Don't Miss!
- News CAA: ಸಿಎಎ ಜಾರಿ ಪ್ರಶ್ನಿಸಿ 230ಕ್ಕೂ ಹೆಚ್ಚು ಅರ್ಜಿ: ಸುಪ್ರೀಂಕೋರ್ಟ್ನಲ್ಲಿ ಮಹತ್ವದ ವಿಚಾರಣೆ
- Finance ಆಧಾರ್ ಉಚಿತ ಅಪ್ಡೇಟ್ ದಿನಾಂಕ ಜೂ.14ರವರೆಗೆ ವಿಸ್ತರಣೆ: ಆನ್ಲೈನ್ನಲ್ಲಿ ಹೀಗೆ ನವೀಕರಿಸಿ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನೀರ್ ದೋಸೆ' ಸವಿಯಲು ಗರ್ಲ್ ಫ್ರೆಂಡ್ ಜೊತೆ ಹೋದ್ರೆ 'ಗುಮ್ಮೋದು' ಖಚಿತ!
'36'...ಮದುವೆಗೆ ದೊಡ್ಡ ವಯಸ್ಸು,
ಜೀವನಕ್ಕೆ ಸಣ್ಣ ವಯಸ್ಸು.!
ನಕ್ಷತ್ರ ತಿಳ್ಕೊಂಡು ಜೀವನ ಮಾಡೋದಲ್ಲ,
ನಕ್ಷತ್ರ ಎಣಿಸಿಕೊಂಡು ಜೀವನ ಮಾಡಬೇಕು.!
ಈಗೀಗ ರಕ್ತ ಸಂಬಂಧಗಳು ಗುಂಪುಗಾರಿಕೆ ಶುರುಮಾಡಿದೆ,,
ಈ ಸಂಬಂಧಿಕರು ಅನ್ನೋರು ಬ್ರಾ ಹುಕ್ ಇದ್ದ ಹಾಗೆ.!
ಹೌದು...'ನೀರ್ ದೋಸೆ' ಚಿತ್ರದಲ್ಲಿ ಡಬಲ್ ಮಿನಿಂಗ್ ಡೈಲಾಗ್ ಗಳು ಮಾತ್ರ ಅಲ್ಲ...ಜೀವನದ ಸಾರ ಸಾರುವ ಸಂಭಾಷಣೆಯೂ ಇದೆ. [ವಿಮರ್ಶೆ : ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ.!]
ದತ್ತಣ್ಣ, ಕುಮುದಾ, ಜಗ್ಗು, ಶಾರದಾ ಮಣಿ ಕಥೆಗೆ ನಾಲ್ವರು ನಾಯಕರು, ಪೋಷಕರು ಮತ್ತು ಪಾಲಕರು. ಇಲ್ಲಿ ಗಟ್ಟಿಯಾದ ಕಥಾ ಹಂದರ ಹುಡುಕುವ ಸಾಹಸ ಮಾಡಿದರೆ ಅರ್ಥವಿಲ್ಲ. ಸಂಭಾಷಣೆ ಎಂಜಾಯ್ ಮಾಡಬೇಕು ಅಷ್ಟೆ. ಸಂಭಾಷಣೆ ಸಿನಿಮಾದ ನಿಜವಾದ ನಾಯಕ. ಮುಂದೆ ಓದಿರಿ....
ವಯಸ್ಕರ ಸಿನಿಮಾ?
'ಬುಕ್ ಮೈ ಶೋ' ನಲ್ಲಿ ಟಿಕೆಟ್ ಬುಕ್ ಮಾಡಲು ಲಾಗ್ ಇನ್ ಆದಾಗ ವಯಸ್ಕರ ಚಿತ್ರ ಎಂಬ ಎಚ್ಚರಿಕೆ ನಿಮಗೆ ಕಾಣಿಸುತ್ತದೆ. ಮೀನಿಂಗ್ ಡಬಲ್ ಇರಬಹುದು ಅರ್ಥ ಮಾತ್ರ ಸತ್ಯ ಎಂಬ ಅರಿವು ಸಿನಿಮಾ ನೋಡಿದಾಗ ಅನ್ನಿಸುತ್ತದೆ.
'ನೀರ್ ದೋಸೆ' ಚಿತ್ರದಲ್ಲಿ ಏನೇನಿದೆ?
ಬದುಕಿನ ಜಂಜಾಟಗಳು, ಮದುವೆಗೆ ಮೀರಿದ ಸಂಬಂಧ, ಆಧುನಿಕ ಪ್ರಪಂಚದ ಅಗತ್ಯಗಳು, ನಕ್ಷತ್ರ-ಜಾತಕ, ವೇಶ್ಯೆಯಲ್ಲೂ ಅಡಗಿದ ಗಂಗೆಯ ಮನಸ್ಸು, ಹೆಣ ಸಾಗಿಸುವ ವಾಹನದ ಚಾಲಕನ ಹೆಣಗಾಟದ ಬದುಕು, ಬ್ರಹ್ಮಚಾರಿಯ ಜೀವನ ಬಾಧೆಗಳು, 32 ದಾಟಿದರೂ ಮದುವೆಯಾಗದ ಮಧ್ಯಮ ವರ್ಗದ ಹೆಣ್ಣು ಮಗಳ ನೇರ ಮಾತುಗಳು..ಎಲ್ಲವೂ ಚಿತ್ರದಲ್ಲಿದೆ.
ಹರಿಪ್ರಿಯಾ ಪ್ರಿಯವಾಗ್ತಾರೆ
ಎಲ್ಲವನ್ನು ತೆರೆದಿಡುವ ಹರಿಪ್ರಿಯಾ ಪಡ್ಡೆಗಳಿಗೆ ಪ್ರಿಯವಾಗುತ್ತಾಳೆ. ಆಕೆಯ ಹೈಸ್ಕೂಲ್ ಜೀವನದ ಕತೆ ಬಾಲ ನಟರ ದಿಟ್ಟ ನಟನೆಗೆ ಸಾಕ್ಷಿಯಾಗಿದೆ. ಕುಮುದಾ ಯಾಕಾಗಿ ಮೈ ಮಾರಿಕೊಳ್ಳುವ ಕ್ಷೇತ್ರಕ್ಕೆ ಬಂದಳು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಕೊನೆಗೂ ಸಿಗಲ್ಲ.
ಹೊಗೆ ಬಿಡುವ ಕುಮುದಾ
ಸಿನಿಮಾದ ಉದ್ದಕ್ಕೂ ಹೊಗೆ ಬಿಡುತ್ತಲೇ ಕಾಲ ಕಳೆಯುವ ಕುಮದಾ ನೋವು-ದುಮ್ಮಾನಗಳು ಸಹ ಸಿಗರೇಟಿನ ಹೊಗೆಯೊಂದಿಗೆ ಗಾಳಿಯಲ್ಲೇ ಲೀನ ಎಂಬ ಸಂದೇಶ ನಿರ್ದೇಶಕರದ್ದಿರಬಹುದು.
ಪೋಲಿ ಅಂಕಲ್ ದತ್ತಣ್ಣ
ಹಿಂದೆಂದೂ ಕಾಣದ ದತ್ತಣ್ಣ. ಕಲಾತ್ಮಕ ಚಿತ್ರಗಳಿಗೆ ಜೀವ ತುಂಬುತ್ತಿದ್ದ ದತ್ತಣ್ಣ ಇಲ್ಲಿ ಪೋಲಿ ಅಂಕಲ್. ಅವರ ಶಬ್ದ ಭಂಡಾರವೇ ಅಂಥದ್ದು. ನಟನೆ ಬಗ್ಗೆ ಹೇಳುವುದೇ ಬೇಡ. ಅಕ್ಕನ ನೆನಪಲ್ಲಿ ಅಳುವ ತಮ್ಮ, ತೀಟೆ ತಿರಿಸಿಕೊಳ್ಳಲು ಹಪಹಪಿಸುವ ಬ್ರಹ್ಮಚಾರಿ, ಜಗ್ಗುವಿಗೆ ಜೀವನ ಪಾಠ ಹೇಳುವ ಗುರುವಾಗಿ ದತ್ತಣ್ಣ ಇಷ್ಟವಾಗುತ್ತಾರೆ.
ಜಗ್ಗು ಬಗ್ಗೆ....
ನವರಸ ನಾಯಕನಿಗೆ ಇಲ್ಲಿ ಉಳಿದ ರಸ ಹರಿಸುವ ಅವಕಾಶ ಕಡಿಮೆ. ಕ್ಲೈಮ್ಯಾಕ್ಸ್ ವೇಳೆಯೂ 'ಮಿಷಿನ್' ಎಂಬ ಜಗ್ಗುವಿನ ನೇರ ನುಡಿ, ಸತ್ಯ ಪರಿಪಾಲನೆ ಸಾಧ್ಯವೇ? ಎಂಬ ಪ್ರಶ್ನೆ ಪ್ರೇಕ್ಷಕನಿಗೆ ಉಂಟಾದರೆ ಆಶ್ಚರ್ಯವಿಲ್ಲ. ಅಪ್ಪನ ಸಾವಿನ ವೇಳೆ ಆತನ ಗೆಳತಿಯನ್ನು ಕರೆದುಕೊಂಡು ಬರುವ ಜಗ್ಗು ನಮ್ಮ ದೇಶದವನೇ? ಎಂದೆನಿಸಿದರೂ ಅತಿಶಯೋಕ್ತಿ ಅಲ್ಲ.
ಇನ್ನೊಂದು ಅರ್ಥ ಇದೆ.
ಒಂದು ಐಟಂ ಸಾಂಗ್, ಒಂದು ಡ್ಯೂಯೆಟ್ ಸಾಂಗ್, ಒಂದು ಗ್ರೂಪ್ ಸಾಂಗ್, ಒಂದು ತತ್ವ ಜ್ಞಾನ ಸಾರುವ ಹಾಡು... ಚಿತ್ರದ ನಾಲ್ಕು ಘಟ್ಟಗಳಲ್ಲಿ ಬಂದು ನಿಲ್ಲುತ್ತವೆ. ತಂದೆಯ ಹೆಣದೊಂದಿಗೆ ಸಾಗುವ ಜಗ್ಗೇಶ್ ಚಿತ್ರಕ್ಕೆ ಇನ್ನೊಂದು ಅರ್ಥವಿದೆ ಎಂದು ಹೇಳುವಂತೆ ಭಾಸವಾಗುತ್ತದೆ.
ಕಣ್ಣಲ್ಲಿ ನೀರು ತರಿಸುತ್ತದೆ
ಡೈಲಾಗ್ ಗಳಿಂದಲೇ ಓಡುವ ಸಿನಿಮಾ ಮಧ್ಯೆ ಮಧ್ಯೆ ಗಂಭೀರವಾಗುತ್ತದೆ. ಕಣ್ಣಲ್ಲಿ ನೀರು ತರಿಸುತ್ತದೆ.
ಊರಿಗೊಬ್ಳೇ 'ಪದ್ಮಾವತಿ'ಗೂ ಧನ್ಯವಾದ
'ನೀರ್ ದೋಸೆ' ಹೆಸರು ತೋರಿಸುವ ರೀತಿಯೇ ವಿಭಿನ್ನ. ಚಿತ್ರವನ್ನು ಅರ್ಧಕ್ಕೆ ಬಿಟ್ಟು ಹೋದ ಪದ್ಮಾವತಿಗೂ ಧನ್ಯವಾದ ಅರ್ಪಣೆ ಮಾಡಲಾಗಿದೆ.
ಬೀಜ..ಕಾಯಿ...ಕಡ್ಡಿ
ಮಾತ್ರೆ, ಕಡಲೆಬೀಜ, ಅವರೆ ಕಾಯಿ, ಬಕೆಟ್, ಪೈಪ್, ಫಿನಾಯಿಲ್, ಕಡ್ಡಿ ಅಲ್ಲಾಡಿಸೋದು, ಆಟ ಆಡೋದು, ಬ್ರಾ, ಒಳಉಡುಪು, ಕೊಟ್ಟಿಗೆ, ಗುಮ್ಮೋದು, ಹಸು, ಹೋರಿ... ಎಲ್ಲ ಶಬ್ದಗಳನ್ನು ನಿರ್ದೇಶಕ ವಿಜಯ್ ಪ್ರಸಾದ್ ತಮ್ಮದೇ ಶೈಲಿಗೆ ಬೇಕಾದ ಹಾಗೆ ಬಳಕೆ ಮಾಡಿಕೊಂಡಿದ್ದಾರೆ.
ಇರಲಿ ಬಿಡಿ..
ಇಲ್ಲಿ ಭಾಷೆಯನ್ನು ಬೇಕಾದ ಹಾಗೆ ಬಗ್ಗಿಸಿಕೊಳ್ಳಲಾಗಿದೆ. ಒಂದೊಂದು ಡೈಲಾಗ್ ಮುಗಿದ ಮೇಲೂ ಬರುವ ಹಿನ್ನೆಲೆ ಶಬ್ದಗಳು 'ಸಿಲ್ಲಿ ಲಲ್ಲಿ', 'ಪಾಪ ಪಾಂಡು' ಧಾರಾವಹಿಯನ್ನು ನೆನಪು ಮಾಡುತ್ತವೆ. ನಗು ಬರದಿದ್ದರೂ ನಗಬೇಕು ಎಂಬುದು ಇದರ ಸಂದೇಶವೋ ಗೊತ್ತಿಲ್ಲ! ಇರಲಿ ಬಿಡಿ.
ಗರ್ಲ್ ಫ್ರೆಂಡ್ ಜೊತೆ ಹೋದ್ರೆ...
ನೆನಪಿರಲಿ.. ಚಿತ್ರ ನೋಡಲು ಸ್ನೇಹಿತರೊಂದಿಗೆ ಹೋಗೋದು ಒಳ್ಳೇದು. ನೀವು ನಕ್ಕು ಬರಬಹುದು.. ಅಪ್ಪಿ ತಪ್ಪಿ ಗರ್ಲ್ ಫ್ರೆಂಡ್ ಜತೆ ಹೋದ್ರೆ ಹೊರಬಂದ ಮೇಲೆ ಆಕೆ ನಿಮ್ಮನ್ನು ಗುಮ್ಮೋದು ಖಚಿತ!