Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಓದುಗರ ವಿಮರ್ಶೆ: ಪ್ರೇಕ್ಷಕರಿಗೆ ’ಗಜಕೇಸರಿ’ ಯೋಗ
ಗೆಳೆಯರ ಜೊತೆ ಮೈನ್ ಥಿಯೇಟರ್ ನರ್ತಕಿಯಲ್ಲಿ ಶನಿವಾರ ಗಜಕೇಸರಿ ಚಿತ್ರ ನೋಡೋಕೆ ಹೋಗಿದ್ವಿ. ಚಿತ್ರಮಂದಿರದ ಆವರಣದಲ್ಲಿ ಜನವೋ ಜನ. ಒಂದೆಡೆ ಮಾಣಿಕ್ಯ, ಇನ್ನೊಂದೆಡೆ ಉಗ್ರಂ. ಎರಡೂ ಸಿನಿಮಾಗಳು ಗಲ್ಲಾಪೆಟ್ಟಿಗೆ ಬೇಟೆಯಾಡಿದ ಚಿತ್ರಗಳು.
ನಾಲ್ಕುವರೆಗೆ ಶುರುವಾಗಬೇಕಿದ್ದ ಸಿನಿಮಾ ಐದಾದರೂ ಚಿತ್ರಮಂದಿರದೊಳಗೆ ಪ್ರೇಕ್ಷಕರನ್ನು ಒಳಗೆ ಬಿಡುತ್ತಿಲ್ಲ. ಜೊತೆಗೆ ಕನ್ನಡ ವಾಹಿನಿಗಳ ಓಬಿ ವ್ಯಾನುಗಳು ನಿಂತಿದ್ದವು, ಅದಲ್ಲದೇ ಈ ಹಿಂದೆ ರಾಜ್ ಚಿತ್ರ ಬಿಡುಗಡೆಯಾದಾಗ ಕಂಡು ಬರುವ ಹಾಗೆ ಪೊಲೀಸ್ ಸರ್ಪಗಾವಲು ಬೇರೆ.
ಏನಾಗಿರಬಹುದೆಂದು ಚಿತ್ರಮಂದಿರದವರನ್ನು ಕೇಳಿದಾಗ, ಮಾರ್ನಿಂಗ್ ಶೋನಲ್ಲಿ ಕ್ಯೂಬ್ ಟೆಕ್ನಾಲಜೀಸ್ ನಲ್ಲಿ ಸ್ವಲ್ಪ ಪ್ರಾಬ್ಲಂ ಆಗಿತ್ತು. ಮಧ್ಯಂತರದ ನಂತರ ಚಿತ್ರ ಪ್ರಸಾರ ಮಾಡಲು ಆಗಿಲ್ಲ. ಥಿಯೇಟರ್ ಬೇರೆ ಹೌಸ್ ಫುಲ್ ಕೂತಿತ್ತು. ಸೆಕೆಂಡ್ ಕ್ಲಾಸ್ ನಲ್ಲಿ ಕೂತ ಪ್ರೇಕ್ಷಕರು ರೊಚ್ಚಿಗೆದ್ದು ಸಿಕ್ಕಿದ್ದನ್ನೆಲ್ಲಾ ಚಿಂದಿ ಮಾಡಿದ್ರು. ಹಾಗಾಗಿ ಎಲ್ಲಾ ಶೋ ಮೂವತ್ತು ನಿಮಿಷ ತಡವಾಗಿ ಶುರು ಆಗ್ತಾ ಇದೆ ಸಾರ್ ಎಂದ. (ಗಜಕೇಸರಿ ಚಿತ್ರ ವಿಮರ್ಶೆ)
ಇರಲಿ ಬಿಡಪ್ಪಾ, ಈ ಶೋನಲ್ಲಾದ್ರೂ ಕರೆಕ್ಟಾಗಿ ತೋರ್ಸಿ ಎಂದು ಫ್ರಂಟ್ ಕ್ಲಾಸಿನಲ್ಲಿ ಕೂತ್ವಿ. ಮೊದಲ ಸನ್ನಿವೇಶದಿಂದಲೇ ಗ್ರಿಪ್ ಪಡೆದುಕೊಳ್ಳುವ ಚಿತ್ರ ಇಂಟರ್ವಲ್ ಬರುವ ತನಕ ಚಿತ್ರಕಥೆಯಲ್ಲಿ ಅಲ್ಲಲ್ಲಿ ಅಲ್ವಸ್ವಲ್ಪ ವೇಗ ಕಮ್ಮಿಯಾಗುತ್ತಿದ್ದರೂ, ಕುತೂಹಲ ಉಳಿಸಿಕೊಳ್ಳೂವಲ್ಲಿ ಯಶಸ್ವಿಯಾಗಿತ್ತು. ಇಂಟರ್ವಲ್ ನಂತರ ಚಿತ್ರ ವೇಗವಾಗಿ ಸಾಗುತ್ತೆ.
ತಪ್ಪುಕಾಣಿಕೆಯಾಗಿ ಮಠಕ್ಕೆ ಆನೆ
ಮಠಾಧಿಪತಿಯಾಗಲು ಒಪ್ಪದೇ ತಪ್ಪುಕಾಣಿಕೆಯಾಗಿ ಮಠಕ್ಕೆ ಆನೆ ಕೊಡಬೇಕೆನ್ನುವ ಷರತ್ತಿಗೆ ಒಪ್ಪಿ ಕಥಾನಾಯಕ ಕಾಡಿಗೆ ಪ್ರಯಾಣಿಸುವ ಪ್ರಸಂಗದಿಂದ ವೇಗ ಪಡೆದುಕೊಳ್ಳುವ ಚಿತ್ರಕ್ಕೆ ಹಾಸ್ಯ, ಪ್ರೀತಿ, ಸಾಹಸದ ಲೇಪನವನ್ನು ಸನ್ನಿವೇಶಕ್ಕೆ ತಕ್ಕಂತೆ ನಿರ್ದೇಶಕ ಕೃಷ್ಣ ನೀಡಿದ್ದಾರೆ. ಆದರೆ ಇದು ಹಾಡಿನ ದೃಶ್ಯಗಳಿಗೆ ಅನ್ವಯವಾಗುವುದಿಲ್ಲ. ಒಂದು ಚಿತ್ರಕ್ಕೆ ಇಷ್ಟು ಹಾಡುಗಳು ಕಡ್ಡಾಯವಾಗಿ ಇರಲೇ ಬೇಕು ಎನ್ನುವಂತೆ ನಿರ್ದೇಶಕರು, ಚಿತ್ರ ಗಂಭೀರವಾಗಿ ಸಾಗುತ್ತಿರ ಬೇಕಾದರೆ ಅನಾವಶ್ಯಕವಾಗಿ ಹಾಡಿನ ಮೂಲಕ ಬ್ರೇಕ್ ನೀಡಿದ್ದಾರೆ.
ಹಾಸ್ಯ ಕಲಾವಿದರು
ಚಿತ್ರದ ನಾಯಕ, ಹಾಸ್ಯ ಕಲಾವಿದರಾದ ಸಾಧು ಕೋಕಿಲಾ, ರಂಗಾಯಣ ರಘು ಮೂವರೂ ರಾಜ್ ಅಭಿಮಾನಿಗಳು. ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಆದರೂ ಚಿತ್ರದಲ್ಲಿ ರಾಜ್ ಮೇಲಿನ ಅಭಿಮಾನದ ಡೈಲಾಗುಗಳು ತುಸು ಹೆಚ್ಚೇ ಅನಿಸುತ್ತದೆ. ಕೆಲವೊಂದು ದೃಶ್ಯಗಳಲ್ಲಿ ರಂಗಾಯಣ ರಘು ಅವರದ್ದು ಅನಾವಶ್ಯಕ ಓವರ್ ಆಕ್ಟಿಂಗ್.
ಬಿಂದಾಸ್ ಡೈಲಾಗುಗಳು
ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್ ಏನಂದರೆ ಡೈಲಾಗುಗಳು. ಕನ್ನಡಿಗರು, ಕನ್ನಡಿಗರ ಸ್ವಾಭಿಮಾನದ ಬಗ್ಗೆ ನಾಯಕ ಪುಂಖಾನುಪುಂಖವಾಗಿ ಡೈಲಾಗು ಹೊಡೆಯುತ್ತಿರ ಬೇಕಾದರೆ ಅಭಿಮಾನಿ ದೇವರುಗಳು ಪೈಪೋಟಿಗೆ ಬಿದ್ದಂತೆ ಶಿಳ್ಳೆ ಹೊಡೆಯುತ್ತಾರೆ.
ಅದ್ದೂರಿತನದ ಚಿತ್ರ
ಚಿತ್ರದ ಅದ್ದೂರಿತನ ಪ್ರತೀ ಫ್ರೇಂ ನಲ್ಲೂ ಎದ್ದು ಕಾಣಿಸುತ್ತದೆ. ಮಧ್ಯಂತರ ನಂತರ ಮೂರು ಶತಮಾನಗಳಷ್ಟು ಹಿಂದೆ ಸಾಗುವ ಚಿತ್ರಕಥೆಗೆ ಪೂರಕವಾದ ದೃಶ್ಯಗಳಿಗೆ ನಿರ್ಮಾಪಕರು ಹಣದ ಹೊಳೆಯನ್ನೇ ಹರಿಸಿದ್ದಾರೆ. ಕಾಡಿನ ದೃಶ್ಯ, ಯುದ್ದದ ದೃಶ್ಯ, ಹಾಡಿಗೆ ಬಳಸಿದ ಲೊಕೇಶನ್, ಸೆಟ್ಟುಗಳು ಕಣ್ಣಿಗೆ ಮುದ ನೀಡಿ ಒಂದು ಅದ್ದೂರಿ ಚಿತ್ರವೆನಿಸುತ್ತದೆ.
ಸಾಹಸ ದೃಶ್ಯಗಳು ಮತ್ತು ಸಹಕಲಾವಿದರು
ಸಿನಿಮಾದ ಸಾಹಸ ದೃಶ್ಯಗಳು ಚಿತ್ರದ ಯಶಸ್ಸಿಗೆ ಸಹಕಾರಿಯಾಗುತ್ತದೆ. ಮೈನವಿರೇಳಿಸುವಂತಹ ಸಾಹಸ ಸನ್ನಿವೇಶಗಳನ್ನು ನೀಡಿದ ರವಿವರ್ಮ ಮತ್ತು ಟೀಂಗೆ ಸಲಾಂ ಹೊಡೆಯಲೇಬೇಕು. ಚಿತ್ರದ ಕ್ಯಾಮರಾ ವರ್ಕ್ ಚಂದವೋ ಚಂದ.
ಸಹ ಕಲಾವಿದರ ಪಾತ್ರವೆಲ್ಲಾ ಚೆನ್ನಾಗಿ ಮೂಡಿ ಬಂದಿದೆ. ಮಠಾಧಿಪತಿಯಾಗಿ ಅನಂತನಾಗ್ ಅವರ ಅಭಿನಯ ಸೂಪರ್. ಗಿರಿಜಾ ಲೋಕೇಶ್, ಮಂಡ್ಯ ರಮೇಶ್, ಹೊನ್ನವಳ್ಳಿ ಕೃಷ್ಣ, ಸಾಧು ಕೋಕಿಲಾ, ರಂಗಾಯಣ ರಘು ಅಭಿನಯ ಸಲೀಸು. ಖಳನಟರಾಗಿ ಅಭಿನಯಿಸಿದ ಜಾನ್ ವಿಜಯ್, ಪ್ರಭಾಕರ್, ಶಬಾಸ್ ಖಾನ್ ಅವರದ್ದು ಪ್ರಬುದ್ದ ಅಭಿನಯ.
ನಾಯಕ ಮತ್ತು ನಾಯಕಿಯ ಪರ್ಫಾರ್ಮೆನ್ಸ್
ಎರಡು ಶೇಡ್ ನಲ್ಲಿ ಬರುವ (ಕೃಷ್ಣ ಮತ್ತು ಬಾಹುಬಲಿ) ನಾಯಕನ ಪಾತ್ರದಲ್ಲಿ ಯಶ್ ಅವರದ್ದು ಲೀಲಾಜಾಲ ಅಭಿನಯ. ಮೊದಲಾರ್ಧದಲ್ಲಿ ತುಂಟಾಟದ ಪಾತ್ರದಿಂದ, ಇಂಟರ್ವಲ್ ನಂತರದ ಯುದ್ದವೀರನ ಪಾತ್ರದಲ್ಲಿ ಯಶ್ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಟಗರುಪುಟ್ಟಿಯಾಗಿ ನಾಯಕಿ ಅಮೂಲ್ಯ ನಟನೆ ಕೊಂಚ ವೀಕ್ ಅನಿಸುತ್ತದೆ.
ಲಾಸ್ಟ್ ಬಟ್ ನಾಟ್ ಲೀಸ್ಟ್
ಎರಡು ಕಾಲಘಟ್ಟದಲ್ಲಿ ಸಾಗುವ 'ಗಜಕೇಸರಿ' ಚಿತ್ರ ಕನ್ನಡದಲ್ಲಿನ ಉತ್ತಮ ಪ್ರಯತ್ನದ ಚಿತ್ರ ಎನ್ನಬಹುದು. ಚೊಚ್ಚಲ ನಿರ್ದೇಶನದಲ್ಲೇ ನಿರ್ದೇಶಕ ಕೃಷ್ಣ ಭರವಸೆಯನ್ನು ಮೂಡಿಸಿದ್ದಾರೆ. ಅದ್ದೂರಿತನದ ಚಿತ್ರ ಎನ್ನುವುದು ಒಂಡು ಕಡೆಯಾದರೆ, ಅದಕ್ಕಿಂತ ಹೆಚ್ಚಾಗಿ ಸ್ವಮೇಕ್ ಚಿತ್ರವನ್ನು ಕನ್ನಡಿಗರು ಸ್ವಾಭಿಮಾನದಿಂದ ನೋಡಬಹುದು ಎನ್ನುವುದು.