ವಿಮರ್ಶೆ: ಅಣ್ಣಾವ್ರ ಅಭಿಮಾನಿ 'ಕನಕ' ಮಾಸ್ ಪ್ರೇಕ್ಷಕರ ಮನೋರಂಜಕ
'ಎನ್ನಡ ಎಕ್ಕಡ ಎಲ್ಲ ಬಾರ್ಡರ್ ನಿಂದ ಆಚೆ ಇಲ್ಲೇನಿದ್ದರು ಕನ್ನಡ..', 'ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.. ಆಗಿರಬೇಕು. ಕನ್ನಡ ನೆಲದಲ್ಲಿ ಕನ್ನಡ ಪಿಚ್ಚರ್ ದೇ ಹವಾ ಇರಬೇಕು...'' ಇದು 'ಕನಕ' ಸಿನಿಮಾದ ಒಂದು ಡೈಲಾಗ್ ಈ ರೀತಿಯ ಸಾಕಷ್ಟು ಡೈಲಾಗ್ ಗಳು ಸಿನಿಮಾದಲ್ಲಿದೆ ಒಮ್ಮೊಮ್ಮೆ ಆ ಡೈಲಾಗ್ ಗಳು ಮಜಾ ಕೊಟ್ಟರೆ ಕೆಲವು ಬಾರಿ ಪದೇ ಪದೇ ಬಂದು ಕಿರಿಕಿರಿ ಮಾಡುತ್ತದೆ. ದುನಿಯಾ ವಿಜಯ್ ನಟನೆಯ 'ಕನಕ' ಸಿನಿಮಾ ಇಂದು ಬಿಡುಗಡೆಯಾಗಿದೆ. ಆ ಸಿನಿಮಾದ ಸಂಪೂರ್ಣ ವಿಮರ್ಶೆ ಮುಂದಿದೆ ಓದಿ...
ಫಸ್ಟ್ ಹಾಫ್
ಬಾಕಾಪುರ ಎಂಬ ಒಂದು ಊರು. ಅಲ್ಲಿ ಅಮವಾಸೆ ದಿನ ಹುಟ್ಟುವ ಮಗು ಕನಕ (ದುನಿಯಾ ವಿಜಯ್). ಬಾಲ್ಯದಿಂದ ತಂದೆಯ ತಿರಸ್ಕಾರದಲ್ಲಿ, ತಾಯಿ ಪ್ರೀತಿಯಲ್ಲಿ ಬೆಳೆದ ಕನಕ ಅಪ್ಪನ ಕಾಟ ತಡೆಯಲಾಗಿದೆ ಉರು ಬಿಟ್ಟು ಬೆಂಗಳೂರಿಗೆ ಬರುತ್ತಾನೆ. ಅನಾಥ ಬಾಲಕನಾಗಿದ್ದ ಕನಕನನ್ನು ಅಣ್ಣಪ್ಪ (ರಂಗಾಯಣ ರಘು) ಸಾಕುತ್ತಾನೆ. ಕನಕ ಚಿಕ್ಕ ವಯಸ್ಸಿನಿಂದ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. ಬೆಂಗಳೂರಿನಲ್ಲಿ ಅಣ್ಣಪ್ಪನ ಜೊತೆಗೆ ಸೇರಿ ಸಿನಿಮಾ ಪೋಸ್ಟರ್ ಗಳನ್ನು ಗೋಡೆಗಳಿಗೆ ಹಚ್ಚುವ ಕೆಲಸ ಮಾಡುತ್ತಿರುವ ಕನಕ ನಂತರ ಆಟೋ ಡ್ರೈವರ್ ಆಗುತ್ತಾನೆ. ಈ 'ಕನಕ.. ಸಾರ್ವಜನಿಕರ ಸೇವಕ'. ಎಂದು ಹೇಳುತ್ತ ಯಾರೆ ಕಷ್ಟದಲ್ಲಿ ಇದ್ದರು ಅವರ ಸಹಾಯ ಮಾಡುತ್ತಾನೆ. ಈ ರೀತಿ ಇದ್ದಾಗ ಮೆಡಿಕಲ್ ವಿದ್ಯಾರ್ಥಿ ಕನಸು (ಮಾನ್ವಿತಾ ಹರೀಶ್) ಕನಕನ ಒಳ್ಳೆತನಕ್ಕೆ ಆತನನ್ನು ಪ್ರೀತಿಸುತ್ತಾಳೆ. ಇತ್ತ ಆಕೆಯ ಪ್ರೀತಿ ಪ್ರೀತಿ ಪಾಸ್ ಆಗುತ್ತಾ ಎನ್ನುವುದು ಮೊದಲಾರ್ಧದ ಕಥೆ.
ಸೆಕೆಂಡ್ ಹಾಫ್
20 ವರ್ಷಗಳ ನಂತರ 'ಕನಕ' ಅಂತು ತನ್ನ ಊರಿಗೆ ಹೋಗುತ್ತಾನೆ. ಅಪ್ಪನ ಆಸೆಯನ್ನು ಈಡೇರಿಸಿ.. ಅಪ್ಪನ ಪ್ರಾಣವನ್ನು ಕಾಪಾಡುತ್ತಾನೆ... ಆದರೆ ಆ ಅಪ್ಪ ತನ್ನ ಮಗನ ಪ್ರೀತಿಗೆ ಕೊನೆಗೂ ಕರಗುತ್ತಾನಾ.. ಇಲ್ವಾ.. ಎನ್ನುವುದು ಸಿನಿಮಾದ ಕಥೆ. ಇದರ ಜೊತೆಗೆ ದ್ವಿತೀಯಾರ್ಧದಲ್ಲಿ ತನ್ನ ಬಾಲ್ಯದ ಗೆಳೆತಿ ಸಂಪಿಗೆ (ಹರಿಪ್ರಿಯಾ) ಯನ್ನು 'ಕನಕ' ಭೇಟಿ ಮಾಡುತ್ತಾನೆ. ಒಂದು ಕಡೆ ಅಪ್ಪ ಇನ್ನೊಂದು ಕಡೆ ಇಬ್ಬರು ಹುಡುಗಿರಲ್ಲಿ ಕನಕ ಯಾರನ್ನು ಕೈ ಹಿಡಿಯುತ್ತಾನೆ ಎನ್ನುವುದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು.
'ಕನಕ'ನ ಅಬ್ಬರ... ನಾಯಕಿಯರು ಸುಂದರ
ನಟನೆ ವಿಷಯಕ್ಕೆ ಬಂದರೆ ದುನಿಯಾ ವಿಜಯ್ ಯಾವ ದೃಶ್ಯದಲ್ಲಿಯೂ ಹಿಂದೆ ಬಿದ್ದಿಲ್ಲ. ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಎಲ್ಲದರಲ್ಲೂ ಅವರು ನೋಡುಗರಿಗೆ ಇಷ್ಟ ಆಗುತ್ತಾರೆ. ಸಿಕ್ಕಾಪಟ್ಟೆ ಮಾಸ್ ಡೈಲಾಗ್ ಹೇಳಿ ತನ್ನ ಅಭಿಮಾನಿಗಳಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸುತ್ತಾರೆ. ಫಸ್ಟ್ ಹಾಫ್ ಮಾನ್ವಿತಾ, ಸೆಕೆಂಡ್ ಹಾಫ್ ಹರಿಪ್ರಿಯಾ ತೆರೆ ಹಂಚಿಕೊಂಡಿದ್ದಾರೆ. ಇಬ್ಬರ ಲುಕ್ ಪಾತ್ರಕ್ಕೆ ತಕ್ಕಂತೆ ಚೆನ್ನಾಗಿದೆ. ಇಬ್ಬರು ಕೂಡ ಕೊಟ್ಟ ಜವಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದಾರೆ. 'ಕನಕ'ನ ತಂದೆ, ತಾಯಿ, ತಮ್ಮನ ಪಾತ್ರಗಳು ಪ್ರೇಕ್ಷಕರಿಗೆ ಹತ್ತಿರ ಆಗುತ್ತದೆ. ಉಳಿದಂತೆ, ರಂಗಾಯಣ ರಘು, ರವಿಶಂಕರ್, ಸಾಧು ಕೋಕಿಲ, ಕೆ.ಪಿ ನಂಜುಂಡಿ, ಕುರಿ ಪ್ರತಾಪ್ ಊಟಕ್ಕೆ ಉಪ್ಪಿನಕಾಯಿಯಂತೆ.
'ಅಣ್ಣವ್ರ' ಅಭಿಮಾನೋತ್ಸವ
'ಕನಕ' ಹೇಳಿ ಕೇಳಿ ಅಣ್ಣವ್ರ ಅಭಿಮಾನಿ. ಅದೇ ರೀತಿ ಸಿನಿಮಾದಲ್ಲಿಯೂ ರಾಜ್ ಕುಮಾರ್ ಅವರಿಗೆ ಅಭಿಮಾನವನ್ನು ತೋರಿಸಿದ್ದಾರೆ. ವರನಟ ಡಾ.ರಾಜ್ ಅವರ ಬಗ್ಗೆ ಅನೇಕ ಡೈಲಾಗ್ ಗಳು ಸಿನಿಮಾದಲ್ಲಿದೆ. ಅವರ ಅಂದಿನ ಸಿನಿಮಾಗಳನ್ನು 'ಕನಕ' ಕಥೆಯ ಜೊತೆಗೆ ಚೆನ್ನಾಗಿ ಬಳಸಿಕೊಳ್ಳಲಾಗಿದೆ. ಸೋ, ರಾಜ್ ಅಭಿಮಾನಿಗಳಿಗೂ ಈ ಸಿನಿಮಾ ಇಷ್ಟ ಆಗುತ್ತದೆ.
ಪ್ಲಸ್ - ಮೈನಸ್
ಚಿತ್ರಕ್ಕೆ ಪ್ಲಸ್ ಅಂದರೆ ದುನಿಯಾ ವಿಜಯ್ ನಟನೆ ಮತ್ತು ಸಿನಿಮಾದಲ್ಲಿ ಬರುವ ಕೌಟುಂಬಿಕ ಹಿನ್ನಲೆಯ ಕಥೆ. ಮೈನಸ್ ಎಂದರೆ ಸಿನಿಮಾದ ಅವಧಿ ಸ್ವಲ್ಪ ಜಾಸ್ತಿ ಆಯ್ತು ಅನಿಸುತ್ತದೆ. ನೋಡುತ್ತಾ.. ನೋಡುತ್ತಾ.. ಅಲ್ಲಲ್ಲಿ ಬೋರ್ ಆಗುತ್ತಿದೆ. ಎರಡು ಹಾಡುಗಳು ಚೆನ್ನಾಗಿದ್ದರೆ, ಉಳಿದ ಹಾಡುಗಳು ಸಾಧಾರಣವಾಗಿವೆ.
ಪಕ್ಕ ಅಭಿಮಾನಿಗಳ ಸಿನಿಮಾ
'ಕನಕ' ಚಿತ್ರವನ್ನು ದುನಿಯಾ ವಿಜಯ್ ಅಭಿಮಾನಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಾಡಲಾಗಿದೆ. ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾ. ಸಿಕ್ಕಾಪಟ್ಟೆ ಫೈಟ್, ಜೊತೆಗೆ ಮಾಸ್ ಡೈಲಾಗ್, ಬೇಕಾದಾಗ ಹಾಡುಗಳು, ಲವ್, ಕಾಮಿಡಿ, ಸೆಂಟಿಮೆಂಟ್ ಹೀಗೆ ಚಿತ್ರದ ಎಲ್ಲ ಅಂಶಗಳು ದುನಿಯಾ ವಿಜಯ್ ಅವರ ಅಭಿಮಾನಿಗಳ ಮನ ಗೆಲ್ಲುತ್ತದೆ.
ಮಾಸ್ ಪ್ರೇಕ್ಷಕರ ಮನೋರಂಜಕ
'ಕನಕ' ಪಕ್ಕಾ ಮನರಂಜನಾತ್ಮಕ ಸಿನಿಮಾ. ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದೆ ಒಮ್ಮೆ 'ಕನಕ' ಸಿನಿಮಾ ನೋಡಿದರೆ ಇಷ್ಟ ಆಗುತ್ತದೆ. ನೀವು ದುನಿಯಾ ವಿಜಯ್ ಅವರ ಅಭಿಮಾನಿ ಆಗಿದ್ದರೆ ಮಿಸ್ ಮಾಡದೆ ಈ ಸಿನಿಮಾ ನೋಡಿ.


Click it and Unblock the Notifications











