Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಮರ್ಶೆ: 'ಮಾಸ್ತಿ ಗುಡಿ'ಯ ಸೇವಕನಿಗೆ ಹುಲಿ ರಕ್ಷಣೆಯೇ ಕಾಯಕ
ಅವಸಾನದ ಅಂಚಿನಲ್ಲಿ ಇರುವ ನಮ್ಮ ರಾಷ್ಟ್ರೀಯ ಪ್ರಾಣಿ 'ಹುಲಿ' ಸಂರಕ್ಷಣೆ ಬಗ್ಗೆ ಮನರಂಜನೆಯೊಂದಿಗೆ ಸಮಾಜಕ್ಕೆ ಅರಿವು ಮೂಡಿಸುವ ಪ್ರಯತ್ನ ಪಟ್ಟಿರುವ 'ಮಾಸ್ತಿ ಗುಡಿ' ಚಿತ್ರತಂಡದ ಶ್ರಮಕ್ಕೆ ನಮ್ಮ ಕಡೆಯಿಂದ ಒಂದು ಹ್ಯಾಟ್ಸ್ ಆಫ್.
ಇಂದು ಬೆಳ್ಳಿ ಪರದೆ ಮೇಲೆ ರಾರಾಜಿಸುತ್ತಿರುವ 'ಮಾಸ್ತಿ ಗುಡಿ' ಸಿನಿಮಾದ ಈ ವಿಮರ್ಶೆ, ದಿವಂಗತರಾದ ನಟ ಅನಿಲ್ ಮತ್ತು ನಟ ಉದಯ್ ರವರಿಗೆ ಅರ್ಪಣೆ.
'ಮಾಸ್ತಿ ಗುಡಿ' ಕಥಾಹಂದರ
ಮಾನವನ ದುರಾಸೆಯಿಂದ ಕಾಡು ನಾಶ ಆಗುತ್ತಿದೆ. ವನ್ಯಜೀವಿಗಳು ನಶಿಸಿ ಹೋಗುತ್ತಿವೆ. ಅಹಾರ ಸರಪಳಿಯಲ್ಲಿ ಕೊಂಚ ಏರು-ಪೇರಾದರೂ ಮನುಷ್ಯನಿಗೆ ಉಳಿಗಾಲವಿಲ್ಲ. ಮನುಷ್ಯನಿಗೆ ನೀರು ಸಿಗಬೇಕು ಎಂದರೆ ಹುಲಿಗಳು ಬದುಕಬೇಕು. ಹುಲಿ ನಾಶ ತಪ್ಪಿಸಬೇಕು. 'ಮಾಸ್ತಿ ಗುಡಿ' ಚಿತ್ರದ ಕಥೆಯೂ ಇದೆ. ಧ್ಯೇಯವೂ ಇದೆ.!
'ಸೇವ್ ಟೈಗರ್'
'ಹುಲಿ ಸಂರಕ್ಷಿಸಿ' ಅಭಿಯಾನವೇ 'ಮಾಸ್ತಿ ಗುಡಿ' ಚಿತ್ರಕ್ಕೆ ಸ್ಫೂರ್ತಿ ಎಂದರೂ ತಪ್ಪಾಗಲಾರದು. ಮನುಷ್ಯ-ಪ್ರಾಣಿ ಸಂಘರ್ಷ ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳೇ 'ಮಾಸ್ತಿ ಗುಡಿ' ಚಿತ್ರದ ಕಥಾಹಂದರ.
ಕಥೆಯೇ ಗುಟ್ಟನ್ನು ಬಿಟ್ಟುಕೊಡುವುದಿಲ್ಲ
ಹುಲಿಗಳನ್ನು ಕೊಂದು ಕೋಟಿ ಕೋಟಿ ಲೂಟಿ ಮಾಡುವ ಖಳನಾಯಕರನ್ನ, ಕಾಡಿನ 'ಹುಲಿ'ಯೇ ಮಟ್ಟ ಹಾಕುವ ಸಿನಿಮಾ 'ಮಾಸ್ತಿ ಗುಡಿ'. ಅದು ಹೇಗೆ ಎಂಬ ಕುತೂಹಲ ಇದ್ದರೆ ಚಿತ್ರಮಂದಿರದಲ್ಲಿಯೇ 'ಮಾಸ್ತಿ ಗುಡಿ' ಚಿತ್ರವನ್ನ ಕಣ್ತುಂಬಿಕೊಳ್ಳಿ.
ಘರ್ಜಿಸುವ ದುನಿಯಾ ವಿಜಯ್
'ಮಾಸ್ತಿ ಗುಡಿ' ಸಿನಿಮಾದಲ್ಲಿ 'ಹುಲಿ'ಯಂತೆ ನಟ ದುನಿಯಾ ವಿಜಯ್ ಅಕ್ಷರಶಃ ಘರ್ಜಿಸಿದ್ದಾರೆ. ವನ್ಯ ಸಂಪತ್ತನ್ನು ಉಳಿಸಲು ಹೋರಾಡುವ ದಿಟ್ಟ ಯುವಕ, ಮಧ್ಯ ವಯಸ್ಕ ಹಾಗೂ ಮುದುಕನಾಗಿ ದುನಿಯಾ ವಿಜಯ್ ನಟನೆ ಅದ್ಭುತ. ಸ್ಟಂಟ್ಸ್ ವಿಷಯದಲ್ಲಂತೂ ದುನಿಯಾ ವಿಜಯ್ ಬಗ್ಗೆ ಕೆಮ್ಮಂಗಿಲ್ಲ.
ಮುದ್ದು ಹುಡುಗಿ ಅಮೂಲ್ಯ
'ಮಾಸ್ತಿ ಗುಡಿ' ಚಿತ್ರದಲ್ಲಿ ಆಗಾಗ ತೆರೆಮೇಲೆ ಕಾಣಿಸಿಕೊಳ್ಳುವ ನಟಿ ಅಮೂಲ್ಯ ರವರದ್ದು ಚೆಂದದ ಅಭಿನಯ.
ಕೃತಿ ಕರಬಂಧ ಆಕ್ಟಿಂಗ್ ಹೇಗಿದೆ.?
ತೆರೆಮೇಲೆ ಕ್ಯೂಟ್ ಆಗಿರುವ ಕೃತಿ ಕರಬಂಧ ಅಭಿನಯದಲ್ಲೂ ಹಿಂದೆ ಬಿದ್ದಿಲ್ಲ. ಕೊಟ್ಟ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಅನಿಲ್ ಮತ್ತು ಉದಯ್ ನಟನೆ....
ಸೆಕೆಂಡ್ ಹಾಫ್ ನಲ್ಲಿ ತೆರೆಮೇಲೆ ಮಿಂಚುವ ದಿವಂಗತ ಅನಿಲ್ ಹಾಗೂ ಉದಯ್ ಅಭಿನಯ ಚೆನ್ನಾಗಿದೆ. ಖಳನಾಯಕರಾಗಿ ಇಬ್ಬರೂ ಅಬ್ಬರಿಸಿದ್ದಾರೆ.
ತೀರಾ ಎಳೆಯದೇ ಇದ್ದಿದ್ರೆ....
ಕ್ಲೈಮ್ಯಾಕ್ಸ್ ನಲ್ಲಿ ಗುಹೆಯೊಳಗೆ ಅನಿಲ್, ಉದಯ್ ಹಾಗೂ ದುನಿಯಾ ವಿಜಯ್ ನಡುವೆ ಕಾದಾಟ ಆರಂಭವಾಗುತ್ತೆ. ಬಳಿಕ ಗುಹೆಯಿಂದ ಮೇಲೆ ಬರುವ ಮೂವರು ಹೆಲಿಕಾಫ್ಟರ್ ಏರುತ್ತಾರೆ. ನಂತರ ಘಟಿಸಿದ 'ದುರ್ಘಟನೆ' ಎಲ್ಲರಿಗೂ ಗೊತ್ತಿರೋದೇ.! ಆದ್ರೆ, ಗುಹೆಯಿಂದ ಹೆಲಿಕಾಫ್ಟರ್ ವರೆಗೂ ಗುದ್ದಾಟವನ್ನ ಎಳೆಯದೇ, ಗುಹೆಯಲ್ಲೇ ಮುಗಿಸಿದಿದ್ರೆ... ಬಹುಶಃ ಅನಿಲ್ ಹಾಗೂ ಉದಯ್ ಎಂಬ ಅಮಾಯಕರ ಪ್ರಾಣ ಉಳಿಯುತ್ತಿತ್ತೇನೋ ಎಂಬ ಅನಿಸಿಕೆ 'ಮಾಸ್ತಿ ಗುಡಿ' ಸಿನಿಮಾ ನೋಡಿದ್ಮೇಲೆ ಪ್ರೇಕ್ಷಕರಿಗೆ ಬರುವುದು ಸಹಜ.
ದುರ್ಘಟನೆ ತೆರೆಮೇಲೆ
ಹೆಲಿಕಾಫ್ಟರ್ ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಧುಮುಕಿ ಅನಿಲ್ ಹಾಗೂ ಉದಯ್ ಸಾವನ್ನಪಿದ ದುರ್ಘಟನೆಯ ಸನ್ನಿವೇಶ 'ಮಾಸ್ತಿ ಗುಡಿ' ಚಿತ್ರದಲ್ಲಿದೆ. 'ದು'ಸ್ಸಾಹಸ ರೋಚಕವಾಗಿದ್ದರೂ, ಪ್ರೇಕ್ಷಕರಿಗೆ ಅನವಶ್ಯಕ ಎಂದನಿಸುವುದು ಸುಳ್ಳಲ್ಲ.
ಉಳಿದವರ ಕಥೆ
ಉಳಿದಂತೆ ರಂಗಾಯಣ ರಘು, ರವಿಶಂಕರ್ ಗೌಡ, ಬಿ.ಜಯಶ್ರೀ, ಸುಹಾಸಿನಿ, ಸಾಧು ಕೋಕಿಲ, ತಬಲಾ ನಾಣಿ.. ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಹುಲಿ ಬಂತು ಹುಲಿ
'ಮಾಸ್ತಿ ಗುಡಿ' ಸಿನಿಮಾದಲ್ಲಿ ಬರುವ 'ಹುಲಿ' ಗ್ರಾಫಿಕ್ಸ್ ವರ್ಕ್ ಚೆನ್ನಾಗಿದೆ. ವಿ.ಎಫ್.ಎಕ್ಸ್ ಗುಣಮಟ್ಟ ಕೂಡ ಚೆನ್ನಾಗಿದೆ. ಕಳಪೆ ಅಂತ ಎಲ್ಲೂ ಅನಿಸುವುದಿಲ್ಲ.
ಹುಚ್ಚು ಸಾಹಸ
ಪ್ರಾಣಿಗಳನ್ನೆಲ್ಲ 'ಗ್ರಾಫಿಕ್ಸ್' ನಲ್ಲಿ ತೋರಿಸಿರುವ ನಾಗಶೇಖರ್ ರವರಿಗೆ ಹೆಲಿಕಾಫ್ಟರ್ ದೃಶ್ಯ 'ನೈಜ'ವಾಗಿರಬೇಕು ಅಂತ ಏಕೆ ಅನಿಸ್ತೋ.?
ಮೇಕಪ್ ಚೆನ್ನಾಗಿದೆ
ಯುವಕ, ಮಧ್ಯ ವಯಸ್ಕ ಹಾಗೂ ಮುದುಕನ ಪಾತ್ರದಲ್ಲಿ ದುನಿಯಾ ವಿಜಯ್ ಅಭಿನಯ ಎಷ್ಟು ನೈಜವಾಗಿದೆಯೋ, ಅದಕ್ಕೆ ತಕ್ಕಂತೆ ಮಾಡಿರುವ ಮೇಕಪ್ ಕೂಡ ಅಷ್ಟೇ ನೈಜವಾಗಿದೆ.
ಸಂಗೀತ ಮತ್ತು ಛಾಯಾಗ್ರಹಣ
ಸಾಧು ಕೋಕಿಲ ಸಂಯೋಜಿಸಿರುವ ಹಾಡುಗಳು ಇಂಪಾಗಿವೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕಥೆಗೆ ಪೂರಕವಾಗಿದೆ. ಸತ್ಯ ಹೆಗಡೆ ಕ್ಯಾಮರಾ ಕಂಗಳಲ್ಲಿ ಕಾದು, ಜಲಪಾತ, ಸಸ್ಯ ರಾಶಿ ಸುಂದರ.. ಮನೋಹರ.
ಸೆಕೆಂಡ್ ಹಾಫ್ ಸ್ಲೋ
ಫಸ್ಟ್ ಹಾಫ್ ಮನರಂಜನೆಯಿಂದ ಕೂಡಿರುವ 'ಮಾಸ್ತಿ ಗುಡಿ' ಸಿನಿಮಾ, ಸೆಕೆಂಡ್ ಹಾಫ್ ನಲ್ಲಿ ಕೊಂಚ ಎಳೆದಂತೆ ಭಾಸವಾಗುತ್ತದೆ. ಚಿತ್ರಕಥೆ ಬಗ್ಗೆ ನಾಗಶೇಖರ್ ಇನ್ನೂ ಫೋಕಸ್ ಮಾಡಬೇಕಿತ್ತು. ಸಂಕಲನ ಚುರುಕಾಗಿರಬೇಕಿತ್ತು.
ಎಲ್ಲರೂ ಒಮ್ಮೆ ನೋಡಿ...
ಖಾಲಿ ಪೋಲಿ ಲವ್ ಸ್ಟೋರಿ ಹಾಗೂ ಹಾರರ್ ಸಿನಿಮಾಗಳೇ ಹೆಚ್ಚಾಗಿರುವ ಈಗಿನ ಕಾಲದಲ್ಲಿ ನಿರ್ದೇಶಕ ನಾಗಶೇಖರ್ 'ಮಾಸ್ತಿ ಗುಡಿ' ಎಂಬ ಕಾಡು ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತ ಚಿತ್ರವನ್ನ ಬಹಳ ವಿಭಿನ್ನವಾಗಿ ಮಾಡಿದ್ದಾರೆ.