'ಬ್ರಹ್ಮ' ಚಿತ್ರ ವಿಮರ್ಶೆ: ಎಲ್ಲಾ ಓಕೆ ಕನ್ಫ್ಯೂಸ್ ಯಾಕೆ?
ಬ್ಯಾಂಕ್ ನಲ್ಲಿ ಎರಡು ಅಕೌಂಟ್ ಗಳಿರುತ್ತವೆ. ಒಂದು ಸೇವಿಂಗ್ಸ್ ಅಕೌಂಟ್ ಇನ್ನೊಂದು ಕರೆಂಟ್ ಅಕೌಂಟ್. ಅದೇ ರೀತಿ ಜೀವನದಲ್ಲೂ ಒಂದು ಪಾಪದ ಇನ್ನೊಂದು ಪುಣ್ಯದ ಅಕೌಂಟ್ ಎಂದು ಅಕೌಂಟ್ ಗಳ ಬಗ್ಗೆ ಬ್ರಹ್ಮ (ಉಪೇಂದ್ರ) ಸಂದೇಶ ನೀಡುವ ಹೊತ್ತಿಗೆ ಚಿತ್ರ ಕೊನೆಯ ಘಟ್ಟ ತಲುಪಿರುತ್ತದೆ.
ಒಂದಲ್ಲ ಒಂದು ದಿನ ಎಲ್ಲರೂ ಸಾಯುತ್ತಾರೆ. ನಾಳೆ ನೀವೂ ಸಾಯ್ತೀರಾ, ನಾನೂ ಸಾಯ್ತೀನಿ. ಒಳ್ಳೇದು ಮಾಡಿ ಒಳ್ಳೇದಾಗುತ್ತದೆ ಎಂದು ಬ್ರಹ್ಮ ಹೇಳುತ್ತಿದ್ದರೆ ಬ್ಯಾಗ್ ಗ್ರೌಂಡ್ ಮ್ಯೂಸಿಕ್ ಬ್ರಹ್ಮಾ ಎಂದು ಅಬ್ಬರದಲ್ಲಿ ಕೇಳಿಸುತ್ತಾ ಮುಗಿಯುತ್ತದೆ. 'ಬ್ರಹ್ಮ'ನ ಈ ಮಹಾನ್ ಸಂದೇಶ ಕೇಳಿದ ಪ್ರೇಕ್ಷಕ ತಮ್ಮ ಹಣೆಚಚ್ಚಿಕೊಳ್ಳುತ್ತಾನೆ.
ಬುದ್ಧಿವಂತರಿಗೆ ಕಥೆ ಇಂಡೈರೆಕ್ಟಾಗಿ ಹೇಳಬೇಕು ಆದರೆ ದಡ್ಡರಿಗೆ ಡೈರೆಕ್ಟ್ ಆಗಿ ಹೇಳಿದರೆ ಸಾಕು ಎಂದು ಚಿತ್ರದಲ್ಲಿ ಒಂದು ಡೈಲಾಗ್ ಬರುತ್ತದೆ. ಅದೇ ರೀತಿ ಇಲ್ಲಿ ನಿರ್ದೇಶಕ ಆರ್ ಚಂದ್ರು ಅವರು ಕಥೆಯನ್ನು ಹೇಳಲು ಸಾಕಷ್ಟು ಬುದ್ಧಿಯನ್ನು ಖರ್ಚು ಮಾಡಿದ್ದಾರೆ. ಆದರೆ ಅವರ ಬಹುತೇಕ ಬುದ್ಧಿವಂತಿಕೆ ಸಸ್ಪೆನ್ಸ್ ಅಂಶಗಳಲ್ಲೇ ಕಳೆದುಹೋಗಿದೆ.
ಚಿತ್ರ: ಬ್ರಹ್ಮ
ನಿರ್ಮಾಣ: ಮೈಲಾರಿ ಎಂಟರ್ ಪ್ರೈಸಸ್ (ಮಂಜುನಾಥ ಬಾಬು)
ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ: ಆರ್ ಚಂದ್ರು
ಸಂಗೀತ: ಗುರುಕಿರಣ್
ಛಾಯಾಗ್ರಹಣ: ಶೇಖರ್ ಚಂದ್ರ
ಸಂಕಲನ: ಕೆ.ಎಂ.ಪ್ರಕಾಶ್
ಸಾಹಸ ನಿರ್ದೇಶನ: ಥ್ರಿಲ್ಲರ್ ಮಂಜು, ವಿಜಯ್
ಪಾತ್ರವರ್ಗ: ಉಪೇಂದ್ರ, ಪ್ರಣೀತಾ, ರಂಗಾಯಣರಘು, ಸಾಧುಕೋಕಿಲ, ಶಯ್ಯಾಜಿ ಶಿಂಧೆ, ನಾಜರ್, ರಾಹುಲ್ ದೇವ್, ಸೋನು ಸೂಧ್, ಸುಭಾಷ್ ಶೆಟ್ಟಿ, ಅನಂತನಾಗ್, ಬುಲೆಟ್ ಪ್ರಕಾಶ್, ಮಂಗಳೂರು ಸುರೇಶ್, ಲಕ್ಷ್ಮಣ್, ಪದ್ಮಜಾರಾವ್ ಮುಂತಾದವರು.
ಎಪ್ಪತ್ತರ ದಶಕದಿಂದ ಕ್ರಿಸ್ತಪೂರ್ವಕ್ಕೆ ಹೊರಳುವ ಕಥೆ
ಮೊದಲರ್ಧದಲ್ಲಿ ಎಪ್ಪತ್ತರ ದಶಕದಿಂದ ಆರಂಭವಾಗುವ ಕಥೆ ದ್ವಿತೀಯಾರ್ಧಕ್ಕೆ ಹೊರಳುವ ಹೊತ್ತಿಗೆ ಕ್ರಿಸ್ತಪೂರ್ವಕ್ಕೆ ಹೊರಳುತ್ತದೆ. ರಾಜಬ್ರಹ್ಮ ವಂಶದ ಬಗ್ಗೆ ತೆರೆದುಕೊಳ್ಳುತ್ತದೆ. ಆ ಮಹಾನ್ ವಂಶ ದಾನ ಧರ್ಮಗಳನ್ನು ಮಾಡಿ ಕಡೆಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಹಂತ ತಲುಪಿದ್ದನ್ನು 'ಬ್ರಹ್ಮ'ನ ತಾತ (ಮಂಗಳೂರು ಸುರೇಶ್) ವಿವರಿಸುತ್ತಾರೆ.
ಪಕಪಕ ನಗಿಸುವ ರಂಗಾಯಣ ರಘು
ಚಿತ್ರದ ಮೊದಲರ್ಧದಲ್ಲಿ ಕಾಮಿಡಿಗೆ ಸಾಕಷ್ಟು ಒತ್ತು ನೀಡಲಾಗಿದೆ. 'ಬ್ರಹ್ಮ' ಸಿಕ್ಕಸಿಕ್ಕ ಕಡೆಯಲ್ಲಾ ಹಣ ದೋಚುತ್ತಿರುತ್ತಾನೆ. ಏನಿವನ ಹಕೀಕತ್ತು ಎಂಬ ಕುತೂಹಲ ಒಂದೆಡೆಗಾದರೆ, ಇದರ ಜೊತೆಗೆ ರಂಗಾಯಣ ರಘು ಮಸ್ತ್ ಕಾಮಿಡಿ ಪ್ರೇಕ್ಷಕರನ್ನು ಪಕಪಕ ನಗಿಸುತ್ತದೆ.
ಮೊದಲರ್ಧದಲ್ಲಿ ಕಾಮಿಡಿನೇ ಕಿಂಗ್
ಮೊದಲರ್ಧದಲ್ಲಿ 'ಅದೃಷ್ಟವಂತ' ರಂಗಾಯಣ ರಘು ಕಾಮಿಡಿ ತುಂಬುವ ಮೂಲಕ ಆರ್ ಚಂದ್ರು ಅವರು ಜಾಣ್ಮೆ ತೋರಿದ್ದಾರೆ. ಇಲ್ಲದಿದ್ದರೆ ಚಿತ್ರದ ಕಥೆ ಹಳಿತಪ್ಪುವ ಸಾಧ್ಯತೆಗಳಿತ್ತು. ದ್ವಿತೀಯಾರ್ಧಕ್ಕೆ ಹೊರಳುತ್ತಿದ್ದಂತೆ ರಂಗಾಯಣ ರಘುಗೆ ಸಾಧು ಕೋಕಿಲ ಸಾಥ್ ಕೊಡುತ್ತಾರೆ. ಒಟ್ಟಾರೆಯಾಗಿ ಅವರಿಬ್ಬರ ಕಾಮಿಡಿ ಒಂದು ಹಂತದಲ್ಲಿ ಮುಖ್ಯಕಥೆಯನ್ನೇ ಓವರ್ ಟೇಕ್ ಮಾಡಿಬಿಡುತ್ತದೆ.
ಉಪೇಂದ್ರ ಅವರ ಎಂದಿನ ಡೈಲಾಗ್ ಗಳು ಇಲ್ಲ
ಸಾಮಾನ್ಯವಾಗಿ ಉಪೇಂದ್ರ ಚಿತ್ರಗಳೆಂದರೆ ಡೈಲಾಗ್ ಮೇಲೆ ಡೈಲಾಗ್ ಗಳು ಅದಕ್ಕೆ ತಕ್ಕಂತೆ ಪ್ರೇಕ್ಷಕರ ಶಿಳ್ಳೆಗಳು ಇರುತ್ತವೆ. ಆದರೆ ಇಲ್ಲಿ ಸಂಭಾಷಣೆಯ ಜವಾಬ್ದಾರಿಯನ್ನು ಆರ್ ಚಂದ್ರು ಹೊತ್ತಿರುವುದರಿಂದ ಅವರದೇ ಶೈಲಿಯ ಡೈಲಾಗ್ ಗಳನ್ನು ಕೇಳಬಹುದು.
ಸಣ್ಣಪುಟ್ಟ ದೋಷಗಳನ್ನು ಕಡೆಗಣಿಸುವಂತಿಲ್ಲ
ಇನ್ನು ಉಪೇಂದ್ರ ಅವರ ಪಾತ್ರದ ವಿಚಾರಕ್ಕೆ ಬಂದರೆ ಅವರು ಎಂದಿನಂತೆ ತಮ್ಮ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಆದರೆ ಅವರ ಹೇರ್ ಸ್ಟೈಲ್ ನಲ್ಲಿ ಕೃತಕತೆ ಎದ್ದುಕಾಣುವಂತಿದೆ. ಈ ರೀತಿಯ ಸಣ್ಣಪುಟ್ಟ ದೋಷಗಳ ಕಡೆ ಚಂದ್ರು ಇನ್ನಷ್ಟು ಗಮನಕೊಡಬೇಕಾಗಿತ್ತು.
ಪ್ರಣೀತಾ ಅವರದು ಸೀದಾಸಾದಾ ಪಾತ್ರ
ಪ್ರಣೀತಾ ಅವರದು ಚಿತ್ರದಲ್ಲಿ ಸೀದಾಸಾದ ಪಾತ್ರ. ಅಭಿನಯದ ಪರವಾಗಿ ಹಾಗೂ ಪಾತ್ರದ ಪರವಾಗಿ ನೋಡಿದರೆ ಅಷ್ಟು ಒತ್ತು ನೀಡಿಲ್ಲ. ಕೇವಲ ಗ್ಲಾಮರ್ ಗೊಂಬೆಯಾಗಿಯಷ್ಟೇ ಪ್ರಣೀತಾ ಚಿತ್ರದಲ್ಲಿ ಉಳಿಯುತ್ತಾರೆ.
ಹಾಡುಗಳ ಮೇಕಿಂಗ್ ಚೆನ್ನಾಗಿದೆ
ಇನ್ನು ಗುರುಕಿರಣ್ ಅವರ ಸಂಗೀತದ ಹಾಡುಗಳ ಮೇಕಿಂಗ್ ಚೆನ್ನಾಗಿದೆ. ಅದೇ ರೀತಿ ಹಾಡುಗಳು ಓಡುವ ಚಿತ್ರದ ಕಥೆಗೆ ಇನ್ನಷ್ಟು ವೇಗ ತುಂಬುವಂತೆ ಚಂದ್ರು ಬಳಸಿಕೊಂಡಿರುವುದು ಮೆಚ್ಚಬೇಕಾದ ಅಂಶ. ಕಥೆಗೆ ಪೂರಕವಾಗಿ ಹಾಡುಗಳು ಮೂಡಿಬಂದಿವೆ.
ತಂತ್ರಜ್ಞರ ಸಮರ್ಥ ಬಳಕೆಯಾಗಿದೆ
ಶೇಖರ್ ಚಂದ್ರ ಅವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ನಿರ್ದೇಶಕರು. ಶಯ್ಯಾಜಿ ಶಿಂಧೆ ಅವರದು ಪೊಲೀಸ್ ಅಧಿಕಾರಿಯಾಗಿ ಗಂಭೀರ ಪಾತ್ರವಾದರೂ ಕನ್ನಡದಲ್ಲಿ ಅವರೇ ಡಬ್ಬಿಂಗ್ ಹೇಳಿ ಅಲ್ಲಲ್ಲಿ ನಗೆಪಾಟಲಿಗೆ ಗುರಿಯಾಗುತ್ತಾರೆ.
ನಾಜರ್, ಸುಮಿತ್ರಾ ಅವರ ಪಾತ್ರಗಳು ಓಕೆ
'ಬ್ರಹ್ಮ'ನ ತಂದೆತಾಯಿಯಾಗಿ ನಾಜರ್ ಹಾಗೂ ಸುಮಿತ್ರಾ ಅವರ ಪಾತ್ರ ಓಕೆ. ಉಳಿದಂತೆ ಬುಲೆಟ್ ಪ್ರಕಾಶ್, ಪದ್ಮಜಾರಾವ್, ಅನಂತ್ ನಾಗ್, ಸೋನು ಸೂಧ್ ಮುಂತಾದವರ ಪಾತ್ರಗಳು ನೆನಪಿನಲ್ಲಿ ಉಳಿಯುವುದಿಲ್ಲ.
ಮೂರು ಭಾಷೆಯ ಪ್ರೇಕ್ಷಕರ ಅಭಿರುಚಿಗೆ ತಕ್ಕಂತಿದೆ
ಇದೊಂದು ತ್ರಿಭಾಷಾ ಚಿತ್ರವಾಗಿರುವ ಕಾರಣ ಚಂದ್ರು ಅವರು ಮೂರು ಭಾಷೆಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡೇ ಚಿತ್ರವನ್ನು ತೆರೆಗೆ ತಂದಿದ್ದಾರೆ. ಅಲ್ಲಲ್ಲಿ ಬರುವ ಟಾಟಾ ಸುಮೋ ಹಾಗೂ ಮಚ್ಚುಗಳ ಆರ್ಭಟ ತೆಲುಗು ಚಿತ್ರಗಳಂತಿದ್ದು ಆ ರೀತಿಯ ಪ್ರೇಕ್ಷಕರ ಅಭಿರುಚಿ ತಣಿಸುವಂತಿವೆ.
'ಬ್ರಹ್ಮ' ಆಧುನಿಕ ರಾಬಿನ್ ಹುಡ್
ಈ ಚಿತ್ರದಲ್ಲಿ ಉಪ್ಪಿ ತಮ್ಮ ಎಂದಿನ ಶೈಲಿ ಬಿಟ್ಟು ಅಭಿನಯಿಸಿರುವುದು ಅವರ ಅಭಿಮಾನಿಗಳಿಗೆ ಕೊಂಚ ನಿರಾಸೆಪಡಿಸಬಹುದು. ಆದರೆ ಚಂದ್ರು ತಮ್ಮದೇ ಶೈಲಿಯಲ್ಲಿ ರಾಬಿನ್ ಹುಡ್ ಕಥೆಯನ್ನು ಹೇಳಿ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಪ್ರಯತ್ನ ಅವರದು ಫಲ 'ಬ್ರಹ್ಮ'ನಿಗೆ ಬಿಟ್ಟದ್ದು.


Click it and Unblock the Notifications











