ಪ್ರೇಕ್ಷಕರ ಬೆಟ್ಟದಷ್ಟು ನಿರೀಕ್ಷೆಯನ್ನು ‘ಜೋಡಿ’ ಹುಸಿ ಮಾಡಿದ್ದರೂ, ನೋಡಲೇ ಆಗದಂತ ಚಿತ್ರ ಏನಲ್ಲ....
ಇದು ಒಂದು ತ್ರಿಕೋಣ ಪ್ರೇಮ ಕಥೆ. ಇಲ್ಲಿ ‘ಪ್ರೀತ್ಸೆ’ ಚಿತ್ರದಲ್ಲಿ ಉಪೇಂದ್ರ ನಿರ್ವಹಿಸಿದ ಪಾತ್ರವನ್ನು ‘ಜಿತೇಂದ್ರ’ ಎನಿಸಿಕೊಂಡ ಜಗ್ಗೇಶ್ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ನಡೆವ ಎಲ್ಲ ಅನಾಹುತಗಳಿಗೂ ಅವರೇ ಕಾರಣೀಭೂತರಾಗುತ್ತಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಮಾತ್ರ ಚಿತ್ರದ ಕ್ಲೈಮ್ಯಾಕ್ಸ್ವರೆಗೂ ಹತಾಶ ಪ್ರೇಮಿಯಾಗಿಯೇ ಉಳೀತಾರೆ. ಈ ಇಬ್ಬರೂ ನಾಯಕರು ತಮ್ಮ ಪಾತ್ರಕ್ಕೆ ಸಹಜ ಅಭಿನಯದ ಮೂಲಕ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂಬುದು ಸಮಾಧಾನದ ಅಂಶ. ಆದರೆ, ಮಂದಗತಿಯ ನಿರ್ದೇಶನ ಈ ಪಾತ್ರಪ್ರಧಾನ ಚಿತ್ರವನ್ನು ಸೊರಗುವಂತೆ ಮಾಡಿದೆ. ಚುರುಕಾದ ನಿರೂಪಣೆ ಇದ್ದಿದ್ದರೆ, ಹಳೆಯ ಕಥೆಯ ನಡುವೆಯೂ ಚಿತ್ರ ಹೊಸತರಂತೆ ಕಾಣುವ ಸಾಧ್ಯತೆ ಇತ್ತು.
‘ಯಾರೇನೀನು ಚೆಲುವೆ’ ಚಿತ್ರದ ಕಥೆಯಂತೆ. ಈ ಕಥೆಯಲ್ಲೂ ನಾಯಕ ನಾಯಕಿಯನ್ನು ನೋಡಿಲ್ಲ. ನಾಯಕಿಯೂ ನಾಯಕನನ್ನು ನೋಡಿಲ್ಲ. ಆದರೂ ಇಬ್ಬರು ಪ್ರೀತಿಸ್ತಾರೆ. ಈ ಇಬ್ಬರನ್ನು ಬೆಸೆಯಲು ಇಲ್ಲೊಂದು ಫೋನ್ ಇದೆ. ಮುಖ ಕಾಣದ ಫೋನ್ನಲ್ಲಿ ಮಾತಿನ ಪ್ರೀತಿಧಾರೆಯೇ ಹರಿಯತ್ತೆ. ಒಬ್ಬರನ್ನೊಬ್ಬರು ಭೇಟಿ ಆಗುವ ಜಾಗ - ಟೈಮ್ ಎಲ್ಲ ಫಿಕ್ಸ್ ಆಗತ್ತೆ. ಆದರೂ ಅಲ್ಲೂ ಎಡವಟ್ಟು. ಒಟ್ನಲ್ಲಿ ಇಬ್ಬರೂ ಮಿಸ್. ಇದೆಲ್ಲಾ ವಿಲನಂತೆ ವರ್ತಿಸುವ ಮತ್ತೊಬ್ಬ ನಾಯಕನ ಕಿರಿಕ್.
ತ್ರಿಕೋಣ ಲವ್ಸ್ಟೋರಿ ಎಂದ ಮೇಲೆ ವಿಶೇಷವಾಗಿ ಮತ್ತೇನೂ ಹೇಳುವ ಅಗತ್ಯ ಇಲ್ಲ. ಇಡೀ ಚಿತ್ರ ಮೂವರ ಸುತ್ತಲೇ ಗಿರಕಿ ಹೊಡೆಯತ್ತೆ. ಜೀವಕ್ಕೆ ಜೀವಕೊಡುವ ಇಬ್ಬರು ಗೆಳೆಯರ ಕಥೆ ಹೇಳುವ ಭರದಲ್ಲಿ ಸರ್ಜಾ ಮಿಕ್ಕೆಲ್ಲಾ ಪಾತ್ರಗಳನ್ನೂ ಮರೆತೇ ಬಿಟ್ಟಿದ್ದಾರೆ. ಆದರೂ ಕ್ಲೈಮ್ಯಾಕ್ಸ್ನಲ್ಲಿ ಎಲ್ಲ ಪಾತ್ರಧಾರಿಗಳನ್ನೂ ರೈಲ್ವೆಸ್ಟೇಷನ್ನಲ್ಲಿ ಕಲೆಹಾಕುತ್ತಾರೆ.
ಛಾಯಾಗ್ರಾಹಕ ದಾಸ್ ಓಕೆ. ಮುಂಬೈ ಬೆಡಗಿ ಪೂನಂ ಮನಸೂರೆಗೊಳ್ಳುತ್ತಾರೆ. ಹಾಡುಗಳು ಪರವಾಗಿಲ್ಲ. ಮೂವರ ಸುತ್ತ ಸುತ್ತುವ ಚಿತ್ರದಲ್ಲಿ ಅಗಾಗ್ಗೆ ನಿಮ್ಮನ್ನು ಎಚ್ಚರಿಸಲು ಸಾಧುಕೋಕಿಲಾ, ದೊಡ್ಡಣ್ಣ ಅವರ ಕೆಲವು ಜೋಕ್ಗಳೂ ಚಿತ್ರದಲ್ಲಿವೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











