Don't Miss!
- Sports ಪಂತ್ vs ಸ್ಯಾಮ್ಸನ್ vs ಕಿಶನ್: ಟಿ20 ವಿಶ್ವಕಪ್ ಭಾರತದ ವಿಕೆಟ್ಕೀಪರ್ ಆಯ್ಕೆ ಮಾಡಿದ ಆಡಮ್ ಗಿಲ್ಕ್ರಿಸ್ಟ್
- News ಮಾಜಿ ಶಾಸಕ ಸಂಜಯ ಪಾಟೀಲ್ ಆ ಒಂದು ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
- Finance ಕ್ಯಾಬ್ ಸೇವೆ ಆರಂಭಿಸಲಿದೆ ಬೆಂಗಳೂರು ನಮ್ಮ ಯಾತ್ರಿ!
- Technology Poco: ಶೀಘ್ರದಲ್ಲೇ ಲಾಂಚ್ ಆಗಲಿದೆ ಪೊಕೊ F6 ಸ್ಮಾರ್ಟ್ಫೋನ್: ನಿರೀಕ್ಷಿತ ಫೀಚರ್ಸ್ ಏನು?
- Automobiles ಬಿಡುಗಡೆಗೆ ಸಜ್ಜಾದ ಫೋರ್ಸ್ ಗೂರ್ಖಾ 5-ಡೋರ್ ಎಸ್ಯುವಿ: ಮಹೀಂದ್ರಾ ಥಾರ್ಗೆ ಎದೆಬಡಿತ ಶುರು
- Lifestyle ರಾಮನವಮಿ ಹಬ್ಬದ ವಿಶೇಷತೆ ಏನು? ರಾಮನ ಆದರ್ಶಗಳೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!
ಸಿನಿಮಾ ಥಿಯೇಟರ್ ಗೆ ಎಂಟ್ರಿ ಪಡೆದುಕೊಂಡ ತಕ್ಷಣ ಮೊದಲಿಗೆ ಡೈಲಾಗ್ ಮೂಲಕ 'ರಥಾವರ' ನಿಮ್ಮನ್ನು ಬರಮಾಡಿಕೊಳ್ಳುತ್ತಾನೆ. ನಾಯಕ 'ರಥ' ಹೇಗಿದ್ದ, ಹೇಗಾದ, ಆತನ ಬದುಕಿನಲ್ಲಿ ಏನಾಯಿತು?.
ಇಲ್ಲಿಂದ ಸಿನಿಮಾ ಆರಂಭ ಪಡೆದುಕೊಳ್ಳುತ್ತದೆ. ಒಂದು ಡೀಲ್ ಗೋಸ್ಕರ ರೌಡಿಗಳು ಹೊಡೆದಾಡುಕೊಳ್ಳುತ್ತಾರೆ. ಎಮ್ ಎಲ್ ಎ ಮಣಿಕಂಠ (ರವಿಶಂಕರ್) ಅವರಿಗೆ ಸಂಬಂಧಪಟ್ಟ ಒಂದು ಡೀಲ್ ನ ಎದುರಾಳಿ ತಪ್ಪಿಸುತ್ತಾನೆ.[ಇಷ್ಟಪಟ್ಟು ಮಂಗಳಮುಖಿಯಾದೆ, ಎಂದ ಆ ಖಳನಾಯಕ ಯಾರು?]
ಇದಕ್ಕೆ ಕೋಪಗೊಂಡ ಎಮ್ ಎಲ್ ಎ ಮಣಿಕಂಠ ತನ್ನ 'ರಥಾವರ' ನನ್ನು ಕರೆಯುತ್ತಾನೆ. ಆವಾಗ ನಾಯಕ 'ರಥ'ನ (ಶ್ರೀಮುರಳಿ) ಆಗಮನ.
ಒಟ್ನಲ್ಲಿ ಕಳೆದ ವರ್ಷ ಬಿಡುಗಡೆಯಾಗಿ ಭರ್ಜರಿ ಹಿಟ್ ಆದ 'ಉಗ್ರಂ' ಸಿನಿಮಾವನ್ನು ಸ್ವಲ್ಪ ಮಟ್ಟಿಗೆ ನಿಮಗೆ 'ರಥಾವರ' ಸಿನಿಮಾ ನೆನಪು ಮಾಡಿಸುತ್ತದೆ. ಚಿತ್ರದ ಮೇಕಿಂಗ್, ಕ್ಯಾಮರಾ ಕೈಚಳಕ, ಹಾಡುಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತದೆ.[ಮಿಸ್ ಮಾಡ್ಬೇಡಿ: 'ರಥಾವರ' ಟ್ರೈಲರ್ ನ 10 ಕುತೂಹಲ ದೃಶ್ಯಗಳು]
ಚಿತ್ರ : 'ರಥಾವರ'
ನಿರ್ಮಾಣ : ಧರ್ಮಶ್ರೀ ಮಂಜುನಾಥ್ ಎನ್
ಕಥೆ-ಚಿತ್ರಕಥೆ-ನಿರ್ದೇಶನ : ಚಂದ್ರಶೇಖರ ಬಂಡಿಯಪ್ಪ
ಛಾಯಾಗ್ರಹಣ : ಭುವನ್ ಗೌಡ
ಸಂಗೀತ : ಧರ್ಮ ವಿಶ್
ಸಂಕಲನ : ಶ್ರೀಕಾಂತ್
ತಾರಾಗಣ : ಶ್ರೀಮುರಳಿ, ರಚಿತಾ ರಾಮ್, ರವಿಶಂಕರ್, ಸೌರವ್ ಲೋಕಿ, ಉದಯ್, ಚರಣ್ ರಾಜ್, ಚಿತ್ರಾ, ಚಿಕ್ಕಣ್ಣ, ಸಾಧುಕೋಕಿಲ, ಮತ್ತು ಮುಂತಾದವರು.
ಬಿಡುಗಡೆ : ಡಿಸೆಂಬರ್ 4
ಅಂದಹಾಗೆ ಇಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆ ಕಂಡ 'ಉಗ್ರಂ' ನಟ ಶ್ರೀಮುರಳಿ ಅವರ 'ರಥಾವರ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..
'ರಥಾವರ' ಕಥಾಹಂದರ
ಎಮ್ ಎಲ್ ಎ ಮಣಿಕಂಠನ(ರವಿಶಂಕರ್) ಮೆಚ್ಚಿನ ಆಪ್ತ ರಥ (ಶ್ರೀಮುರಳಿ) ನಿಷ್ಟೆಯಿಂದ ಮಣಿಕಂಠನಿಗೋಸ್ಕರ ಬದುಕುತ್ತಿರುತ್ತಾನೆ. ಅವನು ಏನೇ ಹೇಳಿದ್ರು, ಅದನ್ನು ಸರಿಯೋ, ತಪ್ಪೋ ಎಂದು ಯೋಚಿಸುವ ಗೊಡವೆಗೆ ಹೋಗದೆ ಕಣ್ಣುಮುಚ್ಚಿ ಕೆಲಸ ಮಾಡಿ ಮುಗಿಸುತ್ತಿರುತ್ತಾನೆ. ಒಟ್ಟಾರೆ ಹೇಳಬೇಕೆಂದರೆ ಮಣಿಕಂಠನ 'ರಥಾವರ'ದಂತೆ, ಇರುತ್ತಾನೆ.[ಟ್ರೈಲರ್: 'ರಥಾವರ'ದಲ್ಲಿ ಉಗ್ರರೂಪ ತಾಳಿದ ರೋರಿಂಗ್ ಸ್ಟಾರ್]
ಮಣಿಕಂಠ ಸಿ.ಎಂ ಆಗಬೇಕೆಂಬ ಕನಸು 'ರಥಾವರ'ನಿಗೆ
ಎಮ್ ಎಲ್ ಆಗಿರುವ ಮಣಿಕಂಠ ಸಿ.ಎಂ ಆಗಬೇಕು ಎಂಬುದು ರಥಾವರನ ಕನಸು ಅದಕ್ಕೋಸ್ಕರ ಏನು ಬೇಕಾದ್ರು ಮಾಡಲು ರಥ ಸಿದ್ಧನಿರುತ್ತಾನೆ. ಆದರೆ ಮಣಿಕಂಠ ಸಿ.ಎಂ ಆಗಬೇಕು ಎಂದರೆ, ಆತ ಒಬ್ಬರು ಸತ್ತ ಮಂಗಳಮುಖಿಯ ಮುಖ ನೋಡಬೇಕು ಎಂದು ಸ್ವಾಮೀಜಿ ಹೇಳುತ್ತಾರೆ. ಆದರೆ ಇದು ಅಷ್ಟು ಸುಲಭವಾದ ಕೆಲಸ ಅಲ್ಲ ಬಹಳ ಕಷ್ಟ ಅಂತಾನೂ ಎಚ್ಚರಿಕೆ ನೀಡುತ್ತಾರೆ. ಆದರೂ ಒಪ್ಪಿಕೊಳ್ಳುವ ರಥ ಮಂಗಳಮುಖಿಯ ಹೆಣವನ್ನು ತರಲು ನಿರ್ಧರಿಸುತ್ತಾನೆ.
ಮಂಗಳಮುಖಿಯ ಶವಕ್ಕಾಗಿ ಹುಡುಕಾಟ
ಮಣಿಕಂಠನಿಗೋಸ್ಕರ ಏನೂ ಮಾಡಲು ಸಿದ್ಧನಾಗಿರುವ ರಥ ತನ್ನ ಗೆಳೆಯ ಸೇಫ್ಟಿ (ಚಿಕ್ಕಣ್ಣ) ಜೊತೆ ಮಂಗಳಮುಖಿಯರ ಕಾಲೋನಿಯಲ್ಲಿ ಅಡ್ಡಾಡುತ್ತಾನೆ, ಅವರ ಜೀವನ ಶೈಲಿಯನ್ನು ಗಮನಿಸುತ್ತಾನೆ. ಆವಾಗ ಅವರಿಗೆ ಒಬ್ಬ ಮಂಗಳಮುಖಿ ಸಹಾಯ ಮಾಡಲು ಒಪ್ಪಿಕೊಳ್ಳುತ್ತಾರೆ. ಅವರ ಸಹಾಯದಿಂದ ರಥ ಮಂಗಳಮುಖಿಯ ಹೆಣ ಪಡೆಯಲು ಪ್ಲಾನ್ ಮಾಡುತ್ತಾನೆ.
ಅಲ್ಲಿದೆ ಟ್ವಿಸ್ಟ್
ಮಂಗಳಮುಖಿಯರು ಅವರ ಜೀವನದಲ್ಲಿ ಬಹಳ ಜಾಗರೂಕರಾಗಿರುತ್ತಾರೆ. ಗುಟ್ಟಾಗಿ ಮದುವೆಯಾಗೋದು, ಅಲ್ಲದೇ ಯಾರಾದರೂ ಸತ್ತರೂ ಗುಟ್ಟಾಗಿ ಹೆಣ ಹೂಳುವುದು ಇತ್ಯಾದಿ ಮಾಡುತ್ತಾರೆ. ಇದನ್ನೆಲ್ಲಾ ಗಮನಿಸುವ ರಥ ರಾತ್ರಿ ಶವವನ್ನು ಎತ್ತಾಕಿಕೊಂಡು ಬರಲು ನಿರ್ಧರಿಸುತ್ತಾನೆ. ಆದರೆ ಮಂಗಳಮುಖಿಯರ ಜೀವನವನ್ನು ಕಾಪಾಡುತ್ತಿರುವ ಮಾದೇವಿ (ಭಜರಂಗಿ ಲೋಕಿ) ಇದಕ್ಕೆ ಅವಕಾಶ ಕೊಡುವುದಿಲ್ಲ. ಮಂಗಳಮುಖಿಯರ ಕಾಲೋನಿಗೆ ಯಾವ ನಾಯಿಯು ಬರದಂತೆ ಎಚ್ಚರಿಕೆಯಿಂದ ಕಾಪಾಡುವ ಮಾದೇವಿ ಹೆಣ ಎತ್ತಿಕೊಂಡು ಹೋಗಲು ಬಿಟ್ಟಾಳೇ?.
ಹಠ ಸಾಧಿಸುವ ರಥ
ಹೆಣ ಎತ್ತಾಕಿಕೊಂಡು ಬರುವ ಪ್ಲಾನ್ ಪ್ಲಾಪ್ ಆಗಿದೆ ಅಂತ ಗೊತ್ತಾದರೆ ನೆಚ್ಚಿನ ದೇವರು ಮಣಿಕಂಠ ಬೇಸರ ಮಾಡಿಕೊಳ್ಳುತ್ತಾನೆ ಎಂದು ಮಂಗಳಮುಖಿಯರ ನಾಯಕಿ ಮಾದೇವಿಯನ್ನು ಕೊಲ್ಲಲು ರಥ ನಿರ್ಧರಿಸುತ್ತಾನೆ. ಅಲ್ಲಿಗೆ ಚಿತ್ರ ಇಂಟರ್ ವಲ್ ಪಡೆದುಕೊಳ್ಳುತ್ತದೆ.
ಸೆಕೆಂಡ್ ಹಾಫ್ ಫುಲ್ ಟ್ವಿಸ್ಟ್
ಸಾಮಾನ್ಯವಾಗಿ ಒಬ್ಬಳೇ ಓಡಾಡುವ ಮಾದೇವಿಯ ಚಲನವಲನವನ್ನು ಗಮನಿಸುವ ರಥ ಮೋಸದಿಂದ ರಾತ್ರಿ ವೇಳೆ ಕೊಲೆ ಮಾಡುತ್ತಾನೆ. ಬೆಳಗಿನ ವೇಳೆ ದಿಲ್ಲಿಗೆ ಮಣಿಕಂಠ ಹೊರಡುವ ಮೊದಲು ಹೆಣದ ಮುಖ ತೋರಿಸಬೇಕು ಎಂದು ತಾಕೀತು ಮಾಡಿರುತ್ತಾನೆ. ಈ ಸಂದರ್ಭದಲ್ಲಿ ರಥನ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ವಿರೋಧಿಗಳು ಮಣಿಕಂಠನಿಗೆ ಹತ್ತಿರವಾಗಲು ಕಾಯುತ್ತಿರುತ್ತಾರೆ. ಮಾದೇವಿಯ ಹೆಣ ಹೊತ್ತು ಹೋಗುತ್ತಿರುವ ಸಂದರ್ಭದಲ್ಲಿ ರಥನ ವಿರೋಧಿಗಳ ಜೊತೆ ಫೈಟ್ ನಡೆಯುತ್ತಿರುವಾಗ ಸತ್ತಿರುವ ಮಾದೇವಿ ಎದ್ದು ನಿಲ್ಲುತ್ತಾಳೆ. ಅಲ್ಲಿ ಮತ್ತೊಂದು ಟ್ವಿಸ್ಟ್. ಶಾಪ ಹಾಕುವ ಮಾದೇವಿ, ರಥನ ಜೀವನ ಹಾಳಾಗಿ ಹೋಗಲಿ ಎನ್ನುತ್ತಾಳೆ.
ಮುಂದೇನಾಯಿತು?
ಮಾದೇವಿ ಶಾಪ ಹಾಕಿದ ನಂತರ ರಥನಿಗೆ ಕೆಟ್ಟ ಕನಸು ಬೀಳಲು ಆರಂಭವಾಗುತ್ತದೆ. ಜೊತೆಗೆ ಅನಾಥನಾಗಿ ಹುಟ್ಟಿರುವ ರಥ ಕೆಟ್ಟ ಕೆಲಸ ಮಾಡುವುದನ್ನು ಬಿಡಲು ಯೋಚಿಸುತ್ತಾನೆ, ತನ್ನ ಬಾಲ್ಯದ ಗೆಳೆಯನಿಗೆ ಕಣ್ಣು ಕೊಡಲು ಸಿದ್ದನಾಗುತ್ತಾನೆ. ನವಮಿ (ರಚಿತಾ ರಾಮ್) ಯನ್ನು ಪ್ರೀತಿಸಲು ಆರಂಭಿಸುತ್ತಾನೆ. ಒಳ್ಳೆಯವನಾಗುವಾಗ ಮಣಿಕಂಠನ ವಿರೋಧ ಕಟ್ಟಿಕೊಳ್ಳುತ್ತಾನೆ. ತದನಂತರ ಏನಾಗುತ್ತದೆ?, ತನ್ನ ಪ್ರೀತಿಯನ್ನು ಹಾಗೂ ಗೆಳೆಯನನ್ನು ಉಳಿಸಿಕೊಳ್ಳುತ್ತಾನ? ಅಂತ ನೋಡಲು ನೀವು ಖಂಡಿತ ಒಮ್ಮೆ ಥಿಯೇಟರ್ ಗೆ ಭೇಟಿ ಕೊಡಲೇಬೇಕು.
ಟ್ವಿಸ್ಟ್ ಮೇಲೆ ಟ್ವಿಸ್ಟ್
ಇಡೀ ಚಿತ್ರದ ತುಂಬಾ ಸಖತ್ ಟ್ವಿಸ್ಟ್ ಗಳನ್ನು ಇಡುವಲ್ಲಿ ಚೊಚ್ಚಲ ನಿರ್ದೇಶಕ ಬಂಡಿಯಪ್ಪ ಯಶಸ್ವಿಯಾಗಿದ್ದಾರೆ. ಉತ್ತಮ ಕಥೆಯನ್ನು ಹೊಂದಿರುವ ಚಿತ್ರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬೋರಿಂಗ್ ಎನಿಸದ ಡೈಲಾಗ್, ಲಿಮಿಟೆಡ್ ಹಾಡುಗಳು, ಅದ್ಭುತ ಮೇಕಿಂಗ್ ಹಾಗು ಸೂಪರ್ ಆಗಿರೋ ಹಿನ್ನಲೆ ಸಂಗೀತ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ. ರಥ, ಮಣಿಕಂಠ ಮತ್ತು ನವಮಿ ತೆರೆ ಮೇಲೆ ಬಂದ ತಕ್ಷಣ ಪ್ರೇಕ್ಷಕರು ಶಿಳ್ಳೆ ಚಪ್ಪಾಳೆಗಳ ಮೂಲಕ ಸ್ವಾಗತ ಮಾಡಿದ್ದಾರೆ.
ಮಂಗಳಮುಖಿಯರ ಜೀವನವನ್ನು ಎತ್ತಿಹಿಡಿದ್ದಾರೆ.
ಇಡೀ ಚಿತ್ರದ ತುಂಬಾ ಮಂಗಳಮುಖಿಯರ ಚಪ್ಪಾಳೆ ಸದ್ದು ಪ್ರೇಕ್ಷಕನಿಗೆ ಕೇಳಿಬರುತ್ತದೆ. ಅವರ ವಿಭಿನ್ನ ಜೀವನ ಶೈಲಿ ಹಾಗು ಅವರು ಬದುಕುವ ಶೈಲಿಯನ್ನು ನಿರ್ದೇಶಕರು ತೆರೆ ಮೇಲೆ ತೋರಿಸಿದ್ದಾರೆ. ಅವರಿಗೂ ಒಂದು ಜೀವನ ಇದೆ, ಅವರನ್ನು ಸಮಾಜದಲ್ಲಿ ಬದುಕಲು ಬಿಡಿ ಅನ್ನೋದನ್ನ 'ರಥಾವರ' ಚಿತ್ರದ ಮೂಲಕ ತೋರಿಸಿದ್ದಾರೆ.
ಶ್ರೀಮುರಳಿ ನಟನೆ ಹೇಗಿತ್ತು?
ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಮತ್ತೊಮ್ಮೆ ಪ್ರೇಕ್ಷಕರಿಗೆ 'ಉಗ್ರಂ' ಅವತಾರವನ್ನು ತೋರಿಸಿದ್ದಾರೆ. ಖಡಕ್ ಡೈಲಾಗ್, ಜಬರ್ದಸ್ತ್ ಫೈಟ್ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಮುರಳಿ ಅಭಿಮಾನಿಗಳು ಪಕ್ಕಾ ನೋಡಲೇಬೇಕಾದ ಸಿನಿಮಾ. ಶ್ರೀಮುರಳಿ ಅವರಿಗೆ 'ರಥಾವರ' ಮತ್ತೊಂದು ಬ್ರೇಕ್ ನೀಡುವ ಲಕ್ಷಣಗಳು ಕಾಣಸಿಗುತ್ತವೆ.
ರಚಿತಾ ರಾಮ್ ಅಭಿನಯ ಹೇಗಿತ್ತು?
ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕನ ಹಿಂದೆ ಬಿದ್ದು ಪ್ರೀತಿ ಇಲ್ಲಾ, ಇಲ್ಲಾ ಅಂತ ಹೇಳಿ ಹೇಳಿನೇ ಕೊನೆಗೆ ಪ್ರೀತಿಲಿ ಬಿದ್ದು ಬಿಡ್ತಾರೆ. ಅಂತೂ ತಮ್ಮ ನೆಚ್ಚಿನ ನಟಿ ಹೆಚ್ಚಾಗಿ ತೆರೆಯ ಮೇಲೆ ಕಾಣಿಸಿಲ್ಲ ಅಂತ ಅಭಿಮಾನಿಗಳಿಗೆ ಬೇಜಾರಾಗಬಹುದು. ಉಳಿದಂತೆ ಅವರ ನಟನೆಗೆ ತಕ್ಕ ನ್ಯಾಯ ಒದಗಿಸಿದ್ದಾರೆ.
ಇನ್ನುಳಿದವರು?
ಉಳಿದಂತೆ ಮಾದೇವಿ ಪಾತ್ರ ಮಾಡಿದ್ದ ಸೌರವ್ ಲೋಕಿ ಮಂಗಳಮುಖಿಯಾಗಿ ಅಬ್ಬರದಿಂದ ನಟಿಸಿದ್ದಾರೆ. ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವಂತಹ ನಟನೆ ಮಾಡಿದ್ದಾರೆ. ಸೂಪರ್ ಕಾಪ್ ಪಾತ್ರದಲ್ಲಿ ಮಿಂಚಿರುವ ನಟ ಚರಣ್ ರಾಜ್ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಕಾಮಿಡಿಯಲ್ಲಿ ನಟ ಚಿಕ್ಕಣ್ಣ ಮತ್ತು ಸಾಧುಕೋಕಿಲ ಪ್ರೇಕ್ಷಕರ ಮುಖದಲ್ಲಿ ಭರ್ಜರಿ ನಗು ಉಕ್ಕಿಸುತ್ತಾರೆ.
ತಾಂತ್ರಿಕತೆ
'ಉಗ್ರಂ' ಖ್ಯಾತಿಯ ಭುವನ್ ಗೌಡ ಅವರ ಕ್ಯಾಮರಾ ಕೈಚಳಕ ಅಧ್ಬುತವಾಗಿ ಮೂಡಿಬಂದಿದೆ. ಅದರಲ್ಲೂ ರವಿ ಬಸ್ರೂರು ಅವರ ಹಿನ್ನಲೆ ಸಂಗೀತ ಪ್ರೇಕ್ಷಕರ ಕಿವಿಯಲ್ಲಿ ರಿಂಗಣಿಸುತ್ತದೆ. ಧರ್ಮ ವಿಶ್ ಅವರ ಮ್ಯೂಸಿಕ್ ಕಂಪೋಸಿಷನ್ ನಲ್ಲಿ ಮೂಡಿಬಂದಿರುವ, ಶ್ರೀಮುರಳಿ ಹಾಡಿರುವ 'ಹುಡುಗಿ ಕಣ್ಣು ಲೋಡೇಡ್ ಗನ್' ಹಾಗೂ 'ನೀ ಮಾಯಾವಿ' ಹಾಡುಗಳು ಸೂಪರ್ ಹಿಟ್.
ಒಟ್ಟಾರೆ 'ರಥಾವರ' ಹೇಗಿದ್ದಾನೆ?
ಪ್ರೇಕ್ಷಕರನ್ನು ಕ್ಯೂರಿಯಾಸಿಟಿಯಲ್ಲಿ ಕೊಂಡೊಯ್ಯುವ 'ರಥಾವರ' ಸಿನಿಮಾ 'ಉಗ್ರಂ' ನಂತೆ ಖಡಕ್ ಆಗಿದೆ. ಮುರಳಿ ಅಭಿಮಾನಿಗಳು ನೋಡಲೇಬೇಕು. ಎಲ್ಲರೂ ಖಂಡಿತಾ ನೋಡಬಹುದಾದ ಸಿನಿಮಾ. ಫ್ರೀ ಇದ್ದರೆ ಈ ವೀಕೆಂಡ್ ನಲ್ಲಿ ಥಿಯೇಟರ್ ನತ್ತ ಒಮ್ಮೆ ಕಾಲು ಹಾಕಿ ಏನಂತೀರಾ?.