Don't Miss!
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Finance 2023 ಡಿಸೆಂಬರ್ ವೇಳೆಗೆ 160 ಲಕ್ಷ ಕೋಟಿ ರೂ. ದಾಟಿದ ಸರ್ಕಾರದ ಸಾಲ!
- Automobiles Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- News Karnataka Lok Sabha: 28 ಕ್ಷೇತ್ರಗಳ ಜಾತಿವಾರು ಅಭ್ಯರ್ಥಿಗಳು ಯಾರು? ಮಾಹಿತಿ ಇಲ್ಲಿದೆ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಮರ್ಶೆ: ಭೂಗತ ಲೋಕಕ್ಕೆ ದೇಶಪ್ರೇಮದ ಪಾಠ ಹೇಳುವ 'ಚಕ್ರವರ್ತಿ'
''ಕೆಟ್ಟ ಜಾಗದಲ್ಲಿ ಕೂತ್ಕೊಂಡು ಒಳ್ಳೆ ಕೆಲಸನೂ ಮಾಡಬಹುದು'' - ಇದು 'ಚಕ್ರವರ್ತಿ' ಚಿತ್ರದ ಡೈಲಾಗ್ ಹೌದು... 'ಚಕ್ರವರ್ತಿ' ತುಳಿಯುವ ಹಾದಿಯೂ ಹೌದು... ಇಡೀ ಚಿತ್ರದ ಸಾರಾಂಶ ಕೂಡ ಹೌದು. ಭೂಗತ ಲೋಕದ ಕಥೆಯನ್ನ ವೈಭವೋಪೇತವಾಗಿ 'ಚಕ್ರವರ್ತಿ' ಮೂಲಕ ನಿಮ್ಮೆಲ್ಲರ ಮುಂದೆ ತಂದರೂ, ಅದರಲ್ಲಿ ದೇಶ ಪ್ರೇಮದ ಬೀಜ ಬಿತ್ತಿರುವ ನಿರ್ದೇಶಕ ಚಿಂತನ್ ರವರ ಜಾಣ್ಮೆ ಮೆಚ್ಚಬೇಕು.
'ಚಕ್ರವರ್ತಿ' ಚರಿತೆ
ಮಡಿಕೇರಿಯಲ್ಲಿ 'ಸಿಪಾಯಿ' ಪುತ್ರನಾಗಿ ಜನಿಸಿದ ಶಂಕರ್ (ದರ್ಶನ್)ಗೆ ನರಭಕ್ಷಕ ಹುಲಿಯನ್ನ ಬೇಟೆ ಆಡುವ ಹವ್ಯಾಸ. ಆ ಹವ್ಯಾಸ ಬಿಟ್ಟು ಜೀವನದಲ್ಲಿ ಸಾಧನೆ ಮಾಡಬೇಕು ಅಂತ ಅಪ್ಪನ ಮಾತಿಗೆ ಬೆಲೆ ಕೊಟ್ಟು ಬೆಂಗಳೂರಿಗೆ ಬರುವ ಶಂಕರ್ ಕಾಲಕ್ರಮೇಣ ಭೂಗತ ಲೋಕಕ್ಕೂ ಕಾಲಿಡುತ್ತಾನೆ.
ಭೂಗತ ಲೋಕದ ನಂಟು ಹೇಗೆ.?
ಬೆಂಗಳೂರಿಗೆ ಬರುವ ಶಂಕರ್ (ದರ್ಶನ್)ಗೆ ಭೂಗತ ಲೋಕದ ನಂಟು ಬೆಳೆಯುವುದು ಹೇಗೆ.? ಅಷ್ಟಕ್ಕೂ 'ರೌಡಿಸಂ' ಹಾದಿಯನ್ನ ಶಂಕರ್ ತುಳಿಯುವುದು ಯಾಕೆ.? ಎಂಬುದೇ 'ಚಕ್ರವರ್ತಿ' ಚರಿತ್ರೆ.! ಅದನ್ನ ನೀವೇ ಚಿತ್ರಮಂದಿರದಲ್ಲಿ ಕಣ್ತುಂಬಿಕೊಂಡರೆ ಚೆನ್ನ.
'ಚಕ್ರವರ್ತಿ'ಯಾಗಿ ದರ್ಶನ್ ಚಕ್ರಾಧಿಪತ್ಯ
ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ಅದ್ಭುತ. ಗಂಭೀರ ಮುಖಭಾವ, ನಡೆಯುವ ಸ್ಟೈಲ್, ಕಿಲ್ಲಿಂಗ್ ಸ್ಮೈಲ್, ಸೂಪರ್ ಸ್ಟಂಟ್ಸ್... ಎಲ್ಲದರಲ್ಲೂ ದರ್ಶನ್ 'ದಿ ಬೆಸ್ಟ್'. ಮೂರು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿರುವ ದರ್ಶನ್ ರವರನ್ನ ತೆರೆಮೇಲೆ ನೋಡುತ್ತಿದ್ದರೆ, ಅಭಿಮಾನಿಗಳಿಗೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ.!
ಶಿಳ್ಳೆ ಗಿಟ್ಟಿಸುವ ದಿನಕರ್ ತೂಗುದೀಪ.!
'ಡಾನ್' ಮಹಾರಾಜ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಿನಕರ್ ತೂಗುದೀಪ ರವರ ನಟನೆ ಎಕ್ಸಲೆಂಟ್. ದಿನಕರ್ ನಟನೆ ನೋಡ್ತಿದ್ರೆ, ಕೆಲವೊಂದು ಸನ್ನಿವೇಶಗಳಲ್ಲಿ ದಿ.ತೂಗುದೀಪ ಶ್ರೀನಿವಾಸ್ ನೆನಪಾಗುತ್ತಾರೆ. ಅಷ್ಟರಮಟ್ಟಿಗೆ 'ಖಡಕ್ ರೌಡಿ'ಯಾಗಿ ದಿನಕರ್ ಆರ್ಭಟಿಸಿದ್ದಾರೆ.
ದೀಪಾ.. ಮುಗ್ಧ.. ಸುಂದರ
ಅಪ್ಪಟ ಗೃಹಿಣಿಯಾಗಿ ನಟಿ ದೀಪಾ ಸನ್ನಿಧಿ ನಟನೆ ಚೆನ್ನಾಗಿದೆ. ದರ್ಶನ್ ಹಾಗೂ ದೀಪಾ ಸನ್ನಿಧಿ ರವರ ಕೆಮಿಸ್ಟ್ರಿ ಕೂಡ ಆನ್ ಸ್ಕ್ರೀನ್ ನಲ್ಲಿ ವರ್ಕೌಟ್ ಆಗಿದೆ.
ಉಳಿದವರ ನಟನೆ ಹೇಗಿದೆ.?
ಉಳಿದಂತೆ ಪೊಲೀಸ್ ಪಾತ್ರದಲ್ಲಿ ಆದಿತ್ಯ, ಶರತ್ ಲೋಹಿತಾಶ್ವ, 'ಡಾನ್' ಶೆಟ್ಟಿ ಪಾತ್ರದಲ್ಲಿ ಕುಮಾರ್ ಬಂಗಾರಪ್ಪ, ಚಾರುಲತಾ, ಸೃಜನ್ ಲೋಕೇಶ್, ಸಾಧು ಕೋಕಿಲ ತಮಗೆ ಕೊಟ್ಟ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಶ್ರೀಮಂತಿಕೆ ತುಂಬಿ ತುಳುಕುವ ಸಿನಿಮಾ
'ಚಕ್ರವರ್ತಿ' ಚಿತ್ರದ ಪ್ರತಿ ಫ್ರೇಮ್ ನಲ್ಲೂ ಶ್ರೀಮಂತಿಕೆ ತುಂಬಿ ತುಳುಕುತ್ತದೆ. 80-90ರ ದಶಕದಲ್ಲಿ ನಡೆಯುವ ಕಥೆಯಾದ್ರಿಂದ, ಅದಕ್ಕೆ ಬೇಕಾಗಿರುವ ಸೆಟ್ ವರ್ಕ್, ಕಾಸ್ಟ್ಯೂಮ್, ಹೇರ್ ಸ್ಟೈಲ್, ಕಾರುಗಳು... ಎಲ್ಲವೂ ಅಚ್ಚುಕಟ್ಟಾಗಿದೆ. 80-90 ರ ದಶಕದ ವಾತಾವರಣವನ್ನ ತೆರೆಮೇಲೆ ಕಟ್ಟಿಕೊಡುವಲ್ಲಿ ನಿರ್ದೇಶಕ ಚಿಂತನ್ ಯಶಸ್ವಿ ಆಗಿದ್ದಾರೆ. ನಿರ್ಮಾಪಕ ಸಿದ್ಧಾಂತ್ ಯಾವುದಕ್ಕೂ ಕಮ್ಮಿ ಮಾಡಿಲ್ಲ.
ಕ್ಯಾಮರಾ ಕೈಚಳಕ
ಮಡಿಕೇರಿ, ಮೈಸೂರು, ಬ್ಯಾಂಕಾಕ್, ಮಲೇಶಿಯಾ ಸೇರಿದಂತೆ ಅನೇಕ ಕಣ್ಣು ಕೋರೈಸುವ ಸುಂದರ ತಾಣಗಳಲ್ಲಿ 'ಚಕ್ರವರ್ತಿ'ಯ ಚಕ್ರಾಧಿಪತ್ಯವನ್ನ ಕ್ಯಾಮರಾಮ್ಯಾನ್ ಚಂದ್ರಶೇಖರ್ ಸುಂದರವಾಗಿ ಸೆರೆಹಿಡಿದಿದ್ದಾರೆ.
ಅರ್ಜುನ್ ಜನ್ಯ ಸಂಗೀತ ಪೂರಕ
ಎಲ್ಲೋ ಕೇಳಿದಂತೆ ಭಾಸವಾದರೂ, 'ಚಕ್ರವರ್ತಿ' ಚಿತ್ರದ ಟೈಟಲ್ ಹಾಡು ಮತ್ತೆ ಮತ್ತೆ ಗುನುಗುವಂತೆ ಮಾಡುತ್ತದೆ. 'ಚಕ್ರವರ್ತಿ' ಥೀಮ್ ಮ್ಯೂಸಿಕ್ ಮತ್ತು ಬ್ಯಾಕ್ ಗ್ರೌಂಡ್ ಸ್ಕೋರ್ ಚಿತ್ರಕಥೆಗೆ ಪೂರಕವಾಗಿದೆ.
ಅಬ್ಬರ ಇಲ್ಲ, ಆರ್ಭಟ ಇಲ್ಲ.!
'ಚಕ್ರವರ್ತಿ' ಚಿತ್ರದಲ್ಲಿ ಅಬ್ಬರದ ಡೈಲಾಗ್ಸ್ ಇಲ್ಲ. ಬಿಲ್ಡಪ್ ಬೇಕೇ ಬೇಕು ಅಂತ ಆರ್ಭಟವಿರುವ ಡೈಲಾಗ್ಸ್ ಬರೆದಿಲ್ಲ. ಚಿತ್ರಕಥೆಗೆ ಪೂರಕವಾಗಿ ಸಂಭಾಷಣೆ ಬರೆಯಲಾಗಿದೆ. 'ಚಕ್ರವರ್ತಿ' ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಇದೇ.!
ಸುಮ್ಸುಮ್ನೆ 'ಮಸಾಲೆ' ಸೇರಿಸಿಲ್ಲ.!
ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟರೂ, ಜಾಣ್ಮೆಯಿಂದ 'ಚಕ್ರವರ್ತಿ' ಚಿತ್ರದ ನಿರ್ದೇಶನ ಮಾಡಿದ್ದಾರೆ ಚಿಂತನ್. ಚಿತ್ರದಲ್ಲಿ ಅನವಶ್ಯಕವಾಗಿ ಮಸಾಲೆ ಸೇರಿಸಿಲ್ಲ. ಆದ್ರೆ ಕೆಲವು ಕಡೆ 'ಹಿಂದಿ' ಸಂಭಾಷಣೆ ಇರೋದ್ರಿಂದ, ಸಬ್ ಟೈಟಲ್ ಅನಿವಾರ್ಯ ಇತ್ತು ಅಂತ ಅನಿಸುವುದು ಸಹಜ. ಹಾಗೇ, 'ಚಕ್ರವರ್ತಿ' ಓಟದಲ್ಲಿ ಕೊಂಚ ವೇಗ ಇರಬೇಕಿತ್ತು. ಸಂಕಲನ ಮತ್ತು ಸ್ಕ್ರೀನ್ ಪ್ಲೇಯಲ್ಲಿ ಚಿಂತನ್ ಸ್ವಲ್ಪ ಹೆಚ್ಚು ಗಮನ ಹರಿಸಬಹುದಿತ್ತು.
ದೇಶಪ್ರೇಮ ವರ್ಸಸ್ ದೇಶದ್ರೋಹ
ಭೂಗತ ಲೋಕದ ಕಥೆಗಳನ್ನ ಈಗಾಗಲೇ ಅನೇಕ ಸಿನಿಮಾಗಳಲ್ಲಿ ನೋಡಿರುವ ಜನರಿಗೆ 'ಚಕ್ರವರ್ತಿ' ಚಿತ್ರದಲ್ಲಿ ಅಂಡರ್ ವರ್ಲ್ಡ್ ಸ್ಟೋರಿ ಜೊತೆಗೆ ದೇಶಪ್ರೇಮ ಕೂಡ ಇದೆ. ಹೀಗಾಗಿ 'ಡಿ' ಬಾಸ್ ಫ್ಯಾನ್ಸ್ ಗೆ 'ಚಕ್ರವರ್ತಿ' ರಸದೌತಣ.
ಕ್ಲಾಸ್ ಮತ್ತು ಮಾಸ್ ಎಂಬ ಭೇದಭಾವ ಬೇಡ
ಕ್ಲಾಸ್ ಮತ್ತು ಮಾಸ್ ಎಂಬ ಭೇದಭಾವ ಇಲ್ಲದೇ 'ಚಕ್ರವರ್ತಿ' ಚಿತ್ರವನ್ನ ಎಲ್ಲರೂ ಆರಾಮಾಗಿ ಕೂತು ನೋಡಬಹುದು. ಚಕ್ರವರ್ತಿ, ದರ್ಶನ್ ಅಭಿಮಾನಿಗಳು ಮೆಚ್ಚುವಂತಹ ರೌಡಿಸಂ ಕಥೆ ಆದರೂ, ಅತಿರೇಕ ಅಂತ ಎಲ್ಲೂ ಅನಿಸಲ್ಲ. ಕನ್ನಡ ಚಿತ್ರಗಳನ್ನ ಚಿತ್ರಮಂದಿರದಲ್ಲಿ ನೋಡಿ, ಪ್ರೋತ್ಸಾಹಿಸಿ.