Kara Review: ಧನುಷ್ ನಟನೆಯ 'ಕಾರಾ' ಸಿನಿಮಾ ಹೇಗಿದೆ? ಇಲ್ಲಿದೆ ಕಂಪ್ಲೀಟ್ ರಿವ್ಯೂ
ತಮಿಳು ನಟ ಧನುಷ್ ನಟನೆಯ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತವೆ. ಕಳೆದ ವರ್ಷ 'ಇಡ್ಲಿ ಕಡೇ' ಸಿನಿಮಾ ನಿರ್ದೇಶಿಸಿ ನಟಿಸಿದ್ದ ಧನುಷ್ ಇದೀಗ 'ಕಾರಾ' ಎಂಬ ದರೋಡೆ ಕಥಾಹಂದರ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೂಲಕ ಪ್ರೇಕ್ಷಕರ ಬಂದಿದ್ದಾರೆ. ತಮಿಳು ಹಾಗೂ ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ.
ಯಾವುದೇ ಪಾತ್ರ ಆಗಿದ್ದರೂ ತಮ್ಮ ಸಹಜ ನಟನೆಯಿಂದಲೇ ಧನುಷ್ ಗಮನ ಸೆಳೆಯುತ್ತಾರೆ. ತಮ್ಮ ಅದ್ಭುತ ನಟನೆಯಿಂದಲೇ ಬಾಲಿವುಡ್ ಮಾತ್ರವಲ್ಲದೇ ವಿದೇಶಿ ಸಿನಿಮಾಗಳಲ್ಲಿ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವಿಘ್ನೇಶ್ ರಾಜಾ ನಿರ್ದೇಶನದ 'ಕಾರಾ' ಚಿತ್ರದಲ್ಲಿ ಬ್ಯಾಂಕ್ ದರೋಡೆಕೋರನ ಕಥೆಯಿದೆ.

ಸಿನಿಮಾ ಕಥೆ
ಕಾರಸ್ವಾಮಿ(ಧನುಷ್) ಒಬ್ಬ ಕಳ್ಳ. ಒಂದು ಹಂತಕ್ಕೆ ತಂದೆ ಬಳಿ ಕಳ್ಳತನ ಮಾಡಿ ಮನೆ ಬಿಟ್ಟು ಹೋಗುತ್ತಾನೆ. ಕೊನೆಗೊಂದು ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಸೇರುತ್ತಾನೆ. ಅಲ್ಲಿಂದ ತಪ್ಪಿಸಿಕೊಳ್ಳುವ ಕಾರಾ ಪ್ರಿಯತಮೆ ಸೆಲ್ಲಿ(ಮಮಿತಾ ಬೈಜು) ಜೊತೆ ಮದುವೆ ಆಗಿ ಕಳ್ಳತನ ಬಿಟ್ಟು ಬದುಕುವ ಮನಸ್ಸು ಮಾಡ್ತಾನೆ. ಹೋಟೆಲ್ ಆರಂಭಿಸಲು ಮುಂದಾಗುತ್ತಾನೆ. ಅದಕ್ಕಾಗಿ ಊರನಲ್ಲಿರುವ ಹೊಲ ಅಡಮಾನ ಇಡಬೇಕು ಎಂದು ತಂದೆ ಬಳಿಗೆ ಹೋಗುತ್ತಾನೆ.
ಕಾರಾ ಅಲ್ಲಿಗೆ ಹೋಗುವ ವೇಳೆಗೆ ಅದೇ ಹೊಲದ ಪತ್ರ ಇಟ್ಟು ತಂದೆ ಬ್ಯಾಂಕ್ನಲ್ಲಿ ಸಾಲ ಮಾಡಿರುತ್ತಾನೆ. ತಂದೆ ಕೂಡ ಸಾಯುತ್ತಾನೆ. ಹಾಗಾಗಿ ಮತ್ತೆ ಕಾರಾ ಬ್ಯಾಂಕ್ ದರೋಡೆಗೆ ಮುಂದಾಗುತ್ತಾನೆ. ಅದಕ್ಕೆ ಕಾರಣ ಏನು? ಅಲ್ಲಿಂದ ಮುಂದೆ ಏನಾಗುತ್ತದೆ? ಕಾರಾ ಯಾಕೆ ಅದೇ ಬ್ಯಾಂಕ್ ಅನ್ನು ಟಾರ್ಗೆಟ್ ಮಾಡಿ ದರೋಡೆ ಮಾಡ್ತಾನೆ? ಕಾರಾನನ್ನು ಹಿಡಿಯಲು ಮುಂದಾಗುವ ಪೊಲೀಸರು ಯಶಸ್ವಿ ಆಗ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ ಸಿನಿಮಾ ನೋಡಲೇಬೇಕು.

ಸಿನಿಮಾ ಹೇಗಿದೆ?
ದರೋಡೆ ಸುತ್ತಾ ಸುತ್ತುವ ಸಾಕಷ್ಟು ಸಿನಿಮಾಗಳು ಈಗಾಗಲೇ ಬಂದು ಹೋಗಿದೆ. ಆದರೆ ಇಲ್ಲಿ ಭಾವನಾತ್ಮಕ ಸಂಗತಿಗಳ ಜೊತೆಗೆ ಕಾರಾನ ಕಳ್ಳತನದ ಕಥೆಯನ್ನು ನಿರ್ದೇಶಕ ವಿಘ್ನೇಶ್ ರಾಜಾ ಕಟ್ಟಿಕೊಟ್ಟಿದ್ದಾರೆ. ಆ ಪ್ರಯತ್ನದಲ್ಲಿ ಕೊಂಚ ಎಡವಿದ್ದಾರೆ. ರಾಬಿನ್ ಹುಡ್ ಶೈಲಿಯ ಕಥೆಯನ್ನು ಆಯ್ದುಕೊಂಡು ಅದಕ್ಕೆ ಹೊಸ ರೂಪ ಕೊಡುವ ಪ್ರಯತ್ನ ಮಾಡಲಾಗಿದೆ. ಧನುಷ್ ತಮ್ಮ ನಟನೆ ಮೂಲಕ ಚಿತ್ರವನ್ನು ಮೇಲುತ್ತುವ ಪ್ರಯತ್ನ ಮಾಡಿದ್ದಾರೆ.
ಕಾರಾ ಕೂಡ ಒಳ್ಳೆ ಉದ್ದೇಶದಿಂದ ಕಳ್ಳತನ ಮಾಡುತ್ತಿರುತ್ತಾರೆ. ಕೊನೆಗೊಂದು ದಿನ ಅದನ್ನೆಲ್ಲಾ ಬಿಟ್ಟುಬಿಡುವ ಮನಸ್ಸು ಮಾಡ್ತಾನೆ. ಆದರೆ ಪರಿಸ್ಥಿತಿ ಕೈಮೀರಿದಾಗ ಮತ್ತೆ ಅದೇ ಕೆಲಸಕ್ಕೆ ಇಳಿಯುತ್ತಾನೆ. ತಂದೆ- ಮಗನ ಭಾವನಾತ್ಮಕ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸು ಮುಟ್ಟುವಂತಿದೆ. ಆದರೆ ನಿಧಾನವಾಗಿ ಸಾಗುವ ಸಿನಿಮಾ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತದೆ. 90ರ ದಶಕದಲ್ಲಿ ನಡೆಯುವ ಕಥೆಯಿದು. ಅದಕ್ಕೆ ತಕ್ಕಂತೆ ಅಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ.
ಸೆಕೆಂಡ್ ಹಾಫ್ನಲ್ಲಿ ಬರುವ ಒಂದಷ್ಟು ದರೋಡೆ ಸನ್ನಿವೇಶಗಳಲ್ಲಿ ಲಾಜಿಕ್ ಮಿಸ್ ಆಗಿದೆ. ಇನ್ನು ತನ್ನವರಿಗಾಗಿ ತನ್ನ ಅಸ್ತಿತ್ವಕ್ಕಾಗಿ ಧನುಷ್ ಹೋರಾಡುವ ಸನ್ನಿವೇಶಗಳು ಹಿಂದಿನ ಅವರ ಕೆಲ ಸಿನಿಮಾಗಳನ್ನು ನೆನಪಿಸುವಂತಿದೆ. ಇನ್ನು ಗಲ್ಫ್ ಯುದ್ಧ, ರೈತರ ಸಮಸ್ಯೆ ರೀತಿಯ ವಿಚಾರಗಳನ್ನು ಸೊಗಸಾಗಿ ತೋರಿಸಲಾಗಿದೆ.
ಕಲಾವಿದರ ನಟನೆ
ಧನುಷ್ ಎಂದಿನಂತೆ ತಮ್ಮ ನಟನೆ ಮೂಲಕ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಆದರೆ ಅವರ ನಟನೆಗೆ ಸ್ಲೋ ಸ್ಕ್ರೀನ್ಪ್ಲೇ ತೊಡಕಾಗಿದೆ. ನಾಯಕನ ತಂದೆ ಕಂದಸ್ವಾಮಿ ಪಾತ್ರದಲ್ಲಿ ನಿರ್ದೇಶಕ ಕೆ. ಎಸ್ ರವಿಕುಮಾರ್ ನಟನೆ ಚಿತ್ರಕ್ಕೆ ಹೆಚ್ಚಿನ ಜೀವ ತುಂಬಿದೆ. ಧನುಷ್ ಪ್ರೇಯಸಿ, ಪತ್ನಿಯಾಗಿ ಮಮಿತಾ ಇಷ್ಟವಾಗುತ್ತಾರೆ. ಇನ್ನು ಜಯರಾಂ, ಸೂರಜ್ ವೆಂಜ್ರಮುಡು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಟೆಕ್ನಿಕಲಿ 'ಕಾರಾ' ಸಿನಿಮಾ
ಜಿ. ವಿ ಪ್ರಕಾಶ್ ಕುಮಾರ್ ಸಂಗೀತ 'ಕಾರಾ' ಚಿತ್ರದ ಜೀವಾಳ. ಪ್ರತಿ ದೃಶ್ಯಕ್ಕೂ ಒಂದು ಮೂಡ್ ಕ್ರಿಯೇಟ್ ಮಾಡುವಲ್ಲಿ ಅವರ ಹಿನ್ನೆಲೆ ಸಂಗೀತ ಸಾಥ್ ಕೊಟ್ಟಿದೆ. ತೇನಿ ಈಶ್ವರ್ ಛಾಯಾಗ್ರಹಣ ಸೊಗಸಾಗಿದೆ. ಯಾವುದಕ್ಕೂ ರಾಜಿಯಾಗದೇ ಕಥೆ ಕೇಳಿದ್ದನ್ನೆಲ್ಲಾ ಕೊಟ್ಟು ನಿರ್ಮಾಪಕರು ಸಿನಿಮಾ ತೆರೆಗೆ ತಂದಿದ್ದಾರೆ.
ಕೊನೆ ಮಾತು
ಹೊಸ ಪ್ರಯೋಗ ಮಾಡದೇ ಸಿಂಪಲ್ ಕಥೆಯನ್ನು 'ಕಾರಾ' ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಹೊಸತನ ಇಲ್ಲ. ಅಲ್ಲಲ್ಲಿ ಸಿನಿಮಾ ಮನಸ್ಸಿಗೆ ಮಟ್ಟುವಂತಿದೆ. ಆದರೆ ಸಂಪೂರ್ಣ ಸಿನಿಮಾ ಆಗಿ ನೋಡಿದಾಗ ಕೊರತೆ ಎದ್ದು ಕಾಣುತ್ತದೆ. ಕಥೆ, ಚಿತ್ರಕಥೆ ಸ್ಲೋ ಆಗಿ ಚಿತ್ರಕ್ಕೆ ಹಿನ್ನಡೆ ತಂದಿದೆ. ಧನುಷ್ ಸಿನಿಮಾಗಳನ್ನು ಇಷ್ಟಪಡುವವರು ಒಮ್ಮೆ ಚಿತ್ರಮಂದಿರದಲ್ಲಿ 'ಕಾರಾ' ಸಿನಿಮಾ ನೋಡಲು ಧೈರ್ಯ ಮಾಡಬಹುದು.


Click it and Unblock the Notifications