Bad Manners Movie Review: ಸೂರಿ ಕಂಟ್ರಿ ಪಿಸ್ತೂಲ್ ಲೋಕದಲ್ಲಿ ತ್ರಾಸದಾಯಕ ರುದ್ರತಾಂಡವ
ದುನಿಯಾ ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ತೆರೆಕಂಡಿದೆ. ಟೈಟಲ್ನಿಂದ್ಲೇ ಬಹಳ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಕೊಂಚ ತಡವಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಅಂಬಿ ಪುಣ್ಯಸ್ಮರಣೆಯಂದೇ ಸಿನಿಮಾ ಬಿಡುಗಡೆಯಾಗಿರುವುದು ಮತ್ತೊಂದು ವಿಶೇಷ.
'ಅಮರ್' ಸಿನಿಮಾ ಸೋಲಿನಿಂದ ಕಂಗೆಟ್ಟಿದ್ದ ಅಭಿಷೇಕ್ ಅಂಬರೀಷ್ ಸೂರಿ ಕ್ಯಾಂಪ್ ಸೇರಿದ್ದು ಕುತೂಹಲ ಮೂಡಿಸಿದ್ದು ಸಹಜ. ಕೊನೆಗೂ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ತೆರೆಮೇಲೆ 'ರುದ್ರ' ಅಭಿ 'ಬ್ಯಾಡ್ ಮ್ಯಾನರ್ಸ್' ದರ್ಶನವಾಗಿದೆ. ಸೂರಿ ಸಿನಿಮಾಗಂತ್ಲೇ ಒಂದು ಪ್ರೇಕ್ಷಕ ವರ್ಗವಿದೆ. ಆ ವರ್ಗ ಮೂರು ವರ್ಷಗಳಿಂದ ಈ ದಿನಕ್ಕಾಗಿ ಕಾದಿದ್ದು ಸುಳ್ಳಲ್ಲ.

ರಾ ಮೇಕಿಂಗ್, ಟೇಕಿಂಗ್, ವಿಭಿನ್ನ ಸ್ಕ್ರೀನ್ಪ್ಲೇ, ಒಂದಿಷ್ಟು ಫಿಲಾಸಫಿ ಸೂರಿ ಸಿನಿಮಾಗಳ ಟ್ರೇಡ್ಮಾರ್ಕ್. ಅದೇ ಪದಾರ್ಥಗಳನ್ನು ಸೇರಿಸಿ ಈ ಬಾರಿ ಮಿಕ್ಸ್ ಮಸಾಲಾ ಮಾಡಿದ್ದಾರೆ. ಬಹಳ ಕಾದವರಿಗೆ ಮೃಷ್ಟಾನ್ನ ಭೋಜನ ಕೊಟ್ರು ರುಚಿಸೋದು ಕಷ್ಟ. ಇನ್ನು ಬರೀ ಊಟ ಹಾಕಿದ್ರೆ..
'ಬ್ಯಾಡ್ ಮ್ಯಾನರ್ಸ್' ಕಥೆ?
ನಿರ್ದಯಿ ಪೊಲೀಸ್ ಆಫೀಸರ್ ರುದ್ರ. ಆಡೋ ಹುಡುಗರ ಕೈಯಲ್ಲಿ ಕಂಟ್ರಿ ಪಿಸ್ತೂಲ್ ಸಿಕ್ಕಿ ಸಮಾಜದ ಸ್ವಾಸ್ಥ್ಯ ಹಾಳಾಗಿರುತ್ತದೆ. ಇದಕ್ಕೆ ಮೂಲ ಕಾರಣ ಮಗಾಯ್, ಫೀನಿಕ್ಸ್ ಅನ್ನೋ ಖತರ್ನಾಕ್ ಪಾತಕಿಗಳ ಕಂಟ್ರೀ ಪಿಸ್ತೂಲ್ ಸಾಮಾಜ್ರ್ಯ. ರುದ್ರ ಆ ಭೂಗತ ಸಾಮ್ರಾಜ್ಯದ ಬೆನ್ನುಬೀಳುವುದು ಯಾಕೆ? ಆತನ ನಿಜವಾದ ಉದ್ದೇಶ ಏನು? ಅನ್ನೋದೇ ಸಿನಿಮಾ ಕತೆ.
ಕ್ರೈಂ ಸ್ಟ್ರೋರಿಗೆ ರಾ ಟ್ರೀಟ್ಮೆಂಟ್
ಕತೆ ಕೇಳೋಕೆ ಸಿಂಪಲ್ ಅನ್ನಿಸಿದರೂ ಸೂರಿ ಸ್ಟೈಲ್ ಟ್ರೀಟ್ಮೆಂಟ್ನಿಂದ ಅದು ಬೇರೆ ಸ್ವರೂಪವನ್ನೇ ಪಡೆದುಕೊಳ್ಳುತ್ತಾ ಹೋಗುತ್ತದೆ. ಸೂರಿ ಈ ಹಿಂದೆ 'ಕಂಟ್ರಿ ಪಿಸ್ತೂಲ್' ಅನ್ನೋ ಸಿನಿಮಾ ಮಾಡೋ ಬಗ್ಗೆ ಚರ್ಚೆ ನಡೆದಿತ್ತು. ಅದೇ ಕತೆ ಬೇರೆ ರೂಪ ಪಡೆದು 'ಬ್ಯಾಡ್ ಮ್ಯಾನರ್ಸ್' ಆಗಿ ಕಣ್ಮುಂದೆ ಬಂದಿದ್ಯಾ ಗೊತ್ತಿಲ್ಲ. ಕೆಲವೊಮ್ಮೆ ರಿವೇಂಜ್ ಸ್ಟೋರಿ ಎನ್ನಿಸೋ ಕತೆ ಇನ್ನೊಮ್ಮೆ ಖಾಕಿ ತೊಟ್ಟ ಕಿಲಾಡಿ ಕ್ರಿಮಿನಲ್ ಕಹಾನಿ ಎನಿಸಿಬಿಡುತ್ತದೆ.
ಸುರೇಂದ್ರನಾಥ್ ಕತೆಗೆ ಸೂರಿ ತಮ್ಮದೇ ಚಿತ್ರಕತೆ ಪೋಷಾಕು ತೊಡಿಸಿ ಮೆರವಣಿಗೆ ಮಾಡಿಸಿದ್ದಾರೆ. ಮಗಾಯ್, ಫೀನಿಕ್ಸ್, ಡೈಮಂಡ್ ಭಂಡಾರಿ, ಕಟ್ಟೆ ಕೇಶವ, ಗುನ್ನಿಸ್ ರವಿ, ಶೋಲೆ ಬಾಬು, ತಲವಾರ್ ತಾತಯ್ಯ, ಮಹಾರಾಜ್ ಎನ್ನುವ ಹೆಸರುಗಳ ವಿಚಿತ್ರ ಪಾತ್ರಗಳನ್ನು ಸೃಷ್ಟಿಸಿ, ಗೋಡಾ, ಬೂದಿ ಗುಡ್ಡ, ಗಂಟೆ ಕಂಬ, ಹಂದಿಹಳ್ಳ, ನರಸಿಂಹ ಗುಡ್ಡ ಅನ್ನೋ ಬೆಟ್ಟಗುಡ್ಡದ ಜಾಗಗಳಲ್ಲಿ ಸುತ್ತಾಡಿಸಿಕೊಂಡು ಬರುತ್ತಾರೆ.
ನಾಯಕನ ಪರಿಚಯದೊಂದಿಗೆ ಕತೆಯನ್ನು ಬಹಳ ಮುಂದಕ್ಕೆ ತಗೊಂಡು ಹೋಗಿಬಿಡುವ ಸೂರಿ ಬಳಿಕ (ನರ)ಸಿಂಹಾವಲೋಕನ ಮಾಡಿಸುತ್ತಾ ಹಿಂದೆ ಮುಂದೆ ಜೀಕುವಂತೆ ಮಾಡುತ್ತಾರೆ. ಒಂದಷ್ಟು ಸನ್ನಿವೇಶಗಳನ್ನು ಚೆಲ್ಲಾಪಿಲ್ಲಿಯಾಗಿ ತೋರಿಸಿ ಬಳಿಕ ಅದನ್ನೆಲ್ಲ ಒಂದೇ ಸರಳ ರೇಖೆಯಲ್ಲಿ ಪೋಣಿಸುತ್ತಾ ಒಂದು ಸಂಪೂರ್ಣ ಚಿತ್ರಣ ಕೊಡುತ್ತಾರೆ. ಅದಕ್ಕೆ ಫ್ಲ್ಯಾಶ್ಬ್ಯಾಕ್ ತಂತ್ರವನ್ನು ಸೊಗಸಾಗಿ ಬಳಸಿಕೊಂಡಿದ್ದಾರೆ. ಒಂದಷ್ಟು ಮೆಟಾಫರ್ಗಳ ಜೊತೆಗೆ ಕಂಟ್ರಿ ಪಿಸ್ತೂಲ್ ಬ್ಯಾಕ್ ಫಯರ್ ಆಗೋದು, ನಾಯಕನ ಭೋದನೆಯೇ ಖಳನಾಯಕನಿಗೆ ಪ್ರೇರಣೆ ಆಗೋದು, 'ಚಕ್ರವ್ಯೂಹ' ಚಿತ್ರದ ಟೈಟಲ್ ಸಾಂಗ್ ಅನ್ನು ರುದ್ರನ ಫೋನ್ ರಿಂಗ್ಟೋನ್ ಮಾಡಿ ಸೂರಿ ತಮ್ಮ ಮಾರ್ಕ್ ತೋರಿಸುತ್ತಾ ಹೋಗಿದ್ದಾರೆ. ಕ್ಲೈಮ್ಯಾಕ್ಸ್ನಲ್ಲಿ ಸಣ್ಣ ಸನ್ನಿವೇಶದಿಂದ ಕುತೂಹಲ ಮೂಡಿಸಿ ರುದ್ರನ 'ಬ್ಯಾಡ್ ಮ್ಯಾನರ್ಸ್' ಇನ್ನು ಮುಗಿದಿಲ್ಲ ಎಂದಿದ್ದಾರೆ.
ಕಲಾವಿದರ ಅಭಿನಯ
'ಅಮರ್' ಸಿನಿಮಾ ನೋಡಿದವರ ಅಭಿ ನಟನೆಗೆ ಮಾಗಬೇಕು ಎಂದಿದ್ದರು. ಇಲ್ಲಿ ಸಂಪೂರ್ಣವಾಗಿ ನಿರ್ದೇಶಕ ಸೂರಿಗೆ ತಮ್ಮನ್ನು ಒಪ್ಪಿಕೊಂಡಿರುವ ಅಭಿ, ಆ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಅಭಿ ಸ್ಕ್ರೀನ್ ಪ್ರೆಸನ್ಸ್ ಚೆನ್ನಾಗಿದೆ. ಆನೆಯನ್ನು ಮಾವುತ ಅಂಕುಶ ಹಿಡಿದು ಪಳಗಿಸಿದಂತೆ ಸೂರಿ ಸಾಧ್ಯವಾದಷ್ಟು ಅಭಿಯನ್ನು ಬಾಗಿಸಿ ನಟನೆಯನ್ನು ಹೊರ ತೆಗೆಯುವ ಪ್ರಯತ್ನ ಮಾಡಿದ್ದಾರೆ. ನಾಯಕನ ಪ್ರೇಯಸಿಯಾಗಿ ನಾಲ್ಕೈದು ಸನ್ನಿವೇಶಗಳಿಗೆ ರಚಿತಾ ರಾಮ್ ಸೀಮಿತವಾಗಿದ್ದಾರೆ. ನಾಯಕನ ತಾಯಿ ಪಾತ್ರದಲ್ಲಿ ತಾರಾ, ಹಿರಿಯ ಪೊಲೀಸ್ ಅಧಿಕಾರಿಯಾಗಿ ಶರತ್ ಲೋಹಿತಾಶ್ವ ಅನುಭವ ಧಾರಾ ಎರೆದಿದ್ದಾರೆ. ಇನ್ನುಳಿದಂತೆ ಬಹುತೇಕ ಹೊಸ ಮುಖಗಳೇ ಚಿತ್ರದಲ್ಲಿವೆ. ಮಗಾಯ್ ಪಾತ್ರದಲ್ಲಿ ರೋಚಿತ್ ನಟನೆ ಪ್ರೇಕ್ಷಕರ ನೆನಪಿನಲ್ಲಿ ಉಳಿಯುತ್ತದೆ.
ತಾಂತ್ರಿಕವಾಗಿ ಸಿನಿಮಾ
ಸೂರಿ ಕಲ್ಪನೆಗೆ ಶೇಖರ್ ಕ್ಯಾಮರಾ ಸಾಥ್ ಸಿಕ್ಕಿದೆ. ಕಲ್ಲು ಕ್ವಾರೆ, ಬೆಟ್ಟ ಗುಡ್ಡ, ಹಳೇ ಕಟ್ಟಡಗಳನ್ನು ಭಿನ್ನ ವಿಭಿನ್ನ ಕೋನಗಳಲ್ಲಿ ಕತ್ತಲು ಬೆಳಕಿನಲ್ಲಿ(ಲೈಟಿಂಗ್) ಸೂರಿ ತೋರಿಸುತ್ತಾ ಹೋಗುತ್ತಾರೆ. ಸಣ್ಣ ಸಣ್ಣ ಫ್ರೇಮ್ ಕಟ್ಟಿಕೊಡಲು ಬಹಳ ಸಮಯ ತೆಗೆದುಕೊಂಡಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಚಿತ್ರದ ಹೈಲೆಟ್. ಹಾಡುಗಳು ಕೊಂಚ ನಿರಾಸೆ ಮೂಡಿಸಿದರೂ ಬಿಜಿಎಂ ಚಿತ್ರಕ್ಕೆ ಪ್ಲಸ್ ಆಗಿದೆ. ಮಾಸ್ತಿ, ಅಮ್ರಿ ಡೈಲಾಗ್ಸ್, ಒನ್ಲೈನರ್ಗಳು ಚಿತ್ರಕ್ಕೆ ಹೆಚ್ಚಿನ ಶಕ್ತಿ ತುಂಬಿದೆ. ಆದರೆ ಆಕ್ಷನ್ ಸನ್ನಿವೇಶಗಳು ಬೋರ್ ಹೊಡೆಸುತ್ತವೆ. ಲೊಕೇಶನ್ಗಳ ಆಯ್ಕೆ, ಆರ್ಟ್ ವರ್ಕ್, ಎಡಿಟಿಂಗ್ ಸೊಗಸಾಗಿದೆ.
ಕೊನೆ ಮಾತು
'ಬ್ಯಾಡ್ ಮ್ಯಾನರ್ಸ್' ಸೂರಿ ಒಂದು ವಿಭಿನ್ನ ಪಾತಕ ಲೋಕಕ್ಕೆ ನೋಡುಗರನ್ನು ಸೆಳೆದುಕೊಂಡು ಹೋಗುತ್ತಾರೆ. ಆ ಲೋಕದ ಒಳ ಹೊರಗನ್ನು ತಮ್ಮದೇ ಕಣ್ಣುಗಳಲ್ಲಿ ತೋರಿಸುತ್ತಾ? ಸರಿ ತಪ್ಪುಗಳ ತುಲನೆ ಮಾಡುತ್ತಾ? ಗನ್ ಹಾಗೂ ಚರಕಗಳ ಫಿಲಾಸಫಿ ಹೇಳುತ್ತಾ ಸಾಗುತ್ತಾರೆ. ಅವರಿಗೆ ತಮ್ಮನ್ನು ಒಪ್ಪಿಸಿಕೊಂಡ ಪ್ರೇಕ್ಷಕರಿಗೆ 'ಬ್ಯಾಡ್ಮ್ಯಾನರ್ಸ್' ಇಷ್ಟವಾಗಬಹುದು. ಸಾಮಾನ್ಯ ಪ್ರೇಕ್ಷಕರಿಗೆ ಅದರಲ್ಲೂ ಫ್ಯಾಮಿಲಿ ಆಡಿಯನ್ಸ್ಗೆ ಸೂರಿ ಚಿತ್ರಕತೆ ಗೋಜಲುಗಳು ಸುಲಭಕ್ಕೆ ಅರ್ಥವಾಗುವುದು ಕಷ್ಟ. ಬುದ್ಧಿವಂತ ಪ್ರೇಕ್ಷಕರು ಒಮ್ಮೆ 'ಬ್ಯಾಡ್ಮ್ಯಾನರ್ಸ್' ನೋಡಲು ಅಡ್ಡಿಯಿಲ್ಲ.


Click it and Unblock the Notifications











