ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ
ಹೊಸ ಬರ ಹೊಸ ಚಿತ್ರವಾಗಿರುವ 'ರಂಗಿತರಂಗ' ನಿಸ್ಸಂದೇಹವಾಗಿ ಉತ್ತಮ ಪ್ರಯತ್ನ. ಅಬ್ಬರ ಎನಿಸುವಷ್ಟು ಹೊಡೆದಾಟಗಳಿಲ್ಲ. ಬಿಲ್ಡಪ್ ಕೊಡಲೇಬೇಕು ಅಂತ ಡೈಲಾಗ್ ಗಳಿಲ್ಲ. ಹೀರೋಗೊಂದು ಸಾಂಗು, ಹೀರೋಯಿನ್ ಗೆ ಇನ್ನೊಂದು ಸಾಂಗು, ಗ್ಲಾಮರ್ ತುಂಬೋಕೆ ಐಟಂ ಸಾಂಗು ಅಂತ ಅನಾವಶ್ಯಕ ಹಾಡುಗಳನ್ನ ತುರುಕಿಲ್ಲ.
ಹೊಸ ಮುಖಗಳಾದರೂ ಕಿರಿಕಿರಿ ಉಂಟುಮಾಡಲ್ಲ. ಪ್ರೇಕ್ಷಕರನ್ನ ರಿಲ್ಯಾಕ್ಸ್ ಮಾಡೋಕೆ ಕಾಮಿಡಿ ಕಂಪಲ್ಸರಿಯಾಗಿ ಇಲ್ಲ. ವಿದೇಶಗಳಲ್ಲಿ ಶೂಟಿಂಗ್ ಮಾಡೇ ಇಲ್ಲ.
ಇಷ್ಟೆಲ್ಲಾ ಇಲ್ಲಗಳ ನಡುವೆ 'ರಂಗಿತರಂಗ' ಪ್ರೇಕ್ಷಕರನ್ನ ರುಚಿಸಿಲ್ಲ ಅಂತ ಖಂಡಿತ ಹೇಳೋಕೆ ಆಗಲ್ಲ. ಅಪ್ಪಟ ದಕ್ಷಿಣ ಕನ್ನಡ ಸೊಗಡಿನಲ್ಲಿ ರೆಡಿಯಾಗಿರುವ 'ರೋಚಕ' ದೃಶ್ಯ ಕಾವ್ಯ 'ರಂಗಿತರಂಗ'. ಇಂದು ರಾಜ್ಯದ ಮೂಲೆ ಮೂಲೆಯಲ್ಲೂ ತೆರೆಕಂಡಿರುವ 'ರಂಗಿತರಂಗ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....
ಕಥಾಹಂದರ
ವಾಸ್ತವ ಪ್ರಪಂಚವನ್ನ ಬಿಟ್ಟು ಊಟಿಯಲ್ಲಿ ಸೆಟಲ್ ಆಗಿರುವ ಸತಿ-ಪತಿ ಲೇಖಕ ಗೌತಮ್ (ನಿರೂಪ್ ಭಂಡಾರಿ) ಮತ್ತು ಇಂದು ಸುವರ್ಣ (ರಾಧಿಕಾ ಚೇತನ್). ಪತ್ನಿ ಇಂದು ಸುವರ್ಣ ಎಂಟು ತಿಂಗಳ ತುಂಬು ಗರ್ಭಿಣಿ. ಆಕೆಯ ಮನಸ್ಸಲ್ಲಿ ಆಗಾಗ ಕಾಡುವ ಕೆಟ್ಟ ಕನಸು. ಅದಕ್ಕೆ ಪರಿಹಾರ ಹುಡುಕುವ ಸಲುವಾಗಿ ಪೂರ್ವಜರು ಆಚರಿಸುತ್ತಿದ್ದ 'ಭೂತಾರಾಧನೆ'ಯನ್ನ ತಮ್ಮ 'ಕಮರೊಟ್ಟು' ಮನೆಯಲ್ಲಿ ಮಾಡುವುದಕ್ಕೆ ಹೊರಡುತ್ತಾರೆ. [ಸೋಷಿಯಲ್ ಮೀಡಿಯಾದಲ್ಲಿ 'ರಂಗಿತರಂಗ' ಸೂಪರ್ ಹಿಟ್]
ಭಯಭೀತಗೊಳಿಸುವ 'ಕಮರೊಟ್ಟು'
ಇಡೀ ಊರಲ್ಲಿ 'ಕಮರೊಟ್ಟು' ಮನೆ ಕಡೆ ಯಾರೂ ಮುಖ ಮಾಡಲ್ಲ. ಆ ಮನೆ ಹಲವು ವಿಚಿತ್ರ ಸನ್ನಿವೇಶಗಳಿಗೆ ಸಾಕ್ಷಿಯಾಗಿರುತ್ತೆ. ಅಲ್ಲಿನ ಬಾವಿಯಲ್ಲಿ ಬ್ರಹ್ಮ ರಾಕ್ಷಸ ಇದ್ದಾನೆ ಅನ್ನುವ ನಂಬಿಕೆ. ಜೊತೆಗೆ 'ಗುಡ್ಡದ ಭೂತ'ದ ಭಯ ಬೇರೆ. [ಜುಲೈ 3 ರಂದು 'ರಂಗಿತರಂಗ' ಭರ್ಜರಿ ಓಪನ್ನಿಂಗ್ ]
ಪ್ರತಿ ವರ್ಷ ಗರ್ಭಿಣಿಯರು ನಾಪತ್ತೆ
'ಕಮರೊಟ್ಟು' ಮನೆಯ ಸುತ್ತ ಮುತ್ತ ಪ್ರತಿ ವರ್ಷ ಗರ್ಭಿಣಿಯರು ನಿಗೂಢವಾಗಿ ನಾಪತ್ತೆ ಆಗ್ತಾರೆ. ವಾಡಿಕೆಯಂತೆ ಆಗಷ್ಟೆ 'ಕಮರೊಟ್ಟು' ಮನೆಗೆ ಕಾಲಿಟ್ಟ ಇಂದು ಸುವರ್ಣ ಕಣ್ಮರೆ ಆಗ್ತಾಳೆ. ಅಸಲಿಗೆ, ಗರ್ಭಿಣಿಯರು ಕಾಣೆ ಆಗುವುದಕ್ಕೆ ಕಾರಣವೇನು? ಕಮರೊಟ್ಟು ಮನೆಯಲ್ಲಿ ಅಂಥದ್ದೇನಿದೆ? ಊರಿನ ಜನ ಆ ಮನೆಯನ್ನ ಕಂಡು ಹೆದರುವುದು ಯಾಕೆ? ಈ ಸಸ್ಪೆನ್ಸ್ ನ ನೀವು ಥಿಯೇಟರ್ ನಲ್ಲಿ ನೋಡಿ ಥ್ರಿಲ್ ಆಗಿ. [ರಂಗಿತರಂಗ ಸೌಂಡಿಗೆ ಥ್ರಿಲ್ ಆದ ಮುರಳಿ, ಯಶ್]
ಕಡೆಯವರೆಗೂ ಸಸ್ಪೆನ್ಸ್ ಇದೆ
ಮೊದಲ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರೂ, ಪ್ರೇಕ್ಷಕರನ್ನ ಕಡೆಯವರೆಗೂ ಹಿಡಿದು ಕೂರಿಸುವಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಯಶಸ್ವಿ ಆಗಿದ್ದಾರೆ. ಇಂಟ್ರವೆಲ್ ವರೆಗೂ ಸಿನಿಮಾ ನೋಡುಗರಿಗೆ ಒಂದು ಅನುಮಾನ ಕಾಡುವಂತೆ ಮಾಡಿದರೆ, ಸೆಕೆಂಡ್ ಹಾಫ್ ನಲ್ಲಿ ಬೇರೆಯದ್ದೇ ಟ್ವಿಸ್ಟ್ ಕೊಟ್ಟಿದ್ದಾರೆ. ಕ್ಲೈಮ್ಯಾಕ್ಸ್ ಹೊತ್ತಿಗೆ ಬರುವಷ್ಟರಲ್ಲಿ ಅನಿರೀಕ್ಷಿತ ತಿರುವು ನೀಡಿ ಪ್ರೇಕ್ಷಕರನ್ನ ಸೀಟ್ ತುದಿಯಲ್ಲಿ ಕೂರುವಂತೆ ಮಾಡಿದ್ದಾರೆ. ಅಲ್ಲಿಗೆ, ಫಸ್ಟ್ ಅಟೆಂಪ್ಟ್ ನಲ್ಲಿ ಅನೂಪ್ ಭಂಡಾರಿ ಪಾಸ್. [ರಂಗಿತರಂಗ-ಟ್ವಿಟ್ಟರ್ ಲೋಕದಲ್ಲಿ ಮಿಶ್ರ ರಂಗು]
ಆಕ್ಟಿಂಗ್ ನಲ್ಲಿ ಎರಡು ಮಾತಿಲ್ಲ
ಸಾಯಿ ಕುಮಾರ್ ಸೇರಿದಂತೆ ಕೆಲ ಕಲಾವಿದರನ್ನ ಹೊರತು ಪಡೆಸಿದರೆ, ಇಡೀ ಸಿನಿಮಾದಲ್ಲಿ ಹೊಸಬರದ್ದೇ ಕಾರುಬಾರು. ನಾಯಕ ನಿರೂಪ್ ಭಂಡಾರಿ ನಟನೆ ಚೆನ್ನಾಗಿದೆ. ನೃತ್ಯದಲ್ಲಿ ಹೆಚ್ಚು ಆಸಕ್ತಿ ವಹಿಸಿದರೆ ಅವರಿಗೆ ಗಾಂಧಿನಗರದಲ್ಲಿ ಭವಿಷ್ಯ ಇದೆ. ರಾಧಿಕಾ ಚೇತನ್ ಮತ್ತು ಅವಂತಿಕಾ ಶೆಟ್ಟಿ ಕೊಟ್ಟ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಳ್ಳುವುದು ಮಾತ್ರ ನಟ ಸಾಯಿ ಕುಮಾರ್. [ನಟ ಯಶ್ ಹೃದಯವಂತಿಕೆ ಎಂಥದ್ದು ಅಂತೀರಾ?]
ಸೆಕೆಂಡ್ ಹಾಫ್ ಸ್ಲೋ
ಮೊದಲಾರ್ಧದಲ್ಲಿ ಕಥೆಯ ವೇಗ ಓಕೆ. ಆದ್ರೆ ಸೆಕೆಂಡ್ ಹಾಫ್ ನಲ್ಲಿ ಎರಡೆರಡು ಫ್ಲ್ಯಾಶ್ ಬ್ಯಾಕ್ ಮತ್ತು ಹಲವು ಟ್ವಿಸ್ಟ್ ಗಳನ್ನು ಇಟ್ಟು ಪ್ರೇಕ್ಷಕರ ತಲೆಗೆ ಸಿಕ್ಕಾಪಟ್ಟೆ ಕೆಲಸ ನೀಡಲಾಗಿದೆ. ಇದರಿಂದ ಚಿತ್ರದ ಅವಧಿ ಕೂಡ ಹೆಚ್ಚಾಗಿದೆ. ಚಿತ್ರಕಥೆ ಇನ್ನಷ್ಟು ಸರಳ ಇದ್ದು, ಚಿತ್ರದ ಕಾಲಾವಧಿ ಕಮ್ಮಿ ಇದ್ದಿದ್ದರೆ ಪ್ರೇಕ್ಷಕರಿಗೆ 'ರಂಗಿತರಂಗ' ಮತ್ತಷ್ಟು ಇಷ್ಟವಾಗುತ್ತಿತ್ತೇನೋ!
ತಾಂತ್ರಿಕ ತಪ್ಪುಗಳು
ನಾಯಕನ ವಾಚ್ ಕಳ್ಳತನವಾಗಿರುತ್ತೆ. ನಂತ್ರ ಅದು ಸಿಗುತ್ತೆ ಕೂಡ. ಕಳ್ಳತನ ಮಾಡಿರುವವರು ಅದನ್ನ ಯಾಕೆ ಬಿಸಾಡಿರುತ್ತಾರೆ ಅನ್ನೋದು ಅಸ್ಪಷ್ಟ. ಒಂದು ಸೀನ್ ನಿಂದ ಇನ್ನೊಂದು ಸೀನ್ ಗೆ ಕಾಸ್ಟ್ಯೂಮ್ ಕನ್ಟಿನ್ಯುಟಿ ಇಲ್ಲ. ಅಂತಹ ಅನೇಕ ಮಿಸ್ಸಿಂಗ್ ಲಿಂಕ್ ಗಳು ಪ್ರೇಕ್ಷಕರಿಗೆ ಸುಲಭವಾಗಿ ತೆರೆಮೇಲೆ ಗೋಚರಿಸುತ್ತೆ.
ಕ್ಯಾಮರಾ ಕೈಚಳಕ
ಹಾಲಿವುಡ್ ಛಾಯಾಗ್ರಾಹಕ ಲ್ಯಾನ್ಸ್ ಕ್ಯಾಪ್ಲನ್ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣದ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ಒಂದೊಂದು ಫ್ರೇಮ್ ಕೂಡ ಕಣ್ಣಿಗೆ ಮುದ ನೀಡುತ್ತದೆ. ಚಿತ್ರದ ಬ್ಯಾಕ್ ಗ್ರೌಂಡ್ ಸ್ಕೋರ್ ಪ್ರೇಕ್ಷಕರ ಎದೆಬಡಿತಕ್ಕೆ ತಕ್ಕ ಹಾಗಿದೆ. ಅನೂಪ್ ಭಂಡಾರಿ ಸಂಗೀತ ಕೂಡ ಚೆನ್ನಾಗಿದೆ. ಪ್ರವೀಣ್ ಜೋಯಪ್ಪ ಸಂಕಲನ ಇನ್ನಷ್ಟು ಚುರುಕಾಗಿರಬೇಕಿತ್ತು. [ಈ ಹಾಡು ಕೇಳಿ..ನಿಮ್ಮ ನಾಲಿಗೆಗೆ ಕಸರತ್ತು ಕೊಡಿ...]
ಫೈನಲ್ ಸ್ಟೇಟ್ ಮೆಂಟ್
ಕೆಲವು ತಾಂತ್ರಿಕ ದೋಷಗಳನ್ನ ಬಿಟ್ಟರೆ, 'ರಂಗಿತರಂಗ' ಚಿತ್ರವನ್ನ ನೋಡೋಕೆ ಯಾವುದೇ ಅಡ್ಡಿ ಇಲ್ಲ. ಸಸ್ಪೆನ್ಸ್-ಥ್ರಿಲ್ಲರ್ ಚಿತ್ರಗಳನ್ನ ಇಷ್ಟಪಡುವವರು ಈ ಚಿತ್ರವನ್ನ ಮಿಸ್ ಮಾಡ್ಬೇಡಿ.


Click it and Unblock the Notifications











