ಚಿತ್ರ ವಿಮರ್ಶೆ: ಡೋಂಟ್ ಮಿಸ್ 'ಕ್ವಾಟ್ಲೆ ಸತೀಸ'
"ಏನಾಯ್ತು... ಹೇ ಬಡ್ಡೆತ್ತದ್ದು ಬಾಲ್ ನೀನ್ ತಾನೆ ಹೊಡೆದದ್ದು... ಕ್ಯಾಚ್ ಹಿಡಿಯೋಣಾ ಅಂತ ಹಿಂದಕ್ಕೆ ಹೋದೆ...ಕಾಲ್ ಸ್ಲಿಪ್ ಆಗಿ ಕೆಳಗಡೆ ಬಿದ್ದುಬಿಟ್ನಾ... ಇಲ್ಲಿ ಏಟ್ ಬಿತ್ತಾ...ಇಲ್ಲಿ ಮೆಡುಲ್ಲಾ ಅಬ್ಲಾಂಗೇಟ ಇರುತ್ತದೆ...ಇಲ್ಲಿ ಏಟ್ ಬಿದ್ರೆ ಟೆಂಪರರಿ ಮೆಮೊರಿ ಲಾಸ್ ಆಯ್ತದೆ...ಅದೇನ್ ತೊಂದರೆ ಇಲ್ಲ ಬಿಡ್ ಕಣ್ಲಾ.. ಸ್ವಲ್ಪ ಹೊತ್ತಿಗೆ ಅದೇ ಸರಿಹೋಯ್ತದೆ..."
'ಕ್ವಾಟ್ಲೆ ಸತೀಶ' ಚಿತ್ರದ ತುಂಬಾ ಜನಪ್ರಿಯ ಡೈಲಾಗ್ ಅಂದ್ರೆ ಇದೆ. ಸಾಕಷ್ಟು ಸಲ ರಿಪೀಟ್ ಆಗೋ ಈ ಡೈಲಾಗ್ ಕೇಳಿಕೇಳಿ ಪ್ರೇಕ್ಷಕರು ಸಹ ಉರು ಹಚ್ಚುವಂತಾಗುತ್ತದೆ. 'ಕ್ವಾಟ್ಲೆ ಸತೀಸ'ನಾಗಿ ನೀನಾಸಂ ಸತೀಶ್ ಅವರ ಅಭಿನಯ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿಬಂದಿದೆ. [ಕನ್ನಡ ಚಿತ್ರವಿಮರ್ಶೆಗಳು]
ಕೊನೆಯತನಕ ಪ್ರೇಕ್ಷಕರು ಕುತೂಹಲ ಉಳಿಸಿಕೊಳ್ಳುವಲ್ಲಿ ಚಿತ್ರದ ನಿರ್ದೇಶಕ ಮಹೇಶ್ ರಾವ್ ಅವರು ಗೆದ್ದಿದ್ದಾರೆ. ತಮಿಳಿನ ಯಶಸ್ವಿ ಚಿತ್ರ 'ನಡುವುಲ ಕೊಂಜಂ ಪಕ್ಕಥ ಕಾನೋಮ್' (ಪುಸ್ತಕದ ಕೆಲವು ಪುಟಗಳು ಮಿಸ್ಸಿಂಗ್) ಚಿತ್ರದ ರೀಮೇಕ್ ಇದು.
ಚಿತ್ರ: ಕ್ವಾಟ್ಲೆ ಸತೀಸ
ನಿರ್ಮಾಪಕರು: ಡಾ.ಸೂರಿ
ಚಿತ್ರಕಥೆ, ನಿರ್ದೇಶನ: ಮಹೇಶ್ ರಾವ್
ಸಂಭಾಷಣೆ: ಪವನ್ ಒಡೆಯರ್
ಸಂಗೀತ: ವಿ. ಹರಿಕೃಷ್ಣ
ಛಾಯಾಗ್ರಹಣ: ಎಚ್.ಸಿ.ವೇಣು
ಸಂಕಲನ: ದೀಪು ಎಸ್ ಕುಮಾರ್
ಸಾಹಿತ್ಯ: ಯೋಗರಾಜ್ ಭಟ್
ಪಾತ್ರವರ್ಗ: ನೀನಾಸಂ ಸತೀಶ್, ಸೋನಿಯಾ ಗೌಡ, ಅಚ್ಯುತ ಕುಮಾರ್, ಚಿಕ್ಕಣ್ಣ, ಸಿಲ್ಲಿಲಲ್ಲಿ ಆನಂದ್, ಸುಚೇಂದ್ರ ಪ್ರಸಾದ್ ಮುಂತಾದವರು.
ರೀಮೇಕ್ ಆದರೂ ನೀಟಾಗಿ ತೆರೆಗೆ ತಂದಿದ್ದಾರೆ
ಈ ಚಿತ್ರ ತೆಲುಗಿನಲ್ಲಿ 'ಪುಸ್ತಕಂಲೋ ಕೊನ್ನಿ ಪೇಜೀಲು ಮಿಸ್ಸಿಂಗ್' ಆಗಿ ಯಶಸ್ವಿಯೂ ಆಯಿತು. ಈಗ ಕನ್ನಡದಲ್ಲಿ 'ಕ್ವಾಟ್ಲೆ ಸತೀಸ'ನಾಗಿ ಅಷ್ಟೇ ನೀಟಾಗಿ ತೆರೆಗೆ ತಂದಿದ್ದಾರೆ ಮಹೇಶ್ ರಾವ್. ಚಿತ್ರದ ಜೀವಾಳ ಅಂದ್ರೆ ನೀನಾಸಂ ಸತೀಶ್ ಅವರ ಅಭಿನಯ.
ಇದ್ದಕ್ಕಿದ್ದಂತೆ ಟೆಂಪರರಿ ಮೆಮರಿ ಲಾಸ್ ಆದರೆ...
ಇನ್ನೊಂದೇ ಒಂದು ದಿನದಲ್ಲಿ ಮದುವೆಯಾಗುತ್ತಿರುವ ಹುಡುಗನೊಬ್ಬನಿಗೆ ಇದ್ದಕ್ಕಿದ್ದಂತೆ ಟೆಂಪರರಿ ಮೆಮರಿ ಲಾಸ್ ಆದರೆ ಏನಾಗುತ್ತದೆ? ಅವನ ಮೂವರು ಗೆಳೆಯರಿಗೆ ಮಾತ್ರ ಈ ವಿಷಯ ಗೊತ್ತಿರುತ್ತದೆ. ಮದುವೆಯಾಗುತ್ತಿರುವ ಹುಡುಗಿಗೆ ಟೆಂಪಪರಿ ಮೆಮರಿ ಲಾಸ್ ವಿಷಯ ಗೊತ್ತಿರಲ್ಲ.
ಮುಂದೇನಾಗುತ್ತದೆ ಎಂಬ ಕುತೂಹಲ ಇದ್ದೇ ಇದೆ...
ಪರಿಸ್ಥಿತಿ ಹೀಗಿರಬೇಕಾದರೆ ಗೆಳೆಯರು ಹೇಗೆ ಮ್ಯಾನೇಜ್ ಮಾಡುತ್ತಾರೆ. ಹುಡುಗನ ತಂದೆತಾಯಿಗೆ ಏನು ಸಮಜಾಯಿಷಿ ಕೊಡುತ್ತಾರೆ. ಹುಡುಗಿಗೆ ಏನು ಉತ್ತರ ಹೇಳುತ್ತಾರೆ, ಮೆಮರಿ ಲಾಸ್ ಆದ ಹುಡುಗನಿಗೆ ಹೇಗೆ ಮದುವೆ ಮಾಡುತ್ತಾರೆ? ಎಂಬುದನ್ನು ನೀವು ತೆರೆಯ ಮೇಲಿ ನೋಡಿಯೇ ಆನಂದಿಸಬೇಕು.
ನಿಜ ಜೀವನದಲ್ಲಿ ನಡೆದ ಘಟನೆಯೇ ಕಥಾವಸ್ತು
ಕಡೆಗೂ ಕ್ವಾಟ್ಲೆ ಸತೀಸನಿಗೆ ಎಲ್ಲವೂ ನೆನಪಿಗೆ ಬರುತ್ತದಾ? ಇಲ್ಲವೇ ಎಂಬುದು ಸಸ್ಪೆನ್ಸ್. ನಿಜ ಜೀವನದಲ್ಲಿ ನಡೆದ ಘಟನೆಯನ್ನು ತೆರೆಯ ಮೇಲೆ ಆದಷ್ಟು ರೋಚಕವಾಗಿ, ಮುಂದೇನಾಗುತ್ತದೋ ಎಂಬ ಕುತೂಹಲಭರಿತವಾಗಿ ಸಾಗಿಹೋಗುವಂತೆ ತರಲಾಗಿದೆ.
ಧನಲಕ್ಷ್ಮಿಯಾಗಿ ಸೋನಿಯಾ ಗೌಡ
ಚಿತ್ರದ ನಾಯಕಿ ಸೋನಿಯಾ ಗೌಡ ಅವರಿಗೆ ಹೆಚ್ಚಿನ ಸ್ಕ್ರೀನ್ ಪ್ಲೇಸ್ ಸಿಕ್ಕಿಲ್ಲದಿದ್ದರೂ ಧನಲಕ್ಷ್ಮಿ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ಮುಗ್ಧ ಹುಡುಗಿಯಾಗಿ ಸಿಕ್ಕಿರುವ ಅವಕಾಶದಲ್ಲಿ ಮಿಂಚಿದ್ದಾರೆ.
ಹರಿಕೃಷ್ಣ ಹಿನ್ನೆಲೆ ಸಂಗೀತ ಇನ್ನೊಂದು ಪ್ಲಸ್ ಪಾಯಿಂಟ್
ಚಿತ್ರದಲ್ಲಿ ಕಥೆಗೆ ಪೂರಕವಾಗಿ ಗಮನಸೆಳೆಯುವ ಅಂಶ ಎಂದರೆ ವಿ.ಹರಿಕೃಷ್ಣ ಅವರ ಹಿನ್ನೆಲೆ ಸಂಗೀತ. ಇಲ್ಲಿ ಕಥೆಯೇ ತುಂಬಾ ಇಂಟರೆಸ್ಟ್ ಆಗಿರುವ ಕಾರಣ ಹಾಡುಗಳು ಅಷ್ಟಾಗಿ ಗಮನಸೆಳೆಯುವುದಿಲ್ಲ.
ಗಮನಸೆಳೆಯುವ ಪವನ್ ಒಡೆಯರ್ ಸಂಭಾಷಣೆ
ಇನ್ನು ವೇಣು ಅವರ ಛಾಯಾಗ್ರಹಣ ಪರ್ವಾಗಿಲ್ಲ. ಇನ್ನು ದೀಪು ಎಸ್ ಕುಮಾರ್ ಅವರ ಸಂಕಲನಕ್ಕೆ ಹೆಚ್ಚು ಸಮಯ ಖರ್ಚಾಗಿರುವುದು ಕಾಣಬಹುದು. ಪವನ್ ಒಡೆಯರ್ ಅವರ ಸಂಭಾಷಣೆ ಚಿತ್ರದಲ್ಲಿ ಗಮನಸೆಳೆಯುವ ಇನ್ನೊಂದು ಅಂಶ.
ರೀಮೇಕ್ ಆದರೂ ಕನ್ನಡ ಪ್ರೇಕ್ಷಕರ ಅಭಿರುಚಿಗೆ ತಕ್ಕಂತಿದೆ
ಅಚ್ಯುತ ಕುಮಾರ್, ಚಿಕ್ಕಣ್ಣ, ಸಿಲ್ಲಿಲಲ್ಲಿ ಆನಂದ್, ಸುಚೇಂದ್ರ ಪ್ರಸಾದ್ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಇದು ರೀಮೇಕ್ ಚಿತ್ರವಾದರೂ ಕನ್ನಡ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ತೆರೆಗೆ ತಂದಿರುವುದು ವಿಶೇಷ.
ರಂಜನೆ, ಮನರಂಜನೆಗೆ ಮೋಸವಿಲ್ಲ
'ಲೂಸಿಯಾ' ಚಿತ್ರದಲ್ಲಿ ನಿದ್ರಾಹೀನತೆಯಿಂದ ಬಳಲುವ ಪಾತ್ರದಲ್ಲಿ ಸತೀಶ್ ಅಮೋಘ ಅಭಿನಯ ನೀಡಿದ್ದರು. ಇಲ್ಲೂ ಅಷ್ಟೇ ಪವರ್ ಫುಲ್ ಅಭಿನಯ ನೀಡಿದ್ದಾರೆ. ರಂಜನೆ, ಮನರಂಜನೆ ನಿರೀಕ್ಷಿಸಿ ಹೋಗುವ ಪ್ರೇಕ್ಷಕರಿಗೆ ಖಂಡಿತ ನಿರಾಸೆಯಾಗಲ್ಲ.


Click it and Unblock the Notifications











