Dhurandhar Review ; ರಣ್ವೀರ್ ಸಿಂಗ್ ಅಬ್ಬರ, ದೇಶಭಕ್ತಿಯ ಸಾರ ; ಹೇಗಿದೆ ಧುರಂಧರ್..? ಇಲ್ಲಿದೆ ವಿಮರ್ಶೆ
ಬಾಲಿವುಡ್ನ ಪ್ರತಿಭಾವಂತ ಸ್ಟಾರ್ ರಣ್ವೀರ್ ಸಿಂಗ್. ಝೀರೋದಿಂದ ಹೀರೋ ಆದ ರಣ್ವೀರ್, ಪಾತ್ರ ಎಂತಹದ್ದೇ ಇರಲಿ, ಆ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತಾರೆ. ಕಾಲ ಕಾಲಕ್ಕೆ ತಮ್ಮ ಅಭಿನಯದಿಂದ ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದ್ದಾರೆ. ಆದರೂ ಅದ್ಯಾಕೋ ರಣ್ವೀರ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಮಂಕಾಗಿದ್ದರು. ರಣ್ವೀರ್ ಅಭಿನಯದ ಸಾಲು ಸಾಲು ಸಿನಿಮಾಗಳು ಶುರುವಾದಷ್ಟೇ ಬೇಗ ನಿಂತು ಹೋಗುತ್ತಿದ್ದವು.
ಕರಣ್ ಜೋಹರ್ ನಿರ್ಮಾಣದ ''ತಖ್ತ್ ''.. ಶಂಕರ್ ನಿರ್ದೇಶನದಲ್ಲಿ ಬರಬೇಕಿದ್ದ ''ಅನ್ನಿಯನ್'' ಚಿತ್ರದ ರಿಮೇಕ್, ಹನುಮಾನ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ ''ರಾಕ್ಷಸ್''.. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ''ಬೈಜೂ ಬವರಾ''.. ಹೀಗೆ ಅನೇಕ ಸಿನಿಮಾಗಳು ಇನ್ನೇನು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಒಂದಿಲ್ಲೊಂದು ವಿಘ್ನಗಳಿಂದಾಗಿ ನಿಂತು ಹೋದವು.

ಇದೆಲ್ಲದರಿಂದ ಖುದ್ದು ರಣ್ವೀರ್ ಸಿಂಗ್ ಬೇಸತ್ತು ಹೋಗಿದ್ದರು. ಇದಕ್ಕೆ ಕೈಗನ್ನಡಿ ಎಂಬಂತೆ ರಣ್ವೀರ್ ಸಿಂಗ್ ತಮ್ಮ ಜೊತೆ ತಾಳ್ಮೆಯಿಂದ ಕಾದ ತಮ್ಮೆಲ್ಲ ಅಭಿಮಾನಿಗಳಿಗೆ ಕಳೆದ ವರ್ಷ ಧನ್ಯವಾದ ಹೇಳಿದ್ದರು. ತುಂಬಾ ತಾಳ್ಮೆಯಿಂದಿರುವ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ ಎಂದು ಹೇಳಿದ್ದರು. ಧುರಂಧರ್ ಮೂಲಕ ಈ ಬಾರಿ ಹಿಂದೆಂದೂ ನಿಮಗೆ ಆಗದಂತಹ ಸಿನಿಮೀಯ ಅನುಭವವನ್ನು ನಾನು ನಿಮಗೆ ನೀಡುತ್ತೇನೆ ಎನ್ನುವ ಭರವಸೆಯನ್ನು ಕೂಡ ನೀಡಿದ್ದರು.
ರಣವೀರ್ ಸಿಂಗ್ ತಮ್ಮ ಅಭಿಮಾನಿಗಳಿಗೆ ನೀಡಿದ್ದ ಈ ಭರವಸೆಯನ್ನು ಉಳಿಸಿಕೊಂಡ್ರಾ..? ಇಂದು ( ಡಿಸೆಂಬರ್ 5 ) ಬಿಡುಗಡೆಯಾದ ಧುರಂಧರ್ ಚಿತ್ರ ಹೇಗಿದೆ..? ಚಿತ್ರದ ಕಥಾಹಂದರವೇನು..? ಎರಡೂವರೆ ವರ್ಷಗಳ ನಂತರ ಬೆಳ್ಳಿತೆರೆಯಲ್ಲಿ ಪ್ರತ್ಯಕ್ಷವಾದ ರಣ್ವೀರ್ ಸಿಂಗ್ಗೆ ಗೆಲುವು ಸಿಗುತ್ತಾ..? ಎಂದು ತಿಳಿಯಲು ಮುಂದೆ ಓದಿ.
ಕಥಾಹಂದರ
1999ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕಂದಹಾರ್ ವಿಮಾನ ಅಪಹರಣದ ಮೂಲಕ ''ಧುರಂಧರ್'' ಕಥೆ ಅನಾವರಣವಾಗುತ್ತೆ. 2001ರಲ್ಲಿ ನಡೆದ ಸಂಸತ್ತಿನ ಮೇಲಿನ ದಾಳಿಯ ಹಿನ್ನೆಲೆ ಕೂಡ ಕಥೆ ಸಾಗುತ್ತೆ. ಗುಪ್ತಚರ ದಳದ ಮುಖ್ಯಸ್ಥ ಅಜಯ್ ಸಾನ್ಯಾಲ್ (ಆರ್ ಮಾಧವನ್ ) ರಹಸ್ಯ ಕಾರ್ಯಾಚರಣೆಗೆ ಮುಂದಾಗುತ್ತಾನೆ.
ಈ ಕಾರ್ಯಾಚರಣೆಯ ಭಾಗವಾಗಿ ಹಮ್ಜಾ ಅಲಿ ಮಜಹರಿ (ರಣವೀರ್ ಸಿಂಗ್) ಶತ್ರು ರಾಷ್ಟ್ರದಲ್ಲಿ ನುಸುಳಿ ಭಯೋತ್ಪಾದಕರ ಮಾಹಿತಿಯನ್ನು ಸಂಗ್ರಹಿಸುತ್ತಾನೆ. ಪಾಕಿಸ್ತಾನದ ಲಿಯಾರಿಯಲ್ಲಿರುವ ಭಯೋತ್ಪಾದಕರ ಜಾಲವನ್ನು ಕೂಡ ಭೇದಿಸುತ್ತಾನೆ.

ಇಷ್ಟೇ ಅಲ್ಲದೇ ಚಿತ್ರದ ಖಳನಾಯಕ ರೆಹಮಾನ್ (ಅಕ್ಷಯ್ ಖನ್ನಾ) ವಿಶ್ವಾಸವನ್ನು ಕೂಡ ಗಳಿಸುವಲ್ಲಿ ಯಶಸ್ವಿಯಾಗುವ ಹಮ್ಜಾ ಅಲಿ, ಡೆತ್ ಏಂಜೆಲ್ ಎಂದೇ ಕರೆಯಲ್ಪಡುವ ಐಎಎಸ್ನ ಮೇಜರ್ ಇಕ್ಬಾಲ್ (ಅರ್ಜುನ್ ರಾಂಪಾಲ್) ಎದುರು ಮುಖಾಮುಖಿಯಾಗುತ್ತಾನೆ. ಮುಂದೇನಾಗುತ್ತೆ..? ಮೇಜರ್ ಇಕ್ಬಾಲ್ ಕೈಗೆ ಹಮ್ಜಾ ಅಲಿ ಸಿಕ್ಕಿ ಬೀಳುತ್ತಾನಾ..? ಎನ್ನುವುದೇ ಚಿತ್ರದ ತಿರುಳು.
ಅಭಿನಯ ಹೇಗಿದೆ ..?
ರಣವೀರ್ ಸಿಂಗ್ ಮತ್ತೊಮ್ಮೆ ತಮ್ಮ ಅಭಿನಯ ಸಾಮರ್ಥ್ಯದ ಪ್ರದರ್ಶನ ಮಾಡಿದ್ದಾರೆ. ರಣ್ವೀರ್ ಸಿಂಗ್ ವ್ಯಕ್ತಿತ್ವ ಬಲ್ಲವರು ಮತ್ತು ಅವರು ಮಾಡಿಕೊಂಡ ವಿವಾದಗಳನ್ನು ನೆನಪಿನಲ್ಲಿಟ್ಟವರು ರಣ್ವೀರ್ ಸಿಂಗ್ ಈ ಚಿತ್ರದಲ್ಲಿ ಕೂಡ ಓವರ್ ಆಕ್ಟಿಂಗ್ ಮಾಡಿರಬಹುದು ಎಂದುಕೊಂಡಿರಬಹುದು. ಆದರೆ.. ಹಮ್ಜಾ ಅಲಿ ಪಾತ್ರವನ್ನು ರಣ್ವೀರ್ ಸಿಂಗ್ ಅಕ್ಷರಶಃ ಜೀವಿಸಿದ್ದಾರೆ. ''ಪದ್ಮಾವತ್'' ಚಿತ್ರದ ನಂತರ ರಣ್ವೀರ್ ಸಿಂಗ್ ಅವರ ಅಭಿಮಾನಿಗಳು ಮರೆಯಲಾರದ ಪಾತ್ರ ಹಮ್ಜಾ ಅಲಿ.
ಇನ್ನೂ.. ಅಕ್ಷಯ್ ಖನ್ನಾ ಈ ಚಿತ್ರದ ಮತ್ತೊಂದು ಪ್ರಮುಖವಾದ ಆಧಾರಸ್ತಂಭ. ರಣ್ವೀರ್ ಸಿಂಗ್ ಪಾತ್ರಕ್ಕೆ ನೀಡಲಾದಷ್ಟೇ ಪ್ರಾಮುಖ್ಯತೆಯನ್ನು ಅಕ್ಷಯ್ ಖನ್ನಾ ಪಾತ್ರಕ್ಕೆ ನೀಡಲಾಗಿದೆ. ಅಕ್ಷಯ್ ಖನ್ನಾ ಅಭಿನಯದಿಂದ ಚಿತ್ರಮಂದಿರದಲ್ಲಿ ರಕ್ತ ಕುದಿಯುತ್ತೆ. ಅಕ್ಷಯ್ ಖನ್ನಾ ಅವರನ್ನು ದ್ವೇಷಿಸಬೇಕೆಂಬ ಭಾವನೆ ಬರುತ್ತೆ.
ಆರ್.ಮಾಧವನ್ ಅವರ ಪಾತ್ರಕ್ಕೆ ಇಲ್ಲಿ ಹೆಚ್ಚಿನ ಅವಧಿ ಸಿಕ್ಕಿಲ್ಲ. ಆದರೆ.. ಸಿಕ್ಕ ಅವಕಾಶದಲ್ಲಿಯೇ ಮಾಧವನ್ ಸಿಕ್ಸರ್ ಬಾರಿಸಿದ್ದಾರೆ. ಮಾಧವನ್ ತೆರೆಯ ಮೇಲೆ ಬಂದಾಗೆಲ್ಲಾ ಶಿಳ್ಳೆ.. ಚಪ್ಪಾಳೆಯ ಸದ್ದು ಕೇಳಿ ಬರುತ್ತೆ. ಸಂಜಯ್ ದತ್ ಮತ್ತು ಅರ್ಜುನ್ ರಾಂಪಾಲ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅರ್ಜುನ್ ರಾಂಪಾಲ್ ಮೌನವೂ ಇಲ್ಲಿ ಮಾತನಾಡುತ್ತೆ. ಸಾರಾ ಅರ್ಜುನ್ ಈ ಚಿತ್ರದ ನಾಯಕಿ. ಮೊದಲ ಪ್ರಯತ್ನದಲ್ಲಿಯೇ ಇವರು ಗಮನ ಸೆಳೆಯುತ್ತಾರೆ.

ಪ್ಲಸ್ ಪಾಯಿಂಟ್ ಏನು ?
ಬಹುತಾರಾಗಣದ ಸಿನಿಮಾ ಮಾಡುವುದು ಸುಲಭ ಅಲ್ಲ. ಆದರೆ ನಿರ್ದೇಶಕ ಆದಿತ್ಯ ಧರ್ ಈ ವಿಚಾರದಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲರ ಪಾತ್ರಗಳನ್ನು ಸುಂದರವಾಗಿ ಹೆಣೆದಿದ್ದಾರೆ. ನಿಜಾ.. ಚಿತ್ರದ ಅವಧಿ 3 ಗಂಟೆ 36 ನಿಮಿಷ ಇದೆ. ಆದರೆ ಎಲ್ಲಿಯೂ ಚಿತ್ರ ನೀರಸ ಎಂದು ಎನಿಸುವುದಿಲ್ಲ. ವಿಚಲಿತಗೊಳಿಸುವುದಿಲ್ಲ. ದ್ವಿತೀಯಾರ್ಧವು ಸ್ವಲ್ಪ ನಿಧಾನವಾಗುತ್ತಿದೆ ಎಂಬ ಭಾವನೆ ಬರಬಹುದು ಆದರೆ ನಡೆಯುವ ಪಿತೂರಿ, ಹಮ್ಜಾ ಹೆಣೆಯುವ ತಂತ್ರ, ಮುಂತಾದ ವಿಚಾರಗಳು ಕುತೂಹಲ ಮೂಡಿಸುತ್ತವೆ. ಶಶ್ವಂತ್ ಸಿಂಗ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರದ ಮತ್ತೊಂದು ಶಕ್ತಿ. ಇನ್ನೂ ಸಾಹಸ ಪ್ರಿಯರಿಗೆ ಚಿತ್ರದಲ್ಲಿನ ಮೂರು-ನಾಲ್ಕು ಆಕ್ಷನ್ ಸಿಕ್ವೆನ್ಸ್ಗಳು ಮೈನವಿರೇಳಿಸುತ್ತವೆ. ಕೊನೆಯ ಅರ್ಧ ಗಂಟೆ ಸೀಟಿನ್ ಅಂಚಿಗೆ ಕೂರಿಸುತ್ತದೆ.
ಕೊನೆ ಮಾತು
ಒಟ್ನಲ್ಲಿ ರಣ್ವೀರ್ ಸಿಂಗ್ ಈ ಬಾರಿ ಪಕ್ಕಾ ಪೈಸಾ ವಸೂಲ್ ಸಿನಿಮಾ ಮಾಡಿದ್ದಾರೆ. ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಈ ಚಿತ್ರದಲ್ಲಿ ಕ್ಲಾಸ್ ಪ್ರೇಕ್ಷಕರನ್ನು ಸೆಳೆಯುವಂತಹ ಅಂಶಗಳಿವೆ. ದೇಶಭಕ್ತಿಯ ಸಾರವನ್ನು ಹೊಂದಿರುವ ಈ ಚಿತ್ರವನ್ನು ಮನೆಯಲ್ಲಿ ಕುಳಿತುಕೊಂಡು ಓಟಿಟಿಯಲ್ಲಿ ನೋಡುವ ಬದಲು ಚಿತ್ರಮಂದಿರದಲ್ಲಿಯೇ ನೋಡಿದರೆ ಒಳ್ಳೆಯದು. ಯಾಕೆಂದರೆ.. ಚಿತ್ರಮಂದಿರದಲ್ಲಿಯೇ ಅನುಭವಿಸಬೇಕಾದ ಸಿನಿಮಾ ಇದು. ಅಂದ್ಹಾಗೇ ಈ ಚಿತ್ರದ ಕಥೆ ಇಲ್ಲಿಗೆ ಮುಕ್ತಾಯವಾಗಿಲ್ಲ. ಚಿತ್ರದ ಎರಡನೇ ಭಾಗ ಕೂಡ ಬರಲಿದೆ. ಮುಂದಿನ ವರ್ಷ ಮಾರ್ಚ್ 19ರಂದು '' ಧುರಂಧರ್'' ಎರಡನೇ ಭಾಗ ತೆರೆಗೆ ಅಪ್ಪಳಿಸಲಿದೆ.


Click it and Unblock the Notifications











