Ikkis Review ; ಯುದ್ಧ ಭೂಮಿಯಲ್ಲಿ ಭಾವ ತೀರ ಯಾನ-ಹೇಗಿದೆ ಅಮಿತಾಬ್ ಮೊಮ್ಮಗನ ಸಿನಿಮಾ ? ಇಲ್ಲಿದೆ ವಿಮರ್ಶೆ
ಚಿತ್ರರಂಗದಲ್ಲಿ ಅಪ್ಪ- ಅಮ್ಮ ಯಾರಾದರೂ ಇದ್ದರೆ ಮುಗಿಯಿತು. ಅವರ ಮಕ್ಕಳು.. ಸಂಬಂಧಿಕರೆಲ್ಲ .. ಅನಾಯಾಸವಾಗಿ ಚಿತ್ರರಂಗಕ್ಕೆ ಬಂದು ಬಿಡ್ತಾರೆ. ಅನೇಕರ ವಿಚಾರದಲ್ಲಿ ಈ ಮಾತು ರುಜುವಾತಾಗಿದೆ ಕೂಡ. ನಿಜಾ.. ಅವರು ಅದೇ ಕ್ಷೇತ್ರದಲ್ಲಿ ಮುಂದುವರೆಯುವುದು.. ಉಳಿಯುವುದು.. ಬೆಳೆಯುವುದು.. ಅವರ ಅವರ ಟ್ಯಾಲೆಂಟ್ ಮೇಲೆ ನಿರ್ಧಾರವಾಗುತ್ತೆ ಆದರೂ.. ಇವರ ಹಾದಿ ಸರಾಗವಾಗಲು ಅವರ ಹೆತ್ತವರು ಕಾರಣವೆನ್ನುವುದನ್ನು ಅಲ್ಲಗೆಳೆಯಲು ಸಾಧ್ಯ ಇಲ್ಲ.
ಇನ್ನು ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಆಯಾ ಕ್ಷೇತ್ರಕ್ಕೆ ಧುಮುಕುವ ಪ್ರಯತ್ನ ಮಾಡುತ್ತಾರೆ. ಅದರಲ್ಲಿಯೂ.. ಬಾಲಿವುಡ್ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಸದ್ಯ ಈ ಸಾಲಿಗೆ ಸೇರಿಕೊಳ್ಳಲು ಹವಣಿಸುತ್ತಿರುವ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಚಿತ್ರರಂಗಕ್ಕೆ ಬಂದಿದ್ದಾರೆ.

ಕೇವಲ ಅಗಸ್ತ್ಯ ಮಾತ್ರ ಅಲ್ಲ ಈ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಅವರ ಅಕ್ಕನ ಮಗಳು ಸೀಮರ್ ಭಾಟಿಯಾ ಕೂಡ ಚಿತ್ರರಂಗಕ್ಕೆ ಬಂದಿದ್ದಾರೆ. ಇವರಿಬ್ಬರ ಅಭಿನಯದ ಮೊದಲ ಚಿತ್ರ ''ಇಕ್ಕಿಸ್'' ಇಂದು ತೆರೆಗೆ ಬಂದಿದೆ. ಹಾಗಿದ್ದರೆ ಇಕ್ಕಿಸ್ ಹೇಗಿದೆ..? ತಾತನ ಹೆಸರನ್ನು ಅಗಸ್ತ್ಯ ಕಾಪಾಡ್ತಾರಾ..? ಮೊದಲ ಚಿತ್ರದಲ್ಲಿ ಇವರ ಅಭಿನಯ ಹೇಗಿದೆ..? ಎಂದು ತಿಳಿಯಲು ಮುಂದೆ ಓದಿ.
ಕಥಾಹಂದರ
ಹುತಾತ್ಮ ಲೆಫ್ಟಿನೆಂಟ್ ''ಅರುಣ್ ಖೇತ್ರಪಾಲ್'' ಅವರ ಜೀವನಾಧಾರಿತ ಚಿತ್ರ ''ಇಕ್ಕಿಸ್''.1971ರ ಇಂಡೋ-ಪಾಕ್ ಯುದ್ಧದ ''ಬಸಂತರ್'' ಕದನದಲ್ಲಿ 21ನೇ ವಯಸ್ಸಿನಲ್ಲಿ ಹುತಾತ್ಮರಾದ ಅರುಣ್ ಅತ್ಯುನ್ನತ ಗೌರವವಾದ ಪರಮ ವೀರ ಚಕ್ರ ಪಡೆದ ಅತ್ಯಂತ ಕಿರಿಯ ಅಧಿಕಾರಿ. ಇವರ ರಕ್ತದಲ್ಲಿಯೇ ದೇಶ ಸೇವೆ ಇತ್ತು. ಇವರ ಅಜ್ಜ ಮತ್ತು ಮುತ್ತಜ್ಜರೂ ಕೂಡ ಸೈನಿಕರಾಗಿದ್ದರು. ನಿವೃತ್ತ ಬ್ರಿಗೇಡಿಯರ್ ಎಂ.ಎಲ್.ಖೇತ್ರಪಾಲ್ ಅವರ ಮಗ ಆಗಿದ್ದರು ಅರುಣ್ ಖೇತ್ರಪಾಲ್.
ಇಂಥಾ ಅರುಣ್ ಖೇತ್ರಪಾಲ್ ಅವರ ದೇಶ ಭಕ್ತಿಯ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಹಾಗಂಥ ಇಲ್ಲಿ ಕೇವಲ ಯುದ್ಧದ ಸನ್ನಿವೇಶಗು ಮಾತ್ರ ಇಲ್ಲ. ಬದಲಿಗೆ ದೇಶಭಕ್ತಿಯ ಜೊತೆ ಭಾವುಕತೆ ಇದೆ. ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಟ್ಯಾಂಕ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿ, ಪ್ರಾಣ ತ್ಯಾಗ ಮಾಡುವ ಮುನ್ನ ಹತ್ತು ಶತ್ರು ಟ್ಯಾಂಕ್ಗಳನ್ನು ಅರುಣ್ ಖೇತ್ರಪಾಲ್ (ಅಗಸ್ತ್ಯ ನಂದಾ) ನಾಶ ಮಾಡುತ್ತಾರೆ. ಈ ಮೂಲಕ ಪಾಕಿಸ್ತಾನದ ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ.
ಮೂವತ್ತು ವರ್ಷಗಳ ನಂತರ, ಅವರ ತಂದೆ ಬ್ರಿಗೇಡಿಯರ್ ಎಂ.ಎಲ್. ಖೇತ್ರಪಾಲ್ (ಧರ್ಮೇಂದ್ರ) ಪಾಕಿಸ್ತಾನಕ್ಕೆ ಹೋಗುತ್ತಾರೆ. ಅಲ್ಲಿ ಬ್ರಿಗೇಡಿಯರ್ ಖ್ವಾಜಾ ಮೊಹಮ್ಮದ್ ನಸೀರ್ (ಜೈದೀಪ್ ಅಹ್ಲಾವತ್) ಅವರಿಂದ ತನ್ನ ವೀರಪುತ್ರನ ಸಾಹಸಗಾಥೆ ಕೇಳುವ ತಂದೆ ತಮ್ಮ ಮಗ ಕೊನೆಯುಸಿರೆಳೆದ ಯುದ್ಧ ಭೂಮಿಗೆ ಕಾಲಿಡುತ್ತಾರೆ.
ಬ್ರಿಗೇಡಿಯರ್ ಖೇತ್ರಪಾಲ್ ಪಾಕಿಸ್ತಾನದಲ್ಲಿರುವ ತಮ್ಮ ಪೂರ್ವಿಕರ ಹಳ್ಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಅವರು ತಮ್ಮ ವೀರ ಪುತ್ರ ಅರುಣ್ನ ಸಾಹಸ ಕಥೆಗಳನ್ನು ಪತ್ತೆ ಹಚ್ಚಿ, ಆತ ಕೊನೆಯುಸಿರೆಳೆದ ಯುದ್ಧಭೂಮಿಗೆ ಕಾಲಿಡುತ್ತಾರೆ. ಆ ನಂತರದ ಭಾವನಾತ್ಮಕ ಪ್ರಯಾಣವೇ ''ಇಕ್ಕಿಸ್''

ಅಭಿನಯ ಹೇಗಿದೆ..?
ಅಗಸ್ತ್ಯಾ ನಂದಾ ಈ ಚಿತ್ರದ ನಾಯಕನಾದರೂ ಕೂಡ ಈ ಚಿತ್ರದ ಪ್ರಮುಖವಾದ ಕೇಂದ್ರ ಬಿಂದು ಮತ್ತು ಆಕರ್ಷಣೆ ಧರ್ಮೇಂದ್ರ. ತಮ್ಮ ಕೊನೆಯ ಚಿತ್ರದಲ್ಲಿ ಮನೋಜ್ಞವಾಗಿ ಧರ್ಮೇಂದ್ರ ಅಭಿನಯಿಸಿದ್ದಾರೆ. ಅಗಸ್ತ್ಯ ನಂದಾ ಈ ಹಿಂದೆ ''ಆರ್ಚಿಸ್'' ಚಿತ್ರವನ್ನು ಮಾಡಿದ್ದರು. ಆದರೆ ಆ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಈ ಹಿನ್ನೆಲೆ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಇವರ ಮೊದಲ ಚಿತ್ರ ಇದು. ತಮ್ಮ ಈ ಪ್ರಯತ್ನದಲ್ಲಿ ಅಗಸ್ತ್ಯ ಭಾಗಶಃ ಯಶಸ್ವಿಯಾಗಿದ್ದಾರೆ. ಭಾವನೆಗಳನ್ನು ವ್ಯಕ್ತಪಡಿಸಲು ಚೂರು ಕಷ್ಟಪಟ್ಟಿದ್ದಾರೆ.
ಅಕ್ಷಯ್ ಕುಮಾರ್ ಅಕ್ಕನ ಮಗಳು ಸಿಮರ್ ಇಲ್ಲಿ ಅರುಣ್ ಖೇತ್ರಪಾಲ್ ( ಅಗಸ್ತ್ಯ ನಂದಾ ) ಪ್ರೇಯಸಿ ಕಿರಣ್ ಕೊಚ್ಚರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪಕ್ಕದ ಮನೆ ಹುಡುಗಿಯಂತೆ ಸುಂದರವಾಗಿ ಕಾಣಿಸುತ್ತಾರೆ. ಆತ್ಮವಿಶ್ವಾಸದಿಂದ ಸಿಮರ್ ಅಭಿನಯಿಸಿದ್ದು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಜೈದೀಪ್ ಅಹ್ಲಾವತ್ ಈ ಚಿತ್ರದ ಮತ್ತೊಂದು ಆಕರ್ಷಣೆ. ಕಣ್ಣುಗಳಿಂದಲೇ ಅಭಿನಯಿಸುವುದು ಒಂದು ಕಲೆ. ಈ ಕಲೆ ಇವರಿಗೆ ಚೆನ್ನಾಗಿ ಕರಗತವಾಗಿದೆ. ಸಿಕಂದರ್ ಖೇರ್, ರಾಹುಲ್ ದೇವ್, ಸುಹಾಸಿನಿ ಮುಳೆ, ಜಿತೇಂದರ್ ಸಿಂಗ್, ಶ್ರೀ ಬಿಷ್ಣೋಯ್, ವಿಜೇಂದರ್ ಸಿಂಗ್, ವಿವಾನ್ ಶಾ ಮುಂತಾದವರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಶೋಲೆಯ ಜೈಲರ್ ಅಸ್ರಾನಿ ಅವರು ಅಭಿನಯಿಸಿದ ಕೊನೆಯ ಸಿನಿಮಾ ಇದು.
ಪ್ಲಸ್ ಪಾಯಿಂಟ್ಸ್ ಏನು ?
ನಿರ್ದೇಶಕ ಶ್ರೀರಾಮ್ ರಾಘವನ್ ಚಿತ್ರಕಥೆಯನ್ನು ತುಂಬಾನೇ ನೈಜತೆಗೆ ಹತ್ತಿರವಾಗುವಂತೆ ಹೆಣೆದಿದ್ದಾರೆ. ಶ್ರೀರಾಮ್ ರಾಘವನ್, ಅರಿಜಿತ್ ಬಿಸ್ವಾಸ್ ಮತ್ತು ಪೂಜಾ ಲಧಾ ಸುರ್ತಿ ಅವರ ಚಿತ್ರಕಥೆ ಹೃದಯಸ್ಪರ್ಶಿಸುವಂತೆ ಇದೆ. ನಿಧಾನಗತಿ ಎಂದು ಅನಿಸಿದರೂ ಕೂಡ ತಂದೆ-ಮಗನ ಸಂಬಂಧ, ವಿಶೇಷವಾಗಿ ಕ್ಲೈಮ್ಯಾಕ್ಸ್ನಲ್ಲಿ ಪ್ರೇಕ್ಷಕರನ್ನು ಈ ಚಿತ್ರಕಥೆ ಭಾವುಕರನ್ನಾಗಿಸುತ್ತೆ.
ಕೊನೆ ಮಾತು
ಹಾಂಥ ಚಿತ್ರದಲ್ಲಿ ಮೈನಸ್ ಪಾಯಿಂಟ್ಸ್ಗಳು ಇಲ್ಲವೇ ಇಲ್ಲ ಎನ್ನುವಂತೆ ಇಲ್ಲ. ಫ್ಲ್ಯಾಷ್ಬ್ಯಾಕ್ಗಳು ಕೆಲ ಒಬ್ಬರಿಗೆ ಕಿರಿಕಿರಿಯುಂಟು ಮಾಡಬಹುದು. ಇಂತಹ ಚಿಕ್ಕ ಪುಟ್ಟ ಲೋಪಗಳನ್ನು ಕಡೆಗಣಿಸಿದರೆ ''ಇಕ್ಕಿಸ್'' ನೋಡಿಸಿಕೊಂಡು ಹೋಗುವ ಸಿನಿಮಾ. ಚಿತ್ರಮಂದಿರದಿಂದ ಹೊರ ಬಂದ ನಂತರವೂ ಕಾಡುವ ಸಿನಿಮಾ. ಮುಲಾಜಿಲ್ಲದೆ ಒಂದು ಬಾರಿ ಮನೆಯವರ ಜೊತೆ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಬಹುದು.


Click it and Unblock the Notifications











