Don't Miss!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Automobiles ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
- News SSLC Result 2024: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ಯಾವಾಗ? ಪರಿಶೀಲಿಸುವುದೇಗೆ?-ಮಾಹಿತಿ, ವಿವರ
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ವಿಮರ್ಶೆ: ರುಚಿಕರ, ವೈವಿಧ್ಯ ಪ್ರಕಾಶ್ ರೈ ಒಗ್ಗರಣೆ
ಈ ರೀತಿಯ ಪ್ರಯೋಗಶೀಲ ಚಿತ್ರವನ್ನು ಪ್ರಕಾಶ್ ರೈ ಅವರು ಬಿಟ್ಟರೆ ಮತ್ಯಾರು ಮಾಡಲು ಸಾಧ್ಯ? ಚಿತ್ರ ನೋಡಿದ ಮೇಲೆ ಹಾಗನ್ನಿಸುತ್ತದೆ. ತಮ್ಮದೇ ಆದ ಶೈಲಿಯಲ್ಲಿ 'ಒಗ್ಗರಣೆ' ಹಾಕಿ ಅದರ ರುಚಿಯನ್ನು ಹತ್ತುಪಟ್ಟು ಹೆಚ್ಚಿಸಿದ್ದಾರೆ. ಚಿತ್ರ ಮಲಯಾಳಂನ 'ಸಾಲ್ಟ್ ಅಂಡ್ ಪೆಪ್ಪರ್' ಚಿತ್ರದ ರೀಮೇಕ್ ಆದರೂ ಪ್ರಕಾಶ್ ರೈ ಕನ್ನಡದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರವನ್ನು ತೆರೆಗೆ ತಂದಿದ್ದಾರೆ.
ಚಿತ್ರದಲ್ಲಿ ನಾಯಕನಟನ ಪಾತ್ರದ ಹೆಸರು ಕಾಳಿದಾಸ. ಪುರಾತತ್ವ ಇಲಾಖೆಯಲ್ಲಿ ಕೆಲಸ. ಉತ್ಖನನ ಮಾಡಿ ಪುರಾತನ ವಸ್ತುಗಳನ್ನು ಸೂಕ್ಷ್ಮವಾಗಿ ಹೆಕ್ಕಿತೆಗೆಯುವಂತೆ ಅವರ ಪಾತ್ರವೂ ಅಷ್ಟೇ ಸೂಕ್ಷ್ಮತೆಯಿಂದ ಕೂಡಿದೆ. ಚಿತ್ರದ ಹೆಸರೇ ಸೂಚಿಸುವಂತೆ ಅಡುಗೆ ಇಲ್ಲಿ ಬಲು ಮುಖ್ಯ ಪಾತ್ರ ವಹಿಸುತ್ತದೆ.
ಇನ್ನು ಚಿತ್ರದ ನಾಯಕಿ ಗೌರಿ (ಸ್ನೇಹಾ) ಅವರು ಅಷ್ಟೇ ಪಾತ್ರದಲ್ಲಿ ಒಂದಾಗಿರುವುದನ್ನು ತೆರೆಯಮೇಲೆ ನೋಡಿಯೇ ಅನುಭವಿಸಬೇಕು. ಡಬ್ಬಿಂಗ್ ಕಲಾವಿದೆಯಾದ ಗೌರಿ ಹಾಗೂ ಪುರಾತತ್ವ ಶಾಸ್ತ್ರಜ್ಞ ಕಾಳಿದಾಸನ ನಡುವಿನ ಬಾಂಧವ್ಯದ ಬೆಸುಗೆಯೇ ಚಿತ್ರದ ಕಥಾವಸ್ತು.
ಇಬ್ಬರನ್ನು ಆಪ್ತವಾಗಿಸುವ ರಾಂಗ್ ಕಾಲ್
ಕುಟ್ಟಿ ದೋಸೆ ಆರ್ಡರ್ ಮಾಡಲು ಗೌರಿ ಮಾಡುವ ಕರೆ ಕಾಳಿದಾಸನಿಗೆ ಹೋಗುತ್ತದೆ. ಫೋನ್ ನಲ್ಲೇ ಒಂದು ಸಣ್ಣ ಜಗಳ ಶುರುವಾಗಿ ಬಳಿಕ ಇಬ್ಬರೂ ಆಪ್ತರಾಗುತ್ತಾರೆ. ಅಲ್ಲಿಂದ ತಿರುವು ಪಡೆದುಕೊಳ್ಳುವ ಕಥೆ ನಾನಾ ಕವಲುಗಳಲ್ಲಿ ಸಾಗಿ ಕಡೆಗೆ ಸಮುದ್ರವನ್ನು ನದಿ ಸೇರಿದ ಭಾವವನ್ನು ಪ್ರೇಕ್ಷಕರಿಗೆ ಕೊಡುತ್ತದೆ.
ಮಧ್ಯವಯಸ್ಕರ ತೊಳಲಾಟ, ಸಂಘರ್ಷಗಳೇ ಜೀವಾಳ
ಇಬ್ಬರು ಮಧ್ಯವಯಸ್ಕರ ನಡುವಿನ ತೊಳಲಾಟ, ಭಾವನೆಗಳ ಸಂಘರ್ಷ, ತಾಕಲಾಟಗಳೇ ಚಿತ್ರದ ಜೀವಾಳ. ಮಧ್ಯವಯಸ್ಕ ಪ್ರೇಮಿಗಳ ಜೊತೆ ಯುವ ಪ್ರೇಮಿಗಳಾಗಿ ತೇಜಸ್ (ಹೊಸ ಪರಿಚಯ) ಹಾಗೂ ಸಂಯುಕ್ತಾ ಹೊರನಾಡ್ ಅವರ ಚಿಲಿಪಿಲಿ ಪ್ರೇಮವೂ ಇದೆ.
ಕಾಳಿದಾಸನ ಜೀವನದಲ್ಲಿ ಗೌರಿ ಜೀವ ಸಂಚಾರ
ಒಂಟಿ ಜೀವನ ನಡೆಸುತ್ತಿರುವ ಕಾಳಿದಾಸ ಜೀವನದಲ್ಲಿ ಗೌರಿ ಅಡಿಯಿಟ್ಟು ಜೀವಸಂಚಾರ ಮಾಡುತ್ತಾಳೆ. ಆದರೆ ಇವರಿಬ್ಬರೂ ಮುಖಾಮುಖಿ ಭೇಟಿಯಾಗಲು ಸಂಕೋಚ, ವಯಸ್ಸು ಅಡ್ಡಬರುತ್ತದೆ. ಇದಕ್ಕೆ ಇಬ್ಬರೂ ಆಯ್ಕೆ ಮಾಡಿಕೊಳ್ಳುವ ಮಾರ್ಗ ತಮ್ಮ ಬದಲಾಗಿ ಬೇರೆಯವರನ್ನು ಕಳುಹಿಸುವುದು.
ಮಾನಸಿಕವಾಗಿ ತೊಳಲಾಡುವ ಪ್ರೇಮಿಗಳು
ಕಾಳಿದಾಸ ತನ್ನ ಅಕ್ಕನ ಮಗ ನವೀನ್ ನನ್ನು (ತೇಜಸ್) ಕಳುಹಿಸುತ್ತಾನೆ. ಗೌರಿ ತನ್ನ ತಂಗಿ ಮೇಘನಾಳನ್ನು (ಸಂಯುಕ್ತಾ ಹೊರನಾಡ್) ಕಳುಹಿಸುತ್ತಾಳೆ. ಆದರೆ ಇವರು ಮಾಡುವ ಎಡವಟ್ಟು ಕಾಳಿದಾಸ ಹಾಗೂ ಗೌರಿ ಅವರನ್ನು ಮಾನಸಿಕ ಯಾತನೆಗೆ ದೂಡುತ್ತದೆ.
ಷಡ್ರಸಗಳ ಸಂಗಮ 'ಒಗ್ಗರಣೆ'
ಕಥೆ ಎಂದ ಮೇಲೆ ಒಂಚೂರು ಉಪ್ಪು ಹುಳಿ ಖಾರ ಸಿಹಿ ಕಹಿ ಇರಲೇಬೇಕಲ್ಲವೇ. ಇವೆಲ್ಲ ರುಚಿಗಳ ನಡುವೆ ಕಾಳಿದಾಸ ಮತ್ತು ಗೌರಿ ಹೇಗೆ ಒಂದಾಗುತ್ತಾರೆ? ಎಂಬುದನ್ನು ತೆರೆಯ ಮೇಲೆ ನೋಡಿದರನೇ ಚೆಂದ. ಅಲ್ಲಲ್ಲಿ ಈ ಎರಡೂ ಜೋಡಿಗಳ ಅಭಿನಯ ಕಣ್ಣುಗಳನ್ನು ತೇವವಾಗಿಸುತ್ತವೆ.
ಕಾಳಿದಾಸ, ಗೌರಿ ಪ್ರೇಮದ ಪರಿಪಾಕ
'ಒಗ್ಗರಣೆ' ಚಿತ್ರದಲ್ಲಿ ಸ್ಪೆಷಲ್ ಐಟಂ ಆಗಿ ಆದಿವಾಸಿಗಳ ಪ್ರಸ್ತಾವನೆ ಸೊಗಸಾಗಿ ಮೂಡಿಬಂದಿದೆ. ಮೇಘನಾ ಮತ್ತು ನವೀನ್ ನಡುವಿನ ಲವ್ ಸ್ಟೋರಿ ಒಂಥರಾ ಐಸ್ ಕ್ರೀಮ್ ಸವಿದಂತಿದೆ. ಈ ಎಲ್ಲಾ ಸೈಡ್ ಐಟಂಗಳ ನಡುವೆ ಮೇನ್ ಐಟಂ ಕಾಳಿದಾಸ, ಗೌರಿ ಪ್ರೇಮದ ಪರಿಪಾಕ ಸೊಗಸಾಗಿದೆ.
ಇಳಯರಾಜಾ ಸಂಗೀತದ ಇಂಪಾದ ಹಾಡುಗಳು
ಚಿತ್ರದಲ್ಲಿ ಊರ್ವಶಿ, ಮಂಡ್ಯ ರಮೇಶ್ ಅವರ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಅಡುಗೆಭಟ್ಟನಾಗಿ ಅಚ್ಯುತ ಕುಮಾರ್ ಅವರ ಪಾತ್ರ ಅಮೋಘ. ಇಳಯರಾಜಾ ಅವರ ಸಂಗೀತದ ಹಾಡುಗಳು 'ಒಗ್ಗರಣೆ'ಯಲ್ಲಿ ಸಾಸಿವೆಯಂತೆ ಚಿಟಪಟ ಎಂದು ಸಿಡಿದು ಸೊಗಸಾಗಿವೆ. ಪ್ರೀತಾ ನಾಗರಾಜ್ ಅವರ ಛಾಯಾಗ್ರಹಣ ಕಣ್ಣಿಗೆ ಕಣ್ಣಿಗೆ ಹಿತಮಿತವಾಗಿದೆ.
ಷಡ್ರಸಗಳ ಥರಾವರಿ ಒಗ್ಗರಣೆ ಇದು
ಫಾಸ್ಟ್ ಫುಡ್ ರೀತಿಯ ಚಿತ್ರಗಳನ್ನು ನೋಡಿನೋಡಿ ನಾಲಿಗೆ ಮರಗಟ್ಟಿಹೋಗಿದ್ದರೆ ವನಭೋಜನದಂತಹ ಸುಗ್ರಾಸ ಭೋಜನ ಸವಿದ ಅನುಭವವನ್ನು 'ಒಗ್ಗರಣೆ' ಕೊಡುತ್ತದೆ. ಪ್ರತಿಯೊಂದು ಸನ್ನಿವೇಶವನ್ನೂ ಪ್ರಕಾಶ್ ರೈ ರುಚಿಕಟ್ಟಾಗಿ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ. ಷಡ್ರಸಗಳ ಥರಾವರಿ ಒಗ್ಗರಣೆ ಇದು. ನೋಡಿ ಸವಿಯಿರಿ.