ಚಿತ್ರ ವಿಮರ್ಶೆ: ಖಂಡಿತ ನಿರಾಸೆಪಡಿಸಲ್ಲ ಹುಚ್ಚುಡುಗ್ರು
ಮಾಸ್ ಪ್ರೇಕ್ಷಕರಿಗೆ ಏನು ಬೇಕೋ ಅವೆಲ್ಲವನ್ನೂ ಫುಲ್ ಊಟ ಬೆಂಕಿಪಟ್ಣದ ಜೊತೆಗೆ ಕೊಟ್ಟಿದ್ದಾರೆ ಆರ್ ಜೆ ಪ್ರದೀಪ. ಇದು ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರವಾದರೂ ಪ್ರೊಫೆಷನಲ್ ತರಹ ಅವರು ಕಲಾವಿದರ ಕೈಯಲ್ಲಿ ಕೆಲಸ ತೆಗೆಸಿರುವುದು ಗಮನಿಸಬೇಕಾದ ಅಂಶ. ಮೊದಲ ಚಿತ್ರದದಲ್ಲೇ ನಿರ್ದೇಶಕನಾಗಿ ಅವರು ಗೆದ್ದಿದ್ದಾರೆ.
ಚಿತ್ರದ ಮೊದಲರ್ಧದ ನಿರೂಪಣೆ ಹಾಗೂ ಕಥೆಯ ಓಟ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಂತೆ ಸಾಗಿಹೋಗುತ್ತದೆ. ದ್ವಿತೀಯಾರ್ಧದಲ್ಲಿ ವೇಗ ಕಳೆದುಕೊಳ್ಳುವ ಕಥೆ ಕ್ಲೈಮ್ಯಾಕ್ಸ್ ನಲ್ಲಿ ಇದ್ದಕ್ಕಿದ್ದಂತೆ ಹೊಸ ತಿರುವು ಪಡೆಯುತ್ತದೆ. ಚೇತನ್ ಚಂದ್ರ ಹಾಗೂ ಅದಿತಿ ರಾವ್ ಅವರ ನಡುವಿನ ಪ್ರೇಮದ ಸನ್ನಿವೇಶಗಳಿಗೆ ಒಂದಷ್ಟು ಕತ್ತರಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು.
ಒಂದು ಕಡೆ ಭೂಗತ ಜಗತ್ತು ಇನ್ನೊಂದು ಕಡೆ ಲವ್ ಪ್ರಪಂಚ. ಇವೆರಡನ್ನೂ ಬ್ಯಾಲೆನ್ಸ್ ಮಾಡಲು ನಿರ್ದೇಶಕರು ಸಾಕಷ್ಟು ಶ್ರಮ ಪಟ್ಟಿರುವುದು ತೆರೆಯ ಮೇಲೆ ಕಾಣಬಹುದು. ಒಂದು ಪಕ್ಕಾ ಕಮರ್ಷಿಯಲ್ ಚಿತ್ರಕ್ಕೆ ಏನೆಲ್ಲಾ ಬೇಕೋ ಅಷ್ಟೂ ಮಸಾಲೆಗಳ ಚಿತ್ರವಿದು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಚಿತ್ರ: ಹುಚ್ಚುಡುಗ್ರು (ಫುಲ್ ಊಟ ಬೆಂಕಿಪಟ್ಣ)
ನಿರ್ಮಾಣ: ಭಗವತಿ ಪಿಕ್ಚರ್ಸ್-ವೇದಾ ಮೂರ್ತಿ
ನಿರ್ದೇಶನ: ಆರ್ ಜೆ ಪ್ರದೀಪ
ಕಥೆ, ಚಿತ್ರಕಥೆ, ಕಾರ್ಯಕಾರಿ ನಿರ್ಮಾಪಕ: ರಘು ಹಾಸನ್
ಸಂಗೀತ: ಜೋಶ್ವಾ ಶ್ರೀಧರ್
ಛಾಯಾಗ್ರಹಣ: ಶಮನ್ ಮಿತ್ರು
ಸಂಕಲನ: ಜೋ ನಿ ಹರ್ಷ
ಪಾತ್ರವರ್ಗ: ರವಿಶಂಕರ್, ಚೇತನ್ ಚಂದ್ರ, ಅಮಿತ್, ಪ್ರತಾಪ್, ದೇವ, ಅದಿತಿ ರಾವ್, ರವೀಂದ್ರನಾಥ್, ಬಿರಾದಾರ್, ತಬಲಾ ನಾಣಿ ಮುಂತಾದವರು.
ಏನೋ ಮಾಡಲು ಹೋಗುವ ಹುಡುಗ್ರು
ಹರಕಲು ಅಂಗಿ, ತ್ಯಾಪೆ ಚಡ್ಡಿ, ಕುರುಚಲು ಗಡ್ಡ, ಲೂಸು ತಲೆ ಹುಚ್ಚುಡುಗರು...ಎಂದು ಕಳೆದ ಕೆಲ ತಿಂಗಳಿಂದ ಹಾಡು ಕೇಳಿಕೇಳಿ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದವು. ಈ ಹಾಡಿನಲ್ಲೇ ಚಿತ್ರದ ಕಥೆಯೂ ಇದೆ. ಯಾರದೋ ಮಾತು ಕೇಳಿದ ಈ ಹುಚ್ಚುಡುಗ್ರು ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಳ್ಳುತ್ತಾರೆ.
ಮಾರಿ ಗೌಡನಾಗಿ ರವಿಶಂಕರ್ ಮಿಂಚಿಂಗ್
ಬೆಂಗಳೂರಿನ ರೌಡಿ ಮಾರಿ ಗೌಡ ಅಲಿಯಾಸ್ ಮಾರಿಯನ್ನು (ರವಿಶಂಕರ್) ಮುಗಿಸಲು ಬರುವ ನಾಲ್ಕು ಮಂದಿ ಯುವಕರ ಕಥೆ ಇದೆ. ಯಾರದೋ ಮಾತನ್ನು ಕೇಳಿಕೊಂಡು ರೌಡಿಯೊಬ್ಬನನ್ನು ಮುಗಿಸಲು ಬರುವ ಇವರು ಕಡೆಗೆ ಹೇಗೆ ಮೋಸ ಹೋಗುತ್ತಾರೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ.
ರವಿಶಂಕರ್ ಮ್ಯಾನರಿಸಂ ಸ್ವಲ್ಪ ಡಿಫರೆಂಟ್
ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಮಾರಿಯಾಗಿ ರವಿಶಂಕರ್ ಪಾತ್ರ ಗಮನಸೆಳೆಯುತ್ತದೆ. ಮಾರಿ ಚೂರಿ ಇರಿತದ ಸನ್ನಿವೇಶಗಳು ಸಹಿಸಿಕೊಳ್ಳುವುದು ಕಷ್ಟ ಅನ್ನಿಸಿದರೂ ಪಾತ್ರಕ್ಕೆ ಅವರು ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ಈ ಚಿತ್ರದಲ್ಲಿ ಅವರ ಮ್ಯಾನರಿಸಂ ಕೊಂಚ ಡಿಫರೆಂಟ್ ಆಗಿದೆ.
ಎಲ್ಲಾ ಪಾತ್ರಗಳಿಗೂ ಸಮಾನ ಅವಕಾಶ
ಇನ್ನು ಚಿತ್ರದ ಚೇತನ್ ಚಂದ್ರ, ಅಮಿತ್, ಪ್ರತಾಪ್, ದೇವ ಅವರು ತಮ್ಮತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ದೇವ ಅವರ ಪಾತ್ರ ಗಮನಸೆಳೆಯುತ್ತದೆ. ಚೇತನ್ ಚಂದ್ರ ಅವರ ಪಾತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದರೂ ಉಳಿದ ಪಾತ್ರಗಳನ್ನೂ ನಿರ್ದೇಶಕರು ಕಡೆಗಣಿಸಿಲ್ಲ. ತಮ್ಮದೇ ಹಾವಭಾವದ ಮೂಲಕ ಅಮಿತ್ ಗಮನಸೆಳೆಯುತ್ತಾರೆ.
ಸಿಕ್ಕಿರುವ ಅವಕಾಶದಲ್ಲಿ ಮಿಂಚಿದ್ದಾರೆ ಅದಿತಿ
ಇನ್ನು ಚಿತ್ರದ ನಾಯಕಿ ಅದಿತಿ ರಾವ್ ಅವರದು ತೀರಾ ಕಾಡುವ ಪಾತ್ರವಲ್ಲದಿದ್ದರೂ ತಮಗೆ ಸಿಕ್ಕಿರುವ ಅವಕಾಶದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಬಿರಾದಾರ್, ತಬಲಾ ನಾಣಿ ಪಾತ್ರಗಳು ಸಂದರ್ಭೋಚಿತವಾಗಿ ಮೂಡಿಬಂದಿವೆ.
ಡಿ.ಸಿ. ಸುದರ್ಶನ್ ಪಂಚಿಂಗ್ ಸಂಭಾಷಣೆ
ನಂಜನಗೂಡು, ಕಾವೇರಿ ನದಿ ತೀರದ ಸನ್ನಿವೇಶಗಳಲ್ಲಿ ಶಮನ್ ಮಿತ್ರು ಅವರ ಛಾಯಾಗ್ರಹಣ ಸೊಗಸಾಗಿದ್ದರೆ ಬೆಂಗಳೂರಿನ ಗಲ್ಲಿಗಳಿಗೆ ಬಂದಾಗ ಸ್ವಲ್ಪ ಡಲ್ ಆಗುತ್ತದೆ. ಜೋಶ್ವಾ ಶ್ರೀಧರ್ ಅವರ ಸಂಗೀತದ ಒಂದೆರಡು ಹಾಡುಗಳು ಚೆನ್ನಾಗಿವೆ. ಇನ್ನೊಂದಿಷ್ಟು ಕತ್ತರಿ ಪ್ರಯೋಗ ಮಾಡಿದ್ದರೆ ಜೋ ನಿ ಹರ್ಷ ಸಂಕಲನ ಚೆನ್ನಾಗಿರುತ್ತಿತ್ತು. ಡಿ.ಸಿ. ಸುದರ್ಶನ್ ಅವರ ಸಂಭಾಷಣೆಯಲ್ಲಿ ಪಂಚ್ ಇದೆ. ಸ್ಯಾಂಪಲ್ ಡೈಲಾಗ್...ಹುಲಿ ನಾಲ್ಕು ಹೆಜ್ಜೆ ಹಿಂದೆ ಇಡ್ತು ಅಂದ್ರೆ, ಹೆದರಕೊಂಡ್ತು ಅಂತ ಅಲ್ಲ, ಬೇಟೆ ಆಡೋಕೆ ಶುರು ಮಾಡುತ್ತೆ ಅಂತ ಅರ್ಥ.
ಖಂಡಿತ ನಿರಾಸೆಪಡಿಸಲ್ಲ ಹುಚ್ಚುಡುಗ್ರು
ಒಟ್ಟಾರೆಯಾಗಿ ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ. ಲವ್, ಸೆಂಟಿಮೆಂಟ್, ಕಾಮಿಡಿ, ಭೂಗತ ಜಗತ್ತು ಹೀಗೆ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಒಂದು ಮೆಸೇಜ್ ಸಹ ಚಿತ್ರದಲ್ಲಿದೆ. ಖಂಡಿತ ನಿರಾಸೆಪಡಿಸಲ್ಲ.


Click it and Unblock the Notifications











