'ಶತ್ರು' ಚಿತ್ರ ವಿಮರ್ಶೆ: ಮಾಸ್ ಪ್ರಿಯರಿಗೆ ಮಿತ್ರ
ಈಗ ಸ್ಟೈಲಿಶ್ ಸ್ಟಾರ್ ಎಂದು ಹೊಸ ಬಿರುದು ಪಡೆದಿರುವ ಲವ್ಲಿ ಸ್ಟಾರ್ ಪ್ರೇಮ್ ಮೊದಲ ಬಾರಿ ಖಾಕಿ ತೊಟ್ಟು ಅಭಿನಯಿಸಿರುವ ಚಿತ್ರ 'ಶತ್ರು'. ಪೊಲೀಸ್ ಸ್ಟೋರಿ ಎಂದ ಮೇಲೆ ಪಂಚಿಂಗ್ ಡೈಲಾಗ್ಸ್, ಭರ್ಜರಿ ಫೈಟ್ಸ್ ಇಲ್ಲದಿದ್ದರೆ ಹೇಗೆ? ನಿರ್ದೇಶಕ ಜೆ.ಕೆ. ಮಾಸ್ ಪ್ರೇಕ್ಷಕರಿಗೆ ಏನು ಬೇಕು ಅದನ್ನು ಧಾರಾಳವಾಗಿ ಕೊಟ್ಟಿದ್ದಾರೆ.
ಪೊಲೀಸ್ ಆಫೀಸರ್ ವಿಜಯಸೂರ್ಯ ಪಾತ್ರದಲ್ಲಿ ಪ್ರೇಮ್ ಉತ್ತರ ಕರ್ನಾಟಕ ಭಾಷೆಯ ಡೈಲಾಗ್ ಗಳಲ್ಲೇ ಕೊಚ್ಚಾಕುತ್ತಾರೆ. ಫೈಟ್ಸ್ ನಲ್ಲಿ ಸಿಕ್ಸ್ ಪ್ಯಾಕ್ ಖದರ್ ತೋರುತ್ತಾರೆ. ಹಾಡುಗಳಲ್ಲಿ ಲವ್ಲಿಯಾಗಿ ಕಾಣುತ್ತಾರೆ. ಸಮಾಜಘಾತುಕರಿಗೆ ಶತ್ರು. [ಇತರೆ ಚಿತ್ರಗಳ ವಿಮರ್ಶೆ ಇಲ್ಲಿ ಓದಿ]
ಗಾಂಧಿಪುರಕ್ಕೆ ಕೋಣದ ವ್ಯಾಪಾರ ಮಾಡಲು ಬರುವ ಆದಿಶೇಷನಿಗೆ (ಶರತ್ ಲೋಹಿತಾಶ್ವ) ಅದು ಗಣಿಗಾರಿಕೆಯ ಸ್ವರ್ಗ ಎಂದು ಗೊತ್ತಾಗುತ್ತದೆ. ಆದರೆ ಇದಕ್ಕೆ ಊರಿನವರ ವಿರೋಧ. ಅಡ್ಡ ಬಂದವರನ್ನು ಬಾಂಬ್ ಹಾಕಿ ನರಮೇಧ ಸೃಷ್ಟಿಸುತ್ತಾನೆ. ಊರಿಗೆ ಕೇಶವಪುರ ಎಂದು ಹೊಸ ಹೆಸರಿಡುತ್ತಾನೆ.
ಚಿತ್ರ: ಶತ್ರು
ನಿರ್ಮಾಪಕ: ಎಂಡಿ ಪ್ರಕಾಶ್
ನಿರ್ದೇಶನ: ಜೆ.ಕೆ
ಛಾಯಾಗ್ರಹಣ: ಮ್ಯಾಥ್ಯೂ ರಾಜನ್
ಸಂಗೀತ: ಸುಜಿತ್ ಶೆಟ್ಟಿ
ತಾರಾಗಣ: ಪ್ರೇಮ್, ಡಿಂಪಲ್ ಚೋಪ್ರಾ, ಶರತ್ ಲೋಹಿತಾಶ್ವ, ರಮೇಶ್ ಭಟ್, ರಂಗಾಯಣ ರಘು, ಬುಲ್ಲೆಟ್ ಪ್ರಕಾಶ್, ತಬಲಾ ನಾಣಿ, ಬಿ.ಎಸ್. ಆನಂದ್, ಅರುಣ್ ದೇವಸ್ಯ
ಎನ್ ಕೌಂಟರ್ ಸ್ಪೆಷಲಿಸ್ಟ್ ವಿಜಯಸೂರ್ಯ
ಊರಿಗೆ ತಾನೇ ರಾಜ, ಮಂತ್ರಿ. ಇಂತಹವನನ್ನು ಮಟ್ಟ ಹಾಕಲು ಎನ್ ಕೌಂಟರ್ ಸ್ಪೆಷಲಿಸ್ಟ್ ವಿಜಯಸೂರ್ಯ ಬರುತ್ತಾನೆ. ಮುಂದೇನಾಗುತ್ತದೆ ಎಂಬುದು ವಿಜಯಸೂರ್ಯ ಬೂಟು, ಪಿಸ್ತೂಲು, ಕೈ ಕಾಲುಗಳು ಹೇಳುತ್ತವೆ. ಚಿತ್ರದಲ್ಲಿ ಆದಿಶೇಷನಾಗಿ ಶರತ್ ಲೋಹಿತಾಶ್ವ ಅವರದು ಗಮನಾರ್ಹ ಅಭಿನಯ.
ಉತ್ತರ ಕರ್ನಾಟಕದ ಪಂಚಿಂಗ್ ಡೈಲಾಗ್ಸ್
ಉತ್ತರ ಕರ್ನಾಟಕ ಭಾಷೆಯ ಡೈಲಾಗ್ ಗಳು ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್. ಪೊಲೀಸ್ ಕಾನ್ಸ್ ಟೇಬಲ್ ಆಗಿ, ಬುದ್ಧಿಮಾಂದ್ಯನ ಪಾತ್ರದಲ್ಲಿ ರಂಗಾಯಣ ರಘು ಪಾತ್ರ ಭಾವಪೂರ್ಣವಾಗಿದೆ. ಖಳನಾಯಕನ ತಂಗಿ ಕಾವ್ಯಾಳಾಗಿ ಡಿಂಪಲ್ ಚೋಪ್ರಾ ಚಿತ್ರದ ನಾಯಕಿ ಎಂಬುದನ್ನು ಬಿಟ್ಟರೆ ಅಭಿನಯ ಅಷ್ಟಕ್ಕಷ್ಟೇ.
ಅಬ್ಬರದಲ್ಲಿ ಕೊಚ್ಚಿ ಹೋದ ಸಂಗೀತ
ಮ್ಯಾಥ್ಯು ರಾಜನ್ ಅವರ ಛಾಯಾಗ್ರಹಣ ಪರ್ವಾಗಿಲ್ಲ. ಸುಜಿತ್ ಶೆಟ್ಟಿ ಸಂಗೀತ ಅಬ್ಬರದಲ್ಲಿ ಕೊಚ್ಚಿಹೋಗಿದೆ. ಎಡಿಟಿಂಗ್ ಟೇಬಲ್ ಮೇಲೆ ಇನ್ನೊಂದಿಷ್ಟು ಸಮಯ ಹೆಚ್ಚಿಗೆ ಕಳೆದಿದ್ದರೆ ಕಥೆಯ ವೇಗ ಒಂದೇ ಸಮನೆ ಓಡುತ್ತಿತ್ತು. ಅಲ್ಲಲ್ಲಿ ನಿಧಾನ ನಿರೂಪಣೆ, ಹೊಸತನದ ಕೊರತೆ ಚಿತ್ರದಲ್ಲಿ ಎದ್ದು ಕಾಣುತ್ತದೆ.
ಪ್ರೇಮ್ ಅಭಿಮಾನಿಗಳಿಗೆ ನಿರಾಸೆಪಡಿಸಲ್ಲ
ಆದರೂ ಪ್ರೇಮ್ ಅಭಿಮಾನಿಗಳನ್ನಂತೂ ಚಿತ್ರ ಖಂಡಿತ ನಿರಾಸೆಪಡಿಸಲ್ಲ. ಪ್ರತಿ ಫ್ರೇಮ್ ನಲ್ಲೂ ಪ್ರೇಮ್ ಮಿಂಚಿದ್ದಾರೆ. ತಮ್ಮ ಚೊಚ್ಚಲ ಪೊಲೀಸ್ ಪಾತ್ರದಲ್ಲಿ ಅವರದು ಖಡಕ್ ಅಭಿನಯ. ಚಿತ್ರ ಬೋರ್ ಹೊಡೆಸಲ್ಲ, ಮನರಂಜನೆಗೂ ಮೋಸ ಮಾಡಲ್ಲ.
ಖಂಡಿತ ಜೇಬಿಗೆ ಹೊರಯಲ್ಲ
ಅಪ್ರತಿಮ ದೇಶಭಕ್ತ ಸುಭಾಷ್ ಚಂದ್ರ ಭೋಸ್ ಅಂತವರು ಮನೆಗೊಬ್ಬರು ಇರಬೇಕು ಎಂಬ ಮಹದಾಶಯ ಚಿತ್ರದಲ್ಲಿದೆ. ಪ್ರೇಮ್ ಅವರು ಬಹುದೊಡ್ಡ ಸವಾಲಿನ ಪೊಲೀಸ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಖಂಡಿತ ಜೇಬಿಗೆ ಹೊರೆಯಲ್ಲ.


Click it and Unblock the Notifications











