ದೆವ್ವದ ಕೈಯಲ್ಲಿ ಚಿತ್ರಾನ್ನವಾಗುವ 'ಪುಟ್ಟಣ್ಣ'ನಿಗೆ ವಿಮರ್ಶಕರು ಏನಂತಾರೇ?
ಹಲವಾರು ಕಾರಣಗಳಿಂದಾಗಿ ನಟ ಕೋಮಲ್ ಅಭಿನಯದ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಚಿತ್ರ ಪ್ರೇಕ್ಷಕರಿಗೆ ಭಾರಿ ಕುತೂಹಲ ಮೂಡಿಸಿತ್ತು. ಇದೇ ಮೊದಲ ಬಾರಿಗೆ ನಟಿ ಪ್ರಿಯಾಮಣಿ ಮತ್ತು ಕಾಮಿಡಿ ನಟ ಕೋಮಲ್ ಅವರು ಒಂದಾಗಿ ಕಾಣಿಸಿಕೊಂಡಿದ್ದ ಸಿನಿಮಾ ಜನವರಿ 1 ಹೊಸ ವರ್ಷಕ್ಕೆ ಬಿಡುಗಡೆ ಆಗಿದೆ.
ಅಂದಹಾಗೆ 'ದಂಡುಪಾಳ್ಯ' ನಿರ್ದೇಶಕ ಶ್ರೀನಿವಾಸ ರಾಜು ಅವರು ಅಪರಾಧ ಜಗತ್ತಿನ ಕಥೆಯಿಂದ ಕೊಂಚ ದೂರ ಸರಿದು ಕಾಮಿಡಿ-ಹಾರರ್ ಸಿನಿಮಾ ಮಾಡಿದ್ದಾರೆ ಅಂತಾದ ಮೇಲೆ ಪ್ರೇಕ್ಷಕರಿಗೆ ಸಾಮಾನ್ಯವಾಗಿ ಕುತೂಹಲ ಸ್ವಲ್ಪ ಜಾಸ್ತೀನೇ ಇತ್ತು.[ಕಥೆ-ಚಿತ್ರಕಥೆ-ನಿರ್ದೇಶನ 'ಪುಟ್ಟಣ್ಣ' ಸುತ್ತ ಹೊಸ ವಿವಾದ!]
ಅದಕ್ಕೆ ತಕ್ಕುದಾಗಿ ನಿರ್ದೇಶಕರು ಕೂಡ ಪ್ರೇಕ್ಷಕರಿಗೆ ಯಾವುದೇ ಮೋಸ ಮಾಡದೇ ಹೇರಳವಾಗಿ ಕಾಮಿಡಿಯ ರಸದೌತಣವನ್ನು ಒದಗಿಸಿದ್ದಾರೆ. ಪೋಸ್ಟರ್ ನಿಂದ ಹಿಡಿದು ಟ್ರೈಲರ್ ವರೆಗೂ ಅವರಿವರ ಕಾಲೆಳೆದು ಗಾಂಧಿನಗರದಲ್ಲಿ ಸುದ್ದಿಯಾಗಿದ್ದ ಕೋಮಲ್ ಅವರ 'ಪುಟ್ಟಣ್ಣ' ನನ್ನು ಪ್ರೇಕ್ಷಕರು ಕೈ ಹಿಡಿದು ನಡೆಸಿದ್ದಾರೆ. ಹಾಗೆಯೇ ಖ್ಯಾತ ವಿಮರ್ಶಕರು ಕೂಡ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾರರ್ ಕಮ್ ಕಾಮಿಡಿ ಸಿನಿಮಾ ಇದಾಗಿರುವುದರಿಂದ ನಟಿಯ ಆಯ್ಕೆಯಲ್ಲಿ ನಿರ್ದೇಶಕರು ಎಡವಿಲ್ಲ. ಈ ಮೊದಲು ನಟಿ ಪ್ರಿಯಾಮಣಿ ಅವರು ಹಾರರ್ ಸಿನಿಮಾದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು.[ಥಿಯೇಟರ್ ಕಮ್ಮಿ ಅಂತ ಕೊರಗುತ್ತಿಲ್ಲ 'ಪುಟ್ಟಣ್ಣ']
'ದಂಡುಪಾಳ್ಯ'ದಂತಹ ವಿಚಿತ್ರ ಮತ್ತು ವಿಲಕ್ಷಣ ಸಿನಿಮಾ ಮಾಡಿರುವ ನಿರ್ದೇಶಕ ಶ್ರೀನಿವಾಸ ರಾಜು ಮತ್ತು ಕಾಮಿಡಿ ನಟ ಕೋಮಲ್ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ 'ಕಥೆ-ಚಿತ್ರಕಥೆ-ನಿರ್ದೇಶನ-ಪುಟ್ಟಣ್ಣ' ಸಿನಿಮಾಕ್ಕೆ ಕನ್ನಡದ ಖ್ಯಾತ ವಿಮರ್ಶಕರು ಏನಂದ್ರು ಅನ್ನೋದನ್ನ ತಿಳಿಯಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...
'ದೆವ್ವದೊಂದಿಗೆ ಜಾಲಿ ರೈಡ್' - ಪ್ರಜಾವಾಣಿ
ಪುಟ್ಟಣ್ಣ ಕಣಗಾಲ್ ಅವರಿಗೂ ಈ ಚಿತ್ರಕ್ಕೂ ಇರುವ ಏಕೈಕ ಕೊಂಡಿಯೆಂದರೆ, ಅವರಂತೆ ತಾನೂ ಖ್ಯಾತ ನಿರ್ದೇಶಕನಾಗಬೇಕು ಎಂಬ ಸತ್ಯನ ಹಂಬಲ. ಮನೆಯಲ್ಲಿ ಅಪ್ಪನೊಂದಿಗೆ ಜಗಳವಾಡಿಕೊಂಡು, ಬೆಂಗಳೂರಿಗೆ ಬರುವ ಸತ್ಯ ಏನೇನು ಮಾಡುತ್ತಾನೆ ಎಂಬುದನ್ನು ಒಂಚೂರು ಬೇಸರ ಬಾರದಂತೆ ನಿರ್ದೇಶಕರು ನಿರೂಪಿಸಿದ್ದಾರೆ. ಜೊತೆಗೆ ಇಂದು ಚಿತ್ರರಂಗದಲ್ಲಿ ಕಾಣುವ ಸಾಮಾನ್ಯ ಸಂಗತಿಗಳನ್ನು ರಂಜನೆಯ ನೆಲೆಯಲ್ಲಿ ಚಿತ್ರಿಸಿದ್ದಾರೆ. ದೆವ್ವ ಹಾಗೂ ಕಾಮಿಡಿ ಎರಡೂ ಹದವಾದ ಪ್ರಮಾಣದಲ್ಲಿ ಬೆರೆತಿರುವ 'ಪುಟ್ಟಣ್ಣ' ಆಗಾಗ್ಗೆ ಬೆಚ್ಚಿ ಬೀಳಿಸುತ್ತದೆ ಹಾಗೆಯೇ ಸಾಕಷ್ಟು ನಗೆಬಾಂಬ್ ಸ್ಫೋಟಿಸುತ್ತದೆ.- ಆನಂದ ತೀರ್ಥ ಪ್ಯಾಟಿ.[ಹೊಸ ವರ್ಷಕ್ಕೆ ಶಿವರಾಜ್ ಕುಮಾರ್ v/s ಕೋಮಲ್? ]
'ಕಮಾಲ್ ಮಾಡುವ ಕೋಮಲ್' - ವಿಜಯ ಕರ್ನಾಟಕ
ಕೋಮಲ್ ಕನ್ನಡದ ಪ್ರತಿಭಾವಂತ ನಟ. ಆದರೆ 'ಎಲ್ಲವನ್ನೂ' ಮಾಡಲು ಹೋಗಿ, ತಮ್ಮ ಸಿನಿಮಾದಲ್ಲಿ ತಾವೇ ಕಳೆದುಹೋಗಿದ್ದರು. ಈ ನಡೆ ಕಾಮಿಡಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು. ಈ ಸಿನಿಮಾದಲ್ಲಿ ಮತ್ತೆ ಹಳೆಯ ಕೋಮಲ್ ಕಾಣಿಸಿದ್ದಾರೆ. ಎಂದಿನ ತಮ್ಮ ಟಿಪಿಕಲ್ ಕಾಮಿಡಿಯ ಮೂಲಕ ನಗಿಸುತ್ತಲೇ ಹೋಗುತ್ತಾರೆ. ಜೊತೆಗೆ ಕ್ಯೂರಿಯಾಸಿಟಿ ಮೂಡಿಸುವ ಚಿತ್ರಕಥೆಯೂ ಇರುವುದರಿಂದ ಎಲ್ಲಾ ವರ್ಗದ ಜನರಿಗೂ ಸಿನಿಮಾ ಇಷ್ಟವಾಗುತ್ತದೆ. ಕನ್ನಡದಲ್ಲಿ ಗ್ಲಾಮ್ ಪಾತ್ರಕಷ್ಟೇ ಸೀಮಿತವಾಗಿದ್ದ ಪ್ರಿಯಾಮಣಿ, ಈ ಸಿನಿಮಾದಲ್ಲಿ ವಿಭಿನ್ನ ಪಾತ್ರ ಪೋಷಿಸಿದ್ದಾರೆ.- ಶರಣು ಹುಲ್ಲೂರು.
'ಕೋಮಲು ಮಸ್ತು ಕಮಾಲು'- ಕನ್ನಡ ಪ್ರಭ
ತೆಲುಗಿನ 'ಗೀತಾಂಜಲಿ' ಚಿತ್ರದ ರಿಮೇಕ್ ವರ್ಷನ್ ಇದಾಗಿದ್ದರೂ, ಇಡೀ ಚಿತ್ರ ಇಲ್ಲಿನ ನೇಟಿವಿಟಿಗೆ ತಕ್ಕಂತೆ ನಿರ್ಮಾಣವಾಗುವ ಮೂಲಕ ಪ್ರೇಕ್ಷಕನಿಗೆ ತಾಜಾತನದ ಅನುಭವವನ್ನು ಕಟ್ಟಿಕೊಡುತ್ತದೆ. ಕತೆ, ನಿರೂಪಣೆ, ಸಂಭಾಷಣೆ, ಛಾಯಾಗ್ರಹಣ, ಹಿನ್ನಲೆ ಸಂಗೀತ ಹಾಗೂ ಕಲಾವಿದರ ಅಭಿನಯ ಎಲ್ಲವೂ ಪೈಪೋಟಿಯಲ್ಲಿ ಸಾಗಿವೆ. ಕತೆಗಿಂತ ನಿರೂಪಣೆ ಹೆಚ್ಚೋ, ನಿರೂಪಣೆಗಿಂತ ಛಾಯಾಗ್ರಹಣದ ಕಸರತ್ತು ಹೆಚ್ಚೋ ಎಂದು ನಿಮ್ಮನ್ನು ಜಿಜ್ಞಾಸೆಗೆ ಹಚ್ಚುವಷ್ಟು ಎಲ್ಲವೂ ಅಚ್ಚುಕಟ್ಟಾಗಿ ಬಂದಿವೆ. 'ಶ್ರೀನಿವಾಸ ರಾಜು ಯದ್ವಾ ತದ್ವಾ ಖರ್ಚು ಮಾಡುವ ನಿರ್ದೇಶಕ' ಎನ್ನುವ ಡೈಲಾಗ್ ಚಿತ್ರದಲ್ಲಿಯೇ ಬಂದರೂ, ಹಾಕಿದ ಬಂಡವಾಳಕ್ಕೆ ಮೋಸವಿಲ್ಲ ಎನ್ನುವುದನ್ನು ಈ ಚಿತ್ರದಲ್ಲಿನ ಅವರ ಸೂಕ್ಷ್ಮ ದೃಷ್ಟಿಯೇ ಸಾಬೀತು ಮಾಡಿದೆ.- ದೇಶಾದ್ರಿ ಹೊಸ್ಮನೆ.
'ನಕ್ಕು ನಕ್ಕು ನಕ್ಕೂ ಪುಟ್ಟಣ್ಣ' - ಉದಯವಾಣಿ
'ಪುಟ್ಟಣ್ಣ' ಕ್ಷಣ ಕ್ಷಣ ನಗಿಸುತ್ತಾ, ಕುತೂಹಲ ಹೆಚ್ಚಿಸುತ್ತಾ ಸಾಗುವ ಚಿತ್ರ. ಚಿತ್ರದ ಟೈಟಲ್ ಗೂ, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೂ ಇಲ್ಲಿ ಯಾವುದೇ ಸಂಬಂಧವಿಲ್ಲ. ಪುಟ್ಟಣ್ಣ ಕಣಗಾಲ್ ರೀತಿ ದೊಡ್ಡ ನಿರ್ದೇಶಕನಾಗಬೇಕೆಂಬ ಕನಸು ಕಾಣುತ್ತಾ ರಾಯಚೂರಿನಿಂದ ಬೆಂಗಳೂರಿಗೆ ಬರುವ ಪುಟ್ಟಣ್ಣನಿಗೆ ಒಂದಷ್ಟು ವಿಶೇಷ ಅನುಭವಗಳಾಗುತ್ತದೆ. ಆ ಅನುಭವಗಳೇ ಸಿನಿಮಾ ರೂಪದಲ್ಲಿ ಸಾಗಿಬರುತ್ತದೆ. ಹಾಗೆ ನೋಡಿದರೆ ಈ ಚಿತ್ರದಲ್ಲಿ ಸಾಕಷ್ಟು ಘಟನೆಗಳು, ತಿರುವುಗಳು ಇವೆ. ಎಲ್ಲವನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ ಶ್ರೀನಿವಾಸ ರಾಜು. - ರವಿ ಪ್ರಕಾಶ್ ರೈ.


Click it and Unblock the Notifications











