Don't Miss!
- News 'ಚೆಂಬು' ಜಾಹೀರಾತಿನ ಮೂಲಕ ಮೋದಿ ಸರ್ಕಾರದ ವಿರುದ್ದ ನೇರ ದಾಳಿಗಿಳಿದ ಕಾಂಗ್ರೆಸ್
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ'
'ಜೀವ ಕೊಡೋ ಕೆಲಸ ದೇವರದ್ದು. ಅದನ್ನ ಕಾಯೋ ಕೆಲಸ ನಮ್ದು' - ಹೀಗಂತ ಬರೀ ಬಾಯ್ಮತ್ತಲ್ಲಿ ಹೇಳದೆ, ಅಕ್ಷರಶಃ ಜನಸಾಮಾನ್ಯರ ರಕ್ಷಣೆಗೆ ನಿಂತ ದಕ್ಷ ಪೊಲೀಸ್ ಅಧಿಕಾರಿ ವೃತ್ತಾಂತ 'Mr.ಐರಾವತ'.
'ರಥ ಬಂದ್ರೆ ಗಾಳಿ ಬೀಸುತ್ತೆ..ಐರಾವತ ಬಂದ್ರೆ ಬಿರುಗಾಳಿ ಬೀಸುತ್ತೆ' - ಇಂತಹ ಪಂಚಿಂಗ್ ಡೈಲಾಗ್ಸ್ ಅಬ್ಬರ ಇಡೀ ಸಿನಿಮಾದಲ್ಲಿದೆ. ಬರೋಬ್ಬರಿ 11 ತಿಂಗಳ ಕಾಲ ಉಪವಾಸ ಇದ್ದ ದರ್ಶನ್ ಅಭಿಮಾನಿಗಳಿಗೆ ನಿರ್ದೇಶಕ ಎ.ಪಿ.ಅರ್ಜುನ್ 'Mr.ಐರಾವತ' ಮೂಲಕ ಚಿಂದಿ ಚಿತ್ರಾನ್ನ ಬಡಿಸಿದ್ದಾರೆ. [ಟ್ವಿಟ್ಟರಲ್ಲಿ Mr ಐರಾವತ, ಅರ್ಜುನ ಅಂಬಾರಿ ಉತ್ಸವ]
'Mr.ಐರಾವತ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ......
ಚಿತ್ರ - Mr.ಐರಾವತ
ನಿರ್ಮಾಣ - ಸಂದೇಶ್ ನಾಗರಾಜ್
ಕಥೆ-ಚಿತ್ರಕಥೆ-ನಿರ್ದೇಶನ - ಎ.ಪಿ.ಅರ್ಜುನ್
ಸಂಗೀತ - ವಿ.ಹರಿಕೃಷ್ಣ
ಛಾಯಾಗ್ರಹಣ - ಶೇಖರ್ ಚಂದ್ರ
ಸಂಕಲನ - ದೀಪು.ಎಸ್.ಕುಮಾರ್
ತಾರಾಗಣ - ದರ್ಶನ್, ಊರ್ವಶಿ ರೌಟೆಲಾ, ಪ್ರಕಾಶ್ ರಾಜ್, ಅನಂತ್ ನಾಗ್, ಸಿತಾರಾ, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಚಿಕ್ಕಣ್ಣ ಮತ್ತು ಇತರರು
ಬಿಡುಗಡೆ - ಅಕ್ಟೋಬರ್ 1, 2015
ಐ.ಪಿ.ಎಸ್ ಅಧಿಕಾರಿ 'Mr.ಐರಾವತ' ಸುತ್ತ ಸುತ್ತುವ ಕಥೆ
ಸಮಾಜದಲ್ಲಿರುವ ಅವ್ಯವಸ್ಥೆಯನ್ನ ಬದಲಾಯಿಸುವ, ಅನ್ಯಾಯ ಎಲ್ಲೇ ನಡೆದರೂ ತಕ್ಷಣ ಹಾಜರಾಗುವ, ಜನಸಾಮಾನ್ಯರ ಪಾಲಿಗೆ ಆಪತ್ಬಾಂಧವನಾಗಿರುವ, ರೌಡಿಗಳನ್ನ ಬೆಂಡೆತ್ತಿ ಬ್ರೇಕ್ ಹಾಕುವ, ಖೇಡಿಗಳ ರುಂಡ ಚೆಂಡಾಡುವ, ಹೆಣ್ಮಕ್ಕಳ ಪಾಲಿಗೆ ಪ್ರೀತಿಯ ಅಣ್ಣನಾಗಿರುವ ದಕ್ಷ ಐ.ಪಿ.ಎಸ್ ಅಧಿಕಾರಿ ಕಥೆ 'Mr.ಐರಾವತ'.
ಇಷ್ಟೆಲ್ಲಾ ಬಿಲ್ಡಪ್ ಕೊಟ್ಮೇಲೆ ಕಥೆ ಹೇಳ್ಬೇಕಾ.?
'Mr.ಐರಾವತ'ನ ಬಗ್ಗೆ ಇಷ್ಟೆಲ್ಲಾ ಬಿಲ್ಡಪ್ ಕೊಟ್ಮೇಲೆ ಸಿನಿಮಾದಲ್ಲೇನಿದೆ ಅಂತ ನೀವು ಅಂದುಕೊಂಡ್ರೆ, ಒಂದು ಮೇಜರ್ ಟ್ವಿಸ್ಟ್ ಇದೆ. ಇಡೀ ರಾಜ್ಯ ಹಾಡಿ ಹೊಗಳುವ 'Mr.ಐರಾವತ' ರಿಯಲ್ ಪೊಲೀಸ್ ಅಧಿಕಾರಿಯೇ ಅಲ್ಲ. ಹಾಗಾದ್ರೆ, ಯಾರೀ ಐರಾವತ? ಐ.ಪಿ.ಎಸ್ ಅಧಿಕಾರಿ ಅಂತ ಆತ ಸುಳ್ಳು ಹೇಳೋದ್ಯಾಕೆ. ಇದರಲ್ಲಿ ಪ್ರಕಾಶ್ ರಾಜ್ ಪಾತ್ರವೇನು ಅನ್ನೋದೇ ಚಿತ್ರದ ಸಸ್ಪೆನ್ಸ್.
ಚಾಲೆಂಜಿಂಗ್ ಸ್ಟಾರ್ ಗೆ ಜೈ ಜೈ..
ಐ.ಪಿ.ಎಸ್ ಆಫೀಸರ್ ಐರಾವತ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೂಪರ್. ಖಾಕಿ ಖದರ್ ನಲ್ಲಿ ದರ್ಶನ್ ರವರದ್ದು ಖಡಕ್ ಅಭಿನಯ. ಉದ್ದುದ್ದ ಡೈಲಾಗ್ ಗಳನ್ನ ಪಟಪಟ ಅಂತ ಒಂದೇ ಉಸಿರಲ್ಲಿ ಹೇಳಿರುವ ದರ್ಶನ್, ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸುತ್ತಾರೆ. 'Mr.ಐರಾವತ'ಗಾಗಿ ಸಿಕ್ಸ್ ಪ್ಯಾಕ್ ಬಿಲ್ಡ್ ಮಾಡಿರುವ ದರ್ಶನ್ ತೆರೆಮೇಲೆ ಹಾಟ್ ಅಂಡ್ ಹ್ಯಾಂಡ್ಸಮ್.
ನಾಯಕಿ ಊರ್ವಶಿ ಆಕ್ಟಿಂಗ್ ಹೇಗಿದೆ?
ಆಟಕ್ಕುಂಟು ಲೆಕ್ಕವಿಲ್ಲದಂತಹ ಪಾತ್ರ ನಾಯಕಿ ಊರ್ವಶಿ ರೌಟೆಲಾರದ್ದು. ಅವರು ಇಲ್ಲದಿದ್ದರೂ ಕಥೆ ಸಾಗುತ್ತಿತ್ತು. ಹಾಡುಗಳಲ್ಲಿ ಮತ್ತು ಅವುಗಳ ಲೀಡ್ ಸನ್ನಿವೇಶಗಳಿಗೆ ಮಾತ್ರ ಊರ್ವಶಿ ಸೀಮಿತ. ಆದರೂ, ಕೊಟ್ಟಿರುವ ಪಾತ್ರವನ್ನ ಊರ್ವಶಿ ಚೆನ್ನಾಗಿ ನಿಭಾಯಿಸಿದ್ದಾರೆ.
ಪ್ರಕಾಶ್ ರಾಜ್ ಅಬ್ಬರ ಬೊಂಬಾಟ್
ಖೇಡಿ ಪಾತ್ರದಲ್ಲಿ ಮಿಂಚಿರುವ ಪ್ರಕಾಶ್ ರಾಜ್ ಅಭಿನಯದ ಬಗ್ಗೆ ಕಾಮೆಂಟ್ ಮಾಡುವ ಹಾಗಿಲ್ಲ. ಕೆಲ ಸನ್ನಿವೇಶಗಳಲ್ಲಿ ಪ್ರಕಾಶ್ ರಾಜ್ ಕಿಸಕ್ಕನೆ ನಗಿಸುತ್ತಾರೆ. ಅನಂತ್ ನಾಗ್ ಆಕ್ಟಿಂಗ್ ಎಂದಿನಂತೆ ಚೆನ್ನಾಗಿದೆ. ದೊಡ್ಡ ಗ್ಯಾಪ್ ನಂತರ ಕನ್ನಡ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿರುವ ನಟಿ ಸಿತಾರಾಗೆ ಡೈಲಾಗ್ಸ್ ಕಡಿಮೆ.
ಕಾಮಿಡಿ ಎಷ್ಟು ಬೇಕೋ ಅಷ್ಟೆ.!
'Mr.ಐರಾವತ' ಚಿತ್ರದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ ಮತ್ತು ಬುಲೆಟ್ ಪ್ರಕಾಶ್ ಇದ್ದಾರೆ. ಮೂವರು ಕಾಮಿಡಿ ಕಿಲಾಡಿಗಳಿದ್ದರೂ, ಸಿನಿಮಾದಲ್ಲಿ ಕಾಮಿಡಿ ಇಂಜೆಕ್ಷನ್ ಕೊಂಚ ಕಡಿಮೆ. ಅಲ್ಲಲ್ಲಿ ಮಾತ್ರ ಸಾಧು ಕೋಕಿಲ ನಗಿಸುತ್ತಾರೆ. ಒಂದೆರಡು ಸೀನ್ ಗಳಿಗೆ ಮಾತ್ರ ಚಿಕ್ಕಣ್ಣ ಹೀಗೆ ಬಂದು ಹಾಗೆ ಹೋಗುತ್ತಾರೆ.
ಸೆಕೆಂಡ್ ಹಾಫ್ ಸ್ಲೋ
ಫಸ್ಟ್ ಹಾಫ್ ನಲ್ಲಿ ಪೊಲೀಸ್ ಆಫೀಸರ್ ಐರಾವತನ ಕಾರ್ಯವೈಖರಿಯನ್ನ ತೆರೆಮೇಲೆ ಅಬ್ಬರದಿಂದ ತೋರಿಸಿರುವ ನಿರ್ದೇಶಕರು ಸೆಕೆಂಡ್ ಹಾಫ್ ನಲ್ಲಿ ಫ್ಲ್ಯಾಶ್ ಬ್ಯಾಕ್ ಗೆ ಕರೆದುಕೊಂಡು ಹೋಗ್ತಾರೆ. ಈ ಮಧ್ಯೆ ಅಂತಹ ಟ್ವಿಸ್ಟ್ ಇಲ್ಲದೆ ಇರುವುದರಿಂದ ಪ್ರೇಕ್ಷಕರಿಗೆ ಚ್ಯೂಯಿಂಗ್ ಗಮ್ ತಿಂದಂಥ ಅನುಭವ. ರಾತ್ರಿಯೆಲ್ಲಾ ನಿದ್ದೆಗೆಟ್ಟು ಟಿಕೆಟ್ ಖರೀದಿಸಿದವರಿಗೆ ಸೆಕೆಂಡ್ ಹಾಫ್ ನಲ್ಲಿ ಸುಖ ನಿದ್ದೆ.
ಪ್ರೇಕ್ಷಕರಿಗೆ ಬೇರೆ ಫ್ಲ್ಯಾಶ್ ಬ್ಯಾಕ್
'Mr.ಐರಾವತ' ನೋಡುವ ಕನ್ನಡ ಸಿನಿ ಪ್ರಿಯರಿಗೆ 'ಸಾಂಗ್ಲಿಯಾನ' ಸಿನಿಮಾ ಮತ್ತು ಆ ಚಿತ್ರದ ಕೆಲ ಡೈಲಾಗ್ಸ್ ನೆನಪಿಸುತ್ತದೆ.
ಎ.ಪಿ.ಅರ್ಜುನ್ ಕೊಂಚ ಜಾಗರೂಕತೆ ವಹಿಸಬಹುದಿತ್ತು.?
ನಿರ್ದೇಶಕ ಎ.ಪಿ.ಅರ್ಜುನ್ ಆಯ್ದು ಕೊಂಡಿರುವ ಕಥೆ ಚೆನ್ನಾಗಿದೆ. ಆದ್ರೆ, ಚಿತ್ರಕಥೆಯಲ್ಲಿ ಕೊಂಚ ಜಾಗರೂಕತೆ ವಹಿಸಿದ್ದರೆ, 'Mr.ಐರಾವತ' ಒನ್ ಆಫ್ ದಿ ಬೆಸ್ಟ್ ಪೊಲೀಸ್ ರೀಲ್ ಹಿಸ್ಟರಿ ಆಗುತ್ತಿತ್ತು. ಎರಡು ವರ್ಷಗಳಿಂದ
ಐರಾವತನ ತಿದ್ದಿ ತೀಡಿದ್ದ ಅರ್ಜುನ್ ಮಾಸ್ ಮಸಾಲೆಗಷ್ಟೆ ಪ್ರಾಮುಖ್ಯತೆ ನೀಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ಓಕೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚೆನ್ನಾಗಿದೆ. ದೀಪು.ಎಸ್.ಕುಮಾರ್ ಸಂಕಲನ ಇನ್ನೂ ಚುರುಕಾಗಿರಬೇಕಿತ್ತು. ಶೇಖರ್ ಚಂದ್ರ ಕ್ಯಾಮರಾ ವರ್ಕ್ ಕಣ್ಣಿಗೆ ಹಬ್ಬ.
ಅಲ್ಲಲ್ಲಿ ಎದ್ದು ಕಾಣುವ ಅಂಕುಡೊಂಕು
ಶಾಲಾ-ಕಾಲೇಜು ಸುತ್ತ ಮುತ್ತ 100 ಮೀಟರ್ ಗಳ ಅಂತರದಲ್ಲಿ ರೌಡಿಗಳು ಸಿಗರೇಟ್ ಸೇದಿದ್ದಕ್ಕೆ ಎಸಿಪಿ ಐರಾವತ ಹಿಗ್ಗಾಮುಗ್ಗಾ ಬಾರಿಸುತ್ತಾರೆ. ಆದ್ರೆ, ಅದೇ ಐರಾವತ, ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರನ್ನು ಬಂಧಿಸುವಾಗ ಸಿಗರೇಟ್ ಸೇದ್ತಾರೆ. ದಕ್ಷ ಪೊಲೀಸ್ ಅಧಿಕಾರಿಯನ್ನ ತೆರೆಮೇಲೆ ವಿಜೃಂಭಿಸುವಾಗ ಇಂತಹ ದೃಶ್ಯಗಳು ಬೇಕಿತ್ತಾ? ಅನ್ನೋದು ಕೆಲವರಲ್ಲಿ ಕಾಡುವ ಪ್ರಶ್ನೆ.
ಸಾಹಸ ದೃಶ್ಯಗಳು ಅಬ್ಬಬ್ಬಾ....
'Mr.ಐರಾವತ' ಚಿತ್ರದಲ್ಲಿ ''ಅಬ್ಬಬ್ಬಾ'' ಅನ್ನುವಷ್ಟು ಭರ್ಜರಿ ಸಾಹಸ ದೃಶ್ಯಗಳಿವೆ. ಸ್ಕಾರ್ಪಿಯೋ ಕಾರ್ ಮುಂಭಾಗದ ಮೇಲೆ ದರ್ಶನ್ ಏರಿದರೆ ಕಾರ್ ಹಿಂಬದಿ ಏರುತ್ತದೆ. ಹೀರೋ ಚಲಾಯಿಸುವ ಕಾರೊಂದನ್ನ ಬಿಟ್ಟು ಚೇಸ್ ಸನ್ನಿವೇಶದಲ್ಲಿ ಬಾಕಿ ಎಲ್ಲಾ ಕಾರುಗಳು ಪಲ್ಟಿ ಹೊಡೆಯುತ್ತವೆ. ತೆಲುಗು ಚಿತ್ರಗಳನ್ನು ಮೀರಿಸುವ ಸ್ಟೈಲ್ ನಲ್ಲಿದೆ 'Mr.ಐರಾವತ' ಸ್ಟಂಟ್ಸ್.
ಅಭಿಮಾನಿಗಳಿಗೆ ನಿರಾಸೆ ಅಲ್ಲವೇ ಅಲ್ಲ.!
'Mr.ಐರಾವತ' ಸಿನಿಮಾದ ಎಲ್ಲಾ ನೆಗೆಟಿವ್ ಗಳು ಪಾಸಿಟಿವ್ ಆಗೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಂದ. ಇಡೀ ಚಿತ್ರವನ್ನ ಅವರ ಹೆಗಲಮೇಲೆ ಹೊತ್ತುಕೊಂಡು ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ.
ದರ್ಶನ್ ಫ್ಯಾನ್ಸ್ ಗೆ ಹೇಳಿಮಾಡಿಸಿದ ಸಿನಿಮಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ 'Mr.ಐರಾವತ'. ದರ್ಶನ್ ಇಮೇಜ್ ಗೆ ತಕ್ಕಂತೆ ಬಿಲ್ಡಪ್, ಅವರ ಫ್ಯಾನ್ಸ್ ಎಕ್ಸ್ ಪೆಕ್ಟ್ ಮಾಡುವ ಎಲ್ಲಾ ಮಸಾಲೆ ಸಿನಿಮಾದಲ್ಲಿದೆ. ನೀವು ದರ್ಶನ್ ರವರ ಕಟ್ಟಾ ಅಭಿಮಾನಿಯಾಗಿದ್ದರೆ ಈಗಲೆ ಟಿಕೆಟ್ ಬುಕ್ ಮಾಡಿ.