Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ACT 1978 ಚಿತ್ರ ವಿಮರ್ಶೆ: ಈ ಸಿನೆಮಾ ತಪ್ಪದೇ ನೋಡಿ
''ನಾವು ಎರಡು ವ್ಯವಸ್ಥೆಯ ಒಳಗಡೆ ಬದುಕುತ್ತಿದ್ದೇವೆ ಸರ್''ಎನ್ನುತ್ತದೆ ಮುಖ್ಯ ಪಾತ್ರ. ಸಂಪೂರ್ಣ ಸಿನೆಮಾ ಈ ಒಂದು ಸಾಲಿನ ಮೇಲೆ ನಿಂತಿದೆ. ಹಲವು ಆಯಾಮಗಳಲ್ಲಿ ಟಿಸಿಲೊಡೆಯುತ್ತ ಆ ಒಂದು ಮಾತು ಎತ್ತುವ ಪ್ರಶ್ನೆಗಳು ನಮ್ಮದೇ ಆಗಿರುತ್ತವೆ, ಕೆಲವೊಮ್ಮೆ ಪ್ರಶ್ನೆ ನಮಗೆ ಆಗಿರುತ್ತದೆ.
Recommended Video
''ಆಕ್ಟ್ 1978'' ಮನರಂಜನೆಯೇ ಪರಮೋದ್ದೇಶ ಎಂದುಕೊಂಡು ಮಾಡಿರುವ ಸಿನೆಮಾವಲ್ಲ. ಹಾಗಂತ ರಂಜನೆಯೇ ಇಲ್ಲದೆ ಬರಿ ಬೋಧನೆ ತುಂಬಿರುವ ಸಿನೆಮಾ ಕೂಡ ಇದಲ್ಲ. ಕಥೆಯೊಳಗೆ ಸ್ವಾಭಾವಿಕ ಎನಿಸುವಂತೆ ಒಂದು ಕಮರ್ಷಿಯಲ್ ಸಿನೆಮಾಗೆ ಬೇಕಾದ ಎಲ್ಲ ಭಾವಗಳನ್ನು ಪೋಣಿಸಿ ಚಿತ್ರಕಥೆಯನ್ನು ನೇಯಲಾಗಿದೆ.
ಮಾತು ಸೋತ ಈ ಸಮಾಜದ ಪ್ರತಿನಿಧಿ ಆ ಪಾತ್ರ
ಸಿನೆಮಾದಲ್ಲಿ ಬೀಸು ಸುರೇಶ ಅಭಿನಯದ ಒಂದು ಪಾತ್ರವಿದೆ. ಮಾತು ಸೋತ ಈ ಸಮಾಜದ ಪ್ರತಿನಿಧಿ ಆ ಪಾತ್ರ. ಇಲ್ಲಿ ಸರ್ಕಾರೀ ಕಚೇರಿಯ ಅವ್ಯವಸ್ಥೆಯ ವಿರುದ್ದದ ಬಂಡಾಯ ಒಂದು ಪ್ರತಿಮೆಯಷ್ಟೇ. ನಾವು ಕಟ್ಟಿಕೊಂಡ ಸಮಾಜ ಎನ್ನುವ ನಂಬಿಕೆಯ ಒಳಗಡೆ ಎಲ್ಲ ಪದರಗಳಲ್ಲೂ ಹೀಗೆ ಮಾತು ಸೋತವರ ಹುಯಿಲಿದೆ.
Act-1978 Review: ಹಲವು ಭಾವಗಳ ಹೋರಾಟದ ಕಥನ
ಮಾತು ಹಾಗು ಅದಕ್ಕೆ ಅಂಟಿಕೊಳ್ಳುವ ರಕ್ತದಾಹಿ ಚಪ್ಪಾಳೆಗಳ ಸದ್ದಿನ ನಡುವೆ ಅವೆಲ್ಲ ಕೇಳಿಸುತ್ತಿಲ್ಲವಷ್ಟೇ. ಕೇಳಿಸಿಕೊಳ್ಳುವ ಒಳಗಿವಿ ಇದ್ದರೆ "ಆಕ್ಟ್ 1978" ಸಿನೆಮಾದ ಬಹುತೇಕ ಪಾತ್ರಗಳು ಮಾತುಗಳನ್ನು ಎದೆಗೆ ಸಿಕ್ಕಿಸಿ ವ್ಯಂಗ್ಯದ ನಗೆಯಾಡುತ್ತವೆ.
ಈ ಸಿನೆಮಾದ ಒಳಗಡೆ ಬಂಡಾಯವಿದೆ
ವ್ಯವಸ್ಥೆಯ ವಿರುದ್ಧದ ಪ್ರಶ್ನೆಗಳಿಗೆ, ಲೇವಡಿಗೆ, ಬಂಡಾಯಕ್ಕೆ ಇತಿಹಾಸದುದ್ದಕ್ಕೂ ಕುರುಹುಗಳು ಸಿಗುತ್ತವೆ. ಶಿಷ್ಟಾಚಾರ, ಸಂಪ್ರದಾಯ, ಧರ್ಮ, ಕಾನೂನು ಎನ್ನುವ ಅಸ್ತ್ರ ಬಳಸಿ ಇವೆಲ್ಲವುಗಳನ್ನು ಹತ್ತಿಕ್ಕಲಾಯಿತು. ತನ್ನದೇ ಮಿತಿಯ ಒಳಗಡೆ ಈ ಸಿನೆಮಾದ ಒಳಗಡೆ ಬಂಡಾಯವಿದೆ. ಹಾಗು ಅದರ ಧ್ವನಿ ದೊಡ್ಡದು. ಕಣ್ಣ ರೆಪ್ಪೆಗಳ ನಾಲ್ಕು ಮಿಲನಕ್ಕಷ್ಟೇ ಸಿಗುವ ಗಾಂಧೀ ವೇಷದ ವ್ಯಕ್ತಿ ನಮ್ಮ ವ್ಯವಸ್ಥೆಯ ಗಲೀಜನ್ನು ಮಾತೆ ಆಡದೆ ಹೀಯಾಳಿಸುವುದು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಗಟ್ಟಿ ನಿರ್ದೇಶಕರು ಮಾತ್ರ ಚಿತ್ರಕಥೆಯ ನಡುವಲ್ಲಿ ಇಂತಹ ಪಾತ್ರಗಳನ್ನು ನೆಡಬಲ್ಲರು.
ಪ್ರೇಕ್ಷಕರ ನಿರೀಕ್ಷೆಗೆ ಯಾವುದೇ ಭಂಗ ಉಂಟಾಗಲ್ಲ
ಹರಿವು ಹಾಗು ನಾತಿಚರಾಮಿ ಸಿನೆಮಾಗಳ ಮೂಲಕ ರಾಷ್ಟ್ರಪ್ರಶಸ್ತಿಯ ಗೌರವ ಸ್ವೀಕರಿಸಿದ ನಿರ್ದೇಶಕ ಮಂಸೋರೆ ಪ್ರೇಕ್ಷಕರ ನಿರೀಕ್ಷೆಗೆ ಯಾವುದೇ ಭಂಗ ಉಂಟುಮಾಡುವುದಿಲ್ಲ. ವಸ್ತುವಿನ ಆಯ್ಕೆಯಿಂದ ಹಿಡಿದು ಕನ್ನಡ ಚಿತ್ರರಂಗದ ಬಹುತೇಕ ಪೋಷಕ ಪಾತ್ರವರ್ಗವನ್ನು ತೆರೆಯ ಮೇಲೆ ದುಡಿಸಿಕೊಂಡಿರುವ ರೀತಿ ಎಲ್ಲವು ಶ್ಲಾಘನೀಯ. ಚತುರ ಬರಹಗಾರರಾದ ಟಿಕೆ ದಯಾನಂದ್ ಹಾಗು ವೀರೇಂದ್ರ ಮಲ್ಲಣ್ಣ ಅವರ ಪಕ್ವ ಕೆಲಸ ಸಿನೆಮಾಡ ಬಿಗಿ ನಿರೂಪಣೆಗೆ ಸಹಾಯ ಮಾಡಿದೆ.
ಯಜ್ಞ ಶೆಟ್ಟಿ ವೃತ್ತಿ ಬದುಕಿನ ಶ್ರೇಷ್ಠ ಸಿನೆಮಾ
ಯಜ್ಞ ಶೆಟ್ಟಿ ವೃತ್ತಿ ಬದುಕಿನ ಶ್ರೇಷ್ಠ ಸಿನೆಮಾವಿದು. ವ್ಯಂಗ್ಯದ ನಗೆ, ವ್ಯವಸ್ಥೆಯ ವಿರುದ್ಧದ ಸಿಟ್ಟು, ಹತಾಶೆ, ನೋವು ಹಾಗು ಅಸಹಾಯಕತೆ ಎಲ್ಲದರ ಭಾವಾಭಿವ್ಯಕ್ತಿಯಲ್ಲೂ ಯಜ್ಞ ಶೆಟ್ಟಿ ಗೆದ್ದು ಬೀಗುತ್ತಾರೆ. ಹೆಸರು ಬರೆಯುತ್ತ ಹೋದರೆ ಒಂದು ಪ್ಯಾರ ಆಗುವಷ್ಟು ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ.
ಚಿತ್ರಮಂದಿರದಲ್ಲಿ ಸಿನೆಮಾ ನೋಡಲು ಒಳ್ಳೆಯ ಆಯ್ಕೆ
ಕೊರೊನ ಕಾಲದಲ್ಲಿ ಚಿತ್ರಮಂದಿರಕ್ಕೆ ಮತ್ತೆ ಪ್ರೇಕ್ಷಕರು ಬರುತ್ತಾರೋ ಇಲ್ಲವೋ ಎನ್ನುವ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಬಂದೆ ಬರುತ್ತಾರೆ ಎಂದು ಸಿನೆಮಾ ಬಿಡುಗಡೆ ಮಾಡಿರುವ ಚಿತ್ರತಂಡವನ್ನು ಬೆಂಬಲಿಸುವ ಅಗತ್ಯವಿದೆ. OTT ಗೆ ಸಿನೆಮಾ ಮಾರಿಕೊಂಡು ನಿರ್ಮಾಪಕರು ಸುಮ್ಮನಿರಬಹುದಿತ್ತು. ಆದರೆ ಅವರು ಬೆಳ್ಳಿಪರದೆಯ ಮೇಲೆ ತಮ್ಮ ಶ್ರಮವನ್ನು ತೋರಿಸಲು ಬಂದಿದ್ದಾರೆ. ಇದು ಕೇವಲ ಮನೆಯಲ್ಲೇ ಕುಳಿತು ತೋರಿಸುವ ನೈತಿಕ ಬೆಂಬಲವಷ್ಟೇ ಆಗಬಾರದು. ಕುಟುಂಬ ಸಮೇತರಾಗಿ ನೋಡಬಹುದಾದ ಈ ಸಿನೆಮಾ ಮತ್ತೆ ಚಿತ್ರಮಂದಿರದಲ್ಲಿ ಸಿನೆಮಾ ನೋಡಲು ಒಂದು ಒಳ್ಳೆಯ ಆಯ್ಕೆ.