ಕಾಸಿಗೆ ಮೋಸವಿಲ್ಲದ ಬೊಂಬಾಟ್ 'ಭದ್ರ'
ರಿಮೇಕ್ ಚಿತ್ರವೊಂದನ್ನು ಚಂದವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ಮಹೇಶ್ ರಾವ್. ಕನ್ನಡ ನೇಟಿವಿಟಿಗೆ ತಕ್ಕಂತೆ, ಸಂಪೂರ್ಣವಾಗಿ ಮೂಲ ಚಿತ್ರಕ್ಕೆ ಜೋತು ಬೀಳದೆ ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದು 'ಭದ್ರ' ಎಂಬ ಒಂದು ಒಳ್ಳೆ ಚಿತ್ರ ನೀಡಿದ್ದಾರೆ. ಆರು ವರ್ಷಗಳ ನಂತರ ಚಿತ್ರ ನಿರ್ಮಿಸುತ್ತಿರುವ ಎಂಎನ್ ಕುಮಾರ್ ಉತ್ತಮವಾದ ಕಥೆ ಆರಿಸಿಕೊಂಡಿದ್ದಾರೆ. ಅಂದ ಹಾಗೆ ಇದು ತೆಲುಗಿನ 'ರಾಣಂ' ಚಿತ್ರದ ಕನ್ನಡ ಅವತರಿಣಿಕೆ.
ಭದ್ರ (ಪ್ರಜ್ವಲ್ ದೇವರಾಜ್) ಹಳ್ಳಿಯಿಂದ ಪೇಟೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬರುತ್ತಾನೆ. ಬಿಂದಾಸ್ ಸ್ವಭಾವದ ಈತ ಬಹಳ ಜಾಣ ಕೂಡಾ. ತಮ್ಮ ಊರಿನವನೇ ಆದ ಪೊಲೀಸ್ ಇನ್ಸಪೆಕ್ಟರ್ ಒಬ್ಬರನ್ನು ಮೂರ್ಖನನ್ನಾಗಿ ಮಾಡಲು ಹೋಗಿ ತೊಂದರೆ ಸಿಲುಕಿಕೊಳ್ಳುತ್ತಾನೆ. ಇತ್ತ ಕಾಲೇಜಿನಲ್ಲಿ ಕೂಡ ಎಲ್ಲರ ಪಾಲಿಗೆ ಡಾರ್ಲಿಂಗ್ ಆಗುವ ಭದ್ರ, ಕೊಲೆ ಕೇಸಿಗೆ ಸಾಕ್ಷಿ ಹೇಳಲು ಹೋಗಿ ಕಾವ್ಯಳನ್ನು (ಡೈಸಿ ಶಾನ್) ಪ್ರೀತಿಸುತ್ತಾನೆ. ದುರದೃಷ್ಟವಶಾತ್ ಕಾವ್ಯ ನಗರದ ಡಾನ್ ತಂಗಿಯಾಗಿರುತ್ತಾಳೆ.
ಇವರಿಬ್ಬರ ಪ್ರೀತಿ ಮುಂದುವರಿಯುವುದನ್ನು ತಡೆಯಲು ಆಕೆಯ ಸಹೋದರ ಭದ್ರನನ್ನು ಊರು ಬಿಟ್ಟು ಹೋಗಲು ಬೆದರಿಕೆ ಹಾಕುತ್ತಾನೆ. ನಾಯಕ ವಿಲನ್ ಗೆ ಹೆದರಿ ಊರು ಬಿಟ್ಟು ಹೋಗಲಾಗುತ್ತದೆಯೇ? ಖಂಡಿತ ಇಲ್ಲ, ಮುಂದೆ ನಾಯಕ ವಿಲನ್ ಅನ್ನು ಹೇಗೆ ಎದುರಿಸುತ್ತಾನೆ, ಪ್ರೀತಿಯನ್ನು ಹೇಗೆ ಗೆಲ್ಲುತ್ತಾನೆ ಎಲ್ಲಾ ನೀವು ಅಂದುಕೊಂಡಂತೆ ನಡೆಯುತ್ತೆ ಬಿಡಿ.
ಚಿತ್ರದುದ್ದಕ್ಕೂ ಪ್ರಜ್ವಲ್ ಅಭಿನಯ ಬೊಂಬಾಟ್, ಪ್ರೀತಿ-ಪ್ರೇಮ-ಪ್ರಣಯ ದೃಶ್ಯದಲ್ಲಂತೂ ಸೂಪರ್. ಡೈಲಾಗ್ ಹೊಡಿತಿರಬೇಕಾದರೆ ಆತ ತಂದೆಗೆ ತಕ್ಕ ಮಗನೆ. ಶರಣ್ - ಬುಲೆಟ್ ಪ್ರಕಾಶ್ ಜೋಡಿ ಚೆನ್ನಾಗಿ ವರ್ಕ್ ಔಟ್ ಆಗಿದೆ. ಸತ್ಯಜಿತ್, ಗಿರೀಶ್, ಕಾಶಿ ಮುಂತಾದ ಸಹ ಕಲಾವಿದರ ನಟನೆ ಕೂಡ ಚೆನ್ನಾಗಿಯೇ ಇದೆ. ಚಿತ್ರಕ್ಕೆ ಸಂಗೀತ ನೀಡಿದ ಶ್ರೀಗುರುಗೆ ಉತ್ತಮ ಭವಿಷ್ಯವಿದೆ.
ಯುವ ಛಾಯಾಗ್ರಾಹಕ ಜೈ ಆನಂದ್ ಗೊಂದು "ಜೈ". ಇಷ್ಟೆಲ್ಲಾ ಆದ ಮೇಲೆ ಚಿತ್ರಕ್ಕೆ ಒಂದು ಕಪ್ಪು ಚುಕ್ಕೆ ಇರಬೇಕಲ್ಲವೇ. ಅದು ನಾಯಕಿ. ನಟನೆ ಏನೋ ಓಕೆ, ಆದರೆ ಹೀರೋ ಎದುರು ಆಂಟಿ ತರ ಕಾಣಿಸುತ್ತಾರಲ್ಲಾ ಯಾಕೆ? ಸಾಲು.. ಸಾಲು.. ರಜೆಯ ನಡುವೆ ಕನ್ನಡ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿರಿ.


Click it and Unblock the Notifications











