Ghaati Review ; ಬೆಳ್ಳಿತೆರೆಯಲ್ಲಿ ಧಗಧಗಿಸಿದ ಅನುಷ್ಕಾ ಶೆಟ್ಟಿ, ಮೈಕೊಡವಿ ಎದ್ದು ನಿಂತರಾ ಸ್ವೀಟಿ ? ಹೇಗಿದೆ ಘಾಟಿ?
ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ನಾಯಕಿಯ ಸುತ್ತ ಕಥೆ ಸುತ್ತಿದರೆ ಪ್ರೇಕ್ಷಕರ ತಲೆ ಸುತ್ತಿ ಬರುತ್ತೆ ಎನ್ನುವ ಹಲವರ ನಂಬಿಕೆಯೇ ಇದಕ್ಕೆ ಮೂಲ ಕಾರಣ. ಹೀಗಾಗಿಯೇ ಹಲವರು ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಎಂದುಕೊಂಡಿದ್ದಾರೆ. ಆದರೆ.. ಇವರ ಈ ಮಾತುಗಳನ್ನು ..
ನಂಬಿಕೆಯನ್ನ .. ಅವಕಾಶ ಸಿಕ್ಕಾಗ ಹಲವರು ಇಲ್ಲಿಯವರೆಗೆ ಸುಳ್ಳಾಗಿಸಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ಮಿಂಚಿದ್ದಾರೆ. ಉದಾಹರಣೆಗೆ ಅನುಷ್ಕಾ ಶೆಟ್ಟಿ. ಹೌದು, ಅನುಷ್ಕಾ ಶೆಟ್ಟಿ ಪಕ್ಕದ ಆಂಧ್ರದಲ್ಲಿ ಮಿಂಚುತ್ತಿರುವ ಕನ್ನಡತಿ.

ಎರಡು ದಶಕಗಳ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ ಹಲವಾರು ಚಿತ್ರ ಮತ್ತು ವೈವಿಧ್ಯಮಯ ಪಾತ್ರವನ್ನು ಮಾಡಿರುವ ಅನುಷ್ಕಾ ಸದ್ಯ ಎರಡು ವರ್ಷಗಳ ನಂತರ ತಮ್ಮ ಅಭಿಮಾನಿಗಳಿಗೆ ಬೆಳ್ಳಿತೆರೆಯಲ್ಲಿ ದರ್ಶನ ನೀಡಿದ್ದಾರೆ. ''ಘಾಟಿ'' ಮೂಲಕ ಪ್ರತ್ಯಕ್ಷರಾಗಿದ್ದಾರೆ. ಹಾಗಿದ್ದರೆ ''ಘಾಟಿ'' ಹೇಗಿದೆ..? ಚಿತ್ರದ ಕಥೆ ಏನು..? ಚಿತ್ರ ನೋಡಬಹುದಾ ? ಈ ಎಲ್ಲಾ ಪ್ರಶ್ನೆಗಳಿಗೆ ''ಫಿಲ್ಮಿಬೀಟ್ ತೆಲುಗು''ದ ಹಿರಿಯ ಪತ್ರಕರ್ತ ರಾಜಾ ಬಾಬು ಉತ್ತರ ನೀಡುವ ಪ್ರಯತ್ನ ಮಾಡಿದ್ದು, ಚಿತ್ರದ ಕುರಿತು ಅವರ ವಿಮರ್ಶೆಯನ್ನು ತಿಳಿಯಲು ಮುಂದೆ ಓದಿ.
ಕಥಾಹಂದರ
ಆಂಧ್ರ ಮತ್ತು ಒಡಿಶಾದ ಗಡಿಯಲ್ಲಿ ಅದೊಂದು ಕೊರಾಪುಟ್ ಎಂಬ ಊರು. ಇಡೀ ಊರಿನ ತುಂಬಾ ಇಲ್ಲಿ ''ಗಾಂಜಾ'' ಘಾಟು ಇರುತ್ತೆ. ಕುಂಡಲ ನಾಯ್ಡು (ಚೈತನ್ಯ ರಾವ್) ಮತ್ತು ಕಷ್ಟಾಲ ನಾಯ್ಡು (ರವೀಂದ್ರ ವಿಜಯ್) ಈ ಸಾಮ್ರಾಜ್ಯದ ಅರಸರು. ಈ ಸಾಮ್ರಾಜ್ಯದ ಕೂಲಿಯಾಳುಗಳನ್ನೇ ಘಾಟಿಗಳು ಎಂದು ಕರೆಯಲಾಗುತ್ತಿರುತ್ತೆ. ಹೀಗಿರುವಾಗ ಇದೇ ಊರಲ್ಲಿ ಕಂಡಕ್ಟರ್ ಕೆಲಸ ಮಾಡಿಕೊಂಡಿರುವ ಶೀಲಾವತಿ (ಅನುಷ್ಕಾ ಶೆಟ್ಟಿ) ದೇಶಿ ರಾಜು (ವಿಕ್ರಮ್ ಪ್ರಭು) ಎಂಬ ವೈದ್ಯನಿಗೆ ಮನ ಸೋಲುತ್ತಾಳೆ. ಇದೇ ಸಮಯದಲ್ಲಿ ಗಾಂಜಾ ಸಾಗಣೆಯಲ್ಲಿ ನಿರತವಾದ ಘಾಟಿಗಳ ಮೇಲಿನ ಅನ್ಯಾಯದ ವಿರುದ್ಧ ತಿರುಗಿ ಬೀಳುತ್ತಾಳೆ.
ತಮ್ಮ ವಿರುದ್ಧ ಎದ್ದ ಈ ಬಂಡಾಯದ ಅಲೆಯನ್ನು ಸಹಿಸದ ಕುಂಡಲ ನಾಯ್ಡು ಮತ್ತು ಕಷ್ಬಾಲ ನಾಯ್ಡು, ಶೀಲಾವತಿ ಮತ್ತು ದೇಶಿ ರಾಜು ವಿರುದ್ಧ ಕತ್ತಿ ಮಸೆಯಲು ಶುರು ಮಾಡುತ್ತಾರೆ. ಹಗೆತನ-ದ್ವೇಷ ಸಾಧಿಸಲು ಮುಂದಾಗುತ್ತಾರೆ. ಮುಂದೇನಾಗುತ್ತೆ..? ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದ ಅನುಷ್ಕಾ ಈ ಗಾಂಜಾ ಹಿಂದೆ ಬೀಳುವುದೇಕೆ..? ರೌದ್ರಾವತಾರ ಎತ್ತುವುದೇಕೆ..? ದೇಶಿ ರಾಜು ನಿಜವಾದ ಉದ್ದೇಶವೇನಾಗಿರುತ್ತೆ..? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ನೀವು ಚಿತ್ರಮಂಂದಿರದಲ್ಲಿಯೇ ನೋಡಿ ಪಡೆಯಬೇಕು.
ಅಭಿನಯ ಹೇಗಿದೆ..?
ಶೀಲಾವತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನುಷ್ಕಾ ಶೆಟ್ಟಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ತಮ್ಮ ಹೆಗಲ ಮೇಲೆ ಚಿತ್ರವನ್ನು ಹೊತ್ತು ನಡೆದಿದ್ದಾರೆ. ಸೇಡಿನ ಈ ಕಥೆಯಲ್ಲಿ ಅಕ್ಷರಶಃ ಧಗಧಗಿಸಿದ್ದಾರೆ.ಅನುಷ್ಕಾ ಅಬ್ಬರಿಸುತ್ತಿದ್ದರೆ ವಿಕ್ರಮ್ ಪ್ರಭು ತಮ್ಮ ತಣ್ಣನೆಯ ಅಭಿನಯದಿಂದ ಗಮನ ಸೆಳೆಯುತ್ತಾರೆ. ಕುಂಡಲ ನಾಯ್ಡು ಪಾತ್ರವನ್ನು ನಿರ್ವಹಿಸಿರುವ ಚೈತನ್ಯ ರಾವ್ ಈ ಚಿತ್ರದ ಬಹುದೊಡ್ಡ ಅಚ್ಚರಿ. ಜಗಪತಿ ಬಾಬು.. ಜಾನ್ ವಿಜಯ್.. ರವೀಂದ್ರ ವಿಜಯ್.. ರಾಜು ಸುಂದರಂ.. ತಮಗೆ ನೀಡಲಾದ ಕೆಲಸವನ್ನು ಅಷ್ಟೇ ಶ್ರದ್ಧೆಯಿಂದ ಮಾಡಿದ್ದಾರೆ.

ಪ್ಲಸ್ ಪಾಯಿಂಟ್ ಏನು ?
ಅನುಷ್ಕಾ ಶೆಟ್ಟಿ ಅವರನ್ನು ಹೊರತು ಪಡಿಸಿದರೆ ವಿದ್ಯಾಸಾಗರ ಅವರ ಸಂಗೀತ ಚಿತ್ರದ ತೂಕ ಹೆಚ್ಚಿಸಿದೆ. ಮನೋಜ್ ರೆಡ್ಡಿ ಕ್ಯಾಮರಾ ಕಣ್ಣು ಈ ''ಘಾಟಿ''ಯನ್ನು ಇನ್ನೂ ಚೆಂದವಾಗಿಸಿದೆ. ಸಾಯಿ ಮಾಧವ್ ಬುರ್ರಾ ಅವರ ಸಂಭಾಷಣೆ ಕೆಲ ಕಡೆ ಕಿಕ್ ಕೊಡುತ್ತವೆ. ರಾಜೀವ್ ರೆಡ್ಡಿ ಮತ್ತು ಸಾಯಿಬಾಬು ಜಗರ್ಮಮಡಿ ಚಿತ್ರಕ್ಕೆ ಎಲ್ಲಿಯೂ ಕುಂದು ಕೊರತೆಯಾಗದಂತೆ ಹಣ ಹೂಡಿದ್ದಾರೆ.
ಮೈನಸ್ ಪಾಯಿಂಟ್ ಏನು ?
ನಿರ್ದೇಶಕ ಕ್ರಿಶ್ ಜಗರ್ಲಮುಡಿ ಚಿತ್ರದ ಕಥೆ ಮತ್ತು ಚಿತ್ರಕಥೆಯತ್ತ ತುಸು ಗಮನ ವಹಿಸಿದ್ದರೆ ಈ ''ಘಾಟಿ'' ಸ್ವೀಟಿ ಮತ್ತು ಅವರ ಅಭಿಮಾನಿಗಳ ಮುಖದಲ್ಲಿನ ಮಂದಹಾಸವನ್ನು ಹೆಚ್ಚಿಸುತ್ತಿತ್ತು. ಚಿತ್ರದ ಅವಧಿ ನೋಡುಗರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತೆ. ಮೊದಲಾರ್ಧದಲ್ಲಿ ಕಳಪೆ ಬರವಣಿಗೆಯಿಂದ ಅಲ್ಲಲ್ಲಿ ಕೊನೆಯುಸಿರೆಳೆಯುವ ಈ ''ಘಾಟಿ'' ದ್ವೀತಿಯಾರ್ಧದಲ್ಲಿ ಲಯಕ್ಕೆ ಮರಳಿದಂತಾಗುತ್ತೆ. ಆದರೆ ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ನಿರಾಸೆಗೊಳಿಸುತ್ತಾವೆ. ಇನ್ನು ಅಲ್ಲಲ್ಲಿ ಈ ಚಿತ್ರ ''ಪುಷ್ಪ - ದಿ ರೈಸ್'' ಚಿತ್ರವನ್ನು ಕೂಡ ನೆನಪು ಮಾಡುತ್ತೆ. ಸೀತಾ ದೇವಿಯಿಂದ ಹಿಡಿದು ದುರ್ಗಾ ದೇವಿಯವರೆಗೆ ಚಿತ್ರದಲ್ಲಿ ಹಲವು ದೃಶ್ಯ ರೂಪಕಗಳು ಇದ್ದರು ಕೂಡ ಒಂದು ಹಂತದ ನಂತರ, ಚಿತ್ರದಲ್ಲಿನ ರಕ್ತಪಾತವು ಪ್ರೇಕ್ಷಕರ ಕಣ್ಣುಗಳು ದಣಿಯುವಂತೆ ಮಾಡುತ್ತವೆ.
ಕೊನೆ ಮಾತು
ಒಟ್ನಲ್ಲಿ ಅನುಷ್ಕಾ ಶೆಟ್ಟಿ ಅವರನ್ನು ಬೆಳ್ಳಿತೆರೆಯಲ್ಲಿ ಮಿಸ್ ಮಾಡಿಕೊಂಡವರು ಮತ್ತು ಅವರ ಅಭಿಮಾನಿಗಳು ಈ ಚಿತ್ರವನ್ನು ಒಮ್ಮೆ ನೋಡಬಹುದು. ಮಾಸ್ ಚಿತ್ರವನ್ನು ಇಷ್ಟ ಪಡುವವರಿಗೆ ಕೂಡ ಈ ಚಿತ್ರ ಇಷ್ಟವಾಗುತ್ತೆ. ನಿರೀಕ್ಷೆಗಳಿಲ್ಲದೆ ಚಿತ್ರ ನೋಡಲು ಹೋದರೆ, ಚಿತ್ರ ಇಷ್ಟವಾದರೂ ಆಗಬಹುದು. ಪೈಸಾ ವಸೂಲ್ ಸಿನಿಮಾ ಎಂದು ಕೂಡ ನಿಮಗೆ ಅನಿಸಬಹುದು.


Click it and Unblock the Notifications











