Daaku Maharaaj Review; ಬಾಲಯ್ಯ ಅಭಿಮಾನಿಗಳಿಗೆ ಹೇಳಿಮಾಡಿಸಿದ ಮಾಸ್ ಎಂಟರ್ಟೈನರ್
ಸ್ಟಾರ್ ನಟರು ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಲು ಭಯ ಪಡುತ್ತಾರೆ. ಇಮೇಜ್ ಬಿಟ್ಟು ಬೇರೆ ಸಿನಿಮಾ ಮಾಡಿ ಸೋಲುವುದಕ್ಕಿಂತ ಮಾಡಿದ್ದೇ ಮಾಡಿದರೂ ಪರವಾಗಿಲ್ಲ, ಪ್ರೇಕ್ಷಕರು ರಂಜಿಸಿದರೆ ಸಾಕು ಎನ್ನುವ ನಿರ್ಧಾರಕ್ಕೆ ಬಂದುಬಿಡುತ್ತಾರೆ.
ತೆಲುಗು ನಟ ಬಾಲಕೃಷ್ಣ ನಟನೆಯ 'ಡಾಕು ಮಹಾರಾಜ್' ಸಂಕ್ರಾಂತಿ ಸಂಭ್ರಮದಲ್ಲಿ(ಜನವರಿ 12) ತೆರೆಗೆ ಬಂದಿದೆ. ವಿಶ್ವಾದಾದ್ಯಂತ ಕೆಲವೆಡೆ ಮಧ್ಯರಾತ್ರಿಯಿಂದಲೇ ಶೋಗಳು ಆರಂಭವಾಗಿದೆ. ಟ್ರೈಲರ್, ಸಾಂಗ್ಸ್ ಮೂಲಕ ಆಕ್ಷನ್ ಎಂಟರ್ಟೈನರ್ ಸಿನಿಮಾ ಕುತೂಹಲ ಮೂಡಿಸಿತ್ತು. ಅದಕ್ಕೆ ಇದೀಗ ತೆರೆ ಬಿದ್ದಿದೆ. ಬಾಬಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಹೇಗಿದೆ? ರಿವ್ಯೂ ಮುಂದೆ ಓದಿ.

'ಡಾಕು ಮಹಾರಾಜ್' ಕಥೆ
ಚಿತ್ತೂರಿನಲ್ಲಿ ಸಿನಿಮಾ ಕಥೆ ಆರಂಭವಾಗುತ್ತದೆ. ಅಲ್ಲಿ ಒಂದು ಕಾಫಿ ಎಸ್ಟೇಟ್. ಅದನ್ನು ಲೀಸ್ಗೆ ತೆಗೆದುಕೊಂಡು ಸ್ಥಳೀಯ ಶಾಸಕ ತ್ರಿಮೂರ್ತಿ ನಾಯುಡು(ರವಿ ಕಿಶನ್) ಅಕ್ರಮ ಚಟುವಟಿಕೆಯ ಅಡ್ಡೆ ಮಾಡಿಕೊಂಡಿರುತ್ತಾರೆ. ಎಸ್ಟೇಟ್ ಮಾಲೀಕ(ಸಚಿನ್ ಖೆಡೆಕರ್) ಅದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆತನ ಮೊಮ್ಮಗಳು ವೈಷ್ಣವಿಯನ್ನು ಕೊಲ್ಲಲು ಮುಂದಾಗುತ್ತಾನೆ.
ವೈಷ್ಣವಿಯ ಜೀವಕ್ಕೆ ಆಪತ್ತು ಎನ್ನುವ ವಿಷಯ ಗೊತ್ತಾಗಿ ಅತ್ತ ಚಂಬಲ್ ಜೈಲಿನಲ್ಲಿರುವ ಮಹಾರಾಜ್(ಬಾಲಕೃಷ್ಣ) ತಪ್ಪಿಸಿಕೊಳ್ಳುತ್ತಾನೆ. ಅಲ್ಲಿಂದ ನೇರವಾಗಿ ಬಂದು ವೈಷ್ಣವಿ ಮನೆಯ ಕಾರ್ ಡ್ರೈವರ್ ಆಗಿ ಕೆಲಸಕ್ಕೆ ಸೇರುತ್ತಾನೆ. ಆಕೆಯನ್ನು ಕೊಲ್ಲಲು ಬಂದವರ ಮಾರಣಹೋಮ ಆರಂಭಿಸುತ್ತಾನೆ. ಎನ್ಕೌಂಟರ್ ಸ್ಪೆಷಲಿಸ್ಟ್ ಸ್ಟೀಫನ್ ರಾಜ್ ಮತ್ತೊಂದು ಕಡೆ 'ಡಾಕು'ಗಾಗಿ ಹುಡಕಾಟ ನಡೆಸುತ್ತಿರುತ್ತಾನೆ. ಮತ್ತೊಂದು ಕಡೆ ಬಲ್ವಂತ್ ಸಿಂಗ್ ಠಾಕೂರ್(ಬಾಬಿ ಡಿಯೋಲ್) ಆ ಎಸ್ಟೇಟ್ನಲ್ಲಿರುವ ತನ್ನ ಮಾಲ್ ಹುಡುಕಿ ಬರ್ತಾನೆ. ಅಷ್ಟಕ್ಕೂ ವೈಷ್ಣಮಿ ಮನೆಗೆ ಮಹಾರಾಜ್ ಯಾಕೆ ಬಂದ? ಆತನಿಗೂ ಠಾಕೂರ್ಗೂ ಇದುವ ಜಿದ್ದು ಏನು? ಡಾಕು ಮಹಾರಾಜ್ ಯಾರು? ಎನ್ನುವುದೇ ಸಿನಿಮಾ.

ಸಿನಿಮಾ ಹೇಗಿದೆ?
ಮಾಸ್ ಮಸಾಲಾ ಸಿನಿಮಾಗಳನ್ನು ಕಟ್ಟಿಕೊಡುವಲ್ಲಿ ಬಾಬಿ ನಿಸ್ಸೀಮರು. ಅವರ ಸಿನಿಮಾಗಳಲ್ಲಿ ಕತೆ ಹೊಸದಾಗಿ ಇಲ್ಲದೇ ಇದ್ದರೂ ಹಳೇ ಕತೆಯನ್ನೇ ವಿಭಿನ್ನವಾಗಿ ಹೇಳುತ್ತಾರೆ. 2 ವರ್ಷದ ಹಿಂದೆ ಸಂಕ್ರಾಂತಿಗೆ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಸಿನಿಮಾ ನಿರ್ದೇಶನ ಮಾಡಿದ್ದರು. ಆಗ ಕೂಡ ಕಮರ್ಷಿಯಲ್ ಅಂಶಗಳನ್ನು ಹದವಾಗಿ ಬೆರಸಿ ಗೆದ್ದಿದ್ದರು. ಇದೀಗ 'ಡಾಕು ಮಹಾರಾಜ್' ಚಿತ್ರದಲ್ಲೂ ಅದನ್ನೇ ಮಾಡಿದ್ದಾರೆ.
ಚಿಕ್ಕ ಹುಡುಗಿ ಅಥವಾ ನಾಯಕಿಯ ಜೀವಕ್ಕೆ ಆಪತ್ತು ಇದೆ ಎಂದು ನಾಯಕ ಕಣ್ಣುರೆಪ್ಪೆಯಂತೆ ಕಾಯುವುದು, ಬಳಿಕ ಫ್ಯಾಶ್ಬ್ಯಾಕ್ನಲ್ಲಿ ಆತನ ಹಿನ್ನೆಲೆ ಏನು ಎಂದು ತೋರಿಸುವುದು. ಈ ಸಿದ್ಧ ಸೂತ್ರದಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. 'ಡಾಕು ಮಹಾರಾಜ್' ಸ್ಟೋರಿಲೈನ್ ಕೂಡ ಅದೇ ರೀತಿಯಿದೆ. ಆದರೆ ಅದನ್ನೇ ಕೊಂಚ ಮಾಸ್ ಎಲಿಮೆಂಟ್ಸ್ ಸೇರಿಸಿ ಹೊಸದಾಗಿ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.
ಸಿವಿಲ್ ಇಂಜಿನಿಯರ್ ಸೀತಾರಾಮ್(ಬಾಲಕೃಷ್ಣ) ಮುಂದೆ ಡಾಕು ಮಹಾರಾಜ್ ಆಗಿದ್ಯಾಕೆ? ಎನ್ನುವುದು ಚಿತ್ರದ ಹೈಲೆಟ್. ಇದು ಬ್ಯಾಕ್ಡ್ರಾಪ್ ಕತೆ. ಬಾಲಕೃಷ್ಣ ನಟನೆಯ ಸಿನಿಮಾಗಳಲ್ಲಿ ಹೆಚ್ಚು ಕಮ್ಮಿ ಒಂದೇ ರೀತಿಯ ಕತೆಗಳು ಇರುತ್ತದೆ. ಅದನ್ನೇ ಹಿಂದು ಮುಂದು ಮಾಡಿ ತೆರೆಗೆ ತರಲಾಗುತ್ತದೆ. ಅಭಿಮಾನಿಗಳು ಕೂಡ ಅದಕ್ಕೆ ಅಡ್ಜೆಸ್ಟ್ ಆಗಿಬಿಟ್ಟಿದ್ದಾರೆ. ಅದು ಬಿಟ್ಟು ಬೇರೆ ಸಬ್ಜೆಕ್ಟ್ ಮಾಡುವ ಧೈರ್ಯ ಬಾಲಯ್ಯ ಮಾಡಲ್ಲ. ಈ ಬಾರಿ ಕೂಡ ಅದೇ ಪ್ರಯತ್ನ ಮಾಡಿದ್ದಾರೆ.
ಬಾಲಕೃಷ್ಣ ಶೈಲಿಯ ಮಾಸ್ ಡೈಲಾಗ್ಸ್, ಆಕ್ಷನ್ ಸನ್ನಿವೇಶಗಳು ಡಾಕು ಮಹಾರಾಜ್ ಚಿತ್ರದಲ್ಲಿ ತುಂಬಿ ತುಳುಕುತ್ತದೆ. ಹತ್ತು ನಿಮಿಷಕ್ಕೊಂದು ಫೈಟ್, ಎಲಿವೇಷನ್ ಸೀನ್ಸ್ ಚಿತ್ರದಲ್ಲಿದೆ. ಆದರೆ ಮುಖ್ಯವಾಗಿ ಎಮೋಷನ್ ಮಿಸ್ ಆಗಿದೆ. ಆಕ್ಷನ್ ಸಿನಿಮಾಗಳಿಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತಹ ಎಮೋಷನ್ ಇರಬೇಕು, ಅದು ಇಲ್ಲಿ ಮಿಸ್ ಆಗಿದೆ.
ಕಲಾವಿದರ ನಟನೆ
ಬಾಲಕೃಷ್ಣ ತಮ್ಮ ಮಾಸ್ ಪರ್ಫಾರ್ಮನ್ಸ್ ಮೂಲಕ ಮತ್ತೊಮ್ಮೆ ಅಬ್ಬರಿಸಿ ಬೊಬ್ಬಿರಿದ್ದಾರೆ. ಆಕ್ಷನ್, ಡೈಲಾಗ್ ಡೆಲಿವರಿ ಎಲ್ಲದರಲ್ಲೂ ಅದೇ ಜೋಶ್, ಆರ್ಭಟ ಪ್ರದರ್ಶಿಸಿದ್ದಾರೆ. ಸೀತಾರಾಮ್, ಡಾಕು ಮಹಾರಾಜ್ ಹಾಗೂ ಕಾರ್ ಡ್ರೈವರ್ ನಾನಾಜಿ ಹೀಗೆ ಮೂರು ಶೇಡ್ಗಳಿರುವ ಪಾತ್ರದಲ್ಲಿ ನಟಿಸಿ ಗೆದ್ದಿದ್ದಾರೆ. ಪ್ರಜ್ಞಾ ಜೈಸ್ವಾಲ್ ನಾಯಕಿ ಆಗಿದ್ದರೂ ಚಂಬಲ್ ಜಿಲ್ಲೆಯ ಕಲೆಕ್ಟರ್ ನಂದಿನಿ ಪಾತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಟನೆ ಚೆನ್ನಾಗಿದೆ.
ಇನ್ನುಳಿದಂತೆ ಬಾಬಿ ಡಿಯೋಲ್ ಮತ್ತೊಮ್ಮೆ ನೆಗೆಟಿವ್ ರೋಲ್ನಲ್ಲಿ ಅಬ್ಬಿರಿಸಿದ್ದಾರೆ. ಊರ್ವಶಿ ರೌಟೇಲ ಗ್ಲಾಮರ್ ಡಾಲ್ ಆಗಿಯೇ ಹೆಚ್ಚು ಕಾಣಿಸಿಕೊಂಡಿದ್ದಾರೆ. ರವಿ ಕಿಶನ್ ಕೂಡ ಗುಂಡಾ ರಾಜಕಾರಣಿಯಾಗಿ ದರ್ಬಾರ್ ನಡೆಸಿದ್ದಾರೆ.
ಟೆಕ್ನಿಕಲಿ ಸಿನಿಮಾ
ಬಾಲಕೃಷ್ಣ ಅವರನ್ನು ಹೇಗೆ ನೋಡಲು ಪ್ರೇಕ್ಷಕರು ಇಷ್ಟಪಡುತ್ತಾರೋ ಅದೇ ರೀತಿ ಬಾಬಿ ಸಿನಿಮಾ ಮಾಡಿದ್ದಾರೆ. ಹೆಚ್ಚು ರಿಸ್ಕ್ ತೆಗೆದುಕೊಂಡಿಲ್ಲ. ಆದರೆ ಅದೇ ಚಿತ್ರದ ದೊಡ್ಡ ಮೈನಸ್. ಎಷ್ಟು ಬಾರಿ ಅಂತ ನೋಡಿದ್ದನ್ನೇ ನೋಡೋಕೆ ಸಾಧ್ಯ. ತಮನ್ ತಮ್ಮ ಮ್ಯೂಸಿಕ್ ಮೂಲಕ ಚಿತ್ರದ ಆರ್ಭಟ ಹೆಚ್ಚಿಸಿದ್ದಾರೆ. ವಿಜಯ್ ಕಾರ್ತಿಕ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಕಥೆ ಕೇಳಿದ್ದನ್ನೆಲ್ಲಾ ಕೊಟ್ಟು ನಿರ್ಮಾಪಕರು ಸಿನಿಮಾ ನಿರ್ಮಿಸಿದ್ದಾರೆ.
ಕೊನೆಮಾತು
ಬಾಲಯ್ಯ ಸಿನಿಮಾ ಹೀಗೆ ಇರುತ್ತದೆ ಎಂದು ಹೋಗುವವರಿಗೆ 'ಡಾಕು ಮಹಾರಾಜ್' ಇಷ್ಟವಾಗಬಹುದು. ಅದನ್ನು ಬಿಟ್ಟು ಹೊಸಬಗೆಯ ಸಿನಿಮಾ ಬಯಸಿದರೆ ನಿರಾಸೆ ಕಟ್ಟಿಟ್ಟ ಬುತ್ತಿ. ತೆಲುಗು ಪ್ರೇಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿರುವ ಆಕ್ಷನ್ ಎಂಟರ್ಟೈನರ್. ಸಂಕ್ರಾತಿಗೆ ಸಿನಿಮಾ ಆಂಧ್ರ, ತೆಲಂಗಾಣದಲ್ಲಿ ಗೆಲ್ಲಬಹುದು.


Click it and Unblock the Notifications











