Ayushman Bhava Review: ತುಂಬು ಕುಟುಂಬದ ಪ್ರೀತಿ ತುಂಬಿದ ಸಿನಿಮಾ
ಪಿ ವಾಸು ನಿರ್ದೇಶನ ಎಂದಾಗ, ದ್ವಾರಕೀಶ್ ಬ್ಯಾನರ್ ಎಂದಾಗ, ಶಿವರಾಜ್ ಕುಮಾರ್ ನಟನೆ ಎಂದಾಗ ನಿರೀಕ್ಷೆ ಇರುತ್ತದೆ. ಈ ಮೂರನ್ನು ಈಡೇರಿಸುವ ಸಿನಿಮಾ 'ಆಯುಷ್ಮಾನ್ ಭವ'. ಇದು ತುಂಬು ಕುಟುಂಬದ, ಸುಂದರ, ಸಂಗೀತಮಯ ಸಿನಿಮಾ. ಫ್ಯಾಮಿಲಿ ಕೂತು ಖುಷಿಯಿಂದ ನೋಡಬಹುದಾದ ಒಂದು ಒಳ್ಳೆಯ ಕೌಟುಂಬಿಕ ಸಿನಿಮಾ.
ಸಿಂಪಲ್ ಕಥೆ, ಸ್ವೀಟ್ ನಿರೂಪಣೆ
'ಆಯುಷ್ಮಾನ್ ಭವ' ಸರಳ ಕಥೆಯ ಸಿನಿಮಾ. ಸಿನಿಮಾದ ಕೊನೆ ಹೀಗೆ ಆಗುತ್ತದೆ ಎಂದು ನೀವು ಬೇಗ ಊಹಿಸಿ ಬಿಡಬಹುದು. ಆದರೆ, ಒಂದು ಸರಳ ಕಥೆಯ ಎಳೆಯನ್ನು ಪಿ ವಾಸು ಸುಂದರ ನಿರೂಪಣೆ ಮೂಲಕ ಹೇಳಿದ್ದಾರೆ. ಇದು ಹಾರರ್ ಸಿನಿಮಾ ಅಲ್ಲ, ಸಸ್ಪೆನ್ಸ್ ಅಂತು ಅಲ್ಲವೇ ಅಲ್ಲ. ಇದೊಂದು ಮನರಂಜನೆ ತುಂಬಿದ, ಮನೆ ತುಂಬಿದ ಸಿನಿಮಾ.
ಒನ್ ಲೈನ್ ಸ್ಟೋರಿ
ಸಿನಿಮಾದ ಒನ್ ಲೈನ್ ಸ್ಟೋರಿ ತುಂಬ ಸಿಂಪಲ್. ಒಂದು ದೊಡ್ಡ ಕುಟುಂಬದ ಹುಡುಗಿ ಲಕ್ಷ್ಮಿ (ರಚಿತಾ ರಾಮ್). ತನ್ನ ಜೀವನದಲ್ಲಿ ನಡೆದ ಆಘಾತದಿಂದ ಹುಚ್ಚಿ ಆಗಿರುತ್ತಾಳೆ. ಆಕೆಯನ್ನು ಮತ್ತೆ ಹಳೆಯ ಸ್ಥಿತಿಗೆ ಕೃಷ್ಣ (ಶಿವರಾಜ್ ಕುಮಾರ್) ತೆಗೆದುಕೊಂಡು ಬರುತ್ತಾನೆ. ಲಕ್ಷ್ಮಿ ಯಾಕೆ ಹುಚ್ಚಿ ಆದಳು. ಕೃಷ್ಣ ಯಾಕೆ ಅವಳ ರಕ್ಷಣೆಗೆ ಬಂದ. ಕೃಷ್ಣ ಯಾರು?. ಇದೇ ಸಿನಿಮಾದ ಒಂದು ಸಾಲಿನ ಕಥೆ.
ಕೃಷ್ಣನಾಗಿ ಶಿವರಾಜ್ ಕುಮಾರ್
ಕೃಷ್ಣನಾಗಿ ಶಿವರಾಜ್ ಕುಮಾರ್ ಇಷ್ಟ ಆಗುತ್ತಾರೆ. ಕಥೆಗೆ ಪಾತ್ರವಾಗಿ, ಅಭಿಮಾನಿಗಳಿಗೆ ಬೇಕಾದ ಸ್ಟಾರ್ ಆಗಿ ಎರಡು ರೀತಿಯಲ್ಲಿ ಶಿವರಾಜ್ ಕುಮಾರ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ತುಂಬು ಕುಟುಂಬದ ಮಧ್ಯೆ ಇರುವ, ಅವರ ಪಾತ್ರಕ್ಕೆ ಒಂದು ತೂಕ ಇದೆ. ಸಾಹಸ ದೃಶ್ಯಗಳು, ಅಂಡರ್ ವಾಟರ್ ಫೈಟ್ ಎಲ್ಲ ಕಡೆ ಶಿವಣ್ಣ ಮಿಂಚಿದ್ದಾರೆ.
ರಚಿತಾ ರಾಮ್ ಗೆ ದೊಡ್ಡ ಚಪ್ಪಾಳೆ
ರಚಿತಾ ರಾಮ್ ಕಮರ್ಷಿಯಲ್ ಸಿನಿಮಾ ನಾಯಕಿ, ಆಕೆಯ ಪಾತ್ರಗಳಲ್ಲಿ ವೆರೈಟಿ ಇಲ್ಲ ಎನ್ನುವ ಆರೋಪ ಇದೆ. ಆದರೆ, ಈ ಸಿನಿಮಾದ ಅವರ ಪಾತ್ರ ನಿರ್ವಹಣೆ ತುಂಬ ಚೆನ್ನಾಗಿದೆ. ಹುಚ್ಚಿಯ ಪಾತ್ರ, ಆ ಪಾತ್ರದ ರೂಪ ಒಪ್ಪಿಕೊಂಡು, ನಟಿಸಿದ ರಚಿತಾ ರಾಮ್ ಗೆ ದೊಡ್ಡ ಚಪ್ಪಾಳೆ. ಈ ಪಾತ್ರದ ಮೂಲಕ ಒಂದು ಸವಾಲನ್ನು ರಚಿತಾ ತೆಗೆದುಕೊಂಡಿದ್ದಾರೆ.
ಅನುಭವಿ ನಟರ ಅಚ್ಚುಕಟ್ಟು ಅಭಿನಯ
'ಆಯುಷ್ಮಾನ್ ಭವ' ಸಿನಿಮಾದಲ್ಲಿ ತುಂಬು ಕುಟುಂಬದ ಇದೆ. ಆ ಕುಟುಂಬದ ಎಲ್ಲ ಕಲಾವಿದರು ತುಂಬ ಚೆನ್ನಾಗಿ ನಟಿಸಿದ್ದಾರೆ. ಅನಂತ್ ನಾಗ್, ರಮೇಶ್ ಭಟ್, ಸುಂದರ್ ವೀಣಾ, ರಾಜೇಶ್ ನಟರಂಗ, ಬಾಬು ಹಿರಣಯ್ಯ, ರಂಗಾಯಣ ರಘು, ಸಾಧು ಕೋಕಿಲ ಹೀಗೆ ಎಲ್ಲರೂ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಮನೆಯ ವಿಲನ್ ಚೇತನ್ (ಯಶ್ ಶೆಟ್ಟಿ) ಮೊದಲು ಖಳನಟನಂತೆ ಕಂಡು, ಮಧ್ಯದಲ್ಲಿ ನಗಿಸಿ, ಕೊನೆಯಲ್ಲಿ ಒಳ್ಳೆಯವನಾಗುತ್ತಾರೆ.
ಗುರುಕಿರಣ್ ಸಿನಿಮಾದ ಮತ್ತೊಬ್ಬ ಹೀರೋ
ಇದು ಗುರುಕಿರಣ್ ಅವರ 100ನೇ ಸಿನಿಮಾ. ಆ ಮೈಲಿಗಲ್ಲು ಸಿನಿಮಾಗೆ ತಕ್ಕ ಹಾಗೆ ಸಂಗೀತವನ್ನು ಅವರು ನೀಡಿದ್ದಾರೆ. ಇದೊಂದು ಸಂಗೀತಮಯ ಸಿನಿಮಾ. ಸಿನಿಮಾದ ಕಥೆ ನಿಂತಿರುವುದು ಸಂಗೀತದ ಮೇಲೆ. ಸಂಗೀತಕ್ಕೆ ಕಥೆಯಲ್ಲಿಯೇ ವಿಶೇಷ ಸ್ಥಾನ ಇರುವ ಕಾರಣ ಗುರುಕಿರಣ್ ಗೆ ಒಳ್ಳೆಯ ಅವಕಾಶ ಇತ್ತು. ಅದನ್ನು ಅವರು ಚೆನ್ನಾಗಿ ಬಳಸಿಕೊಂಡಿದ್ದಾರೆ. ಹಿನ್ನಲೆ ಸಂಗೀತ ಖುಷಿ ನೀಡುತ್ತದೆ.
ಸೆಕೆಂಡ್ ಹಾಫ್ ಗಿಂತ ಫಸ್ಟ್ ಹಾಫ್ ಚೆನ್ನಾಗಿದೆ
ಸಿನಿಮಾದ ಫಸ್ಟ್ ಹಾಫ್ ಚೆನ್ನಾಗಿದೆ. ಕಥೆ ಅಲ್ಲಿಯೇ ತಿಳಿದು ಬಿಡುತ್ತದೆ. ಹಾಗಾಗಿ ಸೆಕೆಂಡ್ ಹಾಫ್ ಕೊಂಚ ಕಡಿಮೆ ರಂಜಿಸಬಹುದು. ಕಾಡಿನ ದೃಶ್ಯ, ಆ ನಂತರದ ಸೀನ್ ಗಳು ಸ್ವಲ್ಪ ಬೋರ್ ಎನಿಸುತ್ತದೆ. ಆದರೆ, ಇಡೀ ಸಿನಿಮಾ ಪ್ರೇಕ್ಷಕರಿಗೆ ತೃಪ್ತಿ ನೀಡುತ್ತದೆ. ಪಿ ವಾಸು ಮತ್ತೆ ನಂಬಿಕೆ ಉಳಿಸಿಕೊಂಡಿದ್ದಾರೆ. ಕ್ಯಾಮರಾ, ಮೇಕಿಂಗ್ ಎಲ್ಲವೂ ಉತ್ತಮವಾಗಿದೆ.
ಮತ್ತೊಂದು ಒಳ್ಳೆಯ ಸಿನಿಮಾ ನೀಡಿದ ದ್ವಾರಕೀಶ್ ಬ್ಯಾನರ್
ದ್ವಾರಕೀಶ್ ಬ್ಯಾನರ್ ನಲ್ಲಿ ಈಗಾಗಲೇ ಎಷ್ಟೋ ಒಳ್ಳೆಯ ಸಿನಿಮಾಗಳು ಬಂದಿವೆ. ಎಷ್ಟೋ ಪ್ರಯೋಗಳು ಆಗಿವೆ. ಅದೇ ರೀತಿ 'ಆಯುಷ್ಮಾನ್ ಭವ' ಅವರ ಬ್ಯಾನರ್ ನೆ ಬೆಸ್ಟ್ ಸಿನಿಮಾಗಳ ಪೈಕಿ ಒಂದಾಗುತ್ತದೆ. ಇತ್ತೀಚಿನ ದಿನದಲ್ಲಿ ಫ್ಯಾಮಿಲಿ ಸಿನಿಮಾಗಳೆ ಕಡಿಮೆ ಆಗಿವೆ. ಈ ಚಿತ್ರ ಇಡೀ ಕುಟುಂಬ ನೋಡಬಹುದಾದ ಆನಂದ ತುಂಬಿದ ಸಿನಿಮಾ.


Click it and Unblock the Notifications











