Dandupalyam 4 Review: ಹೊಸ ಮುಖ, ಹೆಚ್ಚಿದ ಕ್ರೌರ್ಯ-ಅಟ್ಟಹಾಸ
ಏಳೆಂಟು ಜನರ ಗುಂಪು....ಕೆಲಸ ಕೇಳುವ ಅಥವಾ ಕುಡಿಯಲು ನೀರು ಕೇಳುವ ನೆಪದಲ್ಲಿ ಒಂಟಿ ಹೆಂಗಸರು ಇರುವ ಮನೆಗಳಿಗೆ ಬರ್ತಾರೆ. ಯಾರೂ ಇಲ್ಲದ ಸಮಯ ನೋಡಿ ಮನೆಗೆ ನುಗ್ಗಿ ಆಸ್ತಿ-ಪಾಸ್ತಿಯನ್ನ ದೋಚಿಕೊಂಡು, ಆ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿ ಪರಾರಿ ಆಗ್ತಾರೆ.
ದಂಡುಪಾಳ್ಯ ಹೆಸರಿನಲ್ಲಿ ಈ ಹಿಂದೆ ಬಂದಿದ್ದ ಮೂರು ಚಿತ್ರಗಳಲ್ಲಿ ಇದನ್ನು ನೋಡಿದ್ದೇವೆ. ಆ ಚಿತ್ರಗಳ ಮುಂದುವರಿದ ಭಾಗವೇ ದಂಡುಪಾಳ್ಯಂ 4.

ಕೊಲೆ, ಅತ್ಯಾಚಾರ, ದರೋಡೆ ಆರೋಪವೊತ್ತು ಜೈಲು ಸೇರಿರುವ ದಂಡುಪಾಳ್ಯ ಗ್ಯಾಂಗ್ ಜೊತೆಯಲ್ಲಿದ್ದು, ತಪ್ಪಿಸಿಕೊಂಡಿದ್ದವರ ಕಥೆ ಇದು. ಜೈಲು ಶಿಕ್ಷೆಗೆ ಒಳಗಾಗಿರುವ ಸ್ನೇಹಿತರನ್ನ ಬಿಡುಗಡೆಗೊಳಿಸಬೇಕು, ಕಾಪಾಡಬೇಕು ಎಂಬ ಉದ್ದೇಶದಿಂದ ರಾಜಕಾರಣಿಗಳು, ಕೆಲವು ಗಣ್ಯ ವ್ಯಕ್ತಿಗಳ ಮೊರೆ ಹೋಗ್ತಾರೆ.
ಆ ವ್ಯಕ್ತಿಗಳ ಅನುಕೂಲಕ್ಕೆ ಈ ದಂಡುಪಾಳ್ಯ ಗ್ಯಾಂಗ್ ಜನರನ್ನು ಬಳಸಿಕೊಳ್ಳಲಾಗುತ್ತೆ. ಕೆಲವರನ್ನ ಟಾರ್ಗೆಟ್ ಮಾಡಿ ಕೊಲೆ ಮಾಡಿಸಲಾಗುತ್ತೆ. ಪೊಲೀಸರಿಂದ ತಲೆ ಮರೆಸಿಕೊಳ್ಳಲು, ಊರು ಬಿಟ್ಟು ಊರಿಗೆ ಹೋಗುವ ಇವರು, ದುಡ್ಡಿಗಾಗಿ ಸಿಕ್ಕ ಸಿಕ್ಕ ಅಮಾಯಕ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ, ಕೊಲೆ ಮಾಡ್ತಾರೆ.
ಇಡೀ ಚಿತ್ರದಲ್ಲಿ ದಂಡುಪಾಳ್ಯಂ ಗ್ಯಾಂಗ್ ನ ಅಟ್ಟಹಾಸವನ್ನೇ ಮುಂದುವರಿಸಿರುವ ಚಿತ್ರತಂಡ, ಅತ್ಯಾಚಾರ, ಕೊಲೆಗಳನ್ನ ಹೆಚ್ಚು ಕೇಂದ್ರವಾಗಿಟ್ಟುಕೊಂಡು ಅಂತಿಮವಾಗಿ ಸಮಾಜಕ್ಕೆ ಸಂದೇಶ ನೀಡುವ ಪ್ರಯತ್ನ ಮಾಡಿದೆ. ಪ್ರತಿಯೊಂದು ಕ್ರೈಂ ಆದಾಗಲೂ ಪೊಲೀಸರು ಬರಲು ಸಾಧ್ಯವಿಲ್ಲ, ಜನರು ಎಚ್ಚರಿಕೆಯಿಂದ ಇರಬೇಕು ಎನ್ನುವುದೇ ಕ್ಲೈಮ್ಯಾಕ್ಸ್.

ಇದೇ ಮೊದಲ ಬಾರಿಗೆ ಇಂತಹದೊಂದು ಪಾತ್ರ ಮಾಡಿರುವ ಸುಮನ್ ರಂಗನಾಥ್, ಅಭಿನಯದಲ್ಲಿ 'ರಾ' ಎನಿಸಿಕೊಂಡಿದ್ದಾರೆ. ಈ ಹಿಂದೆ ಪೂಜಾ ಗಾಂಧಿ ಮಾಡಿದಷ್ಟೇ ಮೋಡಿ ಈ ಚಿತ್ರದಲ್ಲಿ ಸುಮನ್ ಅವರಿಂದಲೂ ಆಗಿದೆ. ಪೊಲೀಸ್ ಆಫೀಸರ್ ಆಗಿ ನಟಿಸಿರುವ ನಿರ್ಮಾಪಕ ವೆಂಕಟ್ ಚಿತ್ರದ ಕೊನೆಗೆ 'ಹೀರೋ' ಆಗಿ ನಿಲ್ಲುತ್ತಾರೆ.
ದಂಡುಪಾಳ್ಯಂ ಅಟ್ಟಹಾಸವನ್ನ ಬಹಳ ನೈಜವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರ ಕೆಲಸ ಮೆಚ್ಚಬೇಕಾಗಿದೆ. ಇಡೀ ಚಿತ್ರಕ್ಕೆ ಆನಂದ್ ರಾಜ್ ವಿಕ್ರಂ ಅವರ ಹಿನ್ನಲೆ ಸಂಗೀತ ದೊಡ್ಡ ಶಕ್ತಿ. ಅದರಿಂದಲೇ ಹೆಚ್ಚು ಪರಿಣಾಮಕಾರಿಯಾಗಿದೆ. ಅದಕ್ಕೆ ತಕ್ಕಂತೆ ಆರ್ ಗಿರಿ ಬೆನಕ ರಾಜು ಛಾಯಾಗ್ರಹಣ ಸಾಥ್ ಕೊಟ್ಟಿದೆ.

ಇನ್ನುಳಿದಂತೆ ಐಟಂ ಹಾಡೊಂದರಲ್ಲಿ ಮುಮೈತ್ ಖಾನ್ ಜೋಶ್ ಕಿಕ್ ಕೊಡ್ತಾರೆ. ಸುಮನ್ ರಂಗನಾಥ್ ಗ್ಯಾಂಗ್ ನಲ್ಲಿ ಕಾಣಿಸಿಕೊಂಡ ಎಲ್ಲ ಕಲಾವಿದರು ಅಭಿನಯದಲ್ಲಿ ರಾಕ್ಷಸರಂತೆ ನಟಿಸಿದ್ದಾರೆ. ದಂಡುಪಾಳ್ಯ ಸರಣಿ ಚಿತ್ರಗಳಂತೆ ಈ ಚಿತ್ರವೂ ಮೂಡಿಬಂದಿದೆ. ಈ ಹಿಂದಿನ ಸಿನಿಮಾಗಳನ್ನ ಎಂಜಾಯ್ ಮಾಡಿದವರಿಗೆ ಈ ಸಿನಿಮಾನೂ ಇಷ್ಟ ಆಗುತ್ತೆ.


Click it and Unblock the Notifications











