Guntur Kaaram Review: ಗುಂಟೂರು ಮೆಣಸಿನಕಾಯಿ 'ಘಾಟು' ಜಾಸ್ತಿ, ರುಚಿಯಿಲ್ಲ!
ಸಿನಿಮಾ: ಗುಂಟೂರು ಖಾರಂ
ನಿರ್ದೇಶನ: ತ್ರಿವಿಕ್ರಮ್
ತಾರಾಗಣ: ಮಹೇಶ್ ಬಾಬು, ಶ್ರೀಲೀಲಾ, ರಮ್ಯಕೃಷ್ಣ, ಮೀನಾಕ್ಷಿ ಚೌಧರಿ, ಪ್ರಕಾಶ್ ರಾಜ್, ಜಯರಾಜ್, ಜಗಪತಿ ಬಾಬು
ತೆಲುಗು ಸಿನಿಮಾರಂಗದ ಸೂಪರ್ಸ್ಟಾರ್ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾ ಜನವರಿ 12 ರಂದು ಸಂಕ್ರಾಂತಿ ಹಬ್ಬದ ಮೊದಲು ಅದ್ಧೂರಿಯಾಗಿ ಬಿಡುಗಡೆಯಾಗಿದೆ. 10 ವರ್ಷಗಳ ಬಳಿಕ ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್ ಮತ್ತೆ ಒಂದಾಗಿದ್ದಾರೆ. ಜೊತೆಗೆ ಕನ್ನಡದ ಬೆಡಗಿ ಶ್ರೀಲೀಲಾ ಮಹೇಶ್ ಬಾಬು ಜೊತೆಗೆ ಜೋಡಿಯಾಗಿದ್ದಾರೆ.
ಸಿನಿಮಾ ಬಗ್ಗೆ ಸಕತ್ ಹೈಪ್ ಕೊಡಲಾಗಿತ್ತು. ಮಹೇಶ್ ಬಾಬು ಫ್ಯಾನ್ಸ್ ಕೂಡ ಸಿನಿಮಾ ಕುರಿತು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾದರೇ, 'ಗುಂಟೂರು ಖಾರಂ' ಸಿನಿ ಪ್ರೇಕ್ಷಕರಿಗೆ ಮನರಂಜನೆ ನೀಡಿದೆಯೇ..? ಮಹೇಶ್ ಬಾಬು- ತ್ರಿವಿಕ್ರಮ್ ಜೋಡಿ ಕಮಾಲ್ ಮಾಡಿದೇಯೇ? ಸಿನಿಮಾದ ಕಥೆಯೇನು..? ನಟನೆ ಹೇಗಿದೆ...? ಈ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.

'ಗುಂಟೂರು ಖಾರಂ' ಸಿನಿಮಾ ಕಥೆಯೇನು?
ಗುಂಟೂರಿನಲ್ಲಿ ಮೆಣಸಿನಕಾಯಿ ವ್ಯಾಪಾರ ಮಾಡುವ ಮನೆತನದ ತಂದೆ ಸತ್ಯಂ (ಜಯರಾಮ್) ಜೈಲಿಗೆ ಹೋದ ನಂತರ ವೀರ ವೆಂಕಟ ರಮಣ ಅಲಿಯಾಸ್ ರಮಣ (ಮಹೇಶ್ ಬಾಬು) ಚಿಕ್ಕ ವಯಸ್ಸಿನಲ್ಲೇ ಅವನ ತಾಯಿ ವಸುಂಧರಾ (ರಮ್ಯಕೃಷ್ಣ) ನಿಂದ ದೂರವಾಗಿ ಅವನ ಅತ್ತೆ (ಈಶ್ವರಿ ರಾವ್) ಜೊತೆಗೆ ಬೆಳೆಯುತ್ತಾನೆ. ತನ್ನ ತಾಯಿ ಬೇರೊಂದು ಮದುವೆಯಾಗಿ ರಾಜಕೀಯವಾಗಿ ಬೆಳೆದ ಸುಮಾರು ವರ್ಷಗಳ ನಂತರ ಮತ್ತೆ ಅಜ್ಜ (ಪ್ರಕಾಶ್ ರೈ) ರಮಣನ ಬೆನ್ನು ಬೀಳುತ್ತಾನೆ.
ವಸುಂಧರಾ ತನ್ನ ಗಂಡ ಮತ್ತು ಮಗ ರಮಣನನ್ನು ಬಿಟ್ಟು ಬೇರೊಬ್ಬರನ್ನು (ರಾವ್ ರಮೇಶ್) ಮದುವೆಯಾದದ್ದು ಏಕೆ..? ರಮಣನ ತಂದೆ ಸತ್ಯಂ ಜೈಲಿಗೆ ಹೋಗಿದ್ದೇಕೆ? ಅಮ್ಮು (ಶ್ರೀಲೀಲಾ) ಯಾರು? ವಸುಂಧರಾ ತಂದೆ ವೆಂಕಟಸ್ವಾಮಿ (ಪ್ರಕಾಶ್ ರೈ) ಏಕೆ ಬಾಂಡ್ ಪೇಪರ್ ಮೇಲೆ ರಮಣನಿಂದ ಸಹಿ ತೆಗೆದುಕೊಳ್ಳಲು ಇಷ್ಟುಂದು ಕಷ್ಟಪಡುತ್ತಾನೆ...? ಇಲ್ಲಿ ವಸುಂಧರಾ ತನ್ನ ಮಗ ಮತ್ತು ಗಂಡನಿಂದ ಇಪ್ಪತೈದು ವರ್ಷ ಏಕೆ ದೂರವಿದ್ದರು..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವೇ 'ಗುಂಟೂರು ಖಾರಂ' ಸಿನಿಮಾ.

'ಗುಂಟೂರು ಖಾರಂ' ಸಿನಿಮಾ ಹೇಗಿದೆ?
ಸಿನಿಮಾದ ಮೊದಲ ಹತ್ತು ನಿಮಿಷದಲ್ಲೇ ಇದು ತಾಯಿ- ಮಗನ ಸೆಂಟಿಮೆಂಟ್ ಕಥೆ ಎಂದು ತಿಳಿಯುತ್ತದೆ. ಎಂದಿನಂತೆ ಮಹೇಶ್ ಬಾಬು ತಮ್ಮ ಟ್ರೇಡ್ ಮಾರ್ಕ್ ಎಂಟ್ರಿ, ಆಕ್ಷನ್ ಮತ್ತು ಕಾಮಿಡಿಯಿಂದ ಗಮನ ಸೆಳೆಯುತ್ತಾರೆ. ನಟಿ ಶ್ರೀಲೀಲಾ ನಟನೆ, ಡ್ಯಾನ್ಸ್ ಎಲ್ಲಕ್ಕೂ ಸ್ಕೋಪ್ ಇದೆ. ಸಿನಿಮಾದಲ್ಲಿ ಡೈಲಾಗ್ ಮತ್ತು ಆಕ್ಷನ್ ಸೀನ್ಗೆ ಹೆಚ್ಚು ಪಾಯಿಂಟ್ಸ್. ಭಾವನಾತ್ಮಕ ಸಿನಿಮಾ ಎಂದರು ಕೂಡ ಇಲ್ಲಿ ಆಕ್ಷನ್ಗೆ ಪ್ರಾಮುಖ್ಯತೆ.
ಸಿನಿಮಾದಲ್ಲಿ ಎಮೋಷನಲ್ ಆಂಗಲ್ಗಿಂತ ಕಾಮಿಡಿ ಮತ್ತು ಆಕ್ಷನ್ಗೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದ್ದು, ಆಕ್ಷನ್ ಪ್ರಿಯರಿಗೆ ಮತ್ತು ಮಹೇಶ್ ಬಾಬು ಅಭಿಮಾನಿಗಳಿಗೆ ಹಬ್ಬ. ಡ್ಯಾನ್ಸ್ನಲ್ಲಿ ಶ್ರೀಲೀಲಾ ಎನರ್ಜಿಗೆ ಮಹೇಶ್ ಬಾಬು ಸೋಲುತ್ತಾರೆ. ಕ್ಲೈಮ್ಯಾಕ್ಸ್ನಲ್ಲಿ ರಮ್ಯಕೃಷ್ಣ ಮತ್ತು ಮಹೇಶ್ ನಡುವಿನ ಎಮೋಷನಲ್ ಸೀನ್ನಲ್ಲಿಯೂ ಅಂತಹ ಗಟ್ಟಿತನವಿಲ್ಲ.
ಮಹೇಶ್ ಬಾಬು ಮತ್ತು ಪ್ರಕಾಶ್ ರಾಜ್ ಜುಗಲ್ಬಂದಿ
'ಗುಂಟೂರು ಖಾರಂ' ಬಹುತೇಕ ಒನ್ ಮ್ಯಾನ್ ಶೋ ಆಗಿದೆ. ಮಹೇಶ್ ಬಾಬುಗಾಗಿಯೇ ಮಾಡಿದ ಸಿನಿಮಾ ಇದು. ಅವರ ಕಾಮಿಡಿ, ನಟನೆ, ಡ್ಯಾನ್ಸ್ ಎಲ್ಲವೂ ಒಕೆ. ತಾಯಿ ಸೆಂಟಿಮೆಂಟ್ ಅಂತ ಇದ್ದರು ರಮ್ಯಾ ಕೃಷ್ಣ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಮಹೇಶ್ ಬಾಬುಗೆ ಟಕ್ಕರ್ ಕೊಟ್ಟಿರುವುದು ಅವರ ಅಜ್ಜನ ಪಾತ್ರದಲ್ಲಿ ನಟ ಪ್ರಕಾಶ್ ರಾಜ್. ಇನ್ನು ಶ್ರೀಲೀಲಾ ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅವರನ್ನು ಸ್ಕ್ರೀನ್ನಲ್ಲಿ ನೋಡುವುದೆ ಚಂದ. ಮತ್ತೊಬ್ಬ ನಾಯಕಿ ಮೀನಾಕ್ಷಿಗೆ ಅಂತಹ ಹೇಳಿಕೊಳ್ಳುವ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಮಿಕ್ಕ ಪಾತ್ರಗಳೆಲ್ಲ ಬಂದ ಪುಟ್ಟ ಹೋದ ಪುಟ್ಟ.
'ಗುಂಟೂರು ಖಾರಂ' ಪ್ಲಸ್ ಪಾಯಿಂಟ್
'ಗುಂಟೂರು ಖಾರಂ' ಆಕ್ಷನ್ ಮತ್ತು ಮ್ಯೂಸಿಕ್ ಸಕತ್ ಆಗಿದೆ. ಹಾಡುಗಳು ಮತ್ತು ಡ್ಯಾನ್ಸ್ ತುಂಬಾ ಚೆನ್ನಾಗಿವೆ. ನಿರ್ದೇಶಕ ತಮನ್ ಅವರ ಹಿನ್ನೆಲೆ ಸಂಗೀತ ಅನಿರುದ್ದ ರವಿಚಂದರ್ ಅವರ ಜೈಲರ್ ಸಿನಿಮಾವನ್ನೇ ನೆನಪಿಸುತ್ತದೆ. ಮಹೇಶ್ ಬಾಬು ಅವರ ಡ್ಯಾನ್ಸ್, ಆಕ್ಷನ್ ಸೀನ್ಗಾಗಿ ಸಿನಿಮಾ ನೋಡಬಹುದು. ಪಿ ಎಸ್ ವಿನೋದ್ ಅವರ ಛಾಯಾಗ್ರಹಣ ಕೂಡ ಸಿನಿಮಾದ ಪ್ಲಸ್ ಪಾಯಿಂಟ್.
'ಗುಂಟೂರು ಖಾರಂ' ಮೈನಸ್ ಪಾಯಿಂಟ್
ಸಿನಿಮಾದಲ್ಲಿ ಮಹೇಶ್ ಬಾಬುಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ನೀಡುವ ಭರದಲ್ಲಿ ಇತರ ಕಲಾವಿದರು ಅಷ್ಟಾಗಿ ಕಾಣಿಸುವುದಿಲ್ಲ. ಘಟಾನುಘಟಿ ಕಲಾವಿದರಿದ್ದರು ಅಲ್ಲೊಂದು ಇಲ್ಲೊಂದು ಸೀನ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಕಥೆ ಹೇಳಿರುವ ಪರಿ ಕೂಡ ಅಷ್ಟಾಗಿ ಹಿಡಿದು ಕೂರಿಸುವುದಿಲ್ಲ. ಆಕ್ಷನ್ ಸೀನ್ನಲ್ಲಿಯೂ ನಿದ್ದೆ ಬರುತ್ತದೆ. ಹೀಗಾಗಿ ಫ್ಯಾಮಿಲಿ ಎಂಟರ್ಟೈನರ್ ಆಗಿದ್ದರೂ ಕೂಡ ಮಹೇಶ್ ಬಾಬು ಫ್ಯಾನ್ಸ್ಗೆ ಮಾತ್ರ ಹೇಳಿ ಮಾಡಿಸಿದ ಸಿನಿಮಾ ಎನ್ನುವಂತಿದೆ.


Click it and Unblock the Notifications











