Gowli Movie Review : ಮುಗ್ದನನ್ನು ಕೆಣಕಿದ್ರೆ ಸಂಹಾರವೇ; ಆರು ವರ್ಷಗಳ ಗ್ಯಾಪ್ ಬಳಿಕ ಬಂದ 'ಹೀರೊ' ಕಿಟ್ಟಿ ಗೆದ್ರಾ?
ಚಿತ್ರ: ಗೌಳಿ
ತಾರಾಗಣ: ಶ್ರೀನಗರ ಕಿಟ್ಟಿ, ಪಾವನ ಗೌಡ, ರಂಗಾಯಣ ರಘು, ಶರತ್ ಲೋಹಿತಾಶ್ವ, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ.
ನಿರ್ದೇಶಕ: ಸೂರ ಶೇಖರ್
ಕಾಡಿನ ಮಧ್ಯೆ ಇರುವ ಹಳ್ಳಿಯೊಂದರಲ್ಲಿ ವಾಸಿಸುವ ಜನರ ಮೇಲೆ ಹಾಗೂ ಅವರ ಸ್ಥಳದ ಮೇಲೆ ಖಳನಾಯಕರ ಕಣ್ಣು ಬೀಳುವುದು ಹಾಗೂ ಆ ಖಳನಾಯಕರಿಗೆ ಅಲ್ಲಿನ ಪೊಲೀಸರೇ ಬೆಂಬಲ ನೀಡುವುದು, ಇದರ ವಿರುದ್ಧ ಆ ಹಳ್ಳಿಯವರು ಹೋರಾಡುವ ಕಥೆ ಇರುವ ಹಲವು ಚಿತ್ರಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ. ತುಸು ಇದೇ ಮಾದರಿಯ ಕಥೆಯನ್ನು ಹೊಂದಿರುವ ಗೌಳಿ ವೈಯಕ್ತಿಕ ಕಾರಣದಿಂದ ನಾಯಕನ ಕುಟುಂಬವನ್ನು ಟಾರ್ಗೆಟ್ ಮಾಡ್ತಾರೆ ಎಂಬ ಅಂಶದಿಂದ ವಿಭಿನ್ನ ಎನಿಸಲಿದೆ.
ಗೌಳಿ ( ಶ್ರೀನಗರ ಕಿಟ್ಟಿ ), ಗಿರಿಜ ( ಪಾವನಾ ಗೌಡ ) ಹಾಗೂ ಪುಟ್ಟವ್ವ ( ನಾಯಕ ಹಾಗೂ ನಾಯಕಿಯ ಮಗಳು ) ಈ ಮೂವರ ಪುಟ್ಟ ಕುಟುಂಬ ಹಳ್ಳಿಯಲ್ಲಿ ಕುರಿ, ಹಸು ಸಾಕಣೆ ಮಾಡಿಕೊಂಡು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ. ತೀವ್ರ ಹಿಂದುಳಿದ ಹಳ್ಳಿಯಾದ ಕಾರಣ ನಾಯಕಿಯೇ ಅಲ್ಲಿನ ಮಕ್ಕಳಿಗೆ ಪ್ರತಿದಿನ ಕೆಲ ಸಮಯ ಪಾಠ ಹೇಳುವ ಕೆಲಸ ಮಾಡುತ್ತಿರುತ್ತಾಳೆ. ಮೊದಲೇ ಹೇಳಿದಂತೆ ಅಲ್ಲಿನ ಪೊಲೀಸ್ ಕಾಳಿಂಗ (ಶರತ್ ಲೋಹಿತಾಶ್ವ) ಕ್ರೂರಿ.
ಖಳನಾಯಕನ ಕೋರಿಕೆಯ ಮೇರೆಗೆ ಬಾಲಕಿಯೊಬ್ಬಳನ್ನು ಅಪಹರಿಸಿ ಕೊಡಲು ಒಪ್ಪಿಕೊಳ್ಳುತ್ತಾನೆ. ಇದಕ್ಕೆ ಅದೇ ಊರಿನ ಮೂವರು ಕಿಡಿಗೇಡಿಗಳ ಸಹಾಯವನ್ನೂ ಸಹ ಪಡೆಯುತ್ತಾನೆ. ನಾಯಕಿ ಪಾಠ ಹೇಳಿಕೊಡುವ ಮಕ್ಕಳಿನ ಗುಂಪಿನ ಓರ್ವ ಬಾಲಕಿಯ ಅಪಹರಣವಾಗುತ್ತೆ. ಬಾಲಕಿ ನಾಪತ್ತೆಯಾದ ಕಾರಣ ಪೊಲೀಸ್ ನಾಯಕಿಯನ್ನು ವಿಚಾರಣೆ ಮಾಡುವ ನೆಪದಲ್ಲಿ ಆಕೆಯ ಮೇಲೆಯೇ ವಕ್ರದೃಷ್ಟಿ ಬೀರುತ್ತಾನೆ. ಇದು ಪೊಲೀಸ್ ಹಾಗೂ ಗೌಳಿ ಕುಟುಂಬದ ನಡುವಿನ ಕಲಹಕ್ಕೆ ಕಾರಣವಾಗುತ್ತೆ. ಹೀಗೆ ಮಾಡದ ತಪ್ಪಿಗೆ ಹಿಂಸೆ ಅನುಭವಿಸುವ ಗೌಳಿ ಕುಟುಂಬ ಆ ಸಮಸ್ಯೆಯಿಂದ ಹೇಗೆ ಹೊರಬರುತ್ತೆ ಎನ್ನುವುದೇ ಚಿತ್ರದ ಉಳಿದ ಕಥೆ.
ಚಿತ್ರದ ಪ್ಲಸ್ ಪಾಯಿಂಟ್ ಏನು?
ಚಿತ್ರ ಸಂಪೂರ್ಣವಾಗಿ ಹಳ್ಳಿ ಹಾಗೂ ಕಾಡಿನಲ್ಲಿಯೇ ನಡೆಯಲಿದ್ದು, ಪಕ್ಕಾ ಹಳ್ಳಿ ಜನರನ್ನೇ ಹಲವು ದೃಶ್ಯಗಳಲ್ಲಿ ಉಪಯೋಗಿಸಿಕೊಂಡಿರುವುದು ಹಾಗೂ ಕಿಟ್ಟಿ, ಪಾವನ ಹಾಗೂ ಕಿಟ್ಟಿಯ ಚಿಕ್ಕಪ್ಪ ರಂಗಾಯಣ ರಘು ಥೇಟ್ ಹಳ್ಳಿ ಜನರ ಹಾಗೆಯೇ ನಟಿಸಿರುವುದು ಚಿತ್ರದ ಪ್ಲಸ್ ಪಾಯಿಂಟ್. ಛಾಯಾಗ್ರಹಣ ಹಳ್ಳಿ ಕಥೆಗೆ ಬೇಕಾದಷ್ಟು ಅಚ್ಚುಕಟ್ಟಾಗಿದ್ದು ಇದೂ ಸಹ ಪ್ಲಸ್ ಪಾಯಿಂಟ್ ಆಗಿದೆ. ಶ್ರೀನಗರ ಕಿಟ್ಟಿ ಇಲ್ಲಿಯವರೆಗೂ ಕಾಣಿಸಿಕೊಳ್ಳದೇ ಇರುವಷ್ಟು ರೌದ್ರಾವತಾರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಕ್ರೂರತ್ವವಿರುವ ಪೊಲೀಸ್ ಪಾತ್ರದಲ್ಲಿ ಶರತ್ ಲೋಹಿತಾಶ್ವ ನಟನೆ ಸೂಪರ್.
ಮೈನಸ್ ಪಾಯಿಂಟ್
ಇನ್ನು ಚಿತ್ರದ ಕಥೆ ತುಂಬಾ ಸಿಂಪಲ್ ಆಗಿದ್ದು, ಅದನ್ನು ಅನಗತ್ಯವಾಗಿ ಎಳೆದಂತೆ ಅನಿಸಲಿದೆ ಹಾಗೂ ಹೊಸತನವಂತೂ ಕಥೆಯಲ್ಲಿ ಇಲ್ಲ. ಹಾಡುಗಳಾವುವೂ ನೆನಪಿನಲ್ಲಿ ಉಳಿಯಲ್ಲ. ಬ್ಯಾಕ್ಗ್ರೌಂಡ್ ಮ್ಯೂಸಿಕ್ ಓಕೆ. ಖಳನಾಯಕರು ಯಾವುದೇ ಡೈಲಾಗ್ ಹೇಳುವ ಮೊದಲು ವಿಚಿತ್ರವಾಗಿ ಚೀರುವುದು ಕೆಲವೊಮ್ಮೆ ಅತಿರೇಕ ಅನಿಸದೇ ಇರದು. ಅದರಲ್ಲೂ ಯಶ್ ಶೆಟ್ಟಿ ಕ್ರೌರ್ಯತೆಯನ್ನು ವಿಚಿತ್ರವಾಗಿ ಚೀರುವುದರ ಮೂಲಕ, ಕೋಪದ ಮೂಲಕ ತೋರಿಸಿರುವುದು ಅತಿ ಎನಿಸುತ್ತದೆ. ಇನ್ನು ಚಿತ್ರದಲ್ಲಿ ಹಲವು ದೃಶ್ಯಗಳನ್ನು ಸ್ಲೋಮೋಷನ್ನಲ್ಲಿ ತೋರಿಸಿರುವುದು ಅನಗತ್ಯ ಎನಿಸುತ್ತೆ. ಒಟ್ಟಿನಲ್ಲಿ ಯಾವುದೇ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳದೇ ಒಂದು ಕನ್ನಡ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಬೇಕು ಎನ್ನುವವರು ಈ ಚಿತ್ರವನ್ನು ನೋಡಬಹುದು.
ಸಾಧಾರಣ ಓಪನಿಂಗ್
ಇನ್ನು ಚಿತ್ರತಂಡ ನಿನ್ನೆಯೇ ಸೆಲೆಬ್ರಿಟಿ ಶೋ ಏರ್ಪಡಿಸಿತ್ತು. ನಿರೀಕ್ಷೆಯಂತೆ ಚಿತ್ರ ವೀಕ್ಷಿಸಿದ ಸೆಲೆಬ್ರಿಟಿಗಳು ಚಿತ್ರ ಚೆನ್ನಾಗಿದೆ ಎಂದು ಹೊಗಳಿದರು. ಇಂದು ಅಸಲಿ ಆಟ ಆರಂಭವಾಗಿದ್ದು, ಹಲವೆಡೆ ಚಿತ್ರ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದರೆ, ಇನ್ನೂ ಕೆಲವು ಕಡೆ ಸಾಧಾರಣ ಓಪನಿಂಗ್ ಪಡೆದುಕೊಂಡಿದೆ. ಚಿತ್ರ ವೀಕ್ಷಿಸಿ ಚಿತ್ರ ಹೇಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿರುವ ಸಿನಿ ರಸಿಕರ ಸಂಖ್ಯೆ ಬೆರಳಿಕೆಯಷ್ಟೇ ಇದ್ದು, ಚಿತ್ರಮಂದಿರದಿಂದ ಹೊರಬಂದು ಯುಟ್ಯೂಬ್ ಚಾನೆಲ್ಗಳ ಕ್ಯಾಮೆರಾ ಎದುರಿಸಿದ ಸಿನಿ ರಸಿಕರು ಚಿತ್ರ ಚೆನ್ನಾಗಿದೆ, ಒಮ್ಮೆ ನೋಡಬಹುದು ಎಂದು ಹೇಳುತ್ತಿದ್ದಾರೆ.


Click it and Unblock the Notifications











