Don't Miss!
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಆರ್.ಜಿ.ವಿ' ಆಪರೇಷನ್ ಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?
ಸುಮಾರು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದ ನಿರ್ದೇಶಕ ವರ್ಮಾ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಅಂತೂ ಇಂತೂ ಗ್ರ್ಯಾಂಡ್ ರಿಲೀಸ್ ಆಗಿ ಎಲ್ಲರ ಮೆಚ್ಚುಗೆ ಗಳಿಸಿದೆ.
ಕನ್ನಡದಲ್ಲಿ ಚೊಚ್ಚಲ ನಿರ್ದೇಶನ ಮಾಡಿದ್ದ ವರ್ಮಾ ಅವರು ಇಲ್ಲೂ ತಮ್ಮ ವಿಭಿನ್ನ ಕೈ ಚಳಕ ತೋರಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಒಂದು ಉತ್ತಮ ಸಿನಿಮಾ ನೀಡಿರುವ ನಿರ್ದೇಶಕ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ನಿನ್ನೆ (ಜನವರಿ 1) ಭರ್ಜರಿ ತೆರೆ ಕಂಡು ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.[ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ]
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೂಪರ್ ಕಾಪ್ ಆಗಿ ಮಿಂಚಿರುವ, ಗ್ಲಾಮರ್ ನಟಿ ಪಾರುಲ್ ಯಾದವ್ ಅವರು ವಿಭಿನ್ನ ರೋಲ್ ನಲ್ಲಿ ಮತ್ತು ಯಜ್ಞಾ ಶೆಟ್ಟಿ ಅವರು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿಯಾಗಿ ಮಿಂಚಿರುವ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದ ಬಗ್ಗೆ ಪ್ರೇಕ್ಷಕರಿಂದ ಮತ್ತು ಅಭಿಮಾನಿಗಳಿಂದ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ.[ರಾಮ್ ಗೋಪಾಲ್ ವರ್ಮಾ ನ ಕಿಲ್ ಮಾಡ್ತಾರಂತೆ ಮುತ್ತುಲಕ್ಷ್ಮಿ!]
ಇಲ್ಲಿಯವರೆಗೂ ವೀರಪ್ಪನ್ ಬದುಕನ್ನು ಆಧರಿಸಿ ಬಂದ ಚಿತ್ರಗಳಿಗಿಂತಲೂ ವಿಭಿನ್ನವಾಗಿ ವಿವಾದಾತ್ಮಕ ನಿರ್ದೇಶಕ ಅಂತಾನೇ ಖ್ಯಾತಿ ಗಳಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಹೇಳಿರುವ ಡಿಫರೆಂಟ್ 'ಕಿಲ್ಲಿಂಗ್ ವೀರಪ್ಪನ್' ಬಗ್ಗೆ ನಮ್ಮ ಕನ್ನಡದ ಖ್ಯಾತ ವಿಮರ್ಶಕರು ಏನಂದ್ರು ಅಂತ ನಾವು ನಿಮಗೆ ಹೇಳ್ತೀವಿ, ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...
'ಕ್ಲಾಸಿಕ್ ಸೌಂಡ್ ನಲ್ಲಿ ಕಿಲ್ಲಿಂಗ್ ಸ್ಟೋರಿ'- ಕನ್ನಡ ಪ್ರಭ
ಚಿತ್ರದ ಪ್ರತೀ ದೃಶ್ಯವೂ ವರ್ಮಾರ ನೆರಳಿನಲ್ಲಿ ಮೂಡುತ್ತದೆ. ವಿರಾಮದ ನಂತರ ನಿರೂಪಣೆ ಬಿಗಿಯಾಗಿದ್ದರೂ ಮೊದಲರ್ಧ ಸುಮ್ಮನೆ ಸಾಗುತ್ತದೆ. ತಮ್ಮ ಇಮೇಜ್ ಅನ್ನು ಬದಿಗೊತ್ತಿ ಶಿವಣ್ಣ ಅವರು ಇಲ್ಲಿ ಪಾತ್ರವನ್ನು ನಿಭಾಯಿಸಿರುವುದೇ ಚಿತ್ರದ ದೊಡ್ಡ ಶಕ್ತಿ. 'ಒಳ್ಳೆ ದಾರಿ ಎನ್ನುವುದೇನು ಇಲ್ಲ. ಉದ್ದೇಶ ಮತ್ತು ತಲುಪೋ ಗುರಿ ಒಳ್ಳೆದಾಗಿದ್ದರೆ ಕೆಟ್ಟ ದಾರಿನೂ ಒಳ್ಳೆ ದಾರಿನೇ' ಎಂದು ತಣ್ಣಗೆ ಹೇಳುವ ಶಿವರಾಜ್ ಕುಮಾರ್ ವೀರಪ್ಪನ್ ಬೇಟೆ ಮುಗಿಸುವ ಹೊತ್ತಿಗೆ 'ಕಡ್ಡಿಪುಡಿ' ಆನಂದನಾಗಿಯೂ ಕಾಣುತ್ತಾರೆ. ನಟನೆ ವಿಚಾರಕ್ಕೆ ಬಂದರೆ ಇಡೀ ಕಥೆಯನ್ನು ಆವರಿಸಿಕೊಳ್ಳುವುದು ಸಂದೀಪ್ ಭಾರದ್ವಾಜ್. ಬಹುಶಃ ವೀರಪ್ಪನ್ ಈಗ ಬದುಕಿದ್ದರೆ ತಾನೇ ತದ್ರೂಪಿಯನ್ನು ನೋಡಿ ಶಾಕ್ ಆಗುತ್ತಿದ್ದ. - ಆರ್ ಕೇಶವಮೂರ್ತಿ.[ಟ್ವಿಟ್ಟರ್-ಫೇಸ್ ಬುಕ್ಕಿನಲ್ಲಿ ವೀರಪ್ಪನ್ ಹವಾ ಶುರು ಗುರು]
'ಹಂತಕನ ಹಂತಕರ, ಸಂಚು ಹೊಂಚು' - ಉದಯವಾಣಿ
'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ನಾಲ್ಕು ಕಂಬಗಳಿವೆ. ವೀರಪ್ಪನ್ ಪಾತ್ರ ಮಾಡಿರುವ ಸಂದೀಪ್ ಭಾರದ್ವಾಜ್ ಮತ್ತು ಆತನನ್ನು ಕೊಲ್ಲುವ ಐಡಿಯಾ ಮಾಡುವ ಎಸ್.ಟಿ.ಎಫ್ ಅಧಿಕಾರಿಯಾಗಿ ಶಿವರಾಜ್ ಕುಮಾರ್ ಮಿಂಚಿನಂಥ ಅಭಿನಯವನ್ನು ನೀಡಿದ್ದಾರೆ. ಇಡೀ ಚಿತ್ರ ನಿಂತಿರುವುದು ಪ್ರಮುಖವಾಗಿ ಈ ಎರಡು ಪಾತ್ರಗಳ ಮೇಲೆ ಮತ್ತು ಇಬ್ಬರೂ ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇನ್ನು ಚಿತ್ರದ ಛಾಯಾಗ್ರಹಣ ಮತ್ತು ಹಿನ್ನಲೆ ಸಂಗೀತವೂ ಚಿತ್ರದ ಶಕ್ತಿಗಳು ಎಂದರೆ ತಪ್ಪಿಲ್ಲ. ಕಾಡು ಮತ್ತು ಹಸಿರನ್ನು ಛಾಯಾಗ್ರಾಹಕ ರಾಮಿ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಸ್ಯಾಂಡಿ ಅವರ ಹಿನ್ನಲೆ ಸಂಗೀತ ಅಲ್ಲಲ್ಲಿ ಕಿವಿಗೆ ಬಡಿದಂತಾದರೂ ಬಹುತೇಕ ದೃಶ್ಯಗಳಿಗೆ ಪೂರಕವಾಗಿದೆ. - ಚೇತನ್ ನಾಡಿಗೇರ್.
'ಕಿಲ್ಲಿಂಗ್ ಕೌತುಕ ಮೇಕಿಂಗ್ ರೋಚಕ'- ವಿಜಯವಾಣಿ
ಅರ್ಥಾತ್, ಶಿವರಾಜ್ ಕುಮಾರ್ ರಿಯಲ್ ಕ್ಯಾರೆಕ್ಟರ್ ಸಾಮಾನ್ಯವಾಗಿದ್ದುಕೊಂಡೇ ಅಸಾಮಾನ್ಯ ಎನಿಸಿಕೊಳ್ಳುವ ನಾಯಕ ವೀರಪ್ಪನ್ ಗಿಂತಲೂ ಕ್ರೂರಿ, ವ್ಯತ್ಯಾಸವೆಂದರೆ, ಒಬ್ಬನದ್ದು ನ್ಯಾಯದ ದಾರಿ; ಮತ್ತೊಬ್ಬನದ್ದು ಅನ್ಯಾಯದ ಹಾದಿ. ನರಹಂತಕನ ಜೀವನದ ನೈಜ ಘಟನೆಗಳೇ ಕಥಾವಸ್ತು ಆಗಿರುವುದರಿಂದ ಇಲ್ಲಿ ಪ್ರೇಕ್ಷಕ ಹೆಚ್ಚು ಮಸಾಲೆ ಬಯಸುವಂತಿಲ್ಲ. ಹಾಡು, ಹರಟೆ, ರೋಮ್ಯಾನ್ಸ್ ಫೈಟ್ ಗೆ ಜಾಗವೇ ಇಲ್ಲ. ಕಾಡಿನ ವೈಭವ, ಪೊಲೀಸ್ ಮತ್ತು ವೀರಪ್ಪನ್ ನ ಪ್ಲಾನಿಂಗ್ ಮತ್ತು ಫೈರಿಂಗ್ ಎದೆ ಝಲ್ ಎನಿಸುವಂತಿದೆ. ಇಡೀ ಸಿನಿಮಾ ಕ್ಯಾರಿ ಮಾಡುವ 'ಡಕ್ಕಂ ಡಿಕ್ಕಂ' ಹಾಡು ಹಾಗೂ ಹಿನ್ನಲೆ ಸಂಗೀತ ಎರಡೂವರೆ ತಾಸು ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತೆ.
'ಕೊಲ್ಲುವ ಆಕರ್ಷಕ ಆಟ!'- ಪ್ರಜಾವಾಣಿ
ರಾಮ್ ಗೋಪಾಲ್ ವರ್ಮಾ ಒಬ್ಬ ಕಸುಬುದಾರ ನಿರ್ದೇಶಕ ಎನ್ನುವುದಕ್ಕೆ 'ಕಿಲ್ಲಿಂಗ್ ವೀರಪ್ಪನ್' ಇನ್ನೊಂದು ಉದಾಹರಣೆಯಷ್ಟೇ. ಎಲ್ಲರಿಗೂ ಹೊಸತೆನ್ನಿಸುವಂತೆ ಹಾಗೂ ಹೊಸ ವಿಷಯ ಹೇಳುತ್ತೇನೆ ಎನ್ನುವಂತೆ ಗೊತ್ತಿರುವ ಕಥೆಯೊಂದನ್ನು ನಿರೂಪಿಸುವ ಸವಾಲಿನಲ್ಲಿ ವರ್ಮಾ ಯಶಸ್ವಿಯಾಗಿದ್ದಾರೆ. ತೆಲುಗಿನ ರಾಯಲಸೀಮೆ ಪ್ರದೇಶದ ರಕ್ತಸಿಕ್ತ ಇತಿಹಾಸವನ್ನು 'ರಕ್ತಚರಿತ್ರ' ಹೆಸರಿನಲ್ಲಿ ಎರಡು ಸಿನಿಮಾಗಳಲ್ಲಿ ನಿರೂಪಿಸಿದ್ದ ಅವರು ಅದೇ ಉತ್ಸಾಹದಲ್ಲಿ ಈಗ ವೀರಪ್ಪನ್ ಕಥೆಯನ್ನು ಹೇಳಿದ್ದಾರೆ. ಆದರೆ, ರಕ್ತಚರಿತ್ರ' ಸಿನಿಮಾದಲ್ಲಿ ಅವರು ಸಾಧಿಸಿದ್ದ ಸಂಯಮ 'ಕಿಲ್ಲಿಂಗ್ ವೀರಪ್ಪನ್'ನಲ್ಲಿ ತೆಳುವಾಗಿದೆ. ತಮಗೆ ದಕ್ಕಿದ 'ಸತ್ಯ'ವನ್ನು ಅವರು ಕೊಂಚ ರಂಜಕವಾಗಿಯೂ ಹೇಳಲೂ ಪ್ರಯತ್ನಿಸಿದಂತಿದೆ. - ರಘುನಾಥ ಚ.ಹ.
'ಆಪರೇಷನ್ ಸಕ್ಸಸ್!' - ವಿಜಯ ಕರ್ನಾಟಕ
ವೀರಪ್ಪನ್ ನನ್ನು ಜೀವಂತವಾಗಿ ಹಿಡಿಯಲು ಸಾಧ್ಯವಿಲ್ಲ ಎನ್ನುವ ಹೊತ್ತಿಗಾಗಲೇ ವೀರಪ್ಪನ್ ನಿಂದ ನೂರಾರು ಮಂದಿ ಹತರಾಗಿರುತ್ತಾರೆ. ನರಹಂತಕನ ಕಥೆಯನ್ನು ತೆರೆಗೆ ಅಳವಡಿಸುವಲ್ಲಿ ವರ್ಮಾಗೆ ಬಹುಶಃ ಈ ಅಂಶ ಹೆಚ್ಚು ಕಾಡಿರುತ್ತದೆ. ಚಿತ್ರಕಥೆಯಲ್ಲಿ ಮೂರು ಸಿನಿಮ್ಯಾಟಿಕ್ ಚೇಸಿಂಗ್ ಗಳನ್ನು ಹೆಣೆದಿರುವ ಅವರು ಭರ್ಜರಿ ಕ್ಲೈಮ್ಯಾಕ್ಸ್ ನೊಂದಿಗೆ ಸಿನಿಮಾ ಮುಕ್ತಾಯಗೊಳಿಸುತ್ತಾರೆ. ಕನ್ನಡಕ್ಕೆ ಇದು ಮತ್ತೊಂದು ಹೊಸತನದ ಸಿನಿಮಾ. ಇಂಟರ್ ವಲ್ ಆಚೀಚೆ ಚಿತ್ರಕಥೆಯ ಹೆಣಿಗೆಯಲ್ಲಿ ಕೊಂಚ ಬಿಗಿ ಕಡಿಮೆಯಾಯ್ತು ಎನಿಸುವುದೇನೋ ನಿಜ. ಆದರೆ ವರ್ಮಾ ಕ್ಯಾಂಪ್ ನ ನಿಪುಣ ತಂತ್ರಜ್ಞರ ಕಸುಬುದಾರಿಕೆ ಮತ್ತು ಕಲಾವಿದರ ಉತ್ತಮ ಪಾತ್ರಪೋಷಣೆ ಈ ಕೊರತೆಯನ್ನು ಸರಿದೂಗಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ 'ಕಿಲ್ಲಿಂಗ್ ವೀರಪ್ಪನ್' ಪ್ರೇಕ್ಷಕರಿಗೆ ಭಿನ್ನ ಅನುಭವ ಕಟ್ಟಿಕೊಡುವಲ್ಲಿ ಯಶಸ್ವಿಯಾಗುತ್ತದೆ. - ಶಶಿಧರ ಚಿತ್ರದುರ್ಗ.