Don't Miss!
- News ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಮರ್ಶೆ: ಹಳ್ಳಿ ಸೊಗಡಿನ ಕಲರ್ ಫುಲ್ 'ವಂಶೋದ್ಧಾರಕ'
ರೈತ ಭೂಮಿಗೆ ಚೊಚ್ಚಲ ಮಗ, ನಾಗರೀಕತೆಯಲಿ, ನೇಗಿಲು ಮರೆತರೆ, ನಾಲ್ಕೇ ದಿನದಲ್ಲಿ ಇಡೀ ಲೋಕವೇ ಕತ್ತಲು ಎಂಬ ಸಂದೇಶವನ್ನು ನಿರ್ದೇಶಕ ಆದಿತ್ಯ ಚಿಕ್ಕಣ್ಣ ಅವರು 'ವಂಶೋದ್ಧಾರಕ' ಚಿತ್ರದ ಮೂಲಕ ಪ್ರೇಕ್ಷಕರಿಗೆ ನೀಡಲು ಪ್ರಯತ್ನಿಸಿದ್ದಾರೆ.
ಹೀಗಂತ ಅಪ್ಪಟ ಹಳ್ಳಿ ಸೊಗಡಿನ ಚಿತ್ರವಾದ 'ವಂಶೋದ್ಧಾರಕ'ದಲ್ಲಿ ಇಡೀ ಹಳ್ಳಿಯ ಚಿತ್ರಣ, ರೈತರ ಬದುಕು ಹಾಗೂ ಹಳ್ಳಿಯ ಜನರ ಮುಗ್ದತೆ ಮುಂತಾದವುಗಳನ್ನು ಬಹಳ ನೀಟಾಗಿ ತೋರಿಸಿದರೂ ಕೂಡ ಪ್ರೇಕ್ಷಕರನ್ನು ಬೋರ್ ಹೊಡೆಸಿದ್ದು, ಮಾತ್ರ ವಿಪರ್ಯಾಸ.[ನವೆಂಬರ್ 6 ರಂದು ನಿಮ್ಮೆಲ್ಲರ ಮುಂದೆ 'ವಂಶೋದ್ಧಾರಕ' ಬರಲಿದ್ದಾನೆ!]
ಬಹಳ ನಿಧಾನಕ್ಕೆ ಸಾಗುವ ಸಿನಿಮಾದಲ್ಲಿ ಹೆಚ್ಚು ಹೈಲೈಟ್ ಆಗಿದ್ದು, ಮಾತ್ರ ನಾಯಕ ವಿಶ್ವ (ವಿಜಯ್ ರಾಘವೇಂದ್ರ), ಸಿಂಪಲ್ಲಾಗ್ ಹೇಳಬೇಕು ಅಂದರೆ ಎಲ್ಲವನ್ನು ಮಿಕ್ಸ್ ಮಾಡಿರುವ ನಿರ್ದೇಶಕರು, ಕೆಲವಾರು ದೃಶ್ಯಗಳು ಹಾಗೂ ಹಾಡುಗಳನ್ನು ಎಲ್ಲೆಲ್ಲಿ ಹಾಕಬೇಕು ಅನ್ನೋ ಕನ್ ಫ್ಯೂಶನ್ ನಲ್ಲಿ ಅಲ್ಲಲ್ಲಿ ತುರುಕಿ ಪ್ರೇಕ್ಷಕರಿಗೆ ಸಖತ್ ಬೋರ್ ಹೊಡೆಸಿದ್ದಾರೆ.
'ವಂಶೋದ್ಧಾರಕ' ಸಿನಿಮಾದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..
ರೇಟಿಂಗ್:
ನಿರ್ದೇಶನ : ಆದಿತ್ಯ ಚಿಕ್ಕಣ್ಣ
ಚಿತ್ರಕಥೆ : ಚಂದ್ರಾಚಾರ್ ಕುಮಾರ್
ಸಂಗೀತ : ವಿ ಮನೋಹರ್
ನಿರ್ಮಾಣ : ಓಂ ಶ್ರೀ ಕಾಳಿಕಾಮಾತ ಪ್ರೊಡಕ್ಷನ್ಸ್
ಛಾಯಾಗ್ರಹಣ : ಪಿ.ಕೆ.ಹೆಚ್ ದಾಸ್
ತಾರಾಗಣ : ವಿಜಯ ರಾಘವೇಂದ್ರ, ಮೇಘನಾ ರಾಜ್, ಲಕ್ಷ್ಮಿ, ಶ್ರೀನಿವಾಸ ಮೂರ್ತಿ, ನವೀನ್ ಕೃಷ್ಣ, ರಂಗಾಯಣ ರಘು, ಸಾಧು ಕೋಕಿಲ, ಕಡ್ಡಿಪುಡಿ, ಚಂದ್ರು, ವಿನಯಾ ಪ್ರಸಾದ್, ವೀಣಾ ಸುಂದರ್, ಅಶ್ವಿನಿ ಗೌಡ, ಪೆಟ್ರೋಲ್ ಪ್ರಸನ್ನ ಬೀರಾದಾರ್ ಮತ್ತು ಮುಂತಾದವರು
ಬಿಡುಗಡೆ : 06 ನವೆಂಬರ್ 2015
'ವಂಶೋದ್ಧಾರಕ'ನ ಕಥೆ ಏನು?
ಪಟ್ಟಣದಲ್ಲಿ ಡಬ್ಬಲ್ ಡಿಗ್ರಿ ಪಡೆದುಕೊಂಡು ತನ್ನ ಹಳ್ಳಿಗೆ ಹಿಂತಿರುಗಿ ಬರುವ ನಾಯಕ ವಿಶ್ವ (ವಿಜಯ್ ರಾಘವೇಂದ್ರ) ಮತ್ತೆ ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಾ ತನ್ನ ತಾಯಿ ಅನ್ನಪೂರ್ಣ (ಲಕ್ಷ್ಮಿ) ಅವರೊಂದಿಗೆ ಹಾಗೂ ತನ್ನ ಬಾಲ್ಯದ ಗೆಳೆಯ ಮಾಲಿಂಗ ಜೊತೆಗೂಡಿ ಗದ್ದೆ ಕೆಲಸದೊಂದಿಗೆ ಸುಖವಾದ ಜೀವನ ನಡೆಸಬೇಕೆಂದು ನಿರ್ಧರಿಸುತ್ತಾನೆ.
ಕೊಡುಗೈ ದಾನಿ ವಿಶ್ವ (ವಿಜಯ್ ರಾಘವೇಂದ್ರ)
ತನ್ನ ತಂದೆ (ಶ್ರೀನಿವಾಸ ಮೂರ್ತಿ) ಯಂತೆ ಕೊಡುಗೈ ದಾನಿಯಾಗಿರುವ ವಿಶ್ವ ಹಳ್ಳಿಯ ಜನರಿಗೆ ಸಹಾಯ ಮಾಡುತ್ತಿರುತ್ತಾನೆ. ಜೊತೆಗೆ ಹಳ್ಳಿಯ ಮುಗ್ದ ಜನರಿಗೆ ಎಲ್ಲಿ ನೋವು-ಅನ್ಯಾಯ ಆಗುತ್ತೋ ಅಲ್ಲಿ ವಿಶ್ವ ಹಾಜರಾಗುತ್ತಾನೆ. ಅಷ್ಟರಮಟ್ಟಿಗೆ ಹಳ್ಳಿ ಜನ ನಾಯಕನನ್ನು ಹಚ್ಚಿಕೊಳ್ಳುತ್ತಾರೆ. ಈ ನಡುವೆ ಊರಿನ ಛೇರ್ ಮೆನ್ ಮಗಳು ರತ್ನಾಳ (ಮೇಘನಾ ರಾಜ್) ಮೇಲೆ ನಾಯಕನಿಗೆ ಪ್ರೀತಿ ಹುಟ್ಟುತ್ತದೆ. ಹಾಗೂ ವಿಷಯ ತಿಳಿದ ಹಿರಿಯರು ಇವರಿಬ್ಬರ ಮದುವೆ ಮಾತುಕತೆ ಕೂಡ ನಡೆಸುತ್ತಿರುತ್ತಾರೆ.
ನಾಯಕನ ಗೆಳೆಯನಾಗಿ ಮಾಲಿಂಗ (ನವೀನ್ ಕೃಷ್ಣ)
ಹಳ್ಳಿಯ ಜನರಿಗೆ ವಿಶ್ವ ಮಾಡುವ ಕೊಡುಗೈ ದಾನ ನೋಡಿ ನೋಡಿ ಬೇಸತ್ತ ವಿಶ್ವನ ಬಾಲ್ಯದ ಗೆಳೆಯನಾಗಿರುವ ಮಾಲಿಂಗ ಈ ವಿಷಯವನ್ನು ತಾಯಿ ಅನ್ನಪೂರ್ಣ ಅವರಿಗೆ ತಿಳಿಸುತ್ತಾರೆ. ಇದರಿಂದ ಬೇಸರಗೊಂಡ ತಾಯಿ, ಇನ್ನು ಮುಂದಕ್ಕೆ ಯಾರಿಗೂ ದಾನ ಮಾಡಲ್ಲ ಅಂತ ಭೂಮಿತಾಯಿಯ ಮೇಲೆ ಪ್ರಮಾಣ ಮಾಡಿಸಿಕೊಳ್ಳುತ್ತಾರೆ. ಅಲ್ಲಿಗೆ ಸಿನಿಮಾದ ಇಂಟರ್ ವಲ್[ತೆರೆಗೆ ಸಿದ್ಧವಾಗಿದೆ ವಿಜಯ ರಾಘವೇಂದ್ರ 'ವಂಶೋದ್ಧಾರಕ' ]
ಅಪ್ಪಟ ಹಳ್ಳಿ ಸೊಗಡಿನ, ಸಂಪ್ರದಾಯ ಬದ್ಧ 'ವಂಶೋದ್ಧಾರಕ'
ಪೂರ್ತಿ ಫ್ಯಾಮಿಲಿ ಸಮೇತರಾಗಿ ಕುಳಿತು ನೋಡಬಹುದಾದ, ಅಪ್ಪಟ ಹಳ್ಳಿ ಸೊಗಡಿನ ಸಂಪ್ರದಾಯ ಬದ್ಧ ಈ ಸಿನಿಮಾದಲ್ಲಿ ವಿಶ್ವನ ಇಮೇಜ್ ಹಾಳು ಮಾಡಲು ಕೆಲವರು ಪ್ರಯತ್ನ ಪಡುತ್ತಾರೆ ಅಲ್ಲಿಗೆ ಕಥೆಗೆ ಟ್ವಿಸ್ಟ್. ನಂತರ ಮಾಲಿಂಗನ ಮದುವೆ, ರಂಗಾಯಣ ರಘು ಪಿತೂರಿ. ಇವೆಲ್ಲದರ ನಡುವೆ ಗೆಳೆಯ ಮಾಲಿಂಗನ ಹೆಂಡತಿ ಜೊತೆ ಕಳ್ಳ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ವಿಶ್ವನ ವೈರಿಗಳು ಸೇರಿ ಆತನನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ ಪಂಚಾಯತಿ ಕಟ್ಟೆಗೆ ಎಳೆದು ತರುತ್ತಾರೆ.
ಮುಂದೇನು?
ಊರವರ ದೃಷ್ಟಿಯಲ್ಲಿ ವಿಲನ್ ಆಗಿರುವ ರಂಗಾಯಣ ರಘು ಹಾಗೂ ಪೆಟ್ರೋಲ್ ಪ್ರಸನ್ನ ನಾಯಕ ವಿಶ್ವನನ್ನು ಹಳ್ಳಿಯ ಜನರ ದೃಷ್ಟಿಯಲ್ಲಿ ಕೆಟ್ಟವನು ಎಂದು ಬಿಂಬಿಸುತ್ತಾರೆ. ತದನಂತರ ಏನಾಗುತ್ತೆ, ನಾಯಕಿ ರತ್ನಾಳ ಜೊತೆ ಮದುವೆ ನಡೆಯುತ್ತಾ, ವಿಶ್ವ ತಪ್ಪಿತಸ್ಥ ಅಲ್ಲ ಅಂತ ಪ್ರೂವ್ ಆಗುತ್ತಾ, ರಂಗಾಯಣ ರಘು ಕಥೆ ಏನು ಎಂಬುದನ್ನು ತಿಳಿಯಲು ನೀವು ಖುದ್ದು ಥಿಯೇಟರ್ ಗೆ ಭೇಟಿ ನೀಡಿ
'ವಂಶೋದ್ಧಾರಕ' ವಿಜಯ್ ರಾಘವೇಂದ್ರ
'ವಂಶೋದ್ಧಾರಕ' ನ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಎಂದಿನಂತೆ ಸಂಪ್ರದಾಯ ಹಾಗೂ ಸೆನ್ಸಿಟೀವ್ ಪಾತ್ರದಲ್ಲಿ ತಮ್ಮ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ, ಯಾವುದೇ ಪೈಟ್ ಇಲ್ಲದೇ ಬರೀ ಬಾಯಿ ಮಾತಿನಲ್ಲೇ ಜನರಿಗೆ ಬುದ್ದಿ ಮಾತನ್ನು ಹೇಳುತ್ತಾ, ತಮ್ಮ ತಂದೆ-ತಾಯಿ ಚಿಕ್ಕಂದಿನಲ್ಲಿ ಭೋಧಿಸಿದ ಪಾಠವನ್ನು ತುಂಬಾ ಚೆನ್ನಾಗಿ ಪಾಲಿಸಿಕೊಂಡು ಬಂದಿರುವ ಒಳ್ಳೆ ಮನೆ-ಮಗನಾಗಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ.
ನಾಯಕಿ ಮೇಘನಾ ರಾಜ್
ಈ ಮೊದಲು ಹೆಚ್ಚಿನ ಸಿನಿಮಾಗಳಲ್ಲಿ ಸಖತ್ ಗ್ಲಾಮರ್ ರೋಲ್ ನಲ್ಲಿ ಮಿಂಚುತ್ತಿದ್ದ ನಟಿ ಮೇಘನಾ ರಾಜ್ ಅವರು ಈ ಚಿತ್ರದಲ್ಲಿ ಅಪ್ಪಟ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ. ಆದರೆ ನಿರ್ದೇಶಕರು ಈ ಸಿನಿಮಾದಲ್ಲಿ ನಾಯಕಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿಲ್ಲ. ಬದಲಾಗಿ ಚಿತ್ರದುದ್ದಕ್ಕೂ ಬರೀ ನಾಯಕನೇ ಹೈಲೈಟ್.
ವಿಲನ್ ಪಾತ್ರದಲ್ಲಿ ರಂಗಾಯಣ ರಘು-ಪೆಟ್ರೋಲ್ ಪ್ರಸನ್ನ
ಹೆಂಡತಿಗೆ ತಕ್ಕ ಗಂಡನಾಗಿರದೇ, ಪಕ್ಕಾ ಕುಡುಕನಾಗಿರುವ ರಂಗಾಯಣ ರಘು, ಊರಿನ ಜನ ಏನು ಮಾಡುತ್ತಾರೆ, ಯಾರ ಸಂಸಾರಕ್ಕೆ ಬೆಂಕಿ ಇಡುವುದು ಮುಂತಾದ ವಿಚಾರದ ಬಗ್ಗೆ ಯೋಚಿಸುತ್ತಾ, ಹಳ್ಳಿಯವರ ದೃಷ್ಟಿಯಲ್ಲಿ ವಿಲನ್ ಆಗಿರುತ್ತಾರೆ. ಜೊತೆಗೆ ಪೆಟ್ರೋಲ್ ಪ್ರಸನ್ನನೂ ಇದಕ್ಕೆ ಸಾಥ್ ನೀಡುತ್ತಾನೆ. ಒಟ್ನಲ್ಲಿ ರಂಗಾಯಣ ರಘು ತಮ್ಮ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ.
ಇನ್ನುಳಿದವರ ಕಥೇ ಏನು?
ಕಾಮಿಡಿ ನಟ ಸಾಧುಕೋಕಿಲ ಅವರು ಹೀಗೆ ಬಂದು ಹಾಗೆ ಮಾಯವಾಗಿದ್ದಾರೆ. ಶ್ರೀನಿವಾಸ ಮೂರ್ತಿ ಅವರು ಬರೀ ಫ್ಲ್ಯಾಶ್ ಬ್ಯಾಕ್ ಗೆ ಮಾತ್ರ ಸೀಮಿತ. ಇನ್ನುಳಿದಂತೆ ನಟಿ ಲಕ್ಷ್ಮಿ, ವಿನಯಾ ಪ್ರಸಾದ್, ಕಾಶಿ, ಬೀರಾದಾರ್, ವೀಣಾ ಸುಂದರ್, ನವೀನ್ ಕೃಷ್ಣ, ಅಶ್ವಿನಿ ಗೌಡ, ಕಡ್ಡಿಪುಡಿ ಚಂದ್ರು ಮುಂತಾದವರು ತಮ್ಮ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ.
ಒಟ್ಟಾರೆ 'ವಂಶೋದ್ಧಾರಕ'
ಒಟ್ಟಾರೆಯಾಗಿ ವಂಶೋದ್ಧಾರಕ ಸಿನಿಮಾ ಹೇಳಬೇಕೆಂದರೆ ಹಳ್ಳಿ ಸೊಗಡಿನ ಕಥೆ ಬಿಟ್ಟರೆ ಪ್ರೇಕ್ಷಕರಿಗೆ ಸಖತ್ ಬೋರ್ ಹೊಡೆಸುತ್ತದೆ. ಸಂಗೀತ ಅಷ್ಟಕಷ್ಟೆ, ತುಂಬಾ ನೆನಪಿನಲ್ಲಿ ಉಳಿಯುವ ಯಾವ ಹಾಡು ಈ ಚಿತ್ರದಲ್ಲಿಲ್ಲ. ಸಿನಿಮಾಟೋಗ್ರಫಿ ಓಕೆ ಓಕೆ. ಫ್ಯಾಮಿಲಿಗೆ ಹಾಗೂ ಹಳ್ಳಿಯ ಕಥೆ ಇಷ್ಟಪಡುವವರಿಗೆ ಈ ಸಿನಿಮಾ ಹೇಳಿ ಮಾಡಿಸಿದಂತಿದೆ. ಇಷ್ಟು ಬಿಟ್ಟರೆ ಅಂತಹ ವಿಶೇಷವಾದದನ್ನು ಏನನ್ನೂ ನಿರ್ದೇಶಕರು ಹೇಳಲಿಲ್ಲ.