Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟೋನಿ ಚಿತ್ರ ವಿಮರ್ಶೆ: ಮಿಸ್ ಮಾಡದೆ ನೋಡಿ
ಈ ಚಿತ್ರ ನಿಂತಿರುವುದು ಎರಡೇ ಎರಡು ಅಂಶಗಳ ಮೇಲೆ. ಒಂದು ಪಕ್ಕಾ ಚಿತ್ರಕಥೆ. ಇನ್ನೊಂದು ಕೆ.ಎಂ.ಪ್ರಕಾಶ್ ಅವರ ಸಂಕಲನ. ಈ ಎರಡು ಅಂಶಗಳಿಗೆ ಮತ್ತಷ್ಟು ಬಲ ನೀಡುವ ಇನ್ನೆರಡು ಅಂಶಗಳು ಶ್ರೀನಗರ ಕಿಟ್ಟಿ ಅವರ ಭಾವಪೂರ್ಣ ಅಭಿನಯ ಹಾಗೂ ಜಯತೀರ್ಥ ಅವರ ಸಮರ್ಥ ನಿರ್ದೇಶನ.
ಇಲ್ಲಿ ಕಥೆಯೊಳಗೆ ಕಥೆಗಳು ಬರುತ್ತವೆ. ಎಲ್ಲವೂ ಮುಖ್ಯಕಥೆಯೊಂದಿಗೆ ಸಾಗುತ್ತಾ ಒಟ್ಟಿಗೆ ಕೊನೆಯಾಗುತ್ತವೆ. ಹಳ್ಳಿಗಾಡಿನ ಶ್ರೀಮಂತ ಯಜಮಾನನೊಬ್ಬ ಜೋಗಿ ಜಂಗಮರ ಹಾಡು ಕೇಳುತ್ತಾ ಅದರಲ್ಲೇ ಸಂತೃಪ್ತಿ ಕಾಣುವ ಕಥೆ. ತಮಗೂ ಜಮೀನು ಬೇಕು ಜಮೀನ್ದಾರನೊಬ್ಬನ ಜೊತೆಗಿನ ಕಥೆ ಇನ್ನೊಂದು.
ಕೈತುಂಬ ಸಂಬಳ ಬರುತ್ತಿರುವ ಇನ್ಫೋಸಿಸ್ ಕಂಪನಿಗೆ ರಾಜೀನಾಮೆ ನೀಡಿ ನೆಮ್ಮದಿಯ, ಪ್ರೀತಿ ವಿಶ್ವಾಸವನ್ನು ಸಂಪಾದನೆ ಮಾಡುತ್ತಿರುವ ಇನ್ನೊಂದು ಕಥೆ. ಕೇಶವ ಅಲಿಯಾಸ್ ಟೋನಿ (ಶ್ರೀನಗರ ಕಿಟ್ಟಿ) ಆದಷ್ಟು ಬೇಗ ಶ್ರೀಮಂತನಾಗಬೇಕು. ತಾನು ಕೈತುಂಬ ದುಡ್ಡು ಸಂಪಾದಿಸಬೇಕು. ಆಮೇಲೆ ಕಾಲು ಮೇಲೆ ಕಾಲು ಹಾಕಿ ಖರ್ಚು ಮಾಡಬೇಕು ಎಂಬ ಜಾಯಮಾನದವನು.
ಚಿತ್ರ: ಟೋನಿ (ಏಕ್ ದಿನ್ ಕಾ ಸುಲ್ತಾನ್)
ನಿರ್ಮಾಪಕರು: ಇಂದ್ರಕುಮಾರ್.ಬಿ.ವಿ ಹಾಗೂ ಪಿ.ಎನ್.ಕೃಷ್ಣಮೂರ್ತಿ(ಶ್ರೀನಗರ ಕಿಟ್ಟಿ)
ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ: ಜಯತೀರ್ಥ
ಸಂಗೀತ ನಿರ್ದೇಶನ: ಸಾಧು ಕೋಕಿಲ
ಸಂಕಲನ: ಕೆ.ಎಂ.ಪ್ರಕಾಶ್
ಛಾಯಾಗ್ರಹಣ: ಸುಜ್ಞಾನ್
ಸಾಹಸ ನಿರ್ದೇಶನ: ಮಾಸ್ ಮಾದ
ನೃತ್ಯ ನಿರ್ದೇಶನ: ಧನು ಕುಮಾರ್, ಹರ್ಷ, ಇಮ್ರಾನ್
ಪಾತ್ರವರ್ಗ: ಶ್ರೀನಗರ ಕಿಟ್ಟಿ, ಐಂದ್ರಿತಾ ರೇ, ದಿಲೀಪ್ ರಾಜ್, ಪ್ರೀತಿ ಜಿಂಗಾನಿಯಾ, ಹರೀಶ್ ರಾಯಪ್ಪ, ಶರತ್ ಲೋಹಿತಾಶ್ವಾ, ವೀಣಾಸುಂದರ್, ಸುಚೇಂದ್ರಪ್ರಸಾದ್, ಧರ್ಮೇಂದ್ರಪ್ರಸಾದ್ ಮುಂತಾದವರಿದ್ದಾರೆ.
ಕಥಾನಾಯಕನಿಗೆ ಟೋನಿ ರಾಬಿನ್ಸ್ ಸ್ಫೂರ್ತಿ
ಇಂತಹ ಟೋನಿಗೆ ಸ್ಫೂರ್ತಿಯಾಗುವುದು ಅಮೆರಿಕಾದ ಮೋಟಿವೇಷನಲ್ ಸ್ಪೀಕರ್ ಟೋನಿ ರಾಬಿನ್ಸ್. ಅವನ ಪ್ರಚೋದನಕಾರಿ ಭಾಷಣಗಳಿಂದ ಪ್ರೇರೇಪಿತನಾಗಿ ಕಡಿಮೆ ಸಮಯದಲ್ಲಿ ಕೋಟ್ಯಾಂತರ ರುಪಾಯಿ ದುಡ್ಡು ಮಾಡುವ ಬಗ್ಗೆ ಸದಾ ಯೋಚಿಸುತ್ತಿರುತ್ತಾನೆ. ತಿಂಗಳಿಗೆ ಒಂದು ಲಕ್ಷ ರುಪಾಯಿ ಸಂಬಳದ ಆಮೀಷಕ್ಕೆ ಸಿಕ್ಕಿ ಮಾಫಿಯಾ ಜೊತೆ ಕೈಜೋಡಿಸುತ್ತಾನೆ.
ಮಾಫಿಯಾ ಸುಳಿಗೆ ಸಿಗುವ ಟೋನಿ
ಕಣ್ಣಿಗೆ ಕಾಣದಂತೆ ಈ ಮಾಫಿಯಾ ಗ್ಯಾಂಗ್ ಕಾರ್ಯನಿರ್ವಹಿಸುತ್ತಿರುತ್ತದೆ. ಅವರು ಮೊಬೈಲ್ ಮೂಲಕ ಹೇಳುವ ಕೆಲಸನ್ನು ಟೋನಿ ಮಾಡಬೇಕಷ್ಟೆ. ಯಾಕೆ ಏನು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲ್ಲ. ಆದರೆ ಅವನಿಗೆ ತಿಂಗಳಿಗೆ ಒಂದು ಲಕ್ಷ ರುಪಾಯಿ ಸಂಬಳ ಮಾತ್ರ ಕ್ಯಾಶ್ ರೂಪದಲ್ಲಿ ಬಟವಾಡೆಯಾಗುತ್ತಿರುತ್ತದೆ. ಇಂತಹ ಕಡೆ ಇಟ್ಟಿದ್ದೀವಿ ಎಂಬ ಸಂದೇಶದ ಮೂಲಕ.
ಇಷ್ಟಕ್ಕೂ ಚಿತ್ರದ ಕಥೆ ಏನೆಂದರೆ...
ಮೂವತ್ತರಿಂದ ನಲವತ್ತು ಮೊಬೈಲ್ ಗಳಿಗೆ ಬೇನಾಮಿ ಹೆಸರಿನಲ್ಲಿ ಸಿಮ್ ಕಾರ್ಡ್ ಗಳನ್ನು ಖರೀದಿಸಬೇಕು. ಅವರು ಕೊಡುವ ಮೊಬೈಲ್ ಗಳಿಗೆ ಈ ಸಿಮ್ ಗಳನ್ನು ಹಾಕಿ ಬೆಂಗಳೂರಿನ ಜನನಿಬಿಡ ಸ್ಥಳಗಳಲ್ಲಿ ಯಾರಿಗೂ ಕಾಣದಂತೆ ಇಡಬೇಕು. ಪ್ರತಿ ದಿನ ಅವುಗಳಿಗೆ ಕರೆ ಬಂದಿದೆಯೇ ಎಂದು ನೋಡಬೇಕು.
ಮಾಫಿಯಾ ಬಲೆಗೆ ಸಿಕ್ಕಿಗೆ ಬೀಳುವ ಟೋನಿ
ಯಾವ ನಂಬರ್ ಗೆ ಯಾವ ನೆಟ್ ವರ್ಕ್ ನಿಂದ ಕರೆ ಬಂದಿದೆ ಎಂಬುದನ್ನು ಪ್ರತಿದಿನ ನೋಟ್ ಮಾಡಿಕೊಳ್ಳಬೇಕು. ಈ ಸಂದೇಶವನ್ನು ಎಲ್ಲೋ ಕುಳಿತ ಬಾಸ್ ಗೆ ರವಾನಿಸಬೇಕು. ಇದಿಷ್ಟೇ ಟೋನಿ ಕೆಲಸ. ಇದರಲ್ಲಿ ಸಿಕ್ಕಿಬಿದ್ದ ಟೋನಿ ಮುಂದೇನಾಗುತ್ತಾನೆ ಎಂಬುದೇ ಚಿತ್ರದ ಕಥಾಹಂದರ.
ಒಂದೇ ದಿನದಲ್ಲಿ ನಡೆಯುವ ಕಥೆ
ಇದು ಒಂದೇ ದಿನದಲ್ಲಿ ನಡೆಯುವ ಕಥೆ. ಬೆಂಗಳೂರಿನ ಮೆಜೆಸ್ಟಿಕ್ ನಿಂದ ಆರಂಭವಾಗಿ ಕೊನೆಯಾಗುವುದು ಟೌನ್ ಹಾಲ್ ಬಳಿ. ಆರಂಭದಿಂದ ಕೊನೆಯ ತನಕ ಚಿತ್ರ ಕುತೂಹಲ ತಿರುವುಗಳ ಮೂಲಕ ಸಾಗುತ್ತದೆ. ಜೊತೆಗೆ ಜೋಗಿ ಜಂಗಮರ ಹಾಡು, ಜಮೀನ್ದಾರನ ಕಥೆಗಳೂ ಸಾಗುತ್ತವೆ.
ತಾಂತ್ರಿಕವಾಗಿ ಚಿತ್ರ ಗಮನಸೆಳೆಯುತ್ತದೆ
ಕಥೆಯ ಪರವಾಗಿ ಅದರ ನಿರೂಪಣಾ ಶೈಲಿಯಿಂದಾಗಿ ಹಾಗೂ ತಾಂತ್ರಿಕತೆಯಿಂದ ಗಮನಸೆಳೆಯುತ್ತದೆ. ಕಥೆಯಲ್ಲಿ ಒಂಚೂರು ವೇಗ ಇಲ್ಲ ಅನ್ನಿಸಿದರೂ ನಾನಾ ತಿರುವುಗಳಿಂದಾಗಿ ಪ್ರೇಕ್ಷಕರನ್ನು ಕೆಣಕುತ್ತದೆ. ಶ್ರೀನಗರ ಕಿಟ್ಟಿ ಇಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಐಂದ್ರಿತಾ ಗ್ಲಾಮರ್ ಗಿಂಗ ಅಭಿನಯಕ್ಕೆ ಒತ್ತು
ಇನ್ನು ಟೋನಿಯ ಗರ್ಲ್ ಫ್ರೆಂಡ್ ಪಮ್ಮಿಯಾಗಿ ಐಂದ್ರಿತಾ ರೇ ಅವರದು ಸಹಜ ಅಭಿನಯ. ಇಲ್ಲಿ ಅವರ ಪಾತ್ರ ಗ್ಲಾಮರ್ ಗಿಂತ ಹೆಚ್ಚಾಗಿ ಅಭಿನಯಕ್ಕೆ ಒತ್ತು ನೀಡಿರುವುದು ವಿಶೇಷ. ಉಳಿದಂತೆ ಪ್ರೀತಿ ಜಿಂಗಾನಿಯಾ, ದಿಲೀಪ್ ರಾಜ್, ಹರೀಶ್ ರಾಯಪ್ಪ, ಶರತ್ ಲೋಹಿತಾಶ್ವ, ವೀಣಾ ಸುಂದರ್, ಸುಚೇಂದ್ರ ಪ್ರಸಾದ್, ಧರ್ಮೇಂದ್ರ ಪ್ರಸಾದ್ ಅಭಿನಯ ಸಂದರ್ಭೋಚಿತವಾಗಿದೆ.
ಸಾಧು ಕೋಕಿಲ ಹಿನ್ನೆಲೆ ಸಂಗೀತ ಪ್ಲಸ್ ಪಾಯಿಂಟ್
ಚಿತ್ರದ ತಾಂತ್ರಿಕ ವರ್ಗದಲ್ಲಿ ಸುಜ್ಞಾನ ಅವರ ಛಾಯಾಗ್ರಹಣ ಗಮನಸೆಳೆಯುತ್ತದೆ. ಇನ್ನು ಸಾಧು ಕೋಕಿಲಾ ಅವರ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ರಘು ದೀಕ್ಷಿತ್ ಅವರು ಹಾಡಿ ಅಭಿನಯಿಸಿರುವ ಒಂದು ಹಾಡು ಮನಮುಟ್ಟುವಂತಿದೆ.
ಪೊಲೀಸ್ ಅಧಿಕಾರಿಯಾಗಿ ರವಿಶಂಕರ್
ಚಿತ್ರದ ಕೊನೆಯಲ್ಲಿ ಬರುವ ರವಿಶಂಕರ್ ಅವರು ಪೊಲೀಸ್ ಅಧಿಕಾರಿಯಾಗಿ ಸರ್ಪ್ರೈಸ್ ಕೊಡುತ್ತಾರೆ. ಇಲ್ಲಿ ಅವರದು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಪಾತ್ರ. 'ಟೋನಿ' ಚಿತ್ರದಲ್ಲಿರುವ ಒಂದೇ ಒಂದು ಕೊರತೆ ಎಂದರೆ ಕಾಮಿಡಿ ಇಲ್ಲದಿರುವುದು. ಹಬ್ಬದೂಟವೇನೋ ಹಾಕಿದ್ದಾರೆ ಆದರೆ ಉಪ್ಪಿನಕಾಯಿ ಮಿಸ್ ಆಗಿದೆ. ಉಳಿದಂತೆ ಮನೆಮಂದಿಯಲ್ಲಾ ಕುಳಿತು ನೋಡುವ ಸೊಗಸಾದ ಚಿತ್ರವಿದು.
ಟೋನಿ ಖಂಡಿತ ನಿರಾಸೆಪಡಿಸಲ್ಲ
ಜಯತೀರ್ಥ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರಕಥೆ ಮೇಲಿನ ಅವರ ಹಿಡಿತ ನೆನದರೆ ನಿಜಕ್ಕೂ ತಲೆಸುತ್ತಿಬಂದಂತಾಗುತ್ತದೆ. ಡಬಲ್ ಮೀನಿಂಗ್ ಡೈಲಾಗ್ ಗಳು, ಅದೇ ಲಾಂಗು ಮಚ್ಚು ಕಥೆಗಳನ್ನು ನೋಡಿ ಬೇಸತ್ತ ಪ್ರೇಕ್ಷಕನಿಗೆ ಟೋನಿ ಚಿತ್ರ ಖಂಡಿತ ನಿರಾಸೆಪಡಿಸಲ್ಲ. ಆಸೆಯೇ ದುಃಖಕ್ಕೆ ಮೂಲ, ಅತಿ ಆಸೆ ಗತಿಗೇಡು, ಆಸೆಗೆ ಕೊನೆಯಿಲ್ಲ ಎಂಬ ಮಾತುಗಳನ್ನು ಟೋನಿ ಮತ್ತೊಮ್ಮೆ ನೆನಪಿಸುತ್ತಾನೆ.