Don't Miss!
- News ಹಳೇ ಹುಲಿ ಪಿಸಿ ಮೋಹನ್ ಎದುರು ಮನ್ಸೂರ್ ಅಲಿ ಖಾನ್ ಕಣಕ್ಕೆ; ಮತ್ತೊಮ್ಮೆ ಇತಿಹಾಸ ಬರೆಯುತ್ತಾರಾ ಬಿಜೆಪಿ ಕಲಿ?
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಾಗರಹಾವು' ವಿಮರ್ಶೆ: ಡಾ.ವಿಷ್ಣುವರ್ಧನ್ 201 ನಾಟೌಟ್
ಇಹಲೋಕ ತ್ಯಜಿಸಿರುವ 'ಸಾಹಸ ಸಿಂಹ' ಡಾ.ವಿಷ್ಣುವರ್ಧನ್ ರವರನ್ನ ತೆರೆ ಮೇಲೆ 'ಜೀವಂತ'ವಾಗಿಸಿರುವ ಸಿನಿಮಾ 'ನಾಗರಹಾವು'. ಬಹುಶಃ 'ನಾಗರಹಾವು' ಚಿತ್ರವನ್ನ ವಿಷ್ಣು ದಾದಾ ಅಭಿಮಾನಿಗಳು ಕಡ್ಡಾಯವಾಗಿ ನೋಡಲೇಬೇಕಾಗಿರುವುದು ಇದೊಂದೇ ಕಾರಣಕ್ಕೆ!
'ನಾಗರಹಾವು' ಆಗಿ ಡಾ.ವಿಷ್ಣುವರ್ಧನ್ ಬುಸುಗುಡುವ ಆ ಒಂದು ಸನ್ನಿವೇಶ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಇಡೀ ಸಿನಿಮಾ ಸಹಿಸಿಕೊಂಡರೆ, ಕ್ಲೈಮ್ಯಾಕ್ಸ್ ನಲ್ಲಿ ಕಣ್ಣಿಗೆ ಬೊಂಬಾಟ್ ಭೋಜನ ಗ್ಯಾರೆಂಟಿ.
ಕಳಶ, ಸೂರ್ಯಗ್ರಹಣ ಮತ್ತು ನಾಗರಹಾವು
ಸೂರ್ಯಗ್ರಹಣದಂದು ದುಷ್ಟ ಶಕ್ತಿಗಳ ಉಪಟಳ ಅಡಗಿಸಲು ದೇವಾನುದೇವತೆಗಳೆಲ್ಲಾ ಸೇರಿ ತಮ್ಮ ಶಕ್ತಿಯನ್ನ ಧಾರೆ ಎರೆದು 'ಮಹಾನ್ ಕಳಶ' ಸೃಷ್ಟಿಸುತ್ತಾರೆ. ತಲತಲಾಂತರದಿಂದ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಆ ಕಳಶಕ್ಕೆ ಶೌರ್ಯ ವಂಶ ಕಾವಲಾಗಿರುತ್ತಾರೆ. ಕಳಶವನ್ನ ಕೈವಶ ಮಾಡಿಕೊಳ್ಳಲು ಶಿಷ್ಟರ ವಿರುದ್ಧ ದುಷ್ಟರು ನಡೆಸುವ ಸಮರದ ಹಿನ್ನಲೆ ಹೊಂದಿರುವ ಚಿತ್ರಣವೇ 'ನಾಗರಹಾವು'.
ಕಳಸಕ್ಕೆ 'ನಾಗನಿಕಾ' ಕಾವಲು
ಕಳಶಕ್ಕಾಗಿ ನಡೆಯುವ ಸೆಣಸಾಟದಲ್ಲಿ ಶೌರ್ಯ ವಂಶದ ಶಿವಯ್ಯ (ಸಾಯಿಕುಮಾರ್) ಸಾವನ್ನಪ್ಪಿದ ಬಳಿಕ, ಕಳಶ ಕಾವಲು ಜವಾಬ್ದಾರಿ ನಾಗನಿಕಾ (ರಮ್ಯಾ) ಪಾಲಾಗುತ್ತೆ. ಜನ್ಮಜನ್ಮಾಂತರದಲ್ಲೂ 'ನಾಗಿಣಿ' ಸಹಾಯದಿಂದ ನಾಗನಿಕಾ ಕಳಶವನ್ನ ಹೇಗೆ ಕಾಪಾಡಿಕೊಳ್ಳುತ್ತಾಳೆ ಎಂಬುದೇ ಬಾಕಿ ಕಥೆ. ಅದನ್ನ ನೀವು ಚಿತ್ರಮಂದಿರದಲ್ಲಿಯೇ ನೋಡಿರಿ.....
ದಿಗಂತ್ ಗೆ ಏನು ಕೆಲಸ.?
ಜನ್ಮಜನ್ಮಾಂತರದ ಕಥೆ ಹೊಂದಿರುವ ಈ ಚಿತ್ರದಲ್ಲಿ ದಿಗಂತ್ 'ರಾಯಲ್ ಕೋಬ್ರಾ' ಎಂಬ ರಾಕ್ ಬ್ಯಾಂಡ್ ನ ಗಾಯಕ. 'ರಾಯಲ್ ಕೋಬ್ರಾ' ಬ್ಯಾಂಡ್ ಗೂ 'ನಾಗರಹಾವು'ಗೂ 'ಕಳಶ'ಕ್ಕೂ ಇರುವ ಲಿಂಕ್ ಈ ಚಿತ್ರದ ಸಸ್ಪೆನ್ಸ್.
ವಿಷ್ಣುವರ್ಧನ್ ರವರೇ ಏಕೈಕ ಪ್ಲಸ್ ಪಾಯಿಂಟ್.!
'ನಾಗರಹಾವು' ಚಿತ್ರದ ಪ್ರಮುಖ ಆಕರ್ಷಣೆ ಮತ್ತು ಪ್ಲಸ್ ಪಾಯಿಂಟ್ ಅಂದ್ರೆ ಅದು ಡಾ.ವಿಷ್ಣುವರ್ಧನ್ ಮಾತ್ರ. ಹೆಡ್ ರೀಪ್ಲೇಸ್ಮೆಂಟ್ ತಂತ್ರಜ್ಞಾನದ ಮುಖಾಂತರ ಡಾ.ವಿಷ್ಣುವರ್ಧನ್ ರವರಿಗೆ ಈ ಚಿತ್ರದಲ್ಲಿ ಮರುಜನ್ಮ ನೀಡಲಾಗಿದೆ. ತೆರೆಮೇಲೆ 'ಸಾಹಸ ಸಿಂಹ' ಇದ್ದಷ್ಟು ಕಾಲ, ಪ್ರೇಕ್ಷಕರು ಸೀಟಿನ ಮೇಲೆ ಕೂರುವುದೇ ಇಲ್ಲ.
ರಮ್ಯಾ ಆಕ್ಟಿಂಗ್ ಹೇಗಿದೆ?
'ನಾಗನಿಕಾ' ಆಗಿ ರಮ್ಯಾ ರವರದ್ದು ಅಕ್ಷರಶಃ ಬುಸುಗುಟ್ಟಿದ ಅಭಿನಯ. ಇಲ್ಲಿಯವರೆಗೂ ಗ್ಲಾಮರ್ ಗೊಂಬೆ ಆಗಿ ಮಿಂಚುತ್ತಿದ್ದ ರಮ್ಯಾಗೆ ಈ ಚಿತ್ರದಲ್ಲಿ ನಟನೆಗೆ ಹೆಚ್ಚು ಅವಕಾಶ ಸಿಕ್ಕಿದೆ. ಅದನ್ನ ರಮ್ಯಾ ಸದ್ಬಳಕೆ ಮಾಡಿಕೊಂಡಿದ್ದಾರೆ.
ದಿಗಂತ್ ನಟನೆ ಹೇಗಿದೆ?
'ನಾಗ್ ಚರಣ್' ಪಾತ್ರದಲ್ಲಿ ದಿಗಂತ್ ಎಂದಿನ ಅಭಿನಯ ನೀಡಿದ್ದಾರೆ. ಹಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ದಿಗಂತ್ ಡ್ಯಾನ್ಸ್ ನಲ್ಲೂ ಓಕೆ.
ಉಳಿದವರ ಅಭಿನಯ...
ಚಿಕ್ಕ ಪಾತ್ರ ಆದರೂ ಸಾಯಿ ಕುಮಾರ್, ರಮೇಶ್ ಭಟ್, ರವಿ ಕಾಳೆ ನ್ಯಾಯ ಒದಗಿಸಿದ್ದಾರೆ. ರಂಗಾಯಣ ರಘು, ಕುರಿ ಪ್ರತಾಪ್, ಸಾಧು ಕೋಕಿಲ ನಗಿಸಲು ಪ್ರಯತ್ನ ಪಟ್ಟಿದ್ದಾರೆ.
ವಿಷ್ಣುವರ್ಧನ್ ಹೇಗೆ ಕಾಣ್ತಾರೆ?
ಕೆಲ ಕ್ಲೋಸ್ ಅಪ್ ಮತ್ತು ಮಾತನಾಡುವ ಶಾಟ್ ಗಳನ್ನು ಹೊರತು ಪಡಿಸಿದರೆ, ವಿಷ್ಣುವರ್ಧನ್ ನೈಜವಾಗಿ ತೆರೆ ಮೇಲೆ ಕಾಣುತ್ತಾರೆ. ಅಷ್ಟರಮಟ್ಟಿಗೆ ಗ್ರಾಫಿಕ್ಸ್ ವರ್ಕ್ ಚೆನ್ನಾಗಿ ಮೂಡಿಬಂದಿದೆ. ಅದಕ್ಕೆ 'ಮುಕುಟ ವಿ.ಎಫ್.ಎಕ್ಸ್' ನವರಿಗೆ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು. ಹಾಗೇ, ಕೋಟಿಗಟ್ಟಲೆ ದುಡ್ಡು ಸುರಿದ ನಿರ್ಮಾಪಕರಿಗೂ ಧನ್ಯವಾದ ಸಲ್ಲಿಸಬೇಕು.
ಹಾಡೊಂದಕ್ಕೆ ಮಾತ್ರ ದರ್ಶನ್ ಸೀಮಿತ.!
'ನಾಗರಹಾವು' ಚಿತ್ರದ ಟೈಟಲ್ ಸಾಂಗ್ ನಲ್ಲಿ ಮಾತ್ರ ದರ್ಶನ್ ಕಾಣಿಸಿಕೊಂಡು ಡಾ.ವಿಷ್ಣುವರ್ಧನ್ ರವರಿಗೆ ಗೌರವ ಸಲ್ಲಿಸಿದ್ದಾರೆ. ಅಷ್ಟು ಬಿಟ್ಟರೆ, ಚಿತ್ರಕಥೆಗೂ ಅವರಿಗೂ ಸಂಬಂಧ ಇಲ್ಲ.
ಫಸ್ಟ್ ಹಾಫ್ ನಲ್ಲಿ ಏನಿದೆ, ಏನಿಲ್ಲ?
ನಿಜ ಹೇಳ್ಬೇಕಂದ್ರೆ, ಮೊದಲಾರ್ಧದಲ್ಲಿ ಗುರುಕಿರಣ್ ಸಂಗೀತ ನಿರ್ದೇಶನದ ಹಾಡುಗಳದ್ದೇ ಅಬ್ಬರ. ಎರಡು ಕಾಮಿಡಿ ಸೀನ್ ಗಳಿದ್ದರೂ, ಪ್ರೇಕ್ಷಕರಿಗೆ ಕಚಗುಳಿ ಇಡುವುದು ಕಡಿಮೆ. ಇನ್ನೇನು ಕಥೆ ಶುರು ಆಯ್ತು ಎನ್ನುವಷ್ಟರಲ್ಲಿ ಇಂಟರ್ವಲ್.! ಇದು ಫಸ್ಟ್ ಹಾಫ್ ರಿಯಾಲಿಟಿ.
ಹೋಗ್ಲಿ, ಸೆಕೆಂಡ್ ಹಾಫ್ ಹೇಗಿದೆ?
ಸೆಕೆಂಡ್ ಹಾಫ್ ನಲ್ಲಿ ಪ್ರೇಕ್ಷಕರನ್ನ ಹಿಡಿದು ಕೂರಿಸುವುದು ರಮ್ಯಾ ಅಭಿನಯ ಮತ್ತು ಬಹು ಮುಖ್ಯವಾಗಿ 'ದಾದಾ' ವಿಷ್ಣುವರ್ಧನ್. ಕಣ್ಣು ಕೋರೈಸುವ ಗ್ರಾಫಿಕ್ಸ್ ಮತ್ತು ವಿಷ್ಣು ಮರುಸೃಷ್ಟಿ ಇರುವುದರಿಂದ ವಿಷ್ಣು ಫ್ಯಾನ್ಸ್ ಗೆ ಸೆಕೆಂಡ್ ಹಾಫ್ ಪ್ರಿಯವಾಗಬಹುದು.
ಲಾಜಿಕ್ ಕೇಳುವ ಹಾಗಿಲ್ಲ.!
ಇದು ಅಪ್ಪಟ ಫ್ಯಾಂಟಸಿ ಚಿತ್ರವಾಗಿರುವುದರಿಂದ ಇದರಲ್ಲಿ ಲಾಜಿಕ್ ಹುಡುಕುವ ಪ್ರಯತ್ನ ಮಾಡಿದರೆ ಪ್ರೇಕ್ಷಕ ಮಹಾಪ್ರಭುವಿಗೆ ನಿರಾಸೆ ಆಗ್ಬಹುದು.
ನಿರ್ದೇಶಕರು ಜಾಣ್ಮೆ ತೋರಬಹುದಿತ್ತು.!
'ಅಮ್ಮೋರು', 'ಅರುಂಧತಿ', 'ಅಂಜಿ' ಚಿತ್ರಗಳಲ್ಲಿ ನಿರ್ದೇಶಕ ಕೋಡಿ ರಾಮಕೃಷ್ಣ ತೋರಿದ್ದ ಜಾಣ್ಮೆ ಈ ಚಿತ್ರದಲ್ಲೂ ತೋರಿದ್ದರೆ 'ನಾಗರಹಾವು' ಖಂಡಿತ 'ಉತ್ತಮ' ಚಿತ್ರವಾಗುತ್ತಿತ್ತು. ಅವರ ಅನಾರೋಗ್ಯದ ಕಾರಣಕ್ಕೋ ಏನೋ, 'ನಾಗರಹಾವು' ಚಿತ್ರಕಥೆ ಅಲ್ಲಲ್ಲಿ ವೀಕ್ ಆದಂತಿದೆ.
ಟೆಕ್ನಿಕಲಿ ಸಿನಿಮಾ ಹೇಗಿದೆ?
'ನಾಗರಹಾವು' ಚಿತ್ರದಲ್ಲಿ ಗ್ರಾಫಿಕ್ಸ್ ಮತ್ತು ಕ್ಯಾಮರಾ ವರ್ಕ್ ಎಕ್ಸಲೆಂಟ್. ಕನ್ನಡ-ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗಿರುವ ಕಾರಣಕ್ಕೆ ಅಲ್ಲಲ್ಲಿ ಲಿಪ್ ಸಿಂಕ್ ಮಿಸ್ ಆಗಿದೆ. ದಿಗಂತ್ ಡಬ್ಬಿಂಗ್ ಮುಗಿಸಿಕೊಟ್ಟಿಲ್ಲ ಎನ್ನುವುದಕ್ಕೆ ತೆರೆಮೇಲೆ ಸಾಕ್ಷಿ ಇದೆ.! ಗುರುಕಿರಣ್ ಸಂಗೀತ ಗುನುಗುವಂತಿಲ್ಲ.
ಕ್ಲಾರಿಟಿ ಇಲ್ಲ
'ನಾಗರಹಾವು' ಚಿತ್ರದಲ್ಲಿ ವಿಷ್ಣುವರ್ಧನ್ ರವರ ಪಾತ್ರವೂ ಸೇರಿದಂತೆ ಕೆಲವೆಡೆ ಕ್ಲಾರಿಟಿ ಇಲ್ಲ. ರಂಗಾಯಣ ರಘು, ಕುರಿ ಪ್ರತಾಪ್ ಯಾಕ್ ಬಂದ್ರು ಅಂತ ಗೊತ್ತಾಗಲ್ಲ. ಈ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು. ದರ್ಶನ್ ಮಿಂಚಿರುವ ಹಾಡು ಆರಂಭಕ್ಕಿಂತ ಕ್ಲೈಮ್ಯಾಕ್ಸ್ ಗೆ ಹೆಚ್ಚು ಸೂಕ್ತವಾಗಿತ್ತು.
ಮ್ಯಾಜಿಕ್ ಬಯಸುವವರಿಗೆ ಮಾತ್ರ
ಲಾಜಿಕ್ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬಿಟ್ಟು ಬರೀ ಮ್ಯಾಜಿಕ್ ಬಯಸುವವರಿಗೆ 'ನಾಗರಹಾವು' ಹೇಳಿ ಮಾಡಿಸಿದ ಸಿನಿಮಾ.
ಫೈನಲ್ ಸ್ಟೇಟ್ ಮೆಂಟ್
ಇಷ್ಟು ದಿನ ತೆರೆಮೇಲೆ ಡಾ.ವಿಷ್ಣುವರ್ಧನ್ ರವರನ್ನ ಮಿಸ್ ಮಾಡಿಕೊಂಡವರು 'ನಾಗರಹಾವು' ಚಿತ್ರವನ್ನ ತಪ್ಪದೇ ನೋಡಿ. ರಮ್ಯಾ ಫ್ಯಾನ್ಸ್ ಗೂ 'ನಾಗರಹಾವು' ರಸದೌತಣ.
ವಿಡಿಯೋ ನೋಡಿ
'ನಾಗರಹಾವು' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು ಅಂತ ತಿಳಿಯಲು ಈ ವಿಡಿಯೋ ನೋಡಿ....