Don't Miss!
- News Lok Sabha Election 2024: ಟಿಕೆಟ್ ಹಂಚಿಕೆಯ ಬಳಿಕ ಬಿಜೆಪಿಯ ಮುಂದೆ ಹೊಸ-ಹೊಸ ಸವಾಲುಗಳು
- Automobiles ಎಲೆಕ್ಟ್ರಿಕ್ ಲೋಕಕ್ಕೆ ಎಸ್ಯುವಿ ದೈತ್ಯನ ಎಂಟ್ರಿ: ಇನ್ನು ಉಳಿದ ಕಾರುಗಳನ್ನು ದೇವರೇ ಕಾಪಾಡಬೇಕು!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Kranti Movie Review: 'ಕ್ರಾಂತಿ': ಶಿಕ್ಷಣ ಮಾಫಿಯಾ ವಿರುದ್ಧ 'ಹೀರೋಗಿರಿ'
ಔಟ್ ಆಂಡ್ ಔಟ್ ಕಮರ್ಶಿಯಲ್ ಮಸಾಲಾ ಸಿನಿಮಾಗಳು ಗಂಭೀರ ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲೇ ಬಾರದು, ಮಸಾಲಾ ಸಿನಿಮಾಗಳ ಮಿತಿಯ ನಡುವೆ, ಮೂಲ ವಿಷಯಕ್ಕೆ ಅವು ನ್ಯಾಯ ಸಲ್ಲಿಸಲಾರವು ಎಂಬುದು ಸಿನಿಪಂಡಿತರ ವಾದ. ಬಹುಮಟ್ಟಿಗೆ ಅದು ನಿಜವೂ ಹೌದು.
ಹಾಗಿದ್ದರೂ ಸಹ ಬಹುತೇಕ ಸ್ಟಾರ್ ನಟರು ಸಂದೇಶವೊಂದನ್ನು ಹೆಗಲ ಮೇಲೆ ಎತ್ತಿಕೊಂಡೇ ತೆರೆಯ ಮೇಲೆ ಮಾಸ್ ಎಂಟ್ರಿ ಕೊಡುತ್ತಾರೆ. ಇಂಥಹುದೇ ಒಂದು ಸಾಹಸಕ್ಕೆ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಕೈ ಹಾಕಿದೆ.
ಅನಂತನಾಗ್ ಅವರ 'ಮೈಸೂರು ಮಸಾಲಾ' ಚಿತ್ರದ ಪೋಸ್ಟರ್ ಬಿಡುಗಡೆ
ಹಣಬಲ, ಬಾಹುಬಲವುಳ್ಳ ಎನ್ಆರ್ಐ ವ್ಯಕ್ತಿಯೊಬ್ಬ ಖಾಸಗಿ ಶಾಲೆಗಳ ಮೇಲೆ ಸಮರ ಸಾರುವ, ಹಾಗೂ ಸರ್ಕಾರವನ್ನು ಸರ್ಕಾರಿ ಶಾಲೆಗಳ ಪರವಾಗುವಂತೆ ಮಾಡುವ ಕತೆಯನ್ನು ಹೊಂದಿದೆ 'ಕ್ರಾಂತಿ' ಸಿನಿಮಾ.
ಸಿನಿಮಾದ ಒನ್ಲೈನರ್ ಕತೆ ಏನು?
ತಾನು ಕಲಿತ ಶಾಲೆಯ ಶತಮಾನೋತ್ಸವಕ್ಕೆ ಬರುವ ನಾಯಕ ಕ್ರಾಂತಿ ರಾಯಣ್ಣ, ತನ್ನ ಶಾಲೆಯ ಮೇಲೆ ಕಣ್ಣು ಹಾಕಿರುವ ಒಬ್ಬ ಖಾಸಗಿ ಶಾಲಾ ಸಮೂಹ ಸಂಸ್ಥೆಯೊಂದರ ಮಾಲೀಕನ ವಿರುದ್ಧ ಭುಜಬಲ ಬಳಸಿ ಹೋರಾಡುತ್ತಾನೆ. ಆ ಬಳಿಕ ಅವನ ಇಡೀ ಸಾಮ್ರಾಜ್ಯವನ್ನು ಮಣ್ಣು ಮುಕ್ಕಿಸಲು ಹಣ ಬಲ ಬಳಸುತ್ತಾನೆ, ಸರ್ಕಾರವನ್ನು ಸರ್ಕಾರಿ ಶಾಲೆಗಳ ಪರವಾಗಿ ಚಿಂತಿಸುವಂತೆ ಮಾಡಲು ಬುದ್ಧಿ, ವಾಕ್ ಬಲದ ಪ್ರಯೋಗ ಮಾಡಿ ಕಾರ್ಯದಲ್ಲಿ ಸಫಲನಾಗುತ್ತಾನೆ.
ಸಿನಿಮಾದ ಆರಂಭ ಹೇಗಿದೆ?
ಸಿನಿಮಾದ ಆರಂಭ ತುಸು ಕುತೂಹಲ ಹುಟ್ಟಿಸುತ್ತದೆ. ರಾಜ್ಯದಲ್ಲಿ ಮುಚ್ಚಿದ ಸರ್ಕಾರಿ ಶಾಲೆಗಳ ಲೆಕ್ಕ, ಖಾಸಗಿ ಶಾಲೆಗಳಿಂದ ದೊಡ್ಡ ಸಂಸ್ಥೆಗಳಿಗೆ, ಶಾಲಾ ಮಾಲೀಕರಿಗೆ ಆಗುತ್ತಿರುವ ಸಾವಿರಾರು ಕೋಟಿಗಳ ಲಾಭ, ಸರ್ಕಾರಿ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆ ಇನ್ನಿತರ ವಿಷಯಗಳ ಬಗ್ಗೆ ಕೆಲವು ಅಂಕಿ-ಸಂಖ್ಯೆಗಳನ್ನು ಒದಗಿಸಲಾಗಿದೆ. ಆದರೆ ನಾಯಕನ ಎಂಟ್ರಿ ಆಗುತ್ತಿದ್ದಂತೆ ವಿಷಯಾಂತರ ಆಗಿಬಿಡುತ್ತದೆ. ನಾಯಕ ಭಾರತಕ್ಕೆ ಬಂದ ನಂತರದ ಕೆಲವು ದೃಶ್ಯಗಳು, ವಿಶೇಷವಾಗಿ ರೈಲಿನಲ್ಲಿ ನಡೆಯುವ ದೃಶ್ಯಗಳು ಪ್ರೇಕ್ಷಕನ ತಾಳ್ಮೆ ಪರೀಕ್ಷಿಸುತ್ತವೆ. ಹಾಸ್ಯಕ್ಕೆಂದೇ ಕಟ್ಟಲಾಗಿರುವ ದೃಶ್ಯಗಳು ಸಹ ಆಕಳಿಕೆ ತರಿಸುವಷ್ಟು ಪೇಲವವಾಗಿವೆ.
ಉದ್ದೇಶ ಒಳ್ಳೆಯದ್ದಿದೆ, ಆದರೆ...
ಸರ್ಕಾರಿ ಶಾಲೆಗಳ ಪರಿಸ್ಥಿತಿ ಸುಧಾರಣೆ, ಸರ್ಕಾರಿ ಶಾಲೆಗಳು ಮುಚ್ಚುವುದನ್ನು ತಡೆಯುವುದು, ಎಲ್ಲರಿಗೂ ಸಮಾನ ಶಿಕ್ಷಣ, ಖಾಸಗಿ ಶಾಲೆಗಳ ಹಣಬಾಕತನ, ಸರ್ಕಾರಿ ಶಾಲಾ ಶಿಕ್ಷಕರ ಬಗ್ಗೆ ಅನುಕಂಪ ಎಲ್ಲವೂ ನಿರ್ದೇಶಕ ಹರಿಕೃಷ್ಣ ಅವರಿಗಿದೆ. ಆ ಮಟ್ಟಿಗೆ 'ಸಿನಿಮಾದ ಹೃದಯ ಸರಿಯಾದ ಜಾಗದಲ್ಲಿಯೇ ಇದೆ' ಆದರೆ ತಮ್ಮ ಕಾಳಜಿಗಳನ್ನೆಲ್ಲ ಒಟ್ಟುಮಾಡಿ ಕತೆಯ ಮೂಲಕ ಶಕ್ತವಾದ ಸಿನಿಮಾ ಕಟ್ಟುವಲ್ಲಿ ನಿರ್ದೇಶಕರು ಎಡವಿದ್ದಾರೆ. ಹಾಗಾಗಿಯೇ ಸಿನಿಮಾದ ಕೆಲವು ಭಾಗಗಳಷ್ಟೆ ಹಿಡಿಸುತ್ತವೆ. ಇಡೀ ಸಿನಿಮಾಕ್ಕೆ ಇದೇ ಮಾತನ್ನು ಹೇಳುವುದು ಕಷ್ಟ.
ನಟರ ನಟನೆ ಹೇಗಿದೆ?
ದರ್ಶನ್ ಎಂದಿನಂತೆ ಮಾಸ್ ಇಮೇಜಿನಿಂದ ಗಮನ ಸೆಳೆಯುತ್ತಾರೆ. ಅವರ ನಟನೆಗೆ ಸವಾಲಾಗುವಂಥಹ ದೃಶ್ಯಗಳು ಸಿನಿಮಾದಲ್ಲಿಲ್ಲ. ಫೈಟ್ ದೃಶ್ಯಗಳು ಚೆನ್ನಾಗಿವೆಯಾದರೂ ತೀರ ಭಿನ್ನ ಅಥವಾ ಎಂಜಾಯೆಬಲ್ ಎನಿಸುವುದಿಲ್ಲ. ನಾಯಕಿ ರಚಿತಾ ರಾಮ್ ಹಾಡಿಗಷ್ಟೆ ಸೀಮಿತವಾಗಿದ್ದಾರೆ. ರವಿಚಂದ್ರನ್, ಬಿ ಸುರೇಶ್, ಅಚ್ಯುತ್ ಕುಮಾರ್, ಉಮಾಶ್ರೀ, ಸಾಧುಕೋಕಿಲ, ಮುಖ್ಯಮಂತ್ರಿ ಚಂದ್ರು, ಸಂಯುಕ್ತ ಹೊರನಾಡು, ಧರ್ಮಣ್ಣ, ಹೀಗೆ ದೊಡ್ಡ ಪೋಷಕ ಪಾತ್ರವರ್ಗವಿದೆಯಾದರೂ ಬಿ ಸುರೇಶ್, ರವಿಚಂದ್ರನ್ ಹೊರತಾಗಿ ಇನ್ಯಾರಿಗೂ ಹೆಚ್ಚೇನೂ ಕೆಲಸವಿಲ್ಲ. ಇರುವ ಮೂವರು ಮುಖ್ಯ ವಿಲನ್ಗಳಲ್ಲಿ ರವಿಶಂಕರ್ ತುಸು ಹೆಚ್ಚು ಗಮನ ಸೆಳೆಯುತ್ತಾರೆ. ಜನರನ್ನು ತುಸು ನಗಿಸುವುದು ಸಹ ರವಿಶಂಕರ್ ಅವರೇ, ಹಾಸ್ಯನಟರಲ್ಲ! ಸಂಸದೆ ಸುಮಲತಾ ಅಂಬರೀಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗಮನ ಸೆಳೆವ ಕೆಲವು ಸಂಭಾಷಣೆ
ಸಿನಿಮಾದ ಮೂರು ಹಾಡುಗಳು ಗುನುಗುವಂತಿವೆ. ಕ್ಯಾಮೆರಾ, ಎಡಿಟಿಂಗ್ ಬಗ್ಗೆ ವಿಶೇಷ ಪ್ರಸ್ತಾಪದ ಅಗತ್ಯವೇನೂ ಇಲ್ಲ. ಆದರೆ ಕೆಲವು ಸಂಭಾಷಣೆಗಳು ಅಲ್ಲಲ್ಲಿ ಮಿಂಚುತ್ತವೆ. 'ಐದು ಕಿ.ಮೀಗೆ ಮೂರು ಬಾರ್ ತೆರೆಯಲು ಲೈಸೆನ್ಸ್ ಕೊಡುವ ಸರ್ಕಾರ, ಐದು ಕಿ.ಮೀ ಒಳಗೆ ಒಂದೇ ಶಾಲೆ ಇರಬೇಕು ಎನ್ನುತ್ತದೆ' ಎನ್ನುವ ಸಂಭಾಷಣೆ, ಶಿಕ್ಷಕರಾಗಲು ಯುವಕರು ಎದುರಿಸಬೇಕಾದ ಪರೀಕ್ಷೆಗಳ ಬಗ್ಗೆ ದರ್ಶನ್ ಹೇಳುವ ಡೈಲಾಗ್, ಅಚ್ಯುತ್ ಕುಮಾರ್ ಪಾತ್ರ ಶಿಕ್ಷಕರ ಪರಿಸ್ಥಿತಿಯ ಬಗ್ಗೆ ಹೇಳುವ ಸಂಭಾಷಣೆಗಳು ನಾಟುತ್ತವೆ. ಸರ್ಕಾರಿ ಶಾಲೆಗಳ ಬಗೆಗಿನ ಕೆಲ ಅಂಕಿ-ಅಂಶಗಳು ಆಸಕ್ತಿಕರವಾಗಿವೆ. ಒಟ್ಟಾರೆಯಾಗಿ 'ಕ್ರಾಂತಿ' ಸಿನಿಮಾದ ಉದ್ದೇಶ ಒಳ್ಳೆಯದಾಗಿದೆ ಆದರೆ ಅದನ್ನು ಒಳ್ಳೆಯ ಸಿನಿಮಾ ಆಗಿಸಿ ತೆರೆಯ ಮೇಲೆ ತರುವಲ್ಲಿ ಪೂರ್ಣವಾಗಿ ಯಶಸ್ವಿಯಾಗಿಲ್ಲ.