Don't Miss!
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Dhaakad Review: ಕಂಗನಾ ಅಷ್ಟೇ ಬೆಸ್ಟು, ಉಳಿದಿದ್ದೆಲ್ಲವೂ...
ಫೈಟ್ ದೃಶ್ಯದ ಮಧ್ಯದಲ್ಲಿ ನಟಿ ಕಂಗನಾ ರನೌತ್ ತನ್ನ ಎದುರಾಳಿಗೆ ಡೈಲಾಗ್ ಒಂದು ಒಗೆಯುತ್ತಾಳೆ, ''ದೇಹದಿಂದ ಆತ್ಮವನ್ನು ಬೇರೆ ಮಾಡುವುದೇ ನನ್ನ ಉದ್ಯೋಗ'' ಎಂದು. 'ದಾಖಡ್' ಸಿನಿಮಾದ ಸಂದರ್ಭದಲ್ಲಿಯೂ ಆ ಮಾತು ಅನ್ವಯಿಸುತ್ತದೆ. ಆತ್ಮವಿಲ್ಲದ ಕತೆಯನ್ನು ಸಿನಿಮಾ ಮಾಡಿದಂತಿದೆ 'ದಾಖಡ್'. ದೊಡ್ಡ ಸ್ಟಾರ್ ಕಾಸ್ಟ್ ಇರುವ ಈ ಸಿನಿಮಾ ಭಾರಿ ನಿರಾಸೆ ಮೂಡಿಸುತ್ತದೆ.
ಸಿನಿಮಾದಲ್ಲಿ ಕೆಲವು ಫೈಟ್ಗಳು, ಕೊರಿಯೋಗ್ರಫಿ ಹಾಗೂ ಕಂಗನಾ ನಟನೆ ಬಿಟ್ಟರೆ ಉಳಿದ ಯಾವುದೂ ಚೆನ್ನಾಗಿಲ್ಲ. ಚಿತ್ರಕತೆ ಹಾಗೂ ನಿರ್ದೇಶನ ಬಹಳ ಪೇಲವವಾಗಿದೆ. ಚಿತ್ರಕತೆ, ನಿರ್ದೇಶನವೇ ಸರಿಯಿಲ್ಲದ ಕಾರಣ ಸಿನಿಮಾದ ಇನ್ಯಾವ ಅಂಶವೂ ಗಮನ ಸೆಳೆಯುವುದೇ ಇಲ್ಲ.
'ದಾಖಡ್' ಸಿನಿಮಾ ಓಪನ್ ಆಗುವುದು ಬುಡಾಪೆಸ್ಟ್ನಲ್ಲಿ. ಗೂಢಚಾರಿಣಿ ಅಗ್ನಿ ಅಲಿಯಾಸ್ ಡ್ರ್ಯಾಗನ್ ಫ್ಲೈ (ಕಂಗನಾ ರನೌತ್)ಗೆ ಕೆಲವು ಬಾಲಕಿಯರನ್ನು ರಕ್ಷಿಸುವ ಅಸೈನ್ಮೈಂಟ್ ನೀಡಲಾಗಿರುತ್ತದೆ. ತನ್ನ ಪಾರ್ಟನರ್ ಅನ್ನು ಕಳೆದುಕೊಂಡರೂ ಸಹ ಅಗ್ನಿ ಆ ಮಿಷನ್ನಲ್ಲಿ ಪಾಸ್ ಆಗುತ್ತಾಳೆ.
ಆಕೆಯದ್ದೇ ಭೂತಕಾಲದ ನೆನಪು ಆಕೆಯನ್ನು ಬಹುವಾಗಿ ಕಾಡುತ್ತಿರುತ್ತದೆ. ಹೀಗಿದ್ದಾಗ ಆಕೆಯ ಮೆಂಟಾರ್ ಕರೆಯ ಮೇರೆಗೆ ರುದ್ರವೀರ್ (ಅರ್ಜುನ್ ರಾಮ್ಪಾಲ್) ಎಂಬ ಅಂತರಾಷ್ಟ್ರೀಯ ಮಹಿಳಾ ಕಳ್ಳಸಾಗಣೆದಾರ ಹಾಗೂ ಕಲ್ಲಿದ್ದಲು ಮಾಫಿಯಾ ಮಾಲೀಕನನ್ನು ಹೆಡೆಮುರಿ ಕಟ್ಟಲು ಬರುತ್ತಾಳೆ. ರುದ್ರವೀರ್ ಅನ್ನು ಅಗ್ನಿ ಭೇಟೆ ಆಡುತ್ತಾಳಾ? ಭೇಟೆ ಆಡಿದರೂ ಹೇಗೆ ಎಂಬುದು ಸಿನಿಮಾದ ಕತೆ.
ನಿರ್ದೇಶನ ಹೇಗಿದೆ?
ಸಿನಿಮಾದ ಕತೆ ಬಹಳ ಹಳೆಯ ಕತೆಯಂತೆ ಇದೆ. ಒನ್ ಲೈನರ್ ಕತೆಯನ್ನು ರಜನೀಶ್ ಘೈ ಹಾಗೂ ಚೇತನ್ ಗಾಂಧಿ ಒಳ್ಳೆಯ ಚಿತ್ರಕತೆ ಆಗಿಸುವಲ್ಲಿ ವಿಫಲರಾಗಿದ್ದಾರೆ. ಈ ಆಕ್ಷನ್, ಥ್ರಿಲ್ಲರ್ ಸಿನಿಮಾದ ಬಹುದೊಡ್ಡ ಹಿನ್ನಡೆ ಎಂದರೆ ಚಿತ್ರಕತೆಯೇ. ಸಿನಿಮಾದ ಹಲವು ಅಂಶಗಳು ನಂಬಲು ಆಗುವುದೇ ಇಲ್ಲ. ಕನ್ವಿನ್ಸಿಂಗ್ ಎನಿಸದ ಚಿತ್ರಕತೆಯನ್ನು ಸಿನಿಮಾ 'ದಾಖಡ್' ಆಗಿದೆ. ಆಕ್ಷನ್ ದೃಶ್ಯಗಳನ್ನು ಒಂದರಹಿಂದೊಂದರಂತೆ ಜೋಡಿಸಿರುವುದು ಹೊರತುಪಡಿಸಿದರೆ ಕತೆ ಎಂಬುದಕ್ಕೆ ಆದ್ಯತೆಯನ್ನೇ ನೀಡಿಲ್ಲ ನಿರ್ದೇಶಕ. ಕಂಗನಾ ರನೌತ್ರ ಫ್ಲಾಷ್ಬ್ಯಾಕ್ ಸಹ ಬಹಳ ಪೇಲವವಾಗಿದೆ. ಆರಂಭದಿಂದಲೇ ಕೆಟ್ಟದಾಗಿದ್ದ ಸಿನಿಮಾ, ಕೊನೆಯ ಅರ್ಧ ಗಂಟೆಯಲ್ಲಿ ಇನ್ನಷ್ಟು ಕೆಟ್ಟದಾಗುತ್ತದೆ. ಅಲ್ಲಿಗೆ ಪ್ರೇಕ್ಷಕನ ತಾಳ್ಮೆಯ ಕಟ್ಟೆಯೂ ಒಡೆಯುತ್ತದೆ.
ನಟನೆ ಹೇಗಿದೆ?
ಕಂಗನಾ ರನೌತ್ರ ನಟನೆ ಸಿನಿಮಾ ಅಟ್ಟರ್ ಫ್ಲಾಪ್ ಆಗುವುದರಿಂದ ಕಾಪಾಡಿದೆ. ಕೆಟ್ಟ ಚಿತ್ರಕತೆ ಹಾಗೂ ಕತೆ, ಕಂಗನಾ ಅಂತಹಾ ನಟಿಗೂ ಸಹ ತನ್ನ ಪ್ರತಿಭೆ ಪ್ರದರ್ಶಿಸಲು ಹೆಚ್ಚಿನ ಅವಕಾಶ ಕೊಟ್ಟಿಲ್ಲ. ಕೆಲವು ಆಕ್ಷನ್ ದೃಶ್ಯಗಳಲ್ಲಿಯಂತೂ ಅದ್ಭುತವಾಗಿ ಬಳಕುವ ಬಳ್ಳಿಯ ರೀತಿಯಲ್ಲಿ ಸಾಹಸಗಳನ್ನು ಮಾಡಿ ಶಹಭಾಸ್ ಎನಿಸಿಕೊಳ್ಳುತ್ತಾರೆ ಕಂಗನಾ. ಇನ್ನು ನಟ ಅರ್ಜುನ್ ರಾಮ್ಪಾಲ್ ಫ್ಲಾಷ್ಬ್ಯಾಕ್ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಚೆನ್ನಾಗಿ ಕಾಣಿಸುತ್ತಾರೆ ಸಹ ಆದರೆ ಆ ನಂತರದ ದೃಶ್ಯಗಳಲ್ಲಿ ಅವರ ಲುಕ್ ಸಿನಿಮಾಕ್ಕೆ ಸೂಟ್ ಆಗುತ್ತಿಲ್ಲ. ದಿವ್ಯಾ ದತ್ತ ನಟನೆಯ ಸಹ ಚೆನ್ನಾಗಿದೆ.
ತಾಂತ್ರಿಕ ಅಂಶಗಳು ಹೇಗಿವೆ?
ಸಿನಿಮಾಕ್ಕೆ ಸಿನಿಮಾಟೊಗ್ರಾಫರ್, ಜಪಾನಿನ ಟೆಟ್ಸು ನಗಾಟಾ ಕೆಲಸ ಎದ್ದು ಕಾಣುತ್ತದೆ. ಕೆಂಪು, ನೀಲಿ, ಹಸಿರು ಮತ್ತು ಕಪ್ಪು ಬಣ್ಣಗಳನ್ನು ಬಳಸಿಕೊಂಡು ರಕ್ತ-ಸಿಕ್ತ ಪ್ರಪಂಚದ ಸೃಷ್ಟಿಯನ್ನು ಕಂಗನಾ ರನೌತ್ ಮಾಡಿದ್ದಾರೆ. ಧೃವ ಗನೇಕಾರ್ರ ಹಿನ್ನೆಲೆ ಸಂಗೀತ ಬೇಸರ ತರಿಸುತ್ತದೆ. ಎಡಿಟಿಂಗ್ ಸಹ ಪರವಾಗಿಲ್ಲ ಎಂದಷ್ಟೆ ಹೇಳಬಹುದು. ಚಿತ್ರಿಕತೆಯೇ ಪೇಲವವಾಗಿರುವ ಸಿನಿಮಾದಲ್ಲಿ ತಾಂತ್ರಿಕ ಅಂಶಗಳು ಸಹ ಸುಮಾರಾಗಿ ಅಷ್ಟೆ ಇವೆ. 'ಸೋ ಜಾ ರೆ' ಎಂಬ ಹಾಡಿಗೆ ಹೊರತಾಗಿ ಸಿನಿಮಾದ ಇನ್ನಾವ ಹಾಡು ಸಹ ಚೆನ್ನಾಗಿಲ್ಲ.
ಒಟ್ಟಾರೆ ಸಿನಿಮಾ ಹೇಗಿದೆ?
''ನಾವೆಲ್ಲ ತೊಗಲು ಬೊಂಬೆಗಳು ಅಷ್ಟೆ ಸೂತ್ರಗಳೆಲ್ಲವೂ ಆ ದೇವರ ಕೈಲಿದೆ'' ಎಂದು ಡೈಲಾಗ್ ಒಂದು ಸಿನಿಮಾದಲ್ಲಿದೆ. ಅಂತೆಯೇ ನಿರ್ದೇಶಕ ರಜನೀಶ್ ಘೈ ಸಹ ದೇವರ ಭರವಸೆಯಲ್ಲಿ ಸಿನಿಮಾ ಮಾಡಿದಂತಿದೆ. ಆದರೆ ಈ ಸಿನಿಮಾವನ್ನು ದೇವರು ಸಹ ಕಾಪಾಡಲಾರನೋ ಏನೋ. ಒಟ್ಟಾರೆ ಹೇಳುವುದಾದರೆ ಕಂಗನಾ ನಟನೆ, ಸಿನಿಮಾಟೊಗ್ರಫಿ ಹೊರತುಪಡಿಸಿದರೆ ಸಿನಿಮಾದಲ್ಲಿ ಇನ್ನಾವುದೇ ಒಳ್ಳೆಯ ಅಂಶಗಳಿಲ್ಲ.