ಚಿತ್ರ ವಿಮರ್ಶೆ: 'ಎಂದೆಂದಿಗೂ' ಸಾಕೆನ್ನಿಸುವ ಚಿತ್ರ
ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಚೊಚ್ಚಲ ಚಿತ್ರ ಇದು. ಕಾರ್ಮಿಕರ ದಿನದಂದು (ಮೇ.1) ತೆರೆಕಂಡಿರುವ ಈ ಚಿತ್ರವನ್ನು ನೋಡಬೇಕೆಂದುಕೊಂಡಿದ್ದೀರಾ. ಒಮ್ಮೆ ಚಿತ್ರ ವಿಮರ್ಶೆ ಓದಿ ಆಮೇಲೆ ಡಿಸೈಡ್ ಮಾಡಿ.
'ಕೃಷ್ಣನ್ ಲವ್ ಸ್ಟೋರಿ' ಚಿತ್ರದ ಜೋಡಿ ಅಜೇಯ್ ರಾವ್ ಮತ್ತು ರಾಧಿಕಾ ಪಂಡಿತ್ ಮತ್ತೊಮ್ಮೆ ಏನು ಮೋಡಿ ಮಾಡಿದೆಯೋ ಎಂದು ನೋಡಿದರೆ ನಿರಾಸೆ ತಪ್ಪಿದ್ದಲ್ಲ. ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಹಾಡುಗಳು ಹಾಗೂ ಅಜೇಯ್ ಮತ್ತು ರಾಧಿಕಾ ನಡುವಿನ ಪ್ರೇಮದ ಸನ್ನಿವೇಶಗಳು.

ಕೃಷ್ಣ (ಅಜೇಯ್ ರಾವ್) ಮತ್ತು ಜ್ಯೋತಿ (ರಾಧಿಕಾ ಪಂಡಿತ್) ಸ್ವೀಡನ್ ಗೆ ಹಾರಿದ ಮೇಲೆ ಕಥೆ ನಾನಾ ಮಗ್ಗುಲುಗಳಲ್ಲಿ ಹರಿಯುತ್ತದೆ. ಚಿತ್ರದ ಮೊದಲರ್ಧ ಸಂಬಂಧಗಳು, ಸಂಭ್ರಮ, ತಮಾಷೆ, ಕಾಮಿಡಿ ಸುತ್ತ ಸುತ್ತಿದರೆ, ದ್ವಿತೀಯಾರ್ಧ ಸೂತ್ರ ಹರಿದ ಗಾಳಿಪಟದಂತಾಗಿದೆ.
ಜ್ಯೋತಿ ಮತ್ತು ಕೃಷ್ಣ ನಡುವೆ ಕಡೆಗೆ ಏನಾಗುತ್ತದೆ ಎಂಬ ಕುತೂಹಲ ಇನ್ನೂ ನಿಮ್ಮಲ್ಲಿ ಉಳಿದಿದ್ದರೆ, ಥಿಯೇಟರ್ ಗೆ ಧಾರಾಳವಾಗಿ ಹೋಗಿ ನೋಡಬಹುದು. ಅಜೇಯ್ ರಾವ್ ಮತ್ತು ರಾಧಿಕಾ ಪಂಡಿತ್ ತಮ್ಮ ಪಾತ್ರಗಳಿಗೆ ಜೀವ ತುಂಬುವಲ್ಲಿ ಶತಾಯುಗತಾಯು ಪ್ರಯತ್ನಿಸಿದ್ದಾರೆ.
ಈ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಛಾಯಾಗ್ರಹಣಕ್ಕೆ ಹೆಚ್ಚು ಅಂಕ ಬೀಳುತ್ತದೆ. ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬದಂತಿದೆ ವಿಡಿಯೋಗ್ರಫಿ. ಛಾಯಾಗ್ರಹಣಕ್ಕೆ ನೀಡಿದಷ್ಟೇ ಒಲವನ್ನು ಕಥೆ, ಚಿತ್ರಕಥೆ ಕಡೆಗೂ ಕೊಟ್ಟಿದ್ದರೆ ಚೆನ್ನಾಗಿತ್ತು.
ಹಾಡುಗಳಿಂದ ಸುದ್ದಿ ಮಾಡಿದ ಚಿತ್ರ ಇದು. ಈ ಚಿತ್ರದ ಹಾಡುಗಳು ಕೇವಲ ಕೇಳಲಷ್ಟೇ ಅಲ್ಲದೆ ಸೊಗಸಾಗಿ ತೆರೆಗೆ ತಂದಿದ್ದಾರೆ ಇಮ್ರಾನ್ ಸರ್ದಾರಿಯಾ. ಅಷ್ಟರ ಮಟ್ಟಿಗೆ ಅವರು ಯಶಸ್ವಿಯಾಗಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಕೂಡ ಅಷ್ಟೇ ಪರಿಣಾಮಕಾರಿಯಾಗಿ ಮೂಡಿಬಂದಿದೆ.
'ಎಂದೆಂದಿಗೂ' ಚಿತ್ರದ ಬಗೆಗಿನ ನಿರೀಕ್ಷೆಗಳು ಸಾಕಷ್ಟಿದ್ದವು. ಆದರೆ ಆ ನಿರೀಕ್ಷೆಗಳನ್ನು ಮುಟ್ಟುವಲ್ಲಿ ಚಿತ್ರ ಎಡವಿದೆ. ಅಜೇಯ್ ರಾವ್ ಹಾಗೂ ರಾಧಿಕಾ ಪಂಡಿತ್ ಮೇಲಿನ ಅಭಿಮಾನಕ್ಕಾಗಿ ಚಿತ್ರವನ್ನು ನೋಡಬೇಕೆಂದರೆ ಅಡ್ಡಿಯಿಲ್ಲ.


Click it and Unblock the Notifications