ಗಣೇಶ್ 'ಬುಗುರಿ' ಆಟ ನೋಡಿ ವಿಮರ್ಶಕರು ಏನಂದ್ರು?
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 25ನೇ ಸಿನಿಮಾ 'ಬುಗುರಿ'. ಹಲವು ವಿಶೇಷತೆಗಳ ಆಗರವಾಗಿರುವ 'ಬುಗುರಿ', ಗಣೇಶ್ ಮತ್ತು ನಿರ್ದೇಶಕ ಎಂ.ಡಿ.ಶ್ರೀಧರ್ ಅವರ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ. ಹೀಗಾಗಿ ಈ ಸಿನಿಮಾದ ಬಗ್ಗೆ ಎಕ್ಸ್ ಪೆಕ್ಟೇಷನ್ಸ್ ತುಂಬಾನೇ ಇದೆ.
ಗಣೇಶ್-ರೀಚಾ ಪನೈ-ಎರಿಕಾ ಫರ್ನಾಂಡಿಸ್ ಅಭಿನಯದ 'ಬುಗುರಿ' ಚಿತ್ರ ಅಪ್ಪಟ ಫ್ಯಾಮಿಲಿ ಎಂಟರ್ ಟೇನರ್ ಸಿನಿಮಾ. ಇಂತಹ ಚಿತ್ರ ನಮ್ಮ ಕನ್ನಡ ಸಿನಿ ವಿಮರ್ಶಕರಿಗೆ ಇಷ್ಟವಾಯ್ತಾ? [ಗಣೇಶ್ ಜೊತೆ 'ಬುಗುರಿ' ಆಟ ಆಡಿದ ಶ್ರೀನಗರ ಕಿಟ್ಟಿ]
ಕನ್ನಡದ ಜನಪ್ರಿಯ ಪತ್ರಿಕೆಗಳು 'ಬುಗುರಿ' ಚಿತ್ರದ ಕುರಿತು ಪ್ರಕಟಿಸಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. 'ಬುಗುರಿ' ಬಗ್ಗೆ ಯಾರ್ಯಾರು ಏನು ಹೇಳಿದ್ದಾರೆ ಅಂತ ನೀವೇ ಓದಿ....
ಬದುಕಿನ ಬಣ್ಣ ತೆರೆದಿಡುವ 'ಬುಗುರಿ'- ಪ್ರಜಾವಾಣಿ
‘ಪ್ರೀತಿ ಪ್ರಿಪರೇಷನ್ ಅಲ್ಲ, ಇನ್ಸಿಡೆಂಟ್' ಎನ್ನುವ ನಾಯಕನ ಮಾತು ಮತ್ತು ಪ್ರೀತಿಸುವ ಹುಡುಗಿಯ ಮನವೊಲಿಸಲು ಆತ ಮಾಡುವ ಕಸರತ್ತುಗಳು ಹರೆಯದ ಹುಡುಗನ ಸಹಜ ತುಮುಲಗಳಾಗಿ ಕಾಣುತ್ತವೆ. ಭಿನ್ನ ಕೌಟುಂಬಿಕ ವಾತಾವರಣ ಮತ್ತು ಪರಿಸ್ಥಿತಿಗಳು ಪ್ರೇಮಿಗಳ ಮೇಲೆ ಬೀರುವ ಪರಿಣಾಮ ಮತ್ತು ಅದರ ಫಲಿತಾಂಶ ‘ಬುಗುರಿ'ಯ ಮುಖ್ಯ ಕಥಾವಸ್ತು. ಅಳಿಸಿ ಹೋಗಿರುವ ಚಿತ್ರಕ್ಕೆ (ಪ್ರೀತಿ) ಮತ್ತೆ ಬಣ್ಣ ಬಳಿಯುವ ಪ್ರಯತ್ನದಲ್ಲಿ ನಾಯಕ ಯಶ ಪಡೆಯುವನೇ? ಅರಸಿ ಬಂದಿರುವ (ನಿಶ್ಚಿತಾರ್ಥ ಮಾಡಿಕೊಂಡಿರುವ ವಧು) ಪಟದ ಮೇಲೆ ಹೊಸ ಚಿತ್ತಾರ ಬಿಡಿಸುವನೇ, ಪ್ರಶ್ನೆಗಳಿಗೆ ‘ಬುಗುರಿ' ಆಟ ನೋಡಿ ಉತ್ತರ ಕಂಡುಕೊಳ್ಳಬಹುದು. - ಡಿ.ಎಂ.ಕುರ್ಕೆ ಪ್ರಶಾಂತ
ನಡುಗಾಲದಲ್ಲೊಂದು ಹೃದಯಸ್ಪರ್ಶಿ ಪ್ರೇಮಕತೆ - ಉದಯವಾಣಿ
"ಈ ಜಗತ್ತಲ್ಲಿ ಅನ್ನ ಸಿಕ್ಕಿಲ್ಲ ಅಂತ ಕೊರಗುವವರಿಗಿಂತ ಪ್ರೀತಿ ಸಿಕ್ಕಿಲ್ಲ ಅಂತ ಕೊರಗುವವರೇ ಹೆಚ್ಚು ....' - ಸಿನಿಮಾ ಮುಗಿಯಲು ಐದು ನಿಮಿಷ ಮುಂಚೆ ಈ ಡೈಲಾಗ್ ಬರುತ್ತದೆ. ಅಷ್ಟೊತ್ತಿಗಾಗಲೇ ಪ್ರೇಕ್ಷಕ ಮುಂದೇನು ಆಗಬಹುದೆಂಬ ಕುತೂಹಲದ ಜೊತೆಗೆ ಕಣ್ಣಂಚ್ಚಲ್ಲಿ ಒಂದು ಹನಿ ನೀರು ತುಂಬಿಕೊಂಡು ಕಾಯುತ್ತಿರುತ್ತಾನೆ. ಸಿನಿಮಾದ ಆರಂಭ ನೋಡಿದಾಗ ಚಿತ್ರ ಇಷ್ಟೊಂದು ಗಂಭೀರವಾಗಬಹುದು ಎಂದು ಯಾರೂ ಊಹಿಸಿರೋದಿಲ್ಲ. ಆದರೆ, ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಗಳನ್ನು ನೀಡುವ ಮೂಲಕ ಒಂದು ನವಿರಾದ ಪ್ರೇಮಕಥೆಯನ್ನು ಕಟ್ಟಿಕೊಡಲಾಗಿದೆ. ಬಿ.ಎ.ಮಧು ಅವರ ಕಥೆಯನ್ನು ನಿರ್ದೇಶಕ ಎಂ.ಡಿ.ಶ್ರೀಧರ್ ನೀಟಾಗಿ ಕಟ್ಟಿಕೊಟ್ಟಿದ್ದಾರೆ.
ಪ್ರೀತಿಯ ಬುಗುರಿಗೆ ಬಾಂಧವ್ಯದ ಚಾಟಿ - ವಿಜಯ ಕರ್ನಾಟಕ
ಗೋಲ್ಡನ್ ಸ್ಟಾರ್ ಗಣೇಶ್ ಜತೆ ಮತ್ತದೇ 'ಪ್ರೀತಿ, ಪ್ರೇಮ ಮತ್ತು ತ್ಯಾಗ'ದ ಬುಗುರಿ ತಿರುಗಿಸಿದ್ದಾರೆ ನಿರ್ದೇಶಕ ಎಂಡಿ ಶ್ರೀಧರ್. ಸರಕು ಹಳತಾದರೂ ಚಂದದ ಹಾಡು, ಹಾಸ್ಯ, ಸುಂದರ ಲೊಕೆಷನ್ ಮತ್ತು ಮಾತುಗಳಿಂದ ಬುಗುರಿ ಸಿನಿಮಾ ಇಷ್ಟವಾಗುತ್ತದೆ. ಪ್ರೀತಿಯ ಸುತ್ತ ಎಂಬ ಟ್ಯಾಗ್ಲೈನ್ಗೆ ತಕ್ಕಂತೆ ಬುಗುರಿ ಚಿತ್ರವಿದೆ. ನಾಯಕ ಗಣೇಶ್ (ಕೃಷ್ಣ) ಮತ್ತು ನಾಯಕಿ ನಂದಿನಿ ( ಎರಿಕಾ ಫರ್ನಾಡಿಸ್) ಎಂಜಿನಿಯರ್ ವಿದ್ಯಾರ್ಥಿಗಳು. ಬ್ಯಾಗ್ ಕಳೆದುಕೊಂಡು ಪರಿತಪಿಸುವ ನಾಯಕಿಗೆ ಸಹಾಯ ಮಾಡಲು ಹೋಗುವ ನಾಯಕ, ಆನಂತರ ಆಕೆಯನ್ನು ಪ್ರೀತಿಸುತ್ತಾನೆ. ಹುಡುಗಿಗೋಸ್ಕರ ಕಾಲೇಜನ್ನೇ ಬದಲಾಯಿಸುತ್ತಾನೆ. ನಂದಿನಿ ಹೋಗುವ ಕಾಲೇಜ್ಗೆ ಅಡ್ಮಿಷನ್ ಮಾಡಿಸಿ, ಅವಳ ಸುತ್ತಾ ಸುತ್ತಿ ಪರೀಕ್ಷೆಯಲ್ಲಿ ಫೇಲಾಗ್ತಾನೆ. ಆನಂತರ ಗಣೇಶ್ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದೇ ಚಿತ್ರಕಥೆಯ ಸಾರಾಂಶ. - ಮಹಾಬಲೇಶ್ವರ ಕಲ್ಕಣಿ
ಚೆಲ್ಲಾಟವಾಡೋ ಕೃಷ್ಣನ 'ಬುಗುರಿ' - ಕನ್ನಡ ಪ್ರಭ
ಎಂ.ಡಿ ಶ್ರೀಧರ್ ನಿರ್ದೇಶನದ, ನಟ ಗಣೇಶ್ ಅಭಿನಯದ 'ಬುಗುರಿ' ಚಿತ್ರದ ಬಗ್ಗೆ ಒಂದೇ ಪೆಟ್ಟಿಗೆ ಫ್ಯಾನ್ ಭಾಷೆಯಲ್ಲಿ ಹೇಳುವುದಾದರೆ 'ಫಸ್ಟ್ ಹಾಫ್ ಓಕೆ, ಸೆಕೆಂಡ್ ಹಾಫ್ ಸೂಪರ್ರು'. ಎಂ.ಡಿ ಶ್ರೀಧರ್ ಮತ್ತು ಗಣೇಶ್ ಕಾಂಬಿನೇಶನ್ ನಲ್ಲಿ ಹಿಂದೆ ಮೂಡಿಬಂದ 'ಚೆಲ್ಲಾಟ' ಮತ್ತು 'ಕೃಷ್ಣ' ಎರಡೂ ಚಿತ್ರಗಳು ಯಶಸ್ವಿಯಾಗಿದ್ದವು. ಅಲ್ಲದೆ 'ಶ್ರಾವಣಿ ಸುಬ್ರಮಣ್ಯ'ದ ನಂತರ ಗಣೇಶ್ ಗೂ ಬ್ರೇಕ್ ಸಿಕ್ಕಿರಲಿಲ್ಲ. ಹಾಗಾಗಿ 'ಬುಗುರಿ' ಮೇಲೆ ನಿರೀಕ್ಷೆಗಳಿದ್ದುದು ಸಹಜ. 'ಚೆಲ್ಲಾಟ', 'ಕೃಷ್ಣ' ಚಿತ್ರಗಳನ್ನು ಇಷ್ಟಪಟ್ಟವರಿಗೆ ಈ ಚಿತ್ರವೂ ರುಚಿಸುವುದರಲ್ಲಿ ಸಂಶಯವಿಲ್ಲ. ರೊಮ್ಯಾಂಟಿಕ್ ಚಿತ್ರಕ್ಕೂ ಬುಗುರಿಗೂ ಎತ್ತಣದೆತ್ತ ಸಂಬಂಧ ಎಂದು ಪರಾ ಪರಾ ಕೆರೆದುಕೊಳ್ಳುವವರಿಗೆ ಉತ್ತರ, ಚಿತ್ರದಾರಂಭದಲ್ಲಿ ರಂಗು ರಂಗಾಗಿ ಬರುವ ಟೈಟಲ್ ಕಾರ್ಡ್ ಮತ್ತು 'ಈ ಭೂಮಿ ಬಣ್ಣದ ಬುಗುರಿ' ಹಳೆ ಹಾಡಿನಲ್ಲಿ ದೊರಕುತ್ತದೆ. ಎಂ.ಡಿ ಶ್ರೀಧರ್, ಗಣೇಶ್ ಬಾಯಲ್ಲಿ ತತ್ವಜ್ಞಾನವನ್ನು ಪ್ರೇಕ್ಷಕರಿಗೆ ಒಪ್ಪಿಸಿರುವುದು ಅದಕ್ಕೆ ಸಾಕ್ಷ್ಯ ಒದಗಿಸುತ್ತದೆ. - ಹರ್ಷವರ್ಧನ್


Click it and Unblock the Notifications











