Baanadariyalli Review:'ಬಾನದಾರಿಯಲಿ' ಗಣಿ,ರಘು,ರುಕ್ಮಿಣಿಯದ್ದು ಭಾವನೆಗಳ ಸಫಾರಿ!
'ಬಾನದಾರಿಯಲಿ' ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹಾಡಿದ ಸಾಲು ಸಿನಿಮಾದ ಟೈಟಲ್. ಇಲ್ಲಿಂದಲೇ ಸಿನಿಮಾದ ಎಮೋಷನಲ್ ಜರ್ನಿ ಆರಂಭ ಆಗಿತ್ತು. ಇದರೊಂದಿಗೆ ಪ್ರೀತಂ ಗುಬ್ಬಿ ಹಾಗೂ ಗಣೇಶ್ ಕಾಂಬಿನೇಷನ್ ಅಂದ್ಮೇಲೆ ಅಲ್ಲಿ ಎಮೋಷನ್ ಇಲ್ಲದೆ ಇರೋಕೆ ಸಾಧ್ಯವೇ ಇಲ್ಲ.
ಸಿನಿಮಾದ ತುಣುಕುಗಳೇ ಇದೊಂದು ಎಮೋಷನಲ್ ಜರ್ನಿ ಅನ್ನೋದನ್ನು ಸಾಬೀತು ಮಾಡಿದೆ. ಇನ್ನೊಂದು ಕಡೆ ರುಕ್ಮಿಣಿ ವಸಂತ್ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಂತಹ ಭಾವನಾತ್ಮಕ ಜರ್ನಿಯನ್ನು ಇಲ್ಲೂ ಮುಂದುವರೆಸಿದ್ದಾರೆ. ಒಂದ್ಕಡೆ ಲವ್ ಸ್ಟೋರಿ, ಇನ್ನೊಂದು ಕಡೆ ಎಮೋಷನಲ್ ಜರ್ನಿ ಇವೆಲ್ಲವೂ ಪ್ರೇಕ್ಷಕನ ಕಣ್ಣಲ್ಲಿ ನೀರು ತರಿಸುತ್ತೆ.

ಅಪ್ಪ-ಮಗಳ ಸಂಬಂಧ. ಪ್ರೇಮಿಗಳ ಅನುಬಂಧ. ಪ್ರೇಮಿಯ ಕನಸು ನನಸು ಮಾಡುವ 'ಬಾನದಾರಿಯಲಿ' ಭಾವನೆಗಳೇ ಆಧಾರ ಅಂತ ಅನಿಸಲೂಬಹುದು. ಅಂದ್ಹಾಗೆ ಈ ಸಿನಿಮಾವೊಂದು ಭಾವನಾತ್ಮಕ ಜರ್ನಿ. ಇಲ್ಲಿ ಪ್ರೇಕ್ಷಕನಿಗೆ ಏನೆಲ್ಲ ಸಿಗುತ್ತೆ ಅನ್ನೋದನ್ನು ತಿಳಿಯಲು ಮುಂದೆ ಓದಿ..
'ಬಾನದಾರಿಯಲಿ' ಜರ್ನಿ ಹೇಗಿತ್ತು?
'ಬಾನದಾರಿಯಲಿ' ಈ ಪದವನ್ನು ಕೇಳಿದ ಕೂಡಲೇ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹೆಸರು ಬಾಯಿಗೆ ಬರುತ್ತೆ. ಸಿನಿಮಾದಲ್ಲೂ ಈ ಹಾಡಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಒಬ್ಬ ಅಪ್ಪ ಹಾಗೂ ಮಗಳು ಒಂದು ಕನಸನ್ನು ಕಾಣುತ್ತಾರೆ. ಅದನ್ನು ಒಬ್ಬ ಹೀರೊ ಬಂದು ಹೇಗೆ ಈಡೇರಿಸುತ್ತಾನೆ ಅನ್ನೋದೇ ಸಿನಿಮಾದ ಒನ್ ಲೈನ್ ಸ್ಟೋರಿ. ಇಲ್ಲಿ ಅಪ್ಪ ರಂಗಾಯಣ ರಘು. ಮಗಳು ರುಕ್ಷಿಣಿ ವಸಂತ್. ಹೀರೊ ಗೋಲ್ಡನ್ ಸ್ಟಾರ್ ಗಣೇಶ್.
ಸಿನಿಮಾ ಫಸ್ಟ್ ಹಾಫ್ ಹೇಗಿದೆ?
ಬಾಲ್ಯದಿಂದಲೂ ನಾಯಕಿ ರುಕ್ಷಿಣಿ ವಸಂತ್ಗೆ ಕಾಡು, ಪ್ರಾಣಿ-ಪಕ್ಷಿಗಳು, ಪರಿಸರದ ಮೇಲೆ ಪ್ರೀತಿ ಜಾಸ್ತಿ. ಇದೇ ಕನಸು ಬೆಳೆ ಬೆಳೆಯುತ್ತಾ ಹೆಮ್ಮರವಾಗಿ ಬೆಳೆಯುತ್ತೆ. ಇತ್ತ ನಾಯಕ ಗಣೇಶ್ ಕ್ರಿಕೆಟರ್ ಆಗಿರುತ್ತಾರೆ. ಒಂದು ದಿನ ನಾಯಕಿಯನ್ನು ನೋಡುತ್ತಾರೆ. ಪ್ರೀತಿ ಹುಟ್ಟುತ್ತೆ. ನಾಯಕಿ ರುಕ್ಷಿಣಿ ವಸಂತ್ಗೂ ಇಷ್ಟ. ಆದರೆ, ಅಪ್ಪನ ಮಗಳಾಗಿದ್ದರಿಂದ ರಂಗಾಯಣ ರಘು ಅನುಮತಿಯನ್ನು ಪಡೆದೇ ಮದುವೆಗೆ ಗ್ರೀನ್ ಸಿಗ್ನಲ್ ಕೊಡುತ್ತಾರೆ. ಇಲ್ಲಿವರೆಗೂ ಅಪ್ಪ, ಮಗಳು ಹಾಗೂ ಹೀರೊ ಇಂಟ್ರುಡಕ್ಷನ್ ಹಾಗೂ ಲವ್ ಸ್ಟೋರಿ ನೋಡೋಕೆ ಸಿಗುತ್ತೆ.

ಭಾವನಾತ್ಮಕ ಜರ್ನಿ ಸೆಕೆಂಡ್ ಹಾಫ್
'ಬಾನದಾರಿಯಲಿ' ಸಿನಿಮಾದ ಸೆಕೆಂಡ್ ಹಾಫ್ನಲ್ಲಿ ಅಸಲಿ ಕಥೆ ಅಡಗಿದೆ. ಕಥೆಗೊಂದು ಟರ್ನಿಂಗ್ ಪಾಯಿಂಟ್ ಸಿಕ್ಕು ಅದು ಬೇರೆಯದೇ ಹಾದಿ ಹಿಡಿಯುತ್ತೆ. ಇಲ್ಲಿಂದ ರಂಗಾಯಣ ರಘು ಹಾಗೂ ಗಣೇಶ್ ನಡುವಿನ ಭಾವನಾತ್ಮಕ ಜರ್ನಿ ಮುಂದುವರೆಯುತ್ತೆ. ಅಲ್ಲಲ್ಲಿ ಪ್ರೇಕ್ಷಕರ ಕಣ್ಣುಗಳನ್ನು ಒದ್ದೆ ಮಾಡುತ್ತಾ ಮುಂದಕ್ಕೆ ಸಾಗುತ್ತಾರೆ.
ಗಣೇಶ್-ರಂಗಾಯಣ ರಘು-ರುಕ್ಮಿಣಿ ಹೈಲೈಟ್
ಈ ಸಿನಿಮಾದ ಪ್ರಮುಖ ಮೂರು ಪಾತ್ರಗಳು ಗಣೇಶ್, ರಂಗಾಯಣ ರಘು ಹಾಗೂ ರುಕ್ಮಿಣಿ ವಸಂತ್. ಈ ಮೂವರ ಜರ್ನಿಯೇ ಸಿನಿಮಾದ ಹೈಲೈಟ್. ಸಿನಿಮಾದ ಕಥೆಯಲ್ಲಿ ವಿಶೇಷ ಅನ್ನುವಂತಹದ್ದು ಏನೂ ಇಲ್ಲದೇ ಹೋದರೂ, ಕಥೆಯನ್ನು ಹೇಳಲು ಹೊರಟ ರೀತಿ ಇಷ್ಟ ಆಗುತ್ತೆ. ಭಾವನಾತ್ಮಕವಾಗಿ ಪ್ರೇಕ್ಷಕರನ್ನು ತಲುಪಲು ಯತ್ನಿಸಿದ್ದಾರೆ.
ಪ್ರೀತಂ ಗುಬ್ಬಿ ನಿರ್ದೇಶನ ಹೇಗಿದೆ?
ಗಣೇಶ್ ಹಾಗೂ ಪ್ರೀತಂ ಗುಬ್ಬಿ ಸೇರಿದ್ಮೇಲೆ ಸಿನಿಮಾ ಬಗ್ಗೆ ನಿರೀಕ್ಷೆ ಇದ್ದೇ ಇರುತ್ತೆ. ಸಿನಿಮಾಗೆ ಹಾಕಿರುವ ಶ್ರಮ ಎದ್ದು ಕಾಣುತ್ತೆ. ಆದರೆ, ಚಿತ್ರಕಥೆಯಲ್ಲಿ ಇನ್ನೊಂದಿಷ್ಟು ಹಿಡಿತ ಬೇಕಿತ್ತು ಅನಿಸುತ್ತೆ. ಸಿನಿಮಾಗೆ ಇನ್ನೊಂದು ವೇಗ ಕೊಡಬೇಕಿತ್ತು. ಸೆಕೆಂಡ್ ಹಾಫ್ನಲ್ಲಿ ಬರೋ ರೀಷ್ಮಾ ನಾಣಯ್ಯ ಪಾತ್ರಕ್ಕೆ ಇನ್ನೊಂದಿಷ್ಟು ಸ್ಕೋಪ್ ಕೊಡಬೇಕಿತ್ತು.
'ಬಾನದಾರಿಯಲಿ' ಪ್ಲಸ್ ಏನು?
ಈ ಸಿನಿಮಾ ಪ್ಲಸ್ ಪಾಯಿಂಟ್ ಕಾಂಬಿನೇಷನ್. ಗಣೇಶ್, ರಂಗಾಯಣ ರಘು, ರುಕ್ಷಿಣಿ ವಸಂತ್ ಜೋಡಿ ಇಷ್ಟ ಆಗುತ್ತಾರೆ. ಮೂವರು ಕಾಂಪಿಟೇಷನ್ಗೆ ಬಿದ್ದು ನಟಿಸಿದಂತೆ ಭಾಸವಾಗುತ್ತೆ. ಸಿನಿಮಾ ಕೊನೆಯ 30 ನಿಮಿಷಗಳ ಭಾವನಾತ್ಮಕ ಜರ್ನಿ ಪ್ರೇಕ್ಷಕರಿಗೆ ಇಷ್ಟ ಆಗಬಹುದು. ಅಭಿಲಾಶ್ ಕ್ಯಾಮರಾ ವರ್ಕ್ ಕಣ್ಣಿಗೆ ಇಂಪು ಅನಿಸುತ್ತೆ.
ಮೈನಸ್ ಏನು?
ಸ್ಕ್ರೀನ್ಪ್ಲೇ ವೇಗ ಹೆಚ್ಚಿಸಬೇಕಿತ್ತು. ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಇಂತಹ ಸಿನಿಮಾಗೆ ಅರ್ಜುನ್ ಜನ್ಯಾ ಸದಾ ಗುನುಗುವ ಹಾಡುಗಳನ್ನು ನೀಡಿದ್ದರೆ ಇನ್ನಷ್ಟು ಇಷ್ಟ ಆಗುತ್ತಿತ್ತು. ಒಟ್ಟಿನಲ್ಲಿ ವೀಕೆಂಡ್ನಲ್ಲಿ ಫ್ಯಾಮಿಲಿ ಜೊತೆ ಸಿನಿಮಾ ನೋಡಲು ಅಡ್ಡಿಯಿಲ್ಲ.


Click it and Unblock the Notifications











