Don't Miss!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- News Rameshwar Cafe: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Roberrt Movie Review: ಹಗ್ಗದ ಮೇಲಿನ ನಡಿಗೆಯಲ್ಲಿ ಗೆದ್ದ ದರ್ಶನ್-ತರುಣ್ ಸುಧೀರ್
ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅಂಥ ಮಾಸ್ ಇಮೇಜಿನ ನಟನಿಗೆ ಸಿನಿಮಾ ಕಟ್ಟುವುದು ನಿರ್ದೇಶಕನೊಬ್ಬನಿಗೆ ಸವಾಲು ಹೌದು ಆತನ ಸೃಜನಶೀಲತೆಗೆ ಮಿತಿಯೂ ಹೌದು. ಕತೆಯನ್ನು ತುಸು ಹಿಂದೆ ತಳ್ಳಿಯಾದರೂ ಸರಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ದರ್ಶನ್ ಅವರನ್ನು ತೆರೆಯ ಮೇಲೆ ತೋರಿಸಬೇಕಾದ ಒತ್ತಡವಿರುತ್ತದೆ. ದರ್ಶನ್ ಸಿನಿಮಾ ಮಾಡುವುದು ನಿರ್ದೇಶಕನಿಗೆ ಹಗ್ಗದ ಮೇಲಿನ ನಡಿಗೆ. ಇದನ್ನು 'ರಾಬರ್ಟ್' ಸಿನಿಮಾದಲ್ಲಿ ಚೆನ್ನಾಗಿಯೇ ನಿಭಾಯಿಸಿದ್ದಾರೆ ನಿರ್ದೇಶಕ ತರುಣ್ ಸುಧೀರ್.
Recommended Video
ದರ್ಶನ್ ಅವರ ಎಂಟ್ರಿ ಸೀನ್ನಲ್ಲಿಯೇ ಗೋತ್ತಾಗಿಬಿಡುತ್ತದೆ ಇದು ಪಕ್ಕಾ ಮಾಸ್ ಸಿನಿಮಾ, ಆದರೂ ಇದಕ್ಕೊಂದು ಬೇರೆಯದೇ ಮಾದರಿ 'ಟ್ರೀಟ್ಮೆಂಟ್' ಕೊಡುವ ಪ್ರಯತ್ನ ಮಾಡಲಾಗಿದೆ ಎಂದು. ಕತೆ ಆರಂಭವಾಗುವುದು ಉತ್ತರ ಪ್ರದೇಶದ ಲಕ್ನೋದಲ್ಲಿ. ರಾಘವ ಪಾತ್ರಧಾರಿ ದರ್ಶನ್ ಅಡುಗೆ ಭಟ್ಟ. ಯಾರ ತಂಟೆಗೂ ಹೋಗದ, ಸಿಟ್ಟು ಮಾಡಿಕೊಳ್ಳದ. ಮುದ್ದಾದ ಮಗನಿಗೂ ಅಹಿಂಸೆ ಹೇಳಿಕೊಟ್ಟು ಸಾತ್ವಿಕವಾಗಿ ಬದುಕುವ ಪ್ರಯತ್ನದಲ್ಲಿರುವ ಸಾಮಾನ್ಯ ಪ್ರಜೆ.
ಆದರೆ ಆತನಿಗೊಂದು ಕರಾಳ ಹಿನ್ನೆಲೆ ಇದೆ. ಆತ ಈಗ ಸಾತ್ವಿಕನಾಗಿ ಬದುಕುತ್ತಿರುವುದಕ್ಕೆ ಘನ ಕಾರಣವೊಂದು ಇದೆ. ಆ ಕಾರಣವೇನು. ಆತನಿಗಿರುವ ಕರಾಳ ಹಿನ್ನೆಲೆ ಏನು? ಆ ಮಗು ಯಾರದ್ದು? ಎಂಬುದೆಲ್ಲವನ್ನೂ ತಿಳಿದುಕೊಳ್ಳಲು ಸಿನಿಮಾ ನೋಡಬೇಕು.
ಭಾವನಾತ್ಮಕ ದೃಶ್ಯಗಳಲ್ಲಿ ದರ್ಶನ್ಗೆ ಹೆಚ್ಚು ಅಂಕ
ಮೊದಲಾರ್ಧದಲ್ಲಿ ದುಷ್ಟರನ್ನು ಕಂಡರೆ ದಮ್ಮಯ್ಯ ಗುಡ್ಡೆ ಹಾಕುವ ದರ್ಶನ್ ಎರಡನೇ ಭಾಗದಲ್ಲಿ ದುಷ್ಟರ ತಲೆಗಳನ್ನು ಚಚ್ಚಿ ಚಂಡಾಡುತ್ತಾರೆ. ಎರಡು ಪಾತ್ರದಲ್ಲೂ ದರ್ಶನ್ ಚೆನ್ನಾಗಿ ಅಭಿನಿಯಿಸಿದ್ದಾರೆ. ಹೆಗಲು ಕುಣಿಸುತ್ತಾ ಸ್ಟೈಲ್ ಆಗಿ ನಡೆಯುವ, ದುಷ್ಟರಿಗೆ ಕಿರುನಗೆಯಲ್ಲೇ ಪಂಚಿಂಗ್ ಡೈಲಾಗ್ ಹೊಡೆವ ದರ್ಶನ್ಗಿಂತಲೂ ಭಾವನಾತ್ಮಕ ದೃಶ್ಯಗಳಲ್ಲಿ ದರ್ಶನ್ ಅಭಿನಯಕ್ಕೆ ಹೆಚ್ಚು ಅಂಕ ಕೊಡಬಹುದು.
'ಜನಪ್ರಿಯ ಮಾದರಿ'ಯ ಕತೆ
ಸಿನಿಮಾ ನೋಡುವಾಗ 'ಭಾಷಾ', 'ಇಂದ್ರ', 'ಸಿಂಹಾದ್ರಿ' ಇದೇ ಕೆಲವು 'ಫ್ಲಾಷ್ಬ್ಯಾಕ್' ಮಾದರಿ ತಂತ್ರ ಅನುಸರಿಸಿ ಗೆದ್ದಿರುವ ಸಿನಿಮಾಗಳು ನೆನಪಾಗಬಹುದು. ಈಗಾಗಲೇ ಹಲವು ಸಿನಿಮಾಗಳಲ್ಲಿ ಬಳಕೆ ಆಗಿರುವ 'ಜನಪ್ರಿಯ ಮಾದರಿ' ಕತೆಯನ್ನು ಪ್ರೇಕ್ಷಕರಿಗೆ ಬೋರಾಗದಂತೆ ಹೇಳುವುದು ಸುಲಭದ ಕಾರ್ಯವೇನಲ್ಲ. ತರುಣ್ ಸುಧೀರ್ ಅದನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. 'ರಾಬರ್ಟ್' ಸಿನಿಮಾ ಎಲ್ಲೂ ಬೋರ್ ಎನಿಸುವುದಿಲ್ಲ.
ಗಟ್ಟಿ ಪಾತ್ರದಲ್ಲಿ ಶಿವರಾಜ್ ಕಮಾಲ್
ದರ್ಶನ್ ಮಿಕ್ಕಂತೆ ಉಳಿದ ಪಾತ್ರಗಳಿಗೆ ಬರುವುದಾದರೆ ಶಿವರಾಜ್ ಕೆ.ಆರ್.ಪೇಟೆಗೆ ಸಿನಿಮಾದಲ್ಲಿ ಪ್ರಮುಖ ಪಾತ್ರ ಇದೆ. ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ವಿನೋದ್ ಪ್ರಭಾಕರ್ ಸಹ ನೆನಪುಳಿಯುತ್ತಾರೆ. ಕನ್ನಡದಲ್ಲಿ ಮೊದಲ ಸಿನಿಮಾದಲ್ಲಿ ನಟಿಸಿರುವ ನಾಯಕಿ ಆಶಾ ಭಟ್ ಅವರ ನಟನೆಯಲ್ಲಿ ಆತ್ಮವಿಶ್ವಾಸವಿದೆ. ಅವರ ಮೇಲೆ ನಿರೀಕ್ಷೆ ಇಡಬಹುದು. ಜಗಪತಿಬಾಬು ಅವರ ಉರಿವ ಕಣ್ಣುಗಳಿಗೆ ಇಲ್ಲಿ ಹೆಚ್ಚು ಕೆಲಸ ನೀಡಲಾಗಿಲ್ಲ. ರವಿಶಂಕರ್ ಅವರು ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ಚಿಕ್ಕಣ್ಣ, ಧರ್ಮಣ್ಣ ಇನ್ನೂ ಕೆಲವು ನಟರು ಹೀಗೆ ಬಂದು ಹಾಗೆ ಹೋಗಿಬಿಡುತ್ತಾರೆ.
ಫೈಟ್ ದೃಶ್ಯಗಳು ಅದ್ಭುತವಾಗಿವೆ
ನಿರ್ಮಾಪಕರು ಸುರಿದ ಹಣದ ಪ್ರತಿಫಲನ ಸಿನಿಮಾದಲ್ಲಿ ಕಾಣುತ್ತಿದೆ. ಎಲ್ಲ ದೃಶ್ಯಗಳೂ ವೈಭವದಿಂದಿರುವಂತೆ ನೋಡಿಕೊಳ್ಳಲಾಗಿದೆ. ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಹಿನ್ನೆಲೆ ಸಂಗೀತವೂ ಚೆನ್ನಾಗಿದೆ. ಅನ್ಬು-ಅರಿವು, ರಾಮ್-ಲಕ್ಷ್ಮಣ್ ನಿರ್ದೇಶಿಸಿರುವ ಫೈಟ್ ದೃಶ್ಯಗಳಂತೂ ಅದ್ಭುತ. ಒಟ್ಟಾರೆಯಾಗಿ 'ರಾಬರ್ಟ್' ಸಿನಿಮಾವನ್ನು ಕೇವಲ ದರ್ಶನ್ ಅಭಿಮಾನಿಗಳಿಗೆ ಮಾತ್ರವೇ ಅಲ್ಲದೆ ಇತರೆ ಪ್ರೇಕ್ಷಕರಿಗೂ ದಾಟಿಸುವ ಪ್ರಯತ್ನವನ್ನು ತರುಣ್ ಸುಧೀರ್ ಮಾಡಿದ್ದಾರೆ. ಅದರಲ್ಲಿ ತುಸು ಯಶಸ್ವಿಯೂ ಆಗಿದ್ದಾರೆ.