Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಮರ್ಶೆ : ಮಿಂಚಿನ ವೇಗದ 'ಜಾಗ್ವಾರ್' ಚಿಂದಿ ಚಿತ್ರಾನ್ನ
"ನಾನೊಂದು ಮೆಟ್ಟಿಲು ಏರೋದಿಕ್ಕೆ, ಹತ್ತು ಜನರ ಕಾಲಿಗೆ ಬೀಳೋಕು ರೆಡಿ, ನೂರು ಜನರನ್ನು ಕಾಲಲ್ಲಿ ತುಳಿಯೋಕು ರೆಡಿ". ಅಂತ ನಿಖಿಲ್ ಕುಮಾರ್ ಅಲಿಯಾಸ್ 'ಜಾಗ್ವಾರ್' ಹೊಡೆಯೋ ಡೈಲಾಗ್ ಗೆ ತಕ್ಕಂತೆ ನಿಖಿಲ್ ಕುಮಾರ್ ತೆರೆಯ ಮೇಲೆ ಅಷ್ಟೇ ಜಬರ್ದಸ್ತ್ ಆಗಿ ಅಬ್ಬರಿಸಿದ್ದಾರೆ.
ತೆರೆಯ ಮೇಲೆ 'ಜಾಗ್ವಾರ್' ಅಬ್ಬರಿಸುತ್ತಿದ್ದರೆ, ಇದು ನಿಖಿಲ್ ಕುಮಾರ್ ಅವರ ಮೊದಲ ಸಿನಿಮಾ ಅನ್ನೋ ಅನುಮಾನ ಒಂಚೂರು ಕೂಡ ಕಾಡೋದಿಲ್ಲ. ಅಷ್ಟರಮಟ್ಟಿಗೆ ಪರ್ಫೆಕ್ಟ್ ಡೆಬ್ಯೂ ಮಾಡಿದ್ದಾರೆ ನಿಖಿಲ್ ಕುಮಾರ್. [ಟ್ವಿಟ್ಟರ್ ವಿಮರ್ಶೆ: 'ಜಾಗ್ವಾರ್' ಝಗಮಗ ಬಲು ಜೋರು ಗುರು.!]
ಮಿಂಚಿನ ವೇಗದ 'ಜಾಗ್ವಾರ್'
ಇನ್ನೇನು ಎರಡೇ ನಿಮಿಷದಲ್ಲಿ ಲೈವ್ ಮರ್ಡರ್ ನೋಡಬಹುದು ಅಂತ ಟಿವಿಯಲ್ಲಿ ಬ್ರೇಕಿಂಗ್ ಬಂದರೆ ಸಾಮಾನ್ಯವಾಗಿ ಎಲ್ಲರಿಗೂ ಒಂದ್ಸಾರಿ ಶಾಕ್ ಆಗುತ್ತೆ. ಇದೇ ಅನುಭವ 'ಜಾಗ್ವಾರ್' ಸಿನಿಮಾ ಆರಂಭವಾಗುವಾಗಲೇ ಪ್ರೇಕ್ಷಕರಿಗೆ ಆಗುತ್ತೆ. ಖಾಸಗಿ ಮಾಧ್ಯಮವೊಂದರ ಕಂಪ್ಯೂಟರ್ ಹ್ಯಾಕ್ ಮಾಡಿ, ಲೈವ್ ಟೆಲಿಕಾಸ್ಟ್ ಆಗುವಂತೆ ಮಾಡುತ್ತಾನೆ 'ಜಾಗ್ವಾರ್'(ನಿಖಿಲ್ ಕುಮಾರ್). ಟಿವಿಯಲ್ಲಿ ಲೈವ್ ಆಗಿ ಟೆಲಿಕಾಸ್ಟ್ ಆಗುತ್ತಿದ್ದಂತೆ ಮಿಂಚಿನ ವೇಗದಲ್ಲಿ ಬಂದು ಕೊಲೆ ಮಾಡಿ ಮಾಯವಾಗುವ ಖತರ್ನಾಕ್ ಈತ.
ಅನಾಥ ಹುಡುಗ ಎಸ್.ಎಸ್ ಕೃಷ್ಣ
ಇನ್ನೊಂದೆಡೆ ಮೈಸೂರಿನ ಮೆಡಿಕಲ್ ಕಾಲೇಜಿಗೆ ವಿದ್ಯಾಭ್ಯಾಸಕ್ಕೆಂದು ಬಂದು ಸೇರುವ ಅನಾಥ ಹುಡುಗ ಎಸ್.ಎಸ್ ಕೃಷ್ಣ (ನಿಖಿಲ್ ಕುಮಾರ್). ಬಂದ ಮೊದಲ ದಿನದಲ್ಲಿಯೇ ತನ್ನ ಚಾಲಾಕಿತನದಿಂದ, ಆ ಕಾಲೇಜಿನ ಲೀಡರ್ ತಂಗಿಯನ್ನು ಪಟಾಯಿಸಿಕೊಳ್ಳುತ್ತಾನೆ.
ದ್ವಿಪಾತ್ರಾನಾ?
ಅಂದಹಾಗೆ 'ಜಾಗ್ವಾರ್' ಮತ್ತು ಕೃಷ್ಣ ಅಂದಾಗ, ನಿಖಿಲ್ ಕುಮಾರ್ ಅವರು ದ್ವಿಪಾತ್ರ ಮಾಡಿದ್ದಾರಾ ಅಂತ ಅನುಮಾನ ಕಾಡುತ್ತೆ. ಆದ್ರೆ ಇವರಿಬ್ಬರು ಒಬ್ರೆ. ಆದ್ರೆ ಅನಾಥ ಹುಡುಗ ಅಂತ ಹೇಳೋ ಈ 'ಜಾಗ್ವಾರ್' ಅಲಿಯಾಸ್ ಕೃಷ್ಣ ಲೈವ್ ಆಗಿ ಇಡೀ ಲೋಕಕ್ಕೆ ಗೊತ್ತಾಗೋ ಹಾಗೆ, ಒಂದರ ಮೇಲೊಂದು ಕೊಲೆ ಯಾಕೆ ಮಾಡುತ್ತಾನೆ ಅನ್ನೋದು ಇಡೀ ಚಿತ್ರದ ಕಥೆ ಮತ್ತು ಅದೇ ಸಸ್ಪೆನ್ಸ್.
ಅನಾಥ ಹುಡುಗ 'ಜಾಗ್ವಾರ್' ಆಗೋಕೆ ಕಾರಣ?
ಅಂದಹಾಗೆ ಅನಾಥ ಹುಡುಗ ಅಂತ ಎಲ್ಲರ ಬಳಿ ಹೇಳಿಕೊಳ್ಳುವ ಎಸ್ ಎಸ್ ಕೃಷ್ಣ ಕಿಲ್ಲರ್ 'ಜಾಗ್ವಾರ್' ಆಗಿ ಬದಲಾಗೋಕೆ ಕಾರಣ ಇದೆ. ಜೊತೆಗೆ ಅದರ ಹಿಂದೆ ಒಂದು ದೊಡ್ಡ ಫ್ಲ್ಯಾಶ್ ಬ್ಯಾಕ್ ಕಥೆ ಇದೆ. ಅದನ್ನು ನಾವಿಲ್ಲಿ ಹೇಳೋ ಬದಲು ನೀವೇ ಥಿಯೇಟರ್ ಗೆ ಭೇಟಿ ಕೊಟ್ಟು, ಸಿನಿಮಾ ನೋಡಿ ಬಿಡಿ.
ನಿಖಿಲ್ ಕುಮಾರ್ ಅಭಿನಯ ಹೇಗಿದೆ?
ಫೈಟ್, ಡ್ಯಾನ್ಸ್ ನಲ್ಲಿ ನಿಖಿಲ್ ಕುಮಾರ್ ಅವರಿಗೆ ಫುಲ್ ಮಾರ್ಕ್ಸ್ ಕೊಡಬಹುದು. ಇವರ ನಟನೆಯಲ್ಲಿ ಇನ್ನೂ ಕೊಂಚ ಪರಿಪಕ್ವತೆ ಬರಬೇಕಿದೆ. ಆದರೂ ಇದು ಮೊದಲ ಸಿನಿಮಾ ಅನ್ನೋ ಭಾವನೆ ಪ್ರೇಕ್ಷಕರಿಗೆ ಮೂಡದಂತೆ ಎಚ್ಚರ ವಹಿಸಿದ್ದಾರೆ. ಆದರೆ ಮುಖಭಾವ ಮತ್ತು ಬಾಡಿ ಲಾಂಗ್ವೆಜ್ ಬಗ್ಗೆ ಇನ್ನಷ್ಟು ಗಮನಹರಿಸಬೇಕು. ಮೈನವಿರೇಳಿಸುವ ಆಕ್ಷನ್ ಸೀಕ್ವೆನ್ಸ್ ಗಳನ್ನು ನೋಡುತ್ತಿದ್ದರೆ, ಎಲ್ಲವೂ ನೀಟಾಗಿ ಬರಲು ನಿಖಿಲ್ ಕುಮಾರ್ ಅವರು ತುಂಬಾ ಶ್ರಮವಹಿಸಿದ್ದು ಕಂಡುಬರುತ್ತದೆ.
ಮಲಯಾಳಂ ಬೆಡಗಿ ದೀಪ್ತಿ ಸತಿ ಹೇಗೆ?
ಮಲಯಾಳಂ ಬೆಡಗಿ ದೀಪ್ತಿ ಸತಿ ಅವರು ಕೇವಲ ಫಸ್ಟ್ ಹಾಫ್ ಗೆ ಮಾತ್ರ ಸೀಮಿತವಾಗಿದ್ದು, ಪ್ರೇಕ್ಷಕರಿಗೆ ನಿರಾಸೆ. ಯಾಕೆಂದರೆ ಅವರು ಇದ್ದಷ್ಟು ಹೊತ್ತು ವೀಕ್ಷಕರ ಕಣ್ಣಿಗೆ ಗ್ಲಾಮರ್ ರಸದೌತಣ. ಒಟ್ನಲ್ಲಿ ಇಡೀ ಸಿನಿಮಾದಲ್ಲಿ ದೀಪ್ತಿ ಅವರ ಉಪಸ್ಥಿತಿ ತುಂಬಾ ಕಡಿಮೆ ಇದ್ದುದ್ದನ್ನು ನೋಡಿ, ಬರೀ ಇಷ್ಟಕ್ಕೆ ಅವರನ್ನು ಅಲ್ಲಿಂದ ಇಲ್ಲಿಗೆ ಕರೆಸಬೇಕಿತ್ತೇ ಅನ್ನೋ ಪ್ರಶ್ನೆ ಕಾಡುತ್ತದೆ.
ಇನ್ನುಳಿದವರು ಕಥೆ ಏನು?
ಇಡೀ ಚಿತ್ರದಲ್ಲಿ ತೆಲುಗು ನಟರು ತುಂಬಿರುವುದರಿಂದ, ಇದು ಕನ್ನಡ ಸಿನಿಮಾನೋ, ತೆಲುಗು ಸಿನಿಮಾನೋ ಅಂತ ಡೌಟ್ ಬರೋದು ಪಕ್ಕಾ. ಸಂಪತ್ ರಾಜ್, ಸೌರವ್ ಲೋಕೇಶ್ ಮತ್ತು ಆದಿತ್ಯ ಮೆನನ್ ಅವರು ಖಳನಟರಾಗಿ ಖಡಕ್ ಆಗಿ ಮಿಂಚಿದ್ದಾರೆ. ರಮ್ಯಕೃಷ್ಣ ಲೇಟ್ ಆದ್ರೂ ಲೇಟೆಸ್ಟ್ ಆಗಿ ಎಂಟ್ರಿಯಾಗಿ ಎಲ್ಲರಿಗೂ ಸರ್ ಪ್ರೈಸ್ ನೀಡುತ್ತಾರೆ. ಜಗಪತಿ ಬಾಬು ಸಿಬಿಐ ಆಫೀಸರ್ ಆಗಿ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಇನ್ನುಳಿದಂತೆ ವಿನಾಯಕ್ ಜೋಷಿ, ಪ್ರಶಾಂತ್ ಸಿದ್ದಿ ಮತ್ತಿತ್ತರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಸಾಧು ಕಾಮಿಡಿ ಪಂಚ್
ಫಸ್ಟ್ ಹಾಫ್ ಪೂರ್ತಿ ಕಾಮಿಡಿ ಟಚ್ ಇಲ್ಲದೇ ಸಿನಿಮಾ ಹಾಗೆ ನೀರಸವಾಗಿ ಸಾಗಿದ್ರೆ, ಸೆಕೆಂಡ್ ಹಾಫ್ ನಲ್ಲಿ ಸಡನ್ ಆಗಿ ಸಾಧು ಕೋಕಿಲಾ ಅವರು ಎಂಟ್ರಿ ಕೊಟ್ಟು ಎಲ್ಲರನ್ನು ಗೊಳ್ಳಂತ ನಗಿಸುತ್ತಾರೆ. ಅಂತೂ ಸಾಧು ಮಹಾರಾಜ್ ಅವರು ತೆರೆಯ ಮೇಲೆ ಇದ್ದಷ್ಟು ಹೊತ್ತು ಪ್ರೇಕ್ಷಕರನ್ನು ನಗಿಸಿ, ತಾವು ಒಂದಷ್ಟು ಕೆನ್ನೆಗೆ ಹೊಡೆಸಿಕೊಂಡು ಮಾಯವಾಗುತ್ತಾರೆ.
ಸರಳವಾದ ಕಥಾಹಂದರ
ಎಸ್.ಎಸ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಕಥೆ ಬರೆದಿದ್ದಾರೆ ಅಂದ್ರೆ ಏನೋ ಇರಬೇಕು ಅಂತ ನೀವು ಥಿಯೇಟರ್ ಹೊಕ್ಕರೆ ಕೊಂಚ ನಿರಾಸೆ ಆಗಬಹುದು. ಯಾಕೆಂದರೆ ಎಲ್ಲಾ ಸಿನಿಮಾಗಳಲ್ಲಿ ಇರುವಂತೆ ಅದೇ ಹಳೇ ಫ್ಲ್ಯಾಶ್ ಬ್ಯಾಕ್, ತಂದೆ-ತಾಯಿ ಸೆಂಟಿಮೆಂಟ್ ಮತ್ತು ರಿವೇಂಜ್ ತೀರಿಸಿಕೊಳ್ಳೋದು. 'ಜಾಗ್ವಾರ್' ಕಥೆಯ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ತುಂಬಾ ಸರಳವಾದ ಕಥೆಗೆ ತುಂಬಾ ಆಕ್ಷನ್- ಸ್ವಲ್ಪ ಡ್ಯಾನ್ಸ್ ಮತ್ತು ಸ್ವಲ್ಪ ಮಸಾಲೆ ಬೆರೆಸಿರುವ ಒಂದು ಕಮರ್ಷಿಯಲ್ ಸಿನಿಮಾ.
ಸಂಗೀತ ಓಕೆ ಓಕೆ
ಎಸ್.ಎಸ್ ಥಮನ್ ಸಂಗೀತ ನಿರ್ದೇಶನ ಮಾಡಿರುವ ಹಾಡುಗಳು ಅಷ್ಟಕಷ್ಟೆ. ಮತ್ತೆ-ಮತ್ತೆ ಕೇಳಬೇಕೆನಿಸುವ ಯಾವ ಹಾಡುಗಳು ಇಲ್ಲ. ತಮನ್ನಾ ಕಾಣಿಸಿಕೊಂಡಿರುವ 'ಸಂಪಿಗೆ' ಹಾಡು ಯಾಕೆ ಬೇಕಿತ್ತು ಈ ಸಿನಿಮಾದಲ್ಲಿ ಅಂತ ಅನುಮಾನ ಬರುತ್ತೆ. ತಮನ್ನಾ ಅವರ ಸ್ಪೆಷಲ್ ಹಾಡನ್ನು ಸುಮ್ಮನೆ ಒಂದು ಕಡೆ ತುರುಕಿದ್ದಾರೆ ಅಷ್ಟೆ. ಬರೀ ಪಬ್ಲಿಸಿಟಿಗೋಸ್ಕರ ಅವರನ್ನು ಅಲ್ಲಿಂದ ಕರೆಸಿ ಇಲ್ಲಿ ಕುಣಿಸಿದಂತಿದೆ.
ಆಕ್ಷನ್ ಪ್ರಿಯರು ನೋಡಲೇಬೇಕಾದ ಸಿನಿಮಾ
ಜಬರ್ದಸ್ತ್ ಸ್ಟಂಟ್ಸ್, ಖಡಕ್ ಫೈಟ್ ಸಿನಿಮಾ ನೋಡುವ ಖಯಾಲಿ ಇರುವವರು ಈ ಸಿನಿಮಾ ನೋಡಲೇಬೇಕು. ಯಾಕೆಂದರೆ ಹಾಲಿವುಡ್ ತಂತ್ರಜ್ಞರು ಕೊರಿಯೋಗ್ರಫಿ ಮಾಡಿರುವ ಸ್ಟಂಟ್ಸ್ ಗಳು ಅದ್ಧೂರಿಯಾಗಿ ಹೊಸತೆನಿಸುತ್ತವೆ. ಇನ್ನು ತೆಲುಗು ಸಿನಿಮಾದಲ್ಲಿ ಇದ್ದಂತೆ ಚೇಸಿಂಗ್, ರನ್ನಿಂಗ್ ದೃಶ್ಯಗಳು ಅಂತೂ ಸೂಪರ್. ಕ್ಲೈಮ್ಯಾಕ್ಸ್ ಫೈಟ್ ಕೂಡ ಚೆನ್ನಾಗಿದೆ. ಒಟ್ನಲ್ಲಿ ತೆಲುಗು ಭಾಷೆಯಲ್ಲಿ ಹೇಳಬೇಕೆಂದರೆ, 'ಅದಿರಿ ಪೋಯಿಂದಿ' (ಚಿಂದಿ ಚಿತ್ರಾನ್ನ) ಎನ್ನಬಹುದು. ಅಂತೂ ಇಂತೂ ಮೇಕಿಂಗ್ ಬಹಳ ಅದ್ಧೂರಿಯಾಗಿ ಮೂಡಿಬಂದಿದೆ. ಜೊತೆಗೆ ಕ್ಯಾಮೆರಾ ಕೈ ಚಳಕ ಕೂಡ ತುಂಬಾ ಪ್ರಿಯವೆನಿಸುತ್ತದೆ.
ಕೊನೆಯ ಮಾತು
ತಮ್ಮ ಚೊಚ್ಚಲ ಸಿನಿಮಾ ಆದ್ರೂ ನಿಖಿಲ್ ಕುಮಾರ್ ಅವರು ಯಾವುದೇ ಭಯ ಇಲ್ಲದೆ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಚಿತ್ರದ ಫೈಟ್ ದೃಶ್ಯಗಳಲ್ಲಿ ನಿರ್ದೇಶಕ ಮಹದೇವ್ ಅವರು, ತಾವು ರಾಜಮೌಳಿ ಅವರ ಶಿಷ್ಯ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಫಸ್ಟ್ ಹಾಫ್ ಸ್ವಲ್ಪ ಬೋರಾದ್ರೂ ಸೆಕೆಂಡ್ ಹಾಫ್ ನೋಡಲೇಬೇಕು, ಇಲ್ಲಾಂದ್ರೆ ಕಥೆ ಅರ್ಥ ಆಗಲ್ಲ. ಇದೆಲ್ಲಾ ಪಕ್ಕಕ್ಕಿಟ್ಟು ಹೇಳಬೇಕೆಂದರೆ, ಖಂಡಿತ ಒಂದು ಬಾರಿ ನೋಡಬಹುದಾದ, ಪಕ್ಕಾ ಪೈಸಾ ವಸೂಲ್ ಸಿನಿಮಾ 'ಜಾಗ್ವಾರ್'.