Don't Miss!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸಕ್ಕರೆ' ವಿಮರ್ಶೆ: ರುಚಿ ನೋಡುವುದೋ, ಬಿಡುವುದೋ?
ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಗಳೆಂದರೆ ಮಳೆ, ಜಲಪಾತ, ನಕ್ಕುನಲಿಸುವ ಡೈಲಾಗ್ ಗಳು ಸಾಮಾನ್ಯ ಎಂಬಂತಾಗಿದೆ. ಇಲ್ಲೂ ಅಷ್ಟೇ ಜಲಪಾತ ಇದೆ, ಮಳೆಯ ಅಬ್ಬರ ಇದೆ ಜೊತೆಗೆ ಡೈಲಾಗ್ ಗಳ ತುಂತುರು ಮಳೆಯೂ ಆಗುತ್ತದೆ. ಇಲ್ಲೂ ಅನಂತ್ ನಾಗ್ ಇರುವುದು ಇನ್ನೊಂದು ವಿಶೇಷ. ಗನ್ ತೆಗೆದು ಗಣೇಶ್ ಎದೆಗೆ ಗುರಿಯೂ ಇಡ್ತಾರೆ.
ಪ್ರೇಮ ವೈಫಲ್ಯದಿಂದ ಖಿನ್ನತೆಗೆ ಒಳಗಾಗಿ ಕೊಡಗಿನಲ್ಲಿನ ತನ್ನ ಅಕ್ಕನ ಮನೆಗೆ ಬರುತ್ತಾಳೆ ನೇಹಾ (ದೀಪಾ ಸನ್ನಿಧಿ). ಆದರೆ ನೇಹಾಳ ಅಕ್ಕ (ಅನು ಪ್ರಭಾಕರ್) ಕೂಡ ಆಗಷ್ಟೇ ತನ್ನ ಬಾಸ್ ನನ್ನು (ನಟರಂಗ ರಾಜೇಶ್) ಪ್ರೀತಿಸುತ್ತಿರುತ್ತಾಳೆ. ಇದನ್ನು ನೇಹಾಳಿಗೂ ಹೇಳುತ್ತಾಳೆ. ಆದರೆ ನೇಹಾಳಿಗೆ ಹುಡುಗರ ಬಗ್ಗೆ ಅದಾಗಲೆ ವೈರಾಗ್ಯ ಬಂದಿರುತ್ತದೆ.
ಇವರ ನೆರೆಮನೆ ಹುಡಗನೇ ವಿನೀತ್ ಅಲಿಯಾಸ್ ವಿನ್ನಿ (ಗಣೇಶ್). ಏನೇ ಆದ್ರೂ ಹಲ್ಲು ಕಿರಿ ಎಂಬುದು ಆತನ ಫಿಲಾಸಫಿ. ವಿನ್ನಿ...ವಿನ್ನರ್...ದಿ ಬಾಜಿಗರ್ ಎಂಬ ಡೈಲಾಗ್ ಸದಾ ಹೇಳುತ್ತಾ ಎಲ್ಲರೊಂದಿಗೂ ಜಾಲಿಯಾಗಿರುತ್ತಾನೆ.
ಚಿತ್ರ: ಸಕ್ಕರೆ
ನಿರ್ಮಾಪಕರು: ಶೈಲಜಾ ನಾಗ್ - ಬಿ.ಸುರೇಶ್ (ಮೀಡಿಯಾ ಹೌಸ್ ಸ್ಟುಡಿಯೋ)
ಕಥೆ, ಚಿತ್ರಕಥೆ, ನಿರ್ದೇಶನ: ಅಭಯಸಿಂಹ
ಸಂಭಾಷಣೆ: ಸುಮನ್ ದೀಪ್
ಸಂಗೀತ: ವಿ.ಹರಿಕೃಷ್ಣ
ಛಾಯಾಗ್ರಹಣ: ವಿಕ್ರಮ್ ಶ್ರೀವಾತ್ಸವ
ಸಂಕಲನ: ಜೋ.ನಿ.ಹರ್ಷ
ಸೆನ್ಸಾರ್ ಸರ್ಟಿಫಿಕೇಟ್ : ಯು (Unrestricted Public Exhibition)
ಪಾತ್ರವರ್ಗ: ಗಣೇಶ್, ದೀಪಾ ಸನ್ನಿಧಿ, ಅನಂತ್ ನಾಗ್, ವಿನಯಪ್ರಸಾದ್, ಅಚ್ಯುತಕುಮಾರ್, ಅನು ಪ್ರಭಾಕರ್, ನಟರಂಗ ರಾಜೇಶ್ ಮುಂತಾದವರು.
ಖಿನ್ನತೆ ದೂರ ಮಾಡುವ ವಿನ್ನಿ
ಒಂದು ಕಪ್ ಸಕ್ಕರೆ ಸಾಲ ಕೇಳಲು ಬಂದು ನೇಹಾಳ ಅಸಹನೆಗೆ ಗುರಿಯಾಗುತ್ತಾನೆ. ಬಳಿಕ ನೇಹಾಳಿಗೆ ಹತ್ತಿರವಾಗಿ ಆಕೆಯ ಖಿನ್ನತೆಯನ್ನು ದೂರ ಮಾಡಲು ಪ್ರಯತ್ನಿಸುತ್ತಾನೆ. ನೇಹಾ ತನ್ನ ಪ್ರೇಮ ವೈಫಲ್ಯದ ಕಥೆ ಹೇಳುತ್ತಾಳೆ. ಆಗ ವಿನೀತ್ ಸಹ ಆಕೆಯ ಲವ್ ಸ್ಟೋರಿಯಲ್ಲಿ ತಾನೂ ಇರುವುದಾಗಿ ಹೇಳುತ್ತಾನೆ.
ನೇಹಾ ಕಥೆಗೆ ಹೊಸ ಟ್ವಿಸ್ಟ್ ಕೊಡುವ ವಿನ್ನಿ
ಒಮ್ಮೆ ಹಿಂತಿರುಗಿ ನೋಡಿದ್ದರೆ ನಿಜವಾದ ಪ್ರೇಮಿ ಸಿಗುತ್ತಿದ್ದ ಎಂದು ಹೇಳುತ್ತಾನೆ. ಎಲ್ಲೋ ಒಂದು ಕಡೆ ಇವನು ನಿಜವಾಗಿಯೂ ಮಂಗಳೂರಿನಲ್ಲಿ ತಾನು ಓಡಬೇಕಾದರೆ ಇದ್ದನೇ ಎಂಬ ಅನುಮಾನವೂ ಬರುತ್ತದೆ. ಆದರೆ ನೇಹಾಳಿಗೆ ಎಲ್ಲೂ ಅನುಮಾನ ಬಾರದಂತೆ ಚೆನ್ನಾಗಿ ಕಥೆ ಕಟ್ಟುತ್ತಾನೆ.
ಕಡೆಗೆ ನೇಹಾ ಸಿಗ್ತಾಳಾ ಕೈ ಕೊಡ್ತಾಳಾ?
ಆದರೆ ವಿನ್ನಿಗೆ ಮೋಸ ಮಾಡಬೇಕೆಂಬ ಉದ್ದೇಶ ಇರಲ್ಲ. ಈಗಾಗಲೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ನೇಹಾಳಲ್ಲಿ ಹೊಸ ಉತ್ಸಾಹ ಹುಮ್ಮಸು ತರುವ ಪ್ರಯತ್ನ ಮಾಡುತ್ತಾನೆ. ಕಡೆಗೆ ವಿನ್ನಿ ಹೇಳಿದ ಕಥೆಯಲ್ಲಾ ಸುಳ್ಳು ಎಂದು ಗೊತ್ತಾಗುತ್ತದೆ. ವಿನ್ನಿಗೆ ನೇಹಾ ಸಿಗುತ್ತಾಳಾ? ಇಲ್ಲಾ ಕೈ ಕೊಡ್ತಾಳಾ? ಎಂಬುದೇ ಕಥೆ.
ಗಣೇಶ್ ಬೊಂಟಾಟ್ ಸರ್ಕಸ್ ಕೂಲ್ ಅಭಿನಯ
ಹುಡುಗಿಗಾಗಿ ಗಣೇಶ್ ಇಲ್ಲಿ 'ಬೊಂಟಾಟ್' ಆಗಿ 'ಸರ್ಕಸ್' ಮಾಡ್ತಾರೆ. 'ಕೂಲ್' ಆಗಿ ಎಲ್ಲವನ್ನೂ ನಿಭಾಯಿಸುತ್ತಾರೆ. 'ಉಲ್ಲಾಸ ಉತ್ಸಾಹ'ದಿಂದ ಸಾಗುವ ಕಥೆಯಲ್ಲಿ ಕೊನೆ 'ಏನೋ ಒಂಥರಾ' ಆಗುತ್ತದೆ. ಅದೇನು ಎಂಬುದನ್ನು ನೀವು ಇಲ್ಲಿ ಓದುವುದಕ್ಕಿಂತ ತೆರೆಯ ಮೇಲೆ ನೋಡಿದರೇನೆ ಚೆಂದ.
ಅನಂತ್ ನಾಗ್, ವಿನಯಾಪ್ರಸಾದ್ ಜೋಡಿ
ನೇಹಾ ಹಾಗೂ ವಿನ್ನಿ ಯುವ ಪ್ರೇಮಕಥೆಯ ಜೊತೆಗೆ ಮತ್ತೊಂದು ವಯಸ್ಕರ ಪ್ರೇಮವೂ ಮೂಡಿಬಂದಿದೆ. ಅನಂತ್ ನಾಗ್ ಹಾಗೂ ವಿನಯಾಪ್ರಸಾದ್ ನೆರೆಹೊರೆಯವರಾಗಿದ್ದರೂ ಅವರನ್ನು ವಿನ್ನಿ ಒಂದು ಮಾಡುತ್ತಾನೆ. ಎರಡು ಒಂಟಿ ಜೀವಗಳನ್ನು ಮನಸ್ಸಿನ ಹತ್ತಿರಕ್ಕೆ ತರುತ್ತಾನೆ.
ನಾಟಿವೈದ್ಯನ ಪಾತ್ರದಲ್ಲಿ ಅಚ್ಯುತ್ ಕುಮಾರ್
ವಿನ್ನಿ ಮಾವನಾಗಿ ನಾಟಿ ವೈದ್ಯನ ಪಾತ್ರದಲ್ಲಿ ಅಚ್ಯುತ್ ಕುಮಾರ್ ಗಮನಸೆಳೆಯುತ್ತಾರೆ. ನಾಟಿ ವೈದ್ಯ ಪದ್ಧತಿಯಲ್ಲಿ ಎಲ್ಲಾ ಕಾಯಿಲೆಗಳಿಗೂ ಮದ್ದಿದೆ. ಏಡ್ಸ್ ಗೂ ಮದ್ದಿದೆ ಎಂದು ಹೇಳಿ ಎಲ್ಲರನ್ನೂ ನಗಿಸುತ್ತಾರೆ. ಎಲ್ಲದಕ್ಕೂ ಮದ್ದುಂಟು ಎನ್ನುವ ಈ ನಾಟಿ ವೈದ್ಯನಿಗೆ ಕಡೆಗೆ ಪ್ರೇಮ ವೈಫಲ್ಯಕ್ಕೆ ಮದ್ದು ಸಿಗದೆ ವಿಲವಿಲ ಎಂದು ಒದ್ದಾಡುತ್ತಾನೆ.
ಕಚಗುಳಿ ಇಡುವ ಸುಮನ್ ದೀಪ್ ಸಂಭಾಷಣೆ
ಸುಮನ್ ದೀಪ್ ಅವರ ಸಂಭಾಷಣೆ ಅಲ್ಲಲ್ಲಿ ಕಚಗುಳಿ ಇಡುತ್ತಾ ಪ್ರೇಕ್ಷಕರನ್ನು ನಗಿಸುತ್ತದೆ. ಡೈಲಾಗ್ ನ ಒಂದು ಸ್ಯಾಂಪಲ್..."ಪ್ರೀತಿ ಸಿಗೋವರೆಗೂ ನಮ್ಮ ಹಾರ್ಟ್ ಡ್ರಮ್ ಥರಾ ಹೊಡ್ಕೋತಾ ಇರುತ್ತೆ. ಒಂದ್ಸಲ ಐ ಲವ್ ಯು ಅಂತ ಹೇಳಿದ್ಮೇಲೆ ಸೈಲೆಂಟ್ ಮೋಡ್ ಗೆ ಹಾಕ್ಕೊಂಡ್ ಬಿಡುತ್ತೆ ಆಮೇಲೆ ಏನಿದ್ರು ಬಡ್ಡಿಮಗಂದು ಕಣ್ಣಿಗೆ ಕೆಲಸ!"
ಯಾರ ಅಭಿನಯ ಹೇಗಿದೆ?
ಗಣೇಶ್ ಅಭಿನಯದಲ್ಲಿ ಹೊಸತನವಿಲ್ಲ ಎಂಬುದನ್ನು ಬಿಟ್ಟರೆ ಎಂದಿನಂತೆ ಸಂಭಾಷಣೆಯಲ್ಲಿ, ಅಭಿನಯದಲ್ಲಿ ಮಿಂಚಿದ್ದಾರೆ. ದೀಪಾ ಸನ್ನಿಧಿ ಅವರದು ಸಹ ಅಷ್ಟೇ ಲವ್ಲಿ ಅಭಿನಯ. ನಿವೃತ್ತ ಆರ್ಮಿ ಆಫೀಸರ್ ಆಗಿ ಅನಂತ್ ನಾಗ್, ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ವಿನಯಾ ಪ್ರಸಾದ್ ಅವರದು ಮಾಗಿದ ಅಭಿನಯ.
ತಾಂತ್ರಿಕವಾಗಿ ಚಿತ್ರ ಹೇಗೆ ಮೂಡಿಬಂದಿದೆ?
ವಿಕ್ರಮ್ ಶ್ರೀವಾತ್ಸವ್ ಅವರ ಛಾಯಾಗ್ರಹಣ ಕಣ್ಣಿಗೆ ಹಿತಮಿತವಾಗಿದೆ. ಬೆಂಗಳೂರು, ಮಂಗಳೂರು, ಮಡಿಕೇರಿಯ ರಮಣೀಯ ದೃಶ್ಯಗಳನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ. ಚಿತ್ರದ ಮತ್ತೊಂದು ಗಮನಾರ್ಹ ತಾಂತ್ರಿಕ ಅಂಶ ಎಂದರೆ ಜೋ.ನಿ.ಹರ್ಷ ಅವರ ಸಂಕಲನ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಹಾಲು ಸಕ್ಕರೆಯಂತೆ ಬೆರೆತಿದೆ.
ಚಿತ್ರ ನೋಡುವುದೋ, ಬಿಡುವುದೋ?
ಸಾಮಾನ್ಯವಾಗಿ ಸಕ್ಕರೆ ತಿಂದ ಮೇಲೆ ಬೇರೇನು ರುಚಿಸುವುದಿಲ್ಲ. ಸಕ್ಕರೆಯನ್ನು ಒಂದೆರಡು ಚಮಚವಷ್ಟೇ ತಿನ್ನಲು ಸಾಧ್ಯ. ಸಿಹಿಯಾಗಿದೆ ಎಂದು ಅತಿಯಾಗಿ ತಿಂದರೆ ತೊಂದರೆ ತಪ್ಪಿದ್ದಲ್ಲ. ಈ ಇತಿಮಿತಿಯೊಳಗೆ 'ಸಕ್ಕರೆ'ಯನ್ನು ಅಭಯಸಿಂಹ ಕೊಟ್ಟಿದ್ದಾರೆ. ಗಣೇಶ್ ಚಿತ್ರಗಳನ್ನು ಇಷ್ಟಪಡುವ ಪ್ರತಿಯೊಬ್ಬರಿಗೂ 'ಸಕ್ಕರೆ' ಖಂಡಿತ ನಿರಾಸೆಪಡಿಸುವುದಿಲ್ಲ. ಇದು ಕಲಬೆರಕೆ ಸಕ್ಕರೆಯಲ್ಲ ಓರಿಜಿನಲ್ ಎಂಬುದು ನಿಮ್ಮ ಗಮನಕ್ಕಿರಲಿ.