ್ಲೂ ಬೋರ್ ಆಗಲ್ಲ. ಆಗಾಗ ತಿರುವು ಕೊಟ್ಟು, ಪ್ರೇಕ್ಷಕರ ತಲೆಗೆ ಹುಳ ಬಿಟ್ಟು ಕೊನೆಯವರೆಗೂ ಕುತೂಹಲ ಕಾಯ್ದುಕೊಳ್ಳುವಲ್ಲಿ ನಿರ್ದೇಶಕ ಜಯತೀರ್ಥ ಸಕ್ಸಸ್ ಆಗಿದ್ದಾರೆ. ಸೀರಿಯಸ್ ಸಿನಿಮಾದಲ್ಲಿ ಜಾಸ್ತಿ ಕಾಮಿಡಿ ತುರುಕದೆ, ಬೇಕಾಬಿಟ್ಟಿ ಹಾಡು ಇಡದೆ ಅಚ್ಚುಕಟ್ಟಾದ ಸಿನಿಮಾ ಮಾಡಿದ್ದಾರೆ ಜಯತೀರ್ಥ.
ಉತ್ತಮ ಸಂದೇಶ ಸಾರುವ ಸಿನಿಮಾ
ಹದಿಹರೆಯದ ವಯಸ್ಸಿನಲ್ಲಿ ಧೂಮಪಾನ ಸೇರಿದಂತೆ ಮಾದಕ ದ್ರವ್ಯ ಚಟಕ್ಕೆ ಅಂಟುವ ಯುವಕ-ಯುವತಿಯರು 'ವೆನಿಲ್ಲಾ' ಚಿತ್ರವನ್ನ ತಪ್ಪದೆ ನೋಡಬೇಕು. ಮಾರ್ಕೆಟ್ ಗೋಸ್ಕರ ಏನೇನೋ ತಂತ್ರ ಅನುಸರಿಸಿ, ಕೆಲ ಕಂಪನಿಗಳು ಜನರ ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತಿದೆ ಎನ್ನುವುದಕ್ಕೂ 'ವೆನಿಲ್ಲಾ' ಚಿತ್ರ ಉತ್ತಮ ಉದಾಹರಣೆ.
ಫೈನಲ್ ಸ್ಟೇಟ್ಮೆಂಟ್
ಮಲೇಶಿಯಾ ಹಾಗೂ ಉಡುಪಿ ಸುತ್ತಮುತ್ತ ಚಿತ್ರೀಕರಣಗೊಂಡಿರುವ 'ವೆನಿಲ್ಲಾ' ಚಿತ್ರದ ಛಾಯಾಗ್ರಹಣ ಓಕೆ. ಇನ್ನೂ ಬಿ.ಜೆ.ಭರತ್ ಸಂಗೀತ ಸಂಯೋಜಿಸಿರುವ ಹಾಡುಗಳು ಕಿವಿಗೆ ಇಂಪು ನೀಡುತ್ತವೆ. ಒಟ್ಟಾರೆ, 'ವೆನಿಲ್ಲಾ' ಸಿನಿಮಾ ಕೊಟ್ಟ ಕಾಸಿಗೆ ಮೋಸ ಇಲ್ಲ. ಈ ವೀಕೆಂಡ್ ನಲ್ಲಿ ನೀವು ಫ್ರೀ ಇದ್ರೆ, 'ವೆನಿಲ್ಲಾ' ಚಿತ್ರವನ್ನ ಒಮ್ಮೆ ನೋಡಲು ಖಂಡಿತ ಅಡ್ಡಿಯಿಲ್ಲ.


Click it and Unblock the Notifications











