ಹತ್ತು ಕನ್ನಡ ಸಿನೆಮಾಗಳನ್ನು ಒಟ್ಟಿಗೆ ನೋಡುವ ಆಸೆಯಿದ್ದರೆ ಕಿಲಾಡಿ ನೋಡಿ ಅನ್ನೋದು ಈ ಚಿತ್ರದ ಬಗ್ಗೆ ವನ್ ಲೈನರ್ ವಿಮರ್ಶೆ ಆಗಬಲ್ಲುದು.
* ಸತ್ಯನಾರಾಯಣ
ಜಗ್ಗೇಶ್ ಸಿನಿಮಾಗಳಲ್ಲಿ ಇರುವ ಏಕೈಕ ಮನರಂಜನೆ ಎಂದರೆ ಅವರ ಮ್ಯಾನರಿಸಂ ಹಾಗೂ ಡೈಲಾಗ್ ಡೆಲಿವರಿ.
ಈ ಚಿತ್ರದಲ್ಲೂ ಅದಕ್ಕೆ ಮೋಸವಿಲ್ಲ. ಹಾಗೇ, ಅವರು ಸಾಮಾನ್ಯವಾಗಿ ಮಾಡುವ ಎಲ್ಲ ಗಿಮಿಕ್ಕುಗಳೂ ಇಲ್ಲಿವೆ. ಇಬ್ಬರು ನಾಯಕಿಯರನ್ನು ಜಗ್ಗೇಶ್ ತಮ್ಮ ಜತೆಗೆ ಹಾಕಿಕೊಂಡಿದ್ದಾರೆ. ಅವರಿಬ್ಬರಿಗೂ ಜಗ್ಗೇಶ್ ಜೊತೆ ಕುಣಿಯುವುದನ್ನು ಬಿಟ್ಟರೆ ಬೇರೆ ಕೆಲಸ ಇದ್ದಂತಿಲ್ಲ.
ಹಾಡು ಲೊಕೇಷನ್, ಕತೆ, ಚಿತ್ರಕತೆ ಎಲ್ಲವೂ ಸಾಮಾನ್ಯ ಮಟ್ಟದಲ್ಲಿರುವ ಈ ಚಿತ್ರದ ನಿರ್ದೇಶಕ ಗಡಿ ಬಿಡಿ ಸಾಯಿ ಪ್ರಕಾಶ್. ಕೆಲವು ವರ್ಷಗಳ ಹಿಂದೆ ಹತ್ತು ದಿನಕ್ಕೊಂದು ಚಿತ್ರ ಮಾಡಿಕೊಡುತ್ತಿದ್ದ ಫಾಸ್ಟ್ ಫುಡ್ ನಿರ್ದೇಶಕ ಸಾಯಿ ಪ್ರಕಾಶ್ , ಇತ್ತೀಚೆಗೆ ನಾಗದೇವತೆ ಸಿನಿಮಾ ಮಾಡಿ ಗೆದ್ದಿದ್ದರು.
ಅರ್ಚನಾ, ಮಣಿ ಚಂದನಾ ಇಬ್ಬರಿಗೂ ಅಭಿನಯಕ್ಕೆ ಅವಕಾಶವಿಲ್ಲ. ಬದಲಾಗಿ ಅವರಿಬ್ಬರೂ ಮೈದೋರುವುದಕ್ಕಷ್ಟೇ ಮೀಸಲಾಗಿದ್ದಾರೆ.
ಬಹುಶಃ ಜಗ್ಗೇಶ್ ಅಭಿನಯದ ಕೊನೆಯ ಚಿತ್ರ ಇದಾಗಬಹುದು ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಯಾಕೆಂದರೆ ಎರಡು ತಿಂಗಳ ಚಿತ್ರ ರಹಿತ ದಿನಗಳ ನಡುವೆ ಬಿಡುಗಡೆಯಾಗಿರುವ ಕಿಲಾಡಿ ಗೆಲ್ಲದ ಮೇಲೆ ತುಂಬುಮಾಸದಲ್ಲಿ ಬಂದ ಚಿತ್ರಗಳನ್ನು ಯಾರಾದರೂ ನೋಡಬಹುದೇ?
ಅಂದ ಹಾಗೆ ಈ ಚಿತ್ರದ ಹಂಚಿಕೆಯನ್ನೂ ಸ್ವತಃ ಜಗ್ಗೇಶ್ ಅವರೇ ವಹಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿತ್ತು !
ಚಿತ್ರ : ಕಿಲಾಡಿ
ನಿರ್ಮಾಣ : ಎಸ್. ಶ್ರೀನಿವಾಸ್
ಬ್ಯಾನರ್ : ಸುಶ್ಮಾ ಫಿಲಂಸ್
ನಿರ್ದೇಶನ : ಸಾಯಿ ಪ್ರಕಾಶ್
ಅಭಿನಯ : ಜಗ್ಗೇಶ್, ಅರ್ಚನಾ, ಮಣಿಚಂದನ
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











