'ಒಂದಲ್ಲಾ ಎರಡಲ್ಲಾ': ನೀವು ನೋಡಲೇಬೇಕು ಈ ಸಿನಿಮಾ
ಆಗಾಗ ನಾವೂ ಮಗುವಾಗುತ್ತೇವೆ. ಕಪಾಟಿನ ಮೂಲೆಯೊಳಗೆ ಒಂದರ ಮೇಲೊಂದು ಪೇರಿಸಿಟ್ಟ ಹಳೆಯ ಆಲ್ಬಂ ಕೊಡವಿ, ಅದರೊಳಗಿನ ಪ್ಲಾಸ್ಟಿಕ್ ಹೊದಿಕೆಗೆ ಅಂಟಿಕೊಂಡ ಫೋಟೋಗಳನ್ನು ನಿಧಾನಕ್ಕೆ ಬಿಡಿಸುತ್ತಾ ಸುಖಿಸುತ್ತೇವೆ. ಬಾಲ್ಯಕ್ಕೆ ಮರಳುವ ಸಣ್ಣ ಅವಕಾಶವನ್ನೂ ಬಿಟ್ಟುಕೊಡಲು ನಾವು ಬಯಸುವುದಿಲ್ಲ.
ಸಿನಿಮಾದ ಆರಂಭದಲ್ಲೇ ನಾವು ಸಮೀರನಾಗುತ್ತೇವೆ (ಸಿನಿಮಾ ಮುಗಿದ ಮೇಲೆ ನಾವು ಹೊರಬಂದರೂ ಸಮೀರ ನಮ್ಮ ಜತೆಗಿರುತ್ತಾನೆ). ಅಲ್ಲಿರುವುದು ಕಳೆದುಕೊಂಡಿದ್ದರ ಹುಡುಕಾಟ ಮತ್ತು ಪಡೆದುಕೊಳ್ಳದರ ಹುಡುಕಾಟ.
ಆ ಹುಡುಕಾಟದಲ್ಲಿ ಸಣ್ಣ ರೋಮಾಂಚನವಿದೆ, ನಿರೀಕ್ಷೆಗಳಿವೆ, ಆರ್ದ್ರತೆಯಿದೆ, ನಾವು ಅಸಹನೆಗೋ, ದ್ವೇಷಕ್ಕೋ ಅಥವಾ ಇನ್ಯಾವುದೋ ರಾಜಕೀಯ ನಿಲುವಿನ ಕಾರಣಕ್ಕೋ ಕಳೆದುಕೊಳ್ಳುತ್ತಿರುವ ಸೌಹಾರ್ದದ ಸೆಲೆಯಿದೆ. ಮುಂದೆ ಓದಿರಿ..
ಧರ್ಮಗಳಾಚೆಗಿನ ಪರಿಶುದ್ಧ ಸಂಬಂಧ
ಸಮೀರನ ಸುತ್ತಲಿನ ಪಾತ್ರಗಳು ಕೂಡ ನಮ್ಮವೇ. ಆದರೆ ನಾವೀಗ ಅದರೊಳಗಿಲ್ಲ. ಸಮೀರನ ಮುಗ್ಧತೆಯನ್ನು ಬಯಸುವ ನಮಗೆ ಆತನ ಜತೆಗೆ ಅತ್ಯಂತ ಸಹಜವಾಗಿ ಬದುಕುವ ಪಾತ್ರಗಳು ತೋರಿಸುವ ಧರ್ಮಗಳಾಚೆಗಿನ ಪರಿಶುದ್ಧ ಸಂಬಂಧದ ಗುಣದಿಂದ ದೂರ ಸಾಗಿದ್ದೇವೆ.
ಮುಗ್ಧ ಆಶಯ
ಧರ್ಮಗಳ ನಡುವಣ ಸಂಬಂಧಗಳನ್ನು ಅತಿ ಭಾವುಕವಾಗಿಯೋ ಅಥವಾ ಈಗಿನ ಸಾಮಾಜಿಕ ಸನ್ನಿವೇಶದ ಹಿನ್ನೆಲೆಯಲ್ಲಿಯೋ ಚಿತ್ರಿಸಿದ್ದರೆ ಇದು ಮತ್ತೊಂದು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕುರಿತಾದ ಚರ್ಚೆಯ ವಸ್ತುವಿನ ಸಿನಿಮಾವಾಗಿ ಮತ್ತಷ್ಟು ಗದ್ದಲಗಳನ್ನು ಮಾಡುತ್ತಿತ್ತೇ ವಿನಃ ಎಲ್ಲವನ್ನೂ ಸೌಹಾರ್ದವಾಗಿ ಕಾಣುವ ಆಶಯವೇ ಗೌಣವಾಗುತ್ತಿತ್ತು. ನಿರ್ದೇಶಕ ಸತ್ಯಪ್ರಕಾಶ್ ಬಿಡಿಸಿರುವ ಕಥೆಯ ಕ್ಯಾನ್ವಾಸ್ ಇಷ್ಟವಾಗಲು ಕಾರಣಗಳಲ್ಲಿ ಇದೂ ಒಂದು. ಅವರ ಚಿತ್ರದಲ್ಲಿ ಅಂತಹದ್ದೊಂದು ಮುಗ್ಧ ಆಶಯ ವ್ಯಕ್ತವಾಗುತ್ತದೆ. ಹಾಗಂತ ಇದು ಭೋದನೆ, ಉಪದೇಶ, ತೀರಾ ಸಂಕಟಗಳನ್ನು ನಮ್ಮೊಳಗೆ ತುಂಬಿ ಕಲಕಿಸುವ ಚಿತ್ರವಲ್ಲ. ಸಮಕಾಲೀನ ಸನ್ನಿವೇಶಗಳಿಗೆ ರಿಲೇಟ್ ಆಗುವಂತಹ ಅತಿ ಗಂಭೀರ ಅಂಶವೊಂದು ಅದರಲ್ಲಿ ಇದೆಯೆಂದ ಮಾತ್ರಕ್ಕೆ ಸಿನಿಮಾದ ದಿಕ್ಕು ಬದಲಾಗಬೇಕಿಲ್ಲ.
ನಮ್ಮೊಳಗಿನ ಕಾರುಣ್ಯ ಕೆದಕುವ ಸಿನಿಮಾ
ಸತ್ಯಪ್ರಕಾಶ್ ಸಿನಿಮಾದುದ್ದಕ್ಕೂ ನಗಿಸುತ್ತಾರೆ. ಅಲ್ಲಲ್ಲಿ ಭಾವುಕರನ್ನಾಗಿಸುತ್ತಾರೆ. ತನ್ನ ಅತಿ ಪ್ರೀತಿಯ ಭಾನುಳನ್ನು ಕಳೆದುಕೊಂಡ ಸಮೀರನಿಗಾಗಿ, ಸಮೀರನಿಗಾಗಿ ಪರಿತಪಿಸುವ ಆತನ ಅಜ್ಜನಿಗಾಗಿ, ಅಪ್ಪನಿಗಾಗಿ ಮತ್ತು ರಾಜಣ್ಣನಿಗಾಗಿ, ಬಾಲ್ಯದಲ್ಲಿಯೇ ಮಗನನ್ನು ಕಳೆದುಕೊಂಡು ಕಂಡ ಮಕ್ಕಳನ್ನೆಲ್ಲ ತನ್ನ ಮಗನೆಂದು ಮನೆಗೆ ಕರೆತರುವ ಡೇವಿಡ್ ಅಂಕಲ್ ಗಾಗಿ, ಮಕ್ಕಳಾಗದ ಸಂಕಟವನ್ನು ಅನುಭವಿಸುವ 'ಹುಲಿ'ಗಾಗಿ ಮಿಡಿಯುವಂತೆ ಸಣ್ಣನೆ ನಮ್ಮೊಳಗಿನ ಕಾರುಣ್ಯವನ್ನು ಕೆದಕುತ್ತಾರೆ.
ಕಥೆ ಒಂದೆಡೆ ನಿಲ್ಲುವುದಿಲ್ಲ
ಚಲನಶೀಲತೆ ಈ ಸಿನಿಮಾದ ಶಕ್ತಿ. ಅದು 'ರಾಮ ರಾಮಾ ರೇ' ಸಿನಿಮಾದಲ್ಲಿಯೂ ಇತ್ತು. ಕಥೆ ಒಂದೆಡೆ ನಿಲ್ಲುವುದಿಲ್ಲ, ಸಮೀರನಂತೆಯೇ. ನಿಂತರೆ ಅದು ಸಲ್ಲದ ಚೌಕಟ್ಟಿನ ಬಂಧವಾಗುತ್ತದೆ. ಭಾವಗಳಿಗೂ ಈ ಚಲನಶೀಲತೆ ವ್ಯಾಪಿಸುತ್ತದೆ. ಒಂದು ಸನ್ನಿವೇಶದೊಳಗೆ ನಿಮ್ಮನ್ನು ಸಿಲುಕಿಸಿದರೆ ಕಣ್ಣು ತೇವವಾಗಬಹುದು, ನಕ್ಕು ಹೊಟ್ಟೆ ಹುಣ್ಣಾಗಿಸಬಹುದು, ಮುಂದೇನು ಎಂಬ ಕೌತುಕ ಹೆಚ್ಚಾಗಿ ಎದೆ ಡವ ಡವ ಎನ್ನಬಹುದು (ಸಿನಿಮಾವನ್ನು ಮನರಂಜನೆಯ ದೃಷ್ಟಿಯಿಂದ ನೋಡುವವರಿಗೆ ಮಾತ್ರ ಇದು ಅನ್ವಯ. ಗಂಭೀರವಾಗಿ, ವಿಮರ್ಶಾತ್ಮಕವಾಗಿ ನೋಡುವವರಿಗೆ ಅನೇಕ ಆಯಾಮಗಳಲ್ಲಿ ಕಂಡುಕೊಳ್ಳಲು ಕೂಡ ಸಿನಿಮಾ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ) ಈ ಎಲ್ಲ ಅನುಭವಗಳ ತುತ್ತನ್ನು ಹಂಚುತ್ತಾ ಹೋಗಿದ್ದಾರೆ ನಿರ್ದೇಶಕರು.
ಸಿನಿಮಾದಲ್ಲಿ ಮಾತಿದೆ. ಮೌನವೂ ಇದೆ
ಸಿನಿಮಾದಲ್ಲಿ ಮಾತಿದೆ. ಮೌನವೂ ಇದೆ. ಮಾತು ವಾಚ್ಯವೆನಿಸದು. ಮೌನ ಅಸಹನೀಯವೆನಿಸದು. ಅನೇಕ ಪಾತ್ರಗಳಿವೆ, ಅವುಗಳಲ್ಲಿ ಹೃದಯವಿದೆ. ಎರಡು ಪಾತ್ರಗಳಿವೆ. ಮಕ್ಕಳಾಗದ ದಂಪತಿಯದ್ದು. 'ಕರು'ವನ್ನು ಅಟ್ಟಿಸಿಕೊಂಡು ಬಂದ 'ಹುಲಿ'ಗೆ ಕೊನೆಗೂ ಕರು ಸಿಕ್ಕಿದೆ. ಆ 'ಕರು'ವಿನಲ್ಲಿ ಮಗುವನ್ನು ಕಾಣುವ ತಾಯಿ- ಹುಲಿ ನಡುವಿನ ಸಂಭಾಷಣೆಯಿದು:
ಈ ಮಗೀನ ನಮ್ ಹತ್ರ ಇಟ್ಕೋಳೋಣ್ವಾ??
ಹೇ ಸುಮ್ನಿರು ಅದು ನಮ್ ಜನ ಅಲ್ಲ..
ಹೇ.. ಅದೆಲ್ಲಿ ಜನ ಆಗದೆ?? ಅದಿನ್ನೂ ಮಗು ಅಲ್ವಾ...??!!
ಪರಿಪೂರ್ಣತೆಯ ಫಲವೇ ಒಂದಲ್ಲಾ ಎರಡಲ್ಲಾ
ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಗೀತ, ನಟನೆ ಹೀಗೆ ಎಲ್ಲ ವಿಭಾಗಗಳ ಪರಿಪೂರ್ಣತೆಯ ಫಲವೇ ಒಂದಲ್ಲಾ ಎರಡಲ್ಲಾ. ಒಂದು ಸೌಹಾರ್ದದ ಕಥೆಯನ್ನು ನವಿರಾಗಿ ಕಟ್ಟಿಕೊಡುವ ಚಿತ್ರಕಥೆ, ಹೇಳಬೇಕಿದ್ದನ್ನು ಸೂಚ್ಯವಾಗಿ ಪಾತ್ರಗಳ ಮೂಲಕ ನುಡಿಸುವ ಸಂಭಾಷಣೆ, ಹೇಳಲೇಬೇಕು ಎಂಬ ಹಠವಿಲ್ಲದ್ದನ್ನು ದೃಶ್ಯಗಳ ಮೂಲಕವೇ ಆಪ್ತವಾಗಿ ಹಿಡಿದಿಡುವ ಛಾಯಾಗ್ರಹಣ (ದೇವಸ್ಥಾನದ ಸನ್ನಿವೇಶ, ಹುಲಿ-ಕರುವಿನ ಊಟದ ಸನ್ನಿವೇಶ), ಓಘಕ್ಕೆ ತಕ್ಕಂತೆ ಸಾಗುವ ಹಿನ್ನೆಲೆ ಸಂಗೀತ, ಕಥೆಯ ಓಟಕ್ಕೆ ಅಡ್ಡಿಬಾರದೆ ಅದರೊಳಗೆ ಮಿಳಿತಗೊಂಡ ಸಂಗೀತ-ಸಾಹಿತ್ಯ, ಆ ಕಥೆಯನ್ನು ನಮ್ಮ ಹೊರತು ಇನ್ಯಾರೂ ಇಷ್ಟು ಚೆಂದವಾಗಿ ಹೇಳಲಾರವು ಎನ್ನುವ ಪಾತ್ರಗಳು...


Click it and Unblock the Notifications











